ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೆ ಮುಂದಿನ ಸಿಎಂ ಯಾರಾಗಬೇಕು ಎಂಬ ವಿಚಾರದಿಂದ ಹಿಡಿದು ಅಧಿಕಾರ, ಗ್ಯಾರಂಟಿಗಳನ್ನು ಪೂರೈಸುವವರೆಗೆ ಕಾಂಗ್ರೆಸ್ ಮುಂದೆ ಸವಾಲುಗಳ ದೊಡ್ಡ ಪಟ್ಟಿಯೇ ಇದೆ.
ಸಿಎಂ ಪಟ್ಟ:
ಸಿಎಂ ಪಟ್ಟಕ್ಕಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದ್ದು, ಖರ್ಗೆ ಕೂಡಾ ರೇಸ್ನಲ್ಲಿದ್ದಾರೆ. ಮೂವರು ಕೂಡ ಕಾಂಗ್ರೆಸ್ ಪಕ್ಷ ಪ್ರಮುಖ ನಾಯಕರೇ ಆಗಿದ್ದು, ಇವರಲ್ಲಿ ಯಾರೊಬ್ಬರಿಗೆ ಸಿಎಂ ಸ್ಥಾನ ಕೊಟ್ಟರು ಉಳಿದ ಇಬ್ಬರು ಮುನಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಅಷ್ಟೇ ಅಲ್ಲದೆ ದಲಿತ ಸಿಎಂ, ಲಿಂಗಾಯುತ ಸಿಎಂ ಎಂಬ ಚರ್ಚೆಯು ನಡೆಯುತ್ತಿದ್ದು, ಇದು ಪಕ್ಷಕ್ಕೆ ದೊಡ್ಡ ಸವಾಲಾಗಿದೆ.
ಗ್ಯಾರಂಟಿಗಳು:
ಅಧಿಕಾರಕ್ಕೆ ಬಂದ ತಕ್ಷಣ ಮೊದಲನೇ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಐದು ಉಚಿತಗಳನ್ನು ಈಡೇರಿಸಲು ಸರ್ಕಾರ ವರ್ಷಕ್ಕೆ ಅಂದಾಜು 45 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಉಚಿತ ವಿದ್ಯುತ್ ಯೋಜನೆಗೆ ವಾರ್ಷಿಕ ಅಂದಾಜು 9000 ಕೋಟಿ ರುಪಾಯಿ, ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರುಪಾಯಿ ಹಣ ನೀಡುವ ಯೋಜನೆಗೆ ವಾರ್ಷಿದ 36,000 ಕೋಟಿ ರುಪಾಯಿ ಬೇಕಾಗುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವ ಯೋಜನೆಗೆ ಅಂದಾಜು 45 ಸಾವಿರ ಕೋಟಿ ರುಪಾಯಿ ಬೇಕಾಗಲಿದೆ ಎಂದು ಹೇಳಲಾಗಿದ್ದು, ವಿದ್ಯಾರ್ಥಿ ವೇತನಕ್ಕೆ 5 ಸಾವಿರ ರುಪಾಯಿ ಬೇಕಾಗುವ ಅಂದಾಜಿದೆ, ರಾಜ್ಯದ ಬಜೆಟ್ ಗಾತ್ರ 3 ಲಕ್ಷ ಕೋಟಿ ಇದ್ದು, ಇದರಲ್ಲಿ 1 ಲಕ್ಷ ಕೋಟಿಗಿಂತ ಅಧಿಕ ಹಣವನ್ನು ಉಚಿತ ಕೊಡುಗೆಗಳಿಗೆ ಮೀಸಲಿಡಬೇಕಾಗುತ್ತದೆ. ಇದರ ಹೊರೆಯನ್ನು ನಿಭಾಯಿಸುವುದು ಕಾಂಗ್ರೆಸ್ಗೆ ದೊಡ್ಡ ಸವಾಲಾಗಿದೆ.
ಅಧಿಕಾರ ಹಂಚಿಕೆ:
ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಲವರ ಶಾಸಕರು ಅಸಮಾಧಾನ ಗೊಳ್ಳವ ಸಾಧ್ಯತೆಗಳಿವೆ, ಶಾಸಕರನೆಲ್ಲಾ ಸಮಾಧಾನ ಪಡಿಸಿ, ಒಗ್ಗಟ್ಟಿನಲ್ಲಿ ಹೋಗುವುದು ಸದ್ಯದ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಸವಾಲಾಗಿದೆ.
ಮುಂಬರುವ ಚುನಾವಣೆಗಳು:
ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ಮತ್ತು ಪಂಚಾಯಿತಿ ಚುನಾವಣೆಗಳು ರಾಜ್ಯದಲ್ಲಿ ನಡೆಯಲಿವೆ. ಕಾಂಗ್ರೆಸ್, ತನ್ನ ಮುಂಬರಲಿರುವ ಚುನಾವಣೆಯನ್ನು ಗೆಲ್ಲಲು ಸಿದ್ದವಾಗಬೇಕಿದೆ.
ಮೀಸಲಾತಿ ಹೆಚ್ಚಳ:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಪರಿಶಿಷ್ಠ ಜಾತ ಮತ್ತು ವರ್ಗ, ಮುಸ್ಲಿಮರ ಅಲ್ಪಸಂಖ್ಯಾತ ಮೀಸಲಾತಿ ಮತ್ತೆ ಜಾರಿಗೆ ತರುವ ಆಶ್ವಾಸನೆ ನೀಡಿದ್ದರು. ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸಿ ಎಲ್ಲಾ ವರ್ಗಗಳಿಗೆ ನ್ಯಾಯ ಕೊಡುವ ಭರವಸೆ ನೀಡಿದ್ದು ಇದು ಕೂಡ ಹೊಸ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಲಿದೆ.
ಮೇಕೆದಾಟು ಯೋಜನೆ:
ಬಿಜೆಪಿ ಸರ್ಕಾರವಿದ್ದಾಗ ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿದ್ದ ಕಾಂಗ್ರೆಸ್ ಈಗ ಈ ಯೋಜನೆಯನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈಗಾಗಲೇ 6000 ಕೋಟಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಸಹ ಘೋಷಿಸಿದೆ, ತಮಿಳುನಾಡಿನ ವಿರೋಧದ ನಡುವೆ ಯಾವ ರೀತಿ ಈ ಯೋಜನೆ ಜಾರಿ ಮಾಡುವುದು ದೊಡ್ಡ ಸವಾಲಾಗಿದೆ.
ವೇತನ ಹೆಚ್ಚಳ:
ಎನ್ಪಿಎಸ್ ನೌಕರರು ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿದ್ದರು, ಕಾಂಗ್ರೆಸ್ ಇದನ್ನು ಈಡೇರಿಸುವ ಭರವಸೆ ನೀಡಿದ್ದು, ಹಾಗೆಯೇ ಇದರ ಜೊತೆಯಲ್ಲೇ ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರಿಂದ 15 ಸಾವಿರಕ್ಕೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರಿಂದ 10,000 ಕ್ಕೆ ಹೆಚ್ಚಿಸುವ ಭರವಸೆ ಈಡೇರಿಸಬೇಕಾಗಿದೆ. ಇದರ ಜೊತೆ ಬಿಸಿ ಊಟದ ಅಡಿಗೆ ಯವರಿಗೆ ಮಾಸಿಕ ಗೌರವಧನ 3600 ರಿಂದ 6 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿತ್ತು ಇದಕ್ಕೆಲ್ಲ ಹಣ ಹೊಂದಿಸುವುದು ಜವಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ.
ಇನ್ನು ಇದರ ಜೊತೆಗೆ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧವನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು, ಹಾಗೆಯೇ ಪಠ್ಯ ಬದಲಾವಣೆ ವಿವಾದ, ಟಿಪ್ಪು ಸುಲ್ತಾನ್ ವಿವಾದವನ್ನು ಕಾಂಗ್ರೆಸ್ ಬಗೆಹರಿಸಬೇಕಾಗುತ್ತದೆ.