ಚುನಾವಣೆ ಮುಗಿಯಿತು. ಫಲಿತಾಂಶ ಇನ್ನೇನು ಬಂದೆ ಬಿಡ್ತು. ಇಷ್ಟು ದಿನ ತಮ್ಮ ಸಿನಿಮಾ ಕಾರ್ಯಗಳನ್ನು ಬದಿಗಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಿನಿಮಾ ನಟ, ನಟಿಯರಿಂದ ಹಿಡಿದು ನಿರ್ಮಾಪಕ, ನಿರ್ದೇಶಕರೆಲ್ಲರೂ ಮತ್ತೆ ಸಿನಿಮಾ ಮೂಡ್ಗೆ ರಿಟರ್ನ್ ಬಂದಿದ್ದಾರೆ.
ಈ ಮೂಲಕ ಸಿನಿಮಾ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿದೆ. “ಚುನಾವಣೆ ಮುಗಿದ ನಂತರ ಸಿನಿಮಾ ಕೆಲಸ ಶುರು ಮಾಡೋಣ’ ಎಂದು ಸ್ಟಾರ್ಗಳು ಈಗ ಸಿನಿಮಾ ಕಡೆ ಮೂಖ ಮಾಡಿದ್ದಾರೆ. ಅರ್ಧಕ್ಕೆ ನಿಲ್ಲಿಸಿದ್ದ ಚಿತ್ರೀಕರಣ ಮತ್ತೆ ಆರಂಭವಾಗುತ್ತಿದೆ. ಈ ಮೂಲಕ ಚಿತ್ರರಂಗ ಇನ್ನು ಮುಂದೆ ಬಿಝಿಯಾಗುತ್ತಿದೆ.
ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ತಮಗೆ ಬೇಕಾದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾ, ರೋಡ್ ಶೋನಲ್ಲಿ ಮಿಂಚಿದ್ದರು. ಇದೇ ಕಾರಣದಿಂದ ಸಿನಿಮಾ ಕೆಲಸಗಳನ್ನು ಬದಿಗೊತ್ತಿದ್ದರು. ನಟರಾದ ಸುದೀಪ್, ದರ್ಶನ್, ಶಿವರಾಜ್ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್. ಇನ್ನೂ ಅನೇಕ ನಾಯಕ ನಟರು ಚುನಾವಣಾ ಪ್ರಚಾರದಲ್ಲಿ ಗುರುತಿಸಿಕೊಂಡಿದ್ದರು. ಈಗ ಮತ್ತೆ ತಮ್ಮ ಸಿನಿಮಾ ಕೆಲಸದತ್ತ ಯೋಚಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಾ, ರೋಡ್ ಶೋನಲ್ಲಿ ತೊಡಗಿಸಿಕೊಂಡಿದ್ದ ನಟ ಸುದೀಪ್ ಈಗ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸುದೀಪ್, ಅದರಲ್ಲೊಂದು ಸಿನಿಮಾದ ಪ್ರೋಮೋಶೂಟ್ನಲ್ಲಿ ಮೇ 22ರಂದು ನಡೆಯಲಿದೆ. ಇನ್ನು ಸಿನಿಮಾದ ಚಿತ್ರೀಕರಣ ಜೂನ್ ಮೊದಲ ವಾರದಿಂದಲೇ ಆರಂಭವಾಗಲಿದೆ. ಈ ಮೂಲಕ ಸುದೀಪ್ ಚಿತ್ರೀಕರಣಕ್ಕೆ ಭರ್ಜರಿಯಾಗಿ ಎಂಟ್ರಿಕೊಡುವವರಿದ್ದಾರೆ. “ವಿಕ್ರಾಂತ್ ರೋಣ’ ಚಿತ್ರ ತೆರೆಕಂಡ ನಂತರ ಸೆಟ್ಟೇರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಪ್ರೇಕ್ಷಕರಲ್ಲಿ ಇದೆ.
ಧ್ರುವ ಸರ್ಜಾ ತಮ್ಮ “ಕೆಡಿ’ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ನೀಡಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈಗ ಮತ್ತೆ ಚಿತ್ರಕ್ಕೆ ಅಣಿಯಾಗಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಕೆಡಿ’ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸಂಜಯ್ ದತ್ ಪ್ರಮುಖ ಪಾತ್ರ ಮಾಡಿಲಿದ್ದಾರೆ.
ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಿವಣ್ಣ ಈಗ “ಭೈರತಿ ರಣಗಲ್’ನತ್ತ ಕಾಲಿಡುತ್ತಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಸ್ವತಃ ಶಿವರಾಜ್ಕುಮಾರ್ ಅವರೇ ನಿರ್ಮಿಸುತ್ತಿರುವುದರಿಂದ ಅವರು ಇನ್ನೂ ಬಿಝಿಯಾಗಿರುತ್ತಾರೆ.
“ಸಪ್ತಸಾಗರದಾಚೆ ಎಲ್ಲೋ’ ಚಿತ್ರೀಕರಣ ಮುಗಿಸಿರುವ ನಟ ರಕ್ಷಿತ್ ಶೆಟ್ಟಿ ಈಗ “ರಿಚರ್ಡ್ ಆ್ಯಂಟನಿ’ ಸಿನಿಮಾದಲ್ಲಿ ತೂಡಗಿದ್ದಾರೆ. ಹಾಗಂತ ಚಿತ್ರೀಕರಣ ಆರಂಭವಾಗಿಲ್ಲ. ಬದಲಾಗಿ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಮತದಾನ ಮಾಡಿ ಸಿನಿಮಾದ ಸ್ಕ್ರಿಪ್ಟ್ ಕೆಲಸಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದಾರೆ ರಕ್ಷಿತ್.
ಇಷ್ಟೇ ಅಲ್ಲಾ ನಟ ದರ್ಶನ್, ದುನಿಯಾ ವಿಜಯ್, ಸಾಧುಕೋಕಿಲ, ನಟಿಯರಾದ ಹರ್ಷಿಕಾ ಪೂಣತ್ಛ ಸೇರಿದಂತೆ ಅನೇಕ ನಟ-ನಟಿಯರು ಪ್ರಚಾರ ಕಣದಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಅನೇಕ ನಿರ್ಮಾಪಕ, ನಿರ್ದೇಶಕರು ತಮಗೆ ಬೇಕಾದ ಅಭ್ಯರ್ಥಿ ಪರ ಚುಣಾವಣ ಪ್ರಚಾರ ಮಾಡಲು ತಮ್ಮ ಸಿನಿಮಾ ಕಾರ್ಯಗಳನ್ನು ಮುಂದೆ ಹಾಕಿದ್ದರು. ಈಗ ಅವರೆಲ್ಲಾ ಮತ್ತೆ ಸಿನಿಮಾ ಮೂಡ್ಗೆ ಬಂದಿದ್ದಾರೆ.