ಲಕ್ನೊ: ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ ಗ್ಯಾಂಗ್ಸ್ಟಾರ್ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ಮತ್ತು ಅವನ ಸಹಾಯಕ ಗುಲಾಮ್ ಮೇಲೆ ಝಾನ್ಸಿಯಲ್ಲಿ ನಡೆದ ಎಸ್ಟಿಎಫ್ ಎನ್ಕೌಂಟರ್ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರಾಜೀವ್ ಲೋಚನ್ ಮೆಹ್ರೋತ್ರಾ ಅವರ ನೇತೃತ್ವದಲ್ಲಿ ಇಬ್ಬರು ಸದಸ್ಯರ ನ್ಯಾಯಾಂಗ ತನಿಖಾ ಸಮಿತಿಯನ್ನು ರಚಿಸಿದೆ.
ಏಪ್ರಿಲ್ 15 ರಂದು ಪ್ರಯಾಗ್ರಾಜ್ನಲ್ಲಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆಯ ತನಿಖೆಗಾಗಿ ರಚಿಸಲಾದ ನ್ಯಾಯಾಂಗ ಆಯೋಗಕ್ಕೆ ಹೆಚ್ಚುವರಿಯಾಗಿ ಇದನ್ನು ರಚಿಸಲಾಗಿದೆ. ಎನ್ಕೌಂಟರ್ನ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಆಯೋಗದ ಆದೇಶವಾಗಿರುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಝಾನ್ಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ವಿಚಾರಣೆ ಆರಂಭಿಸಿದ್ದಾರೆ. ಉಮೇಶ್ ಪಾಲ್ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅತೀಕ್ ಅಹ್ಮದ್ ಅವರ ಮಗ ಮೊಹಮ್ಮದ್ ಅಸಾದ್( 20) ಮತ್ತು ಸಹಾಯಕ ಗುಲಾಮ್ ಮೊಹಮ್ಮದ್(40), ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಏಪ್ರಿಲ್ 13 ರಂದು ಝಾನ್ಸಿಯಲ್ಲಿ ಎನ್ಕೌಂಟರ್ ಮಾಡಲಾಗಿತ್ತು.
2023 ಫೆಬ್ರವರಿ 24 ರಂದು ಅಪರಾಧ ನಡೆದಿದ್ದು, ಆ ದಿನದಿಂದ ಇಬ್ಬರೂ ತಲೆಮರೆಸಿಕೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಅವರು ಕೊಲೆಯನ್ನು ಮಾಡಿರುವುದು ಧೃಡಪಡಿಸಿವೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಏಪ್ರಿಲ್ 15 ರಂದು ಪ್ರಯಾಗರಾಜ್ನಲ್ಲಿ ನಡೆದ ಮಾಫಿಯಾ ಸಹೋದರರಾದ ಅತೀಕ್ ಮತ್ತು ಅಶ್ರಫ್ ಅವರ ಹತ್ಯೆಗೆ ಸಂಬAಧಿಸಿದAತೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಅರವಿಂದ್ ತ್ರಿಪಾಠಿ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ಈಗಾಗಲೇ ರಚಿಸಲಾಗಿದೆ.