ಮಣಿಪುರದ ಮೈಥಿ ಬುಡಕಟ್ಟು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ವಿರೋಧಿಸಿ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಬುಧವಾರ ಆಯೋಜಿಸಿದ್ದ ರ್ಯಾಲಿ ಮತ್ತು ಬಂದ್ನಲ್ಲಿ ವಿವಿಧ ಸಮುದಾಯಗಳ ನಡುವಿನ ಜಗಳ ಹಿಂಸಾಚಾರಕ್ಕೆ ತಿರುಗಿದೆ. ಚುರಚಂದ್ಪುರ, ಮತ್ತು ಇಂಫಾಲ್ನಲ್ಲಿ ದಾಳಿಗಳು ಮತ್ತು ಪ್ರತೀಕಾರದ ದಾಳಿಗಳು ನಡೆಯುತ್ತಿದ್ದು, ಬೆಂಕಿ ಹಚ್ಚುವಂತಹ, ವಿಧ್ವಂಸಕ ಕೃತ್ಯಗಳು ನಡೆದಿರುವುದು ವರದಿಯಾಗಿದೆ. ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಸುಮಾರು 5,000 ಕ್ಕಿಂತಲೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕೋರಿ ಮಿಝೋರಾಂನ ಮುಖ್ಯಮಂತ್ರಿಯೂ ಅಲ್ಲಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷಗಳು ಇದೇ ವಿಷಯವನ್ನಿಟ್ಟುಕ್ಕೊಂಡು ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿವೆ.
ಗಲಭೆಗೆ ಕಾರಣ:
ಮಾರ್ಚ್ 27 ರಂದು ಮಣಿಪುರ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಾಧೀಶರ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಮೈಥಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಅರ್ಜಿದಾರರ ಪ್ರಕರಣವನ್ನು ತ್ವರಿತವಾಗಿ ಪರಿಗಣಿಸುವಂತೆ ನಿರ್ದೇಶಿಸಿದಾಗ ವಿವಾದ ಪ್ರಾರಂಭವಾಯಿತು. ಪ್ರಸ್ತುತ, ನಾಗಾ ಮತ್ತು ಕುಕಿ-ಜೋಮಿ ಬುಡಕಟ್ಟುಗಳ 34 ಉಪ-ಪಂಗಡಗಳು ಸರ್ಕಾರದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿವೆ, ಆದರೆ ಮೈಥಿ ಇಲ್ಲ. ಆದಾಗ್ಯೂ, ಕೆಲವು ಮೈಥಿ ಜಾತಿಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿವೆ. ಮೈಥಿ ಸಮುದಾಯದ ಒಂದು ವಿಭಾಗದಿಂದ ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು 10 ವರ್ಷಗಳಿಂದ ನಿರಂತರ ಬೇಡಿಕೆಯಿದೆ.
ಮೈಥಿ ಸಮುದಾಯವು ರಾಜಧಾನಿ ಇಂಫಾಲ್ ಸೇರಿದಂತೆ ಮಣಿಪುರದ ಕಣಿವೆಯಲ್ಲಿ ನೆಲೆಯಾಗಿರುವ ಪ್ರಬಲ ಸಮುದಾಯವಾಗಿದೆ ಮತ್ತು ಅವರನ್ನು ಸಾಮಾನ್ಯವಾಗಿ ಮಣಿಪುರಿ ಎಂದು ಕರೆಯಲಾಗುತ್ತದೆ. ರಾಜ್ಯದ ಇತರ ಎರಡು ಪ್ರಮುಖ ಸಮುದಾಯಗಳಾದ ಕುಕಿ-ಜೋಮಿ ಮತ್ತು ನಾಗಾ, ಸುತ್ತಮುತ್ತಲಿನ ಬೆಟ್ಟಗಳಲ್ಲಿ ವಾಸಿಸುತ್ತವೆ. ಚುರಚಂದೂರ್ ಸುತ್ತಮುತ್ತಲಿನ ಪ್ರದೇಶವು ಕುಕಿ-ಜೋಮಿ ಬುಡಕಟ್ಟು ಜನಾಂಗದವರ ಪ್ರಾಬಲ್ಯವನ್ನು ಹೊಂದಿದೆ, ಆದರೆ ನಾಗಾ ಬುಡಕಟ್ಟುಗಳು ಉಖ್ರುಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿವೆ.
ಮೈಥಿಗಳು ಹೆಚ್ಚಾಗಿ ಹಿಂದೂಗಳಾಗಿದ್ದರೆ, ನಾಗಾಗಳು ಮತ್ತು ಕುಕಿ-ಜೋಮಿಗಳು ಮುಖ್ಯವಾಗಿ ಕ್ರಿಶ್ಚಿಯನ್ನರು. 2011 ರ ಜನಗಣತಿಯ ಮಾಹಿತಿಯ ಪ್ರಕಾರ, ಮಣಿಪುರವು ಸುಮಾರು 41 ಪ್ರತಿಶತದಷ್ಟು ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಜನಸಂಖ್ಯೆಯನ್ನು ಹೊಂದಿದೆ.
ಮೈಥಿ ಸಮುದಾಯದ ಕುರಿತು:
ಸಾಮಾನ್ಯವಾಗಿ ಮಣಿಪುರಿ ಎಂದು ಕರೆಯುವ ಮೈಥಿ ಬುಡಕಟ್ಟು ಸಮುದಾಯವು ಮಣಿಪುರ ರಾಜ್ಯದ ಪ್ರಧಾನ ಜನಾಂಗೀಯ ಗುಂಪು. ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದಾದ ಮತ್ತು ಮಣಿಪುರ ರಾಜ್ಯದ ಏಕೈಕ ಅಧಿಕೃತ ಭಾಷೆಯಾದ ಮೈಟೈ ಭಾಷೆಯನ್ನು ಮಾತನಾಡುತ್ತಾರೆ. ಇದನ್ನು ಅಧಿಕೃತವಾಗಿ ಮಣಿಪುರಿ ಎಂದೂ ಕರೆಯಲಾಗುತ್ತದೆ.
ಈ ಹಿಂದೆ ಮಣಿಪುರದ ಇಂಫಾಲ್ ಕಣಿವೆ ಪ್ರದೇಶದಲ್ಲಿ ಮೈಟೆಗಳು ನೆಲೆಸಿದ್ದರೂ ಆದರೆ ಈಗ, ಇತರ ರಾಜ್ಯಗಳಾದ ಅಸ್ಸಾಂ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ನೆಲೆಸಿದ್ದಾರೆ. ನೆರೆಯ ರಾಷ್ಟ್ರಗಳಾದ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಮೈಟೆಯ ಜನಾಂಗದವರು ನೆಲೆಸಿರುವುದನ್ನು ನೋಡಬಹುದು.
ಮಣಿಪುರದ ಜನಸಂಖ್ಯೆಯ ಸುಮಾರು 53% ರಷ್ಟು ಮೈಥಿ ಜನಾಂಗದವರು ಇದ್ದಾರೆ. ನೀರಾವರಿ ಕ್ಷೇತ್ರಗಳಲ್ಲಿ ಭತ್ತದ ಕೃಷಿಯು ಅವರ ಆರ್ಥಿಕತೆಯ ಆಧಾರವಾಗಿದೆ.
ಮೈಥಿಗಳು ವಿವಿಧ ಕುಲಗಳಾಗಿ ವಿಭಜನೆಗೊಂಡಿದ್ದು ಕುಲದ ಸದಸ್ಯರು ಪರಸ್ಪರ ವಿವಾಹವಾಗುವುದಿಲ್ಲ. ಮೈಥಿ ಸಮುದಾಯದಲ್ಲಿ ಬಹುಸಂಖ್ಯಾತರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ, ಆದರೆ 8% ಕ್ಕಿಂತ ಹೆಚ್ಚು ಮುಸ್ಲಿಮರೂ ಇದ್ದಾರೆ.