ಮೂಲತಃ ನಾನು ಕೃಷಿಕನೇ ಆಗಿದ್ದೆ. ನನ್ನ ವಿದ್ಯಾರ್ಥಿ ಜೀವನ ಪೂರ್ಣಗೊಂಡ ನಂತರ 1965 ರಿಂದ 70 ರ ವರೆಗೆ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರತನಾಗಿದ್ದಾಗಲೇ ವಿವಾಹವಾದೆ. ಆಗ ನನಗೆ 28 ವರ್ಷಗಳಾಗಿತ್ತು. ಮಿಲಿಟರಿಯಿಂದ ಹಿಂತಿರುಗಿದ ತಕ್ಷಣ ನಮ್ಮ ಹಿರಿಯರಿಂದ ಬಂದ ವಿಶಾಲ ಕೃಷಿ ಪ್ರದೇಶದಲ್ಲಿ ಭತ್ತ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಆಹಾರ ಮತ್ತು ಆರ್ಥಿಕ ಬೆಳೆಗಳನ್ನು ಬೆಳೆಸುತ್ತಾ ಇತರ ಚಿಲ್ಲರೆ ಕೃಷಿಗಳಲ್ಲೂ ತೊಡಗಿಕೊಂಡೆ. 10 ವರ್ಷಗಳ ನಂತರ ನನ್ನ ತಮ್ಮನೂ ನನ್ನ ಜೊತೆ ಕೈಜೋಡಿಸಿದ. ಹೀಗೆ ನಾವಿಬ್ಬರೂ ಉತ್ತಮ ಕೃಷಿಕರಾದೆವು. 1996 ರಲ್ಲಿ ನನ್ನ ಇತರ ಸಾರ್ವಜನಿಕ ಚಟುವಟಿಕೆಗಳು ಹೆಚ್ಚಾದಾಗ ನನ್ನಿಂದ ಕೃಷಿಗೆ ‘ಹೊಡೆತ’ ಬೀಳಬಾರದೆಂಬ ಉದ್ದೇಶದಿಂದ ನಾನು ಕೃಷಿ ಜವಾಬ್ದಾರಿಕೆಯನ್ನು ತಮ್ಮನಿಗೆ ಒಪ್ಪಿಸಿ ಹೊರಬಂದೆ. ಆದರೆ ದಿನ ಕಳೆದಂತೆ ನನ್ನ ಹೃದಯಾಂತರಾಳದಲ್ಲಿ ಹುದುಗಿದ್ದ ಕೃಷಿ ಪ್ರೇಮ ಮರಳಿ ಕೃಷಿಗೆ ತೊಡಗಲು ಪ್ರಚೋದಿಸುತ್ತಿತ್ತು.
ನಮ್ಮದು ‘ ಒಟ್ಟು ಕುಟುಂಬ’ ನಮ್ಮ ಮನೆ ಇರುವುದು ನಮ್ಮ ಕೃಷಿ ಪ್ರದೇಶದಿಂದ ಹತ್ತು ಕಿ. ಮೀ ದೂರದ ಮಡಿಕೇರಿ ನಗರದ ಹೃದಯಭಾಗದಲ್ಲಿ. ನಮ್ಮ ವಿಶಾಲ ಮನೆಯ ಹಿಂಭಾಗದಲ್ಲಿ ಸುಮಾರು 25 ಸೆಂಟ್ಸ್ ಜಾಗ ಹಾಳು ಬಿದ್ದುಕೊಂಡಿತ್ತು. ಈ ಜಾಗವು ಯಾವುದೇ ಕೃಷಿಗೆ ಪ್ರಶಸ್ತವಾಗಿತ್ತು. ಜಾಗದ ಒತ್ತಾಗಿ ವರ್ಷವಿಡೀ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ತೋಡು ಇದೆ. ಬೇಲಿ ಭದ್ರವಾಗಿದೆ. ಮಣ್ಣು ಕೃಷಿಗೆ ಯೋಗ್ಯವೇ ಇದೆ. ಅಲ್ಲಿ ಇಲ್ಲಿ ಕುರುಚಲು ಕಾಡು ಬಿಟ್ಟರೆ ಒಟ್ಟಿನಲ್ಲಿ ಕೃಷಿಗೆ ಯೋಗ್ಯವಾದ ಸ್ಥಳವಾಗಿತ್ತು. ಆದ್ದರಿಂದ ತಡಮಾಡದೆ ಕೃಷಿಯತ್ತ ಗಮನ ಹರಿಸಿದೆ.
ಇಲ್ಲಿ ಈ ಹೊಸ ಸಾಹಸ ಕೃಷಿಯು ಕೇವಲ ನನ್ನ ಹವ್ಯಾಸದ ಆಶಯವನ್ನು ತಣಿಸುವುದಾಗಿತ್ತೇ ವಿನಹ ಪೂರ್ಣ ಪ್ರಮಾಣದ ವೃತ್ತಿಯಾಗಿರಲಿಲ್ಲ. ಈ ನಿರ್ಧಾರಕ್ಕೆ ನಾನು 2010ರಲ್ಲಿ ನನ್ನ 68ನೇ ವರ್ಷ ಪ್ರಾಯದಲ್ಲಿ ಬಂದೆ ಮತ್ತು ತಕ್ಷಣ ಕಾರ್ಯೊನ್ಮುಖನಾದೆ. ನನ್ನ ಉದ್ದೇಶ ಅರೆಬಿಕಾ, ರೋಬಸ್ಟಾ ಕಾಫಿ ಬೆಳೆಸುವುದು ಮತ್ತು ಕೆರೆ ಜಾಗದಲ್ಲಿ ಮನೆಯಲ್ಲಿ ಎಲ್ಲರಿಗೂ ಬೇಕಾಗುವ ತರಕಾರಿ ಬೆಳೆಸುವುದಾಗಿತ್ತು.
ಕಾಫಿಯಲ್ಲಿರುವ ಎರಡು ತಳಿಗಳು : 1) ಅರೆಬಿಕಾ 2) ರೋಬಸ್ಟಾ ಈ ತಳಿಗಳ ಬಗ್ಗೆ ಇರುವ ಹೋಲಿಕೆಗಳು, ವ್ಯತ್ಯಾಸಗಳು ಮತ್ತು ಕೃಷಿಯ ಬಗ್ಗೆಯೂ ಇರುವ ವ್ಯತ್ಯಾಸಗಳು ಮತ್ತು ಯಾವ ಕಾರಣಕ್ಕಾಗಿ ಈ ಎರಡೂ ಬೆಳೆಗಳ ಬಗ್ಗೆ ಗಮನ ಹರಿಸಬೇಕೆಂದು ಸೂಕ್ಷ್ಮವಾಗಿ ವಿವರಿಸುತ್ತೇನೆ. ಎಲ್ಲವೂ ನಿರ್ಧಾರವಾಗುವುದು ಮಣ್ಣಿನ ಲಕ್ಷಣದ ಮೇಲೆ. ನಂತರ ನೀರು. ಗಿಡಗಳು ಬೆಳೆಯುವ ಕ್ರಮಕ್ಕೆ ಅನುಸಾರವಾಗಿ ಗಿಡಗಳ ಅಂತರ ನಿರ್ಧಾರವಾಗುತ್ತದೆ ಅರೆಬಿಕಾ ತಳಿ ‘6×6’ ಅಂತರ ಎಕ್ರೆಗೆ 1210 ಗಿಡಗಳು (ಟಿಪ್ಪಣಿ :1ಎಕ್ರೆ 43560 ಚರಂಡಿ) ರೊಬಸ್ಟಾ ತಳಿ 10×0 ಅಂತರ -II-436-II-ಗಿಡಗಳು
ಈ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಿಡಗಳ ಕೊಂಬೆಗಳು ಆಕ್ರಮಿಸುವ ಜಾಗವನ್ನು ಊಹಿಸಬಹುದು. ಅರೆಬಿಕಾ ಗಿಡದ ವ್ಯಾಸ ‘6 ಆದರೆ ರೊಬಸ್ಟಾ ಗಿಡದ್ದು 10’. ಎತ್ತರ ಅರೆಬಿಕಾ 2”9”. ಆದರೆ ರೊಬಸ್ಟಾ 3”6”. ಗಿಡಗಳು ಬೆಳೆಯುತ್ತಾ ಬರುವಾಗ ಕಾಂಡದ ಮೂಲ ಚಿಗುರನ್ನು ಈ ಎತ್ತರಗಳಿಗೆ ಕತ್ತರಿಸಿ ತೆಗೆದರೆ ಯಥೇಚ್ಛಾವಾಗಿ ಅಡ್ಡ ಚಿಗುರುಗಳು ಬರಲಾರಂಭಿಸುತ್ತವೆ. ಕಾಫಿ ಗಿಡಗಳಿಗೆ ಕಾಲಕ್ಕೆ ಅನುಗುಣವಾಗಿ ನೀರು ಗೊಬ್ಬರ ಕೊಡುವುದು ಬಲು ಅಗತ್ಯ. ಮೇಲ್ಪದರಿನ ನೆರಳಿನ ವ್ಯವಸ್ಥೆ, ಗಿಡಗಳಲ್ಲಿ ಅನಗತ್ಯ ರೆಕ್ಕೆಗಳನ್ನು, ಒಣಗಿದ ಕಸ ಕಡ್ಡಿಗಳನ್ನು ತೆಗೆಯುವುದು, ಕಾಲ ಕಾಲಕ್ಕೆ ಕ್ರೀಮಿನಾಶಕ ಸ್ಪ್ರೇ ಅನಗತ್ಯ ಚಿಗುರುಗಳನ್ನು ತೆಗೆಯುವುದು ಇತ್ಯಾದಿ ಕಾಲಕಾಲಕ್ಕೆ ಅನುಗುಣವಾಗಿ ಮಾಡುತ್ತಿರಬೇಕು. ಗಿಡ ನೆಟ್ಟು 5 ವರ್ಷಗಳ ನಂತರ ಫಸಲು ಹೆಚ್ಚಾಗುತ್ತಾ ಹೋಗುತ್ತದೆ. ಕಾಲಕಾಲಕ್ಕೆ ನೀರು ಮತ್ತು ಗೊಬ್ಬರ ಸಿಕ್ಕಿದ ಗಿಡಗಳಲ್ಲಿ ಸಾಧಾರಣವಾಗಿ ಅಕ್ಟೋಬರ್ ತಿಂಗಳಿನಿಂದ ಗಿಡಗಳ ರೆಕ್ಕೆಗಳಲ್ಲಿ ಮೊಗ್ಗುಗಳು ಕಾಣಲಾರಂಭಿಸುತ್ತವೆ. ಮೊಗ್ಗುಗಳು ಬೆಳೆದು ನಾಲ್ಕು ತಿಂಗಳ ನಂತರ ಸಾಧಾರಣ ಫೆಬ್ರವರಿ ಮಧ್ಯಭಾಗದಲ್ಲಿ ಹೂ ಮಳೆ ಸಿಕ್ಕಿ ಭೂಮಿಯ ಮೇಲ್ಫದರದಲ್ಲಿ ನೀರಿನ ಪಸೆ ಕಾಣಿಸಿಕೊಂಡರೆ ಗಿಡಗಳಿಗೆ ತೃಪ್ತಿ ಆದರೆ ಮಳೆಬಂದ 7 ಅಥವಾ 8 ದಿನಗಳಲ್ಲಿ ಹೂಗಳು ಅರಳುತ್ತವೆ. ಕಾಫಿ ಹೂ ಗಳಲ್ಲಿ ಸ್ವಕೀಯ ಪರಾಗ ಸ್ವರ್ಶ ಆಗುವುದರಿಂದ ಅರಳುವ ಹೂಗಳೆಲ್ಲವೂ ಫಸಲೆಂದೇ ಅರ್ಥ ಆದರೆ ಹೂ ಅರಳಿದ ನಂತರವೂ ಮಳೆಗಾಲ ಹಿಡಿಯುವವರೆಗೂ ಕಾಲಕಾಲಕ್ಕೆ ಅಲ್ಪಪ್ರಮಾಣದ ನೀರು ಸಿಗಬೇಕು.(ಮಳೆ ಅಥವಾ ಹನಿ ನೀರು )
ಗದ್ದೆ ವ್ಯವಸಾಯ: ನಮ್ಮ ಮೂಲಜಾಗದಲ್ಲಿ 40 ಎಕ್ರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯವಸಾಯ ಮಾಡಿದವರು ನಾವು 2016ನೇ ಇಸವಿ ಜೂನ್ ತಿಂಗಳಲ್ಲಿ ನನಗೆ ಇದ್ದಕ್ಕಿದ್ದಂತೆ ಭತ್ತ ವ್ಯವಸಾಯ ಮಾಡಬೇಕೆಂಬ ಯೋಚನೆ ಬಂದುಬಿಟ್ಟಿತ್ತು, ನಮ್ಮ ತೋಟದ ಕೊನೆಯ ಕಾಫಿ ಗಿಡದ ಕೆಳಭಾಗ ಸಾಧಾರಣ 75 ಉದ್ದ 15 ಅಗಲ ಗುಂಡಿ ಜಾಗವಾಗಿದ್ದು ಕಾಫಿ ಕೃಷಿಗೆ ಹೇಳಿದ ಜಾಗವಾಗಿರಲಿಲ್ಲ. ಇದ್ದ ಜಾಗವನ್ನು ಅತಿಕಡಿಮೆ ಕೆಲಸದಾಳುಗಳನ್ನು ಬಳಸಿ ಮಟ್ಟ ಮಾಡಿಸಿ ಗದ್ದೆ ರೂಪಕ್ಕೆ ತಂದೆ. ಮಳೆಗಾಲ ಆರಂಭ ಆಗುತ್ತಿದ್ದಂತೆ ಸ್ವತಃ ನಾನು ಮೂರು ಮೂರು ಬಾರಿ ಗದ್ದೆಯನ್ನು ಗುದ್ದಲಿಯಿಂದ ಕೊಚ್ಚಿ (ಎತ್ತುಗಳಿಂದ ಹೂಡುವ ಬದಲು ) ಮಣ್ಣು ಹದ ಮಾಡಿದೆ. ಪೈರನ್ನು ಸಂಬಂಧಿಕರಿಂದ ತಂದೆ. ಸಕಾಲದಲ್ಲಿ ‘ಜೀರಿಗೆ ಸಣ್ಣ’ ತಳಿಯ ಪೈರನ್ನು ನಾಟಿಮಾಡಿದೆ. ಪೈರು ಬಲು ಸೊಂಪಾಗಿ ಬೆಳೆಯಿತು. ಸಕಾಲದಲ್ಲಿ ಕಳೆ ತೆಗೆದೆ, ಕಾವೇರಿ ಸಂಕ್ರಮಣ (ಅಕ್ಟೋಬರ್)ದ ಸಂದರ್ಭದಲ್ಲಿ ಹುಲುಸಾದ ಬೆಳೆ, ಚೆಂದದ ಅರಶಿನ ಬಣ್ಣದ ಕದಿರುಗಳು ಕಾಣಲಾರಂಭಿಸಿದವು. ಆಗ ನನ್ನ ಸಂತೋಷ ಹೇಳತೀರದು. ನೋಡನೋಡುತ್ತಿದ್ದಂತೆ ಕದಿರುಗಳಲ್ಲಿ ಹಾಲು ತುಂಬಿ ದಷ್ಟಪುಷ್ಟವಾದವು. ಸಾಧಾರಣ ಡಿಸೆಂಬರ್ ಮಧ್ಯಬಾಗದಲ್ಲಿ ಬೆಳೆ ಹಣ್ಣಾಗಿ ಕೊಯ್ಲಿಗೆ ತಯಾರಾಯಿತು. ಒಂದು ನಿರ್ದಿಷ್ಟ ದಿನದ ಬೆಳಗ್ಗೆ ನಾನು ‘ಬೆಳೆಕೊಯ್ಲು’ ಕತ್ತಿಯೊಡನೆ ತಯಾರಾದೆ. ಮನೆ ಹಿತ್ತಲಿಗೆ ಹೋಗಿ ನೋಡುತ್ತೇನೆ –ಏನು ಹೇಳಲಿ! ಚಿನ್ನದ ಮೆರಗಿನ ಕದಿರು ಹೊತ್ತ ಗದ್ದೆ ಕಾಣಬೇಕಾದಲ್ಲಿ ಗದ್ದೆಯೇ ಕಾಣುತ್ತಿಲ್ಲ! ನನ್ನ ಆಶ್ಚರ್ಯಕ್ಕೆ ಮಿತಿ ಇಲ್ಲ!! ಮತ್ತೆ,ಪುನಃ ದಿಟ್ಟಿಸಿ ನೋಡುವಾಗ ನನಗೆ ಕಂಡ ದೃಶ್ಯ …? ಬೇಲಿ ಮುರಿದು ಬಂದ ಎಮ್ಮೆ ಕೋಣ ಮತ್ತು ಕಡಸು ಸಂಪೂರ್ಣ ಬೆಳೆ ಮೈದು ತಿಂದು ತನ್ನ ಸಗಣಿ ಗಂಜಲದ ಮೇಲೆ ಮಲಗಿಕೊಂಡು ಮೆಲುಕು ಹಾಕುತ್ತಿದ್ದವ್ತು. ಹೀಗೆ ನನ್ನ ಭತ್ತದ ಬೆಳೆ ‘ ಕೈಗೆ ಬಂದದ್ದು ಬಾಯಿಗೆ ಬರದಂತೆ ಆಗಿ ಹೋಯಿತು ನಂತರದ ಎರಡು ವರ್ಷಗಳು ಪ್ರಯತ್ನಿಸಿದೆ ಆದರೆ ವಿಪರೀತವಾಗಿ ಸೊಕ್ಕಿದ ಕಾರಣದಿಂದಾಗಿ ಕೇವಲ ಹುಲ್ಲು ಸಿಕ್ಕಿದವೇ ವಿನಹ ಫಸಲು ಸಿಗಲಿಲ್ಲ. ನಂತರ ನನ್ನ ವೈಯ್ಯಕ್ತಿಕ ಕಾರಣದಿಂದಾಗಿ ಗದ್ದೆ ವ್ಯವಸಾಯವನ್ನು ಕೈ ಬಿಟ್ಟೆ.
ತರಕಾರಿ ಕೃಷಿ : ಅಂದಿನಿಂದ ಇಂದಿನವರೆಗೂ ತರಕಾರಿ ಬೆಳೆಸುತ್ತಿದ್ದೇನೆ ‘ಮನೆ ಖರ್ಚಿಗೆ’ ಪೂರಕವಾಗಿ ಕಾಲಕಾಲಕ್ಕೆ ಬೇಕಾದ ತರಕಾರಿಗಳನ್ನು ಬೆಳೆಸುತ್ತಲೇ ಇದ್ದೇನೆ. ಬೀನ್ಸ್ ಮೊದಲ್ಗೊಂಡು ಬಳ್ಳಿ ತರಕಾರಿಗಳು, ಸ್ಥಳೀಯ ತರಕಾರಿಗಳು, ಇಂಗ್ಲೀಷ್ ತರಕಾರಿಗಳನ್ನು ಹೆಚ್ಚು ಶ್ರಮವಹಿಸಿ ಬೆಳೆಸುತ್ತಿದ್ದೇನೆ.
ಪಂಪ್ಸೆಟ್: 2019ರಲ್ಲಿ ಸಣ್ಣ ತರದ ಬಾವಿ ತೆಗೆದು ಮೋಟಾರ್ ಪಂಪ್ ಅಳವಡಿಸಿ ಕಾಫಿಗೆ ತರಕಾರಿಗೆ ಹೂ ತೋಟಕ್ಕೆ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ನೀರುಣಿಸುತ್ತಿದ್ದೇನೆ.
ಈ ಎಲ್ಲ ಕಾರಣಗಳಿಂದಾಗಿ ಮುಂಬರುವ ಕಾಫಿ ಪಸಲು ಚೆನ್ನಾಗಿ ಬರುವ ಎಲ್ಲಾ ತರದ ಲಕ್ಷಣಗಳು ಕಾಣುತ್ತೀವೆ. ಬೆಳೆಯುತ್ತಿರುವ ಫಸಲಿಗೆ ನೀರು ಗೋಬ್ಬರ ಮತ್ತು ವಾತಾವರಣ ಕೂಡಿ ಬಂದರೆ ಮುಂದಿನ ನವೆಂಬರ್ (2023) ನಂತರ 2024ರ ಫೆಬ್ರವರಿ ಒಳಗೆ ಒಳ್ಳೆಯ ಕಾಫಿ ಫಸಲು ಕೈಗೆ ದೊರೆಯುತ್ತದೆ.
ನನ್ನ ಹೆಮ್ಮೆಯ ಮನೆಯ ಹಿತ್ತಲ ಕೃಷಿ ಕ್ಷೇತ್ರಕ್ಕೆ ನಾನು 10.07.2020 ರಂದು “ಅಂಗೈ ಬ್ರಹ್ಮಾಂಡ ಕೃಷಿ” ಎಂಬ ನಾಮಕರಣ ಮಾಡಿದ್ದೇನೆ. ಆಸಕ್ತರು ದಯವಿಟ್ಟು ಪೂರ್ವ ಮಾಹಿತಿ ನೀಡಿ ಬಂದರೆ ನನ್ನ ಅಂಗೈ ಬ್ರಹ್ಮಾಂಡ ಕೃಷಿಕ್ಷೇತ್ರದ ಪರಿಚಯ ಮಾಡಿಸುತ್ತೇನೆ.