ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಮುಗಿದಿದ್ದು, ಇದೀಗ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಹಾರಾಷ್ಟ್ರದ ಸ್ಟಾರ್ ಪ್ರಚಾರಕ ನಾಯಕರನ್ನು ಕರೆಸಿಕೊಳ್ಳುತ್ತಿವೆ.
ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮಾಂತರ, ಖಾನಾಪುರ, ನಿಪ್ಪಾಣಿ, ಯಮಕನಮರಡಿ ಕ್ಷೇತ್ರಗಳಲ್ಲಿ ಮರಾಠಿ ಮತಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮರಾಠಿಗರ ಮತ ಸೆಳೆಯಲು ನಾನಾ ಕಸರತ್ತು ನಡೆಸುತ್ತಿವೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಕರೆಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಿಜೆಪಿ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ.
ಮರಾಠಿ ಭಾಷಿಗರು ಹೆಚ್ಚಿರುವ ಜಿಲ್ಲೆಯ ಗಡಿ ಕ್ಷೇತ್ರಗಳಲ್ಲಿ ಮಹಾರಾಷ್ಟ್ರ ನಾಯಕರು ಪ್ರಚಾರ ನಡೆಸಿ ತಮ್ಮ ಪಕ್ಷಗಳಿಗೆ ಮರಾಠಿ ಮತಗಳನ್ನು ಸೆಳೆಯಲು ಯತ್ನಿಸುತ್ತಾರೆ ಎಂಬುದು ಆಯಾ ಪಕ್ಷಗಳ ಲೆಕ್ಕಾಚಾರ. ಇದೇ ವೇಳೆ ಮಹಾರಾಷ್ಟ್ರದ ಎನ್ ಸಿಪಿ ಮತ್ತು ಶಿವಸೇನೆ ಪಕ್ಷಗಳ ಮುಖಂಡರು ಬಹುತೇಕ ಎಂಇಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆ ಇದೆ. 2013ರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಇಎಸ್ನ ಸಂಭಾಜಿ ಪಾಟೀಲ್ ಮತ್ತು ಖಾನಾಪುರ ಕ್ಷೇತ್ರದಿಂದ ಅರವಿಂದ್ ಪಾಟೀಲ್ ಗೆಲುವು ಸಾಧಿಸುವ ಮೂಲಕ ಎಂಇಎಸ್ ಮತ್ತೆ ತನ್ನ ಹುರುಪು ಸಾಬೀತುಪಡಿಸಿತ್ತು. ಆದರೆ ಕಳೆದ 2018ರ ಚುನಾವಣೆಯಲ್ಲಿ ಎಂಇಎಸ್ ಹೀನಾಯ ಸೋಲು ಕಂಡಿತ್ತು.ನಗರ ಪಾಲಿಕೆ ಚುನಾವಣೆಯಲ್ಲೂ ಎಂಇಎಸ್ ಸೋಲು ಕಂಡಿದೆ.
ಈಗ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಂಇಎಸ್ ಹೇಗಾದರೂ ಮಾಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಪಣತೊಟ್ಟಿದೆ. ಹೀಗಾಗಿ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಿರುವ ಎಂಇಎಸ್ ಅಭ್ಯರ್ಥಿಗಳು ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಗೆಲ್ಲುವ ವಿಶ್ವಾಸದಲ್ಲಿರುವ ಕಾಂಗ್ರೆಸ್ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮರಾಠಿ ಅಭ್ಯರ್ಥಿ ನಾಗೇಶ್ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಿದೆ. ಎಂಇಎಸ್ನಿಂದ ಆರ್.ಎಂ.ಚೌಗುಲೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನರು ಬೃಹತ್ ಜಾಥಾ ನಡೆಸಿದರು. ಇದರಿಂದಾಗಿ ಗ್ರಾಮೀಣ ಭಾಗದ ಮರಾಠಿಗರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಅಭಯ ಪಾಟೀಲ ಅವರಿಗೆ ಸವಾಲು ಹಾಕಲು ಎಂಇಎಸ್ನಿಂದ ರಮಾಕಾಂತ ಕೊಂಡುಸ್ಕರ್ ಅಖಾಡಕ್ಕಿಳಿದಿದ್ದು, ಗಡಿ, ಭಾಷೆ, ಹಿಂದುತ್ವದ ವಿಚಾರಗಳನ್ನು ಮುಂದಿಟ್ಟುಕೊಂಡು ಮರಾಠಿ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಇದು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಅನಿಲ್ ಬೆನಕೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೆನಕೆ ಬೆಂಬಲಿಗರು ಎಂಇಎಸ್ ಅಭ್ಯರ್ಥಿ ಅಮರ ಯಲ್ಲೂರಕರ್ ಅವರನ್ನು ಬೆಂಬಲಿಸಲಿದ್ದಾರೆ ಎನ್ನಲಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ್ ಹಿನ್ನಡೆ ಅನುಭವಿಸಿದರೆ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ್ ಗೆ ವರದಾನವಾಗಿದೆ. ಒಟ್ಟಾರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರ, ಯಮಕನಮರಡಿ, ಖಾನಾಪುರ, ನಿಪ್ಪಾಣಿಯಿಂದ ಸ್ಪರ್ಧಿಸಿರುವ ಎಂಇಎಸ್ ಅಭ್ಯರ್ಥಿಗಳು ಎಷ್ಟು ಮತ ಗಳಿಸುತ್ತಾರೆ? ಇದರ ನೇರ ಪರಿಣಾಮ ಯಾರ ಮೇಲೆ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ.