ಮೈಸೂರು: ಸಾರ್ವಜನಿಕ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾರಣಕ್ಕೆ ಅನ್ಯ ಕೋಮಿನ ಯುವಕರ ಗುಂಪು, ಯುವಕನೊಬ್ಬನಿಗೆ ಚಾಕು ವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇಲ್ಲಿಗೆ ಸಮೀಪದ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ.
ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಪ್ರಸಾದ್ ಎಂದು ಗುರುತಿಸಲಾಗಿದ್ದು ಯುವಕ ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಭಾನುವಾರ ರಾತ್ರಿ ನಂಜನಗೂಡು ಪಟ್ಟಣದ ನೀಲಕಂಠ ನಗರದ ಸರ್ಕಲ್ನಲ್ಲಿ ಏರಿಯಾದ ಹುಡುಗರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರಸಾದ್ ಬಜ್ಜಿ ತಿನ್ನಲು ಸರ್ಕಲ್ ಗೆ ಬಂದಿದ್ದಾನೆ.
ಅದೇ ವೇಳೆ ಅಲ್ಲಿಗೆ ಬಂದ 5 ಜನ ಅನ್ಯ ಕೋಮಿನ ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕ್ಯಾತೆ ತೆಗೆದಿದ್ದಾರೆ. ಆಗ ಹುಟ್ಟು ಹಬ್ಬ ಅಚರಿಸಿಕೊಳ್ಳುತಿದ್ದವರು ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದಾರೆ. ನಂತರ ಪ್ರಸಾದ್ ಎಂಬ ಯುವಕನ ಕೈಗೆ ಚಾಕುವಿನಿಂದ ಇರಿದು, ಹಣೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಶೋಹೆಬ್, ಇಲ್ಲು, ಸಲ್ಮಾನ್, ಜಾಫರ್ , ಇಸ್ಮಾಯಿಲ್ ಎಂಬ ಐದು ಜನರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಘಟನೆ ಕುರಿತು ಚಾಕು ಇರಿತಕ್ಕೊಳಗಾದ ಯುವಕ ಪ್ರಸಾದ್ ಮಾತನಾಡಿ, ನಾನು ಬಜ್ಜಿ ತಿನ್ನಲೆಂದು ನೀಲಕಂಠ ನಗರದ ಸರ್ಕಲ್ಗೆ ಹೋಗಿದ್ದೆ, ಅಲ್ಲಿ ನನಗೆ ಪರಿಚಯದ ಹುಡುಗರು ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೇಕ್ ಕತ್ತರಿಸಿದ ಸಂದರ್ಭದಲ್ಲಿ ಯಾರೋ ಭಾರತ ಮಾತಾ ಕಿ ಜೈ ಎಂದು ಕೂಗಿದರು. ಆಗ ಅನ್ಯಕೋಮಿನ ಯುವಕರು ಅಲ್ಲೇ ಇದ್ದ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದ್ದಾನೆ.
ಒಬ್ಬ ವ್ಯಕ್ತಿ ಚಾಕುವಿನಿಂದ ಇರಿದ, ಇನ್ನೊಬ್ಬ ಹಣೆಗೆ ಪಂಚ್ ಮಾಡಿದ. ಆಗ ನಾನು ಗಾಬರಿಯಿಂದ ನೆಲಕ್ಕೆ ಬಿದ್ದೆ. ತಕ್ಷಣ ನನ್ನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದರು ಎಂದು ತಿಳಿಸಿದ್ದಾನೆ.
ನಂಜನಗೂಡಿನಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಾಜ್ಯ ಬಿಜೆಪಿ ರಚನೆ ಮಾಡಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಸೂಚನೆ ನೀಡಿದೆ.
ಹಲ್ಲೆ ನಡೆದಿರುವ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡಲು ಬಿಜೆಪಿಯಿಂದ ತಂಡ ರಚನೆ ಮಾಡಲಾಗಿದೆ. ಇದಕ್ಕಾಗಿ ಐವರು ಸದಸ್ಯರ ತಂಡ ರಚನೆ ಮಾಡಲಾಗಿದ್ದು, ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್ ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಮಹೇಶ್ ಅವರನ್ನೊಳಗೊಂಡ ತಂಡಕ್ಕೆ ಶೀಘ್ರವೇ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. .