ರೋಡ್ ಶೋ ಮೂಲಕ ಬಲ ಪ್ರದರ್ಶನ, ಜನಬೆಂಬಲವನ್ನು ಎದುರಾಳಿ ಅಭ್ಯರ್ಥಿಗಳಿಗೆ ತೋರಿಸಿದ್ದಾಯ್ತು. ಈಗ ಕಡೆಯ ಒಂದು ರೌಂಡ್ ಸ್ಟಾರ್ ಪ್ರಚಾರಕರ ಸರದಿಯೂ ನಡೆಯುತ್ತಿದೆ.
ಕಿಚ್ಚ ಸುದೀಪ್, ದರ್ಶನ್ ತಮ್ಮ ತಮ್ಮ ನೆಚ್ಚಿನ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸಿ ಪ್ರಚಾರದಲ್ಲಿ ತೊಡಗಿಸಿದ್ದರು. ಇತ್ತ ನಟಿ ತಾರ ಸಕ್ರೀಯವಾಗಿ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಾ ಅಭ್ಯರ್ಥಿಗಳನ್ನು ಬೆಂಬಲಿಸಿ ಇದುವರೆಗಿನ ಸ್ಟಾರ್ ಪ್ರಚಾರಕರಲ್ಲಿ ಮುಂಚೂಣಿಯಲ್ಲಿದ್ದಾರೆ.
ಆದರೆ ಈಗ ಸಿನಿಮಾ ನಟ ನಟಿಯರ ದಂಡು ರಾಜಕೀಯ ಪಕ್ಷಗಳ ಬೆಂಬಲಕ್ಕೆ ನಿಂತು ನಿರಂತರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಗಂಗೊಳ್ಳಿಯಲ್ಲಿ ನಟ ಪ್ರಮೋದ್ ಶೆಟ್ಟಿ ಮತ್ತು ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಬಿಜಿಪಿ ಅಭ್ಯರ್ಥಿ ಗುರುರಾಜ್ ಗಂಟೆಹೊಳೆ ಪರವಾಗಿ ಭರ್ಜರಿ ಮತಪ್ರಚಾರ ಮಾಡಿದ್ದಾರೆ.
ಸತ್ಯ ಧಾರವಾಹಿಯ ಖ್ಯಾತಿ ಗೌತಮಿ ಜಾದವ್ ಬಿಜೆಪಿ ಅಭ್ಯರ್ಥಿ ಎಮ್.ಅರ್.ಪಾಟೀಲ್ ಪರ ಪರಸಾಪುರ ಮತ್ತು ರಾಯನಾಳದಲ್ಲಿ ಮನೆ ಮನೆ ಪ್ರಚಾರ ಮಾಡಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರ ಕಡೆಗೂ ನಟಿ ರಮ್ಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್,ನಟಿ ನಿಶ್ಚಿಕಾ ನಾಯ್ಡು, ವರುಣ ಕ್ಷೇತ್ರದಲ್ಲಿ 12 ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಇದೇ ಕ್ಷೇತ್ರದಲ್ಲಿ 23 ಗ್ರಾಮಗಳಲ್ಲಿ ನಟ ದುನಿಯಾ ವಿಜಯ್ ಮತ್ತು ನಟ ಯೋಗಿ ಕೂಡ ರೋಡ್ ಶೋದಲ್ಲಿ ಭಾಗವಹಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.
ಇನ್ನು ರಾಜಕೀಯ ಕ್ಷೇತ್ರದ ಸ್ಟಾರ್ ಪ್ರಚಾರಕರು ಆಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಶಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ನಿರಂತರ ಭೇಟಿ ನೀಡುತ್ತಿದ್ದಾರೆ. ಇಂದು ನಟ ಶಿವರಾಜ್ ಕುಮಾರ್ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ನಾಗಶೆಟ್ಟಿ ಕೊಪ್ಪದಿಂದ ರಾಮನಗರ ವರೆಗೂ ಬೃಹತ್ ರೋಡ್ ಶೋ ನಡೆಸಿ ಮತಬೇಟೆ ಮಾಡಿದರು.