ಜ್ಞಾನವಾಪಿ ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿದ್ದ ಮುಖ್ಯ ಅರ್ಜಿದಾರ ಜಿತೇಂದ್ರ ಸಿಂಗ್ ವಿಸೇನ್ ಅವರು ಕಾನೂನು ಹೋರಾಟದಿಂದ ಹಿಂದೆ ಸರಿಯುವುದಾಗಿ ಘೋಷಿಸಿಕೊಂಡಿದ್ದಾರೆ.
ತಮಗೆ ಹಾಗೂ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದ್ದು, ಈ ಕಾರಣದಿಂದಾಗಿ ಪ್ರಕರಣದಿಂದ ಹಿಂದೆ ಸರಿಯುವುದಾಗಿ ವಿಶ್ವ ವೇದಿಕ್ ಸಂಸ್ಥಾನದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಸೇನ್ ಅವರು ಶನಿವಾರ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನಾನು ಮತ್ತು ನನ್ನ ಕುಟುಂಬ (ಪತ್ನಿ ಕಿರಣ್ ಸಿಂಗ್ ಮತ್ತು ಸೊಸೆ ರಾಖಿ ಸಿಂಗ್) ದೇಶ ಮತ್ತು ಧರ್ಮದ ಹಿತದೃಷ್ಟಿಯಿಂದ ನಾವು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ಎಲ್ಲಾ ಜ್ಞಾನವಾಪಿ ಸಂಬಂಧಿತ ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
‘ದೇಶ ಹಾಗೂ ಧರ್ಮದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಹಿಂಸೆಯನ್ನು ತಾಳಿಕೊಳ್ಳುವ ಶಕ್ತಿ ಮತ್ತು ಸಂಪನ್ಮೂಲ ನಮ್ಮ ಬಳಿ ಇಲ್ಲ. ‘ಧರ್ಮ’ಕ್ಕಾಗಿ ಹೋರಾಡುವ ಶಕ್ತಿ ಇನ್ನು ಉಳಿದಿಲ್ಲ. ಈ ಧರ್ಮಯುದ್ಧವನ್ನು ಪ್ರಾರಂಭಿಸಿದ್ದು ನನ್ನ ಜೀವನದ ದೊಡ್ಡ ತಪ್ಪು. ಧರ್ಮದ ಹೆಸರಲ್ಲಿ ಗಿಮಿಕ್ ಮಾಡುವ, ತಪ್ಪು ದಾರಿಗೆ ಎಳೆಯುವವರ ಜೊತೆ ಈ ಸಮಾಜ ನಿಲ್ಲುತ್ತದೆʼ ಎಂದು ಎಂದು ವಿಸೇನ್ ಹೇಳಿದ್ದಾರೆ.
ಶೃಂಗಾರ್ ಗೌರಿ ದೇವಿ ಮತ್ತು ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಇತರ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ಆಗಸ್ಟ್ 2021 ರಲ್ಲಿ ವಿಸೇನ್ ಅವರ ಸೊಸೆ ರಾಖಿ ಸಿಂಗ್ ಸೇರಿದಂತೆ ಐವರು ಮಹಿಳಾ ಫಿರ್ಯಾದಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಿತೇಂದ್ರ ಸಿಂಗ್ ವಿಸೇನ್ ಅವರು ಜ್ಞಾನವಾಪಿ ಮಸೀದಿ, ಮಥುರಾದ ಈದ್ಗಾ ಮಸೀದಿ ಮತ್ತು ತಾಜ್ ಮಹಲ್ನಂತಹ ವಿವಿಧ ಪ್ರಕರಣಗಳಲ್ಲಿ ಹಿಂದು ಧರ್ಮಕ್ಕೆ ಸಂಬಂಧಿಸಿದ ದಾವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜ್ಞಾನವಾಪಿ ಮಸೀದಿ ಪ್ರಕರಣ:
ಬಾಬರಿ ಮಸೀದಿ ಧ್ವಂಸಕ್ಕೆ ಒಂದು ವರ್ಷದ ಮೊದಲು 1991 ರಲ್ಲಿ ವಾರಣಾಸಿಯ ಪುರೋಹಿತರು ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆ ಮಾಡಲು ಅನುಮತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. 17 ನೇ ಶತಮಾನದಲ್ಲಿ ಮಸೀದಿಯನ್ನು ನಿರ್ಮಿಸಲು ಹಿಂದೂ ದೇವಾಲಯವನ್ನು ಭಾಗಶಃ ನೆಲಸಮ ಮಾಡಲಾಗಿತ್ತು ಎಂಬುದು ಅವರ ವಾದವಾಗಿತ್ತು. 2021 ರಲ್ಲಿ, ಅಲಹಾಬಾದ್ ಹೈಕೋರ್ಟ್ ವಾರಣಾಸಿ ನ್ಯಾಯಾಲಯದಲ್ಲಿ ಕಾಶಿ ವಿಶ್ವನಾಥ ಮಂದಿರ-ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.
ಕಳೆದ ವರ್ಷ ಮೇ ತಿಂಗಳಲ್ಲಿ ವಾರಣಾಸಿ ಸಿವಿಲ್ ಕೋರ್ಟ್ ಆದೇಶದ ಮೇರೆಗೆ ಮಸೀದಿ ಆವರಣದ ಸಮೀಕ್ಷೆ ವೇಳೆ ಅಂಡಾಕಾರದ ವಸ್ತುವೊಂದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಹಿಂದೂ ದಾವೆದಾರರು ಆ ವಸ್ತುವು ಶಿವಲಿಂಗವಾಗಿದೆ. ಇದು ಹಿಂದೂ ದೇವತೆ ಶಿವನ ಪ್ರಾತಿನಿಧ್ಯ ಎಂದು ವಾದಿಸಿದರು. ಆದರೆ ಮಸೀದಿಯ ಉಸ್ತುವಾರಿ ಸಮಿತಿಯು ವಸ್ತುವು ವಾಜು ಖಾನಾ ಅಥವಾ ಕಾರಂಜಿ ಎಂದು ವಾದಿಸಿತ್ತು.