ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದೆ. ರಾಜಕೀಯ ಪಕ್ಷಗಳು ಈಗಾಗಲೇ ಅಧಿಕಾರದ ಲೆಕ್ಕಾಚಾರದಲ್ಲಿ ತೊಡಗಿವೆ. ಆದರೆ ಕಾಂಗ್ರೆಸ್ನಲ್ಲಿ ಮತ ಏಣಿಕೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಪ್ರಾರಂಭವಾಗಿದ್ದು ಸಾಕಷ್ಟು ಮಂದಿ ಸಿಎಂ ಸ್ಥಾನಕ್ಕಾಗಿ ನಾನಾ ಕಸರತ್ತುಗಳನ್ನು ಪ್ರಾರಂಭಿಸಿದ್ದಾರೆ.
ಸಿದ್ದರಾಮಯ್ಯ:
ಮೊದಲಿನಿಂದಲೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಪಕ್ಷದ ಶಾಸಕರು ಹಾಗೂ ಬೆಂಬಲಿಗರಿಂದ ಎಂಬ ಮಾತು ಕೇಳಿಬಂದಿತ್ತು. ಅದು ಅಲ್ಲದೇ ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಸಿದ್ದರಾಮಯ್ಯ ಪರ ಹೈಕಮಾಂಡ್ ಒಲವು ತೋರುವ ಸಾಧ್ಯತೆ ಇದೆ. ಇನ್ನೂ ಹಲವು ಸಮೀಕ್ಷೆಗಳಲ್ಲೂ ಕೂಡ ಬಹುತೇಕ ಜನರು ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಇತ್ತ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯ ಪರ ಹಲವು ನಾಯಕರು ಬೆಂಬಲವನ್ನು ಸೂಚಿಸುವ ಸಾಧ್ಯತೆಗಳಿವೆ.
ಡಿ ಕೆ ಶಿವಕುಮಾರ್:
ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನಕ್ಕೆ ಹಲವು ದಿನಗಳಿಂದಲೂ ಪ್ರಬಲ ಎದುರಾಳಿಯಾಗಿ ಡಿಕೆ ಶಿವಕುಮಾರ್ ಗುರುತಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ವಹಿಸಿಕೊಂಡ ದಿನದಿಂದಲೂ ಪಕ್ಷ ಸಂಘಟನೆಯನ್ನ ಮಾಡುತ್ತಾ ಬಂದಿದ್ದಾರೆ. ಇನ್ನೂ ಹೈಕಮಾಂಡ್ ನಾಯಕರ ಮಟ್ಟದಲ್ಲೂ ಉತ್ತಮ ಸಂಬಂಧವನ್ನ ಇಟ್ಟುಕೊಂಡಿರುವ ಡಿಕೆಶಿ ಹಲವು ಶಾಸಕರ ಬೆಂಬಲ ನೀಡಲಿದ್ದಾರೆ.
ಆರ್ ವಿ ದೇಶಪಾಂಡೆ:
ಕಾಂಗ್ರೆಸ್ ನ ಹಿರಿಯ ನಾಯಕರಾದ ಆರ್ ವಿ ದೇಶಪಾಂಡೆಯವರ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷ ಸಂಘಟನೆ ಸೇರಿದಂತೆ ಯಾವುದೇ ರೀತಿಯ ಕಳಂಕಗಳು ಸಹ ಕೇಳಿ ಬಂದಿಲ್ಲ.
ಮಲ್ಲಿಕಾರ್ಜುನ್ ಖರ್ಗೆ :
ದಲಿತ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರ ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಮಾತು ಕೇಳಿಬಂದಿದೆ. ದಲಿತ ಸಮುದಾಯ ಎಂದು ಅವಕಾಶ ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯದ ನಾಯಕ ಎಂದು ಪರಿಗಣಿಸಿ ಅವಕಾಶ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹಲವರು ಬಾರಿ ಹೇಳಿದ್ದರು
ಎಂಬಿ ಪಾಟೀಲ್:
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಲಿಂಗಾಯತ ಮುಖ್ಯಮಂತ್ರಿ ವಿಚಾರ, ಇದೀಗ ಲಿಂಗಾಯತ ಸಮುದಾಯದ ನಾಯಕ ಎಂ ಬಿ ಪಾಟೀಲ್ ಸಹ ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ
ಇನ್ನೂ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ , ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರಾಮಲಿಂಗರೆಡ್ಡಿ ಸೇರಿದಂತೆ ಹಲವರು ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ.