ಮಂಗಳೂರಿನಿಂದ 50ಕಿ.ಮೀ ದೂರದಲ್ಲಿದೆ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಸ್ಥಾನ ೫೫೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ, ಇದು ಭಕ್ತರನ್ನು ಭಕ್ತಿ ಭಾವೈಕ್ಯದಿಂದ ಆಕರ್ಷಿಸುತ್ತದೆ. ಶ್ರೀ ವೆಂಕಟರಮಣ ದೇವಾಲಯವು ‘ಪಾಡುತಿರುಪತಿ’ ಎಂದು ಜನಪ್ರಿಯವಾಗಿದೆ. ಹೆಸರೇ ಸೂಚಿಸುವಂತೆ ಕನ್ನಡದಲ್ಲಿ ‘ಪಡು’ ಎಂದರೆ ಪಶ್ಚಿಮ ಎಂದರ್ಥ. ಈ ದೇವಾಲಯದಲ್ಲಿ ನಡೆಸಲಾಗುವ ಆಚರಣೆಗಳು ಮತ್ತು ಪೂಜೆ ಪುರಸ್ಕಾರ, ರೀತಿ, ವಿಧಿವಿಧಾನಗಳು ‘ತಿರುಮಲ’ಕ್ಕೆ ದೇವಾಸ್ಥಾನವನ್ನು ಹೋಲುತ್ತವೆ.
ಶ್ರೀ ವೆಂಕಟರಮಣ ದೇವಸ್ಥಾನದ ಗರುಡ ಮಂಟಪದಲ್ಲಿ ನಿಂತು ಬೇಡಿದ ವರವು ಭಗವಂತ ಪೂರ್ಣಗೊಳಿಸುತ್ತಾನೆ ಎಂಬ ನಂಬಿಕೆ ಗಾಢವಾಗಿ ಬೆಳೆದಿದೆ. ಇಲ್ಲಿಗೆ ಬರುವ ಭಕ್ತರು ‘ನಮ್ಮ ದೇವರು’ ಎಂಬ ಆಗಾಧವಾದ ನಂಬಿಕೆ ವಿಸ್ವಾಸದಿಂದ ಹೇಳುತ್ತಾರೆ.
ಸ್ಥಳೀಯ ಹಾಗೂ ಹೊರಗಿನ ಅವಶ್ಯಕತೆಗೆ ಪೂರಕವಾಗಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ಬೆಂಬಲಿಸುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು, ಶ್ರೀ ವೆಂಕಟರಮಣ ಗೋಶಾಲಾ ಟ್ರಸ್ಟ್ (ರಿ), ವಾತ್ಸಲ್ಯ ಸೇವಾ ಟ್ರಸ್ಟ್ (ಆರ್) (ವೃದ್ಧಾಶ್ರಮ) ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದೇವಸ್ಥಾನಕ್ಕೆ ಸೇರಿದ ಎಕರೆ ಬೆಲೆಬಾಳುವ ಭೂಮಿಯನ್ನು ಗುತ್ತಿಗೆಗೆ ನೀಡುವ ಮೂಲಕ ದೇವಾಲಯವು ತನ್ನ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯನ್ನು ತೋರಿದೆ.
ಮೂಲ ಕಥೆಯ ಪ್ರಕಾರ ಕಿ.ಶ1500ರಲ್ಲಿ ಡಕಾಯಿತರ ಗುಂಪು ದೇವಾಸ್ಥಾನ ಮೇಲೆ ದಾಳಿ ನಡೆಸಿದ್ದಾಗ ದೇವಾಲಯದ ಅರ್ಚಕರು ದೇವರ ವಿಗ್ರಹ ಮತ್ತು ಬೆಳೆಬಾಳುವ ವಸ್ತುಗಳನ್ನು ರಕ್ಷಿಸಲು ಬಾವಿಗೆ ಎಸೆಯುತ್ತಾರೆ. ಮುಲ್ಕಿಯ ವ್ಯಕ್ತಿಯೊಬ್ಬರು ದೇವರ ವಿಗ್ರಹವನ್ನು ಬಾವಿಯಲ್ಲಿ ಕಂಡು ಅಲ್ಲಿನ ಜನರು ವಿಗ್ರಹವನ್ನು ಶ್ರೀ ವೀರ ವಿಠ್ಠಲ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತ ಕಾರ್ಕಳದ ಜನರು ಸಂದಿಗ್ಧ ಸ್ಥಿತಿಯಲ್ಲಿದ್ದವರಿಗೆ ಭಗಂವಂತನು ಮುಂದಿನ ದಿನಗಳಲ್ಲಿ ಭಕ್ತರೊಬ್ಬರು ವಿಗ್ರಹವನ್ನು ನೀಡುವುದಾಗಿ ಕನಸಿನಲ್ಲಿ ತಿಳಿಸಿದರು ಎಂಬ ನಂಬಿಕೆ ಇದೆ. ಅದರಂತೆ ಊಹೆಗಳ ಪ್ರಕಾರ ವೆಂಕಟರಮಣನ ಭಕ್ತ ಸನ್ಯಾಸಿಯೊಬ್ಬರು ತಿರುಪತಿಯಿಂದ ಬಂದು ವಿಗ್ರಹವನ್ನು ನೀಡಿದ್ದರು.ಪ್ರತಿ ವರ್ಷ ಕನಿಕಾದಿಂದ ವಿಗ್ರಹವನ್ನು ತಿರುಪತಿಗೆ ಕೊಂಡೊಯ್ಯಬೇಕು ಎಂಬ ಶರತ್ತನ್ನು ವಿಧಿಸಿದ್ದರು. ಹೀಗೆ ಪ್ರತಿಷ್ಠಾಪನೆಗೊಂಡ ವಿಗ್ರಹವನ್ನು ಚಿನ್ನದ ಪಲ್ಲಕಿಯಲ್ಲಿ ವನಬೋಜನಕ್ಕೆ ವಿಹಾರಕ್ಕಾಗಿ ಇಂದಿಗೂ ಕೊಂಡೊಯ್ಯಲಾಗುತ್ತಿದೆ. ಇಲ್ಲಿ ಸಂಗ್ರಹಿಸಲಾಗುವ ಕನಿಕಾವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಿರುಪತಿಗೆ ನೀಡಲಾಗುವುದು. ಇಲ್ಲಿನ ಶ್ರೀನಿವಾಸನ್ನು ತಿರುಪತಿಯ ದೇವರೆಂದು ಕರೆಯುವುದರಿಂದ ಇದು ಪಡುತಿರುಪತಿಯಾಗಿ ಹೆಸರುವಾಸಿಯಾಗಿದೆ.