ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಭರ್ಜರಿ ಮತದಾನ ನಡೆಯುತ್ತಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದೇ ರೀತಿ ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಕೂಡ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಆದರೆ, ಅವರಿಗೆ ಮತದಾನ ಮಾಡಲು ಮತಗಟ್ಟೆ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಪ್ರಮೋದಾ ದೇವಿ ಅವರು ಗುರುತಿನ ಚೀಟಿ ತರದೇ ಮತದಾನಕ್ಕೆ ಬಂದಿದ್ದರಿಂದ ಅವರಿಗೆ ಮತದಾನಕ್ಕೆ ಅಧಿಕಾರಿಗಳು ಅವಕಾಶ ನಿರಾಕರಿಸಿದರು. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಕಾಂತ ಶಾಲೆಯ ಮತ ಕೇಂದ್ರದಲ್ಲಿ ಮತದಾನ ಮಾಡಲು ಪ್ರಮೋದಾ ದೇವಿಯವರು ಬಂದಿದ್ದು, ಗುರುತಿನ ಚೀಟಿ ತರದ ಕಾರಣ ಮತದಾನಕ್ಕೆ ಅವಕಾಶ ನೀಡಲಿಲ್ಲ. ಝೆರಾಕ್ಸ್ ಪ್ರತಿಯನ್ನು ನೀಡಿದರೂ ಚುನಾವಣಾ ಸಿಬ್ಬಂದಿ ಸಮ್ಮತಿ ನೀಡಲಿಲ್ಲ. ಮೂಲ ಗುರುತಿನ ಚೀಟಿ ಒದಗಿಸಿದ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ರಾಜಮಾತೆ ಪ್ರಮೋದಾ ದೇವಿ ಮತ ಚಲಾಯಿಸಿದ್ದಾರೆ
ಮತದಾನದ ಬಳಿಕ ಮಾತನಾಡಿದ ಪ್ರಮೋದಾ ದೇವಿ ಅವರು, ಆಫೀಸ್ನಿಂದ ಒಂದು ಚೀಟಿ ಕೊಟ್ಟಿದ್ದರು. ಅದರಲ್ಲಿ ಎಲ್ಲಾ ಮಾಹಿತಿ ಇದೆ ಎಂಬ ಭರವಸೆ ಮೇಲೆ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಎಂದು ಸಿಬ್ಬಂದಿ ಹೇಳಿದರು. ಅದಕ್ಕಾಗಿ ಮತದಾನ ತಡ ಆಯ್ತು ಎಂದು ಹೇಳಿದರು.