ತಲೆಯೊಳಗೆ ನೂರಾರು ಚಿಂತೆ, ಕೆಲಸದ ಒತ್ತಡ, ಮಹಾನಗರದ ಟ್ರಾಫಿಕ್ಕಿನ ನಡುವೆಯೂ ಒಂದು ಕ್ಷಣ ಕಣ್ಣರಳಿಸುವಂತೆ ಮಾಡೋದು ಆಟೋ-ಲಾರಿಗಳು. ಕಾರಣ ಅವುಗಳ ಹಿಂದೆ ಬರೆದಿರೋ ಮನಸೆಳೆವ ಸಾಲುಗಳು. ಬದುಕಿನ ಬಗೆಬಗೆಯ ಏರಿಳಿತದ ನಡುವೆಯೂ ಕೂಡ ಪ್ರಯಾಣದ ಸಮಯದಲ್ಲಿ ಆಟೋ, ಲಾರಿ, ಕಾರಿನ ಹಿಂದೆ ಬರೆದ ಸಾಲುಗಳಲ್ಲಿ ಕೆಲವೊಂದು ನಗುತರಿಸಿದರೆ ಕೆಲವೊಂದು ಸಾಲುಗಳು ನಮಗೆ ಸಮಾಧಾನವನ್ನು ನೀಡುತ್ತವೆ
.
ಆಟೋರಿಕ್ಷಾ, ಲಾರಿ ಚಾಲಕರು ಹೆಚ್ಚಿನವರು ವಿದ್ಯಾವಂತರೇನೂ ಆಗಿರುವುದಿಲ್ಲ ಆದರೆ ಅವರು ತೋರುವ ಕ್ರೀಯಾಶೀಲತೆ ಕೆಲವೊಮ್ಮೆ ನಮಗೆ ಅಚ್ಚರಿಯನ್ನು ಮೂಡಿಸುತ್ತದೆ. ನೀವು ಯಾವುದೇ ಊರಿಗೆ ಹೋದರು ಅಲ್ಲಿ ಕಾಣುವ ಆಟೋರಿಕ್ಷಾಗಳ ಹಿಂದೆ ಏನಾದರೂ ಒಂದು ಅದ್ಭುತವಾದ ಸಾಲು ನಿಮಗೆ ಕಾಣಲು ಸಿಗುತ್ತದೆ. ಅದರಲ್ಲೂ ಕೆಲವು ಸಾಲುಗಳು ಮರೆಯಲು ಆಗದಂತೆ ಮತ್ತೆ ಮತ್ತೆ ಕಾಡುತ್ತಿರುತ್ತವೆ.
“ನಗುವಾಗ ಎಲ್ಲರು ನೆಂಟರು ಅಳುವಾಗ ಯಾರು ಇಲ್ಲ”. “ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಸಿಗುವರೆ”. “ಇರೋತನಕ ಜಾಲಿ ಹೋದ ಮೇಲೆ ಖಾಲಿ ಊರಿಗೊಂದು ಊಟ ಮನೆಗೊಂದು ಫೋಟೋ ಇಷ್ಟೇ ಜೀವನ”. ಈ ತರಹ ಜೀವನದ ಬಗ್ಗೆ ಕೆಲವು ಕಡೆ ಸ್ಫೂರ್ತಿದಾಯಕ ಸಾಲುಗಳನ್ನು ಬರೆದಿದ್ರೆ ಇನ್ನೂ ಕೆಲವು ಭಗ್ನ ಪ್ರೇಮಿಗಳು “ಮುಳ್ಳು ಇಲ್ಲದ ಗುಲಾಬಿ ಬೆಳೆದವರು ಯಾರು, ನೋವಿಲ್ಲದ ಪ್ರೀತಿ ಪಡೆದವರು ಯಾರು”. “ಪ್ರೀತಿ ಪಾಸಾದರೆ ರೊಮಾನ್ಸ್ ಪ್ರೀತಿ ಫೇಲಾದರೆ ನಿಮಾನ್ಸ್”. “ಮಚ್ಚಲಿ ಬಿದ್ರೆ ಒಂದೆ ಏಟು ಲವ್ವಲಿ ಬಿದ್ರೆ ಬದುಕೋದೆ ಡೌಟು” ಅಂತ ತಮ್ಮ ಭಾವನೆಯನ್ನ ಹೊರಹಾಕುತ್ತಾರೆ.
ಇನ್ನೂ ಕೆಲವು ಕನ್ನಡ ಅಭಿಮಾನಿಗಳು ಕನ್ನಡವನ್ನು ಕೇವಲವಾಗಿ ನೋಡೋರಿಗೆ ತಮ್ಮ ವಾಹನದ ಹಿಂದೆ ಬರೆದ ಸಾಲುಗಳಿಂದನೇ ಸಂದೇಶವನ್ನ ನೀಡುತ್ತಾರೆ. “ಇಲ್ಲಿನ ಅನ್ನ ತಿನ್ನುವ ಮುನ್ನ ಕಲಿ ಕನ್ನಡವನ್ನ”. “ಕಾವೇರಿ ನೀರು ಕುಡಿಯುವ ಮೊದಲು ಕನ್ನಡ ಕಲಿ, ಕರ್ನಾಟಕ ಅನ್ನ ತಿನ್ನುವ ಮೊದಲು ಕನ್ನಡಿಗನ ಸಂಸ್ಕ್ರತಿ ಕಲಿ” ಅಂತ ತಮ್ಮ ಸಾಲುಗಳಿಂದನೇ ಕನ್ನಡದ ಕಂಪನ್ನು ಹರಡುತ್ತಾರೆ.
ಕೆಲವರು ತಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ದೇಶಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.
ಹಾಗಂತ ಈ ಆಟೋ ಬೆನ್ನುಡಿಗಳು ಹಾಸ್ಯಕ್ಕೆ ಮಾತ್ರ ಸೀಮಿತವಾಗಿರಲ್ಲ. ಕೆಲವೊಮ್ಮೆ ಬದುಕಿಗೆ ಹೊಸ ಒಳನೋಟ ಬೀರಬಲ್ಲ ಮಾತುಗಳೂ ಅಲ್ಲಿರುತ್ತವೆ. ಪ್ರಪಂಚದ ಯಾವುದೇ ತತ್ವಜ್ಞಾನಿಯೂ ಹೇಳಿರದ, ಯೋಚಿಸಿರದ ವಿಚಾರಗಳು ನಮ್ಮನ್ನು ಚಿಂತಿಸುವಂತೆ ಮಾಡುತ್ತವೆ. ನಾವು ಬದುಕನ್ನು ನೋಡುವ ದೃಷ್ಟಿಯನ್ನೇ ಬದಲಿಸುವಷ್ಟು ಶಕ್ತವಾಗಿರುತ್ತವೆ. ಉದಾಹರಣೆಗೆ ಒಂದು ಆಟೋದ ಹಿಂದೆ ಹೀಗೆ ಬರೆದಿತ್ತು : “ಕೊರೊನಾಗೆ ನೀನು ದೇಹ ಮಾತ್ರ, ಸರ್ಕಾರಕ್ಕೆ ನೀನು ಸಂಖ್ಯೆ ಮಾತ್ರ, ಆದರೆ ನಿನ್ನ ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ. ನಿನ್ನ ಆರೋಗ್ಯ ನಿನ್ನ ಜವಾಬ್ದಾರಿ”. ಇನ್ನೊಂದರಲ್ಲಿ ಹೀಗಿತ್ತು: “ಬೇಡಿ ತಿಂದರೆ ನೀಡಿದಷ್ಟು, ದುಡಿದು ತಿಂದರೆ ಬೇಕಾದಷ್ಟು”. ವಾಹ್! ಎಂತಹ ಮನಮುಟ್ಟುವ ವಿಚಾರಗಳು ಅಲ್ವೇ?
ಗಾಡಿಗಳ ಹಿಂದೆ ಬರೀ ಸಾಲುಗಳು ಮಾತ್ರ ಅಲ್ಲ ಕರ್ನಾಟಕ ಮತ್ತು ಭಾರತದ ಭೂಪಟವನ್ನು ಕೂಡ ಅಂಟಿಸಿರುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕರ, ಕವಿಗಳ ಭಾವಚಿತ್ರವನ್ನು ತಮ್ಮ ವಾಹನದಲ್ಲಿ ಹಾಕಿಸಿಕೊಂಡಿರುತ್ತಾರೆ. ಕರ್ನಾಟಕದಲ್ಲಂತೂ ಶಂಕರ್ ನಾಗ್ ಹಾಗೂ ದರ್ಶನ್ ಅವರ ಭಾವಚಿತ್ರಗಳನ್ನು ಹೆಚ್ಚಾಗಿ ಕಾಣಬಹುದು.
ರಿಕ್ಷಾ, ಲಾರಿಯ ಹಿಂದೆ ಬರೆದ ಸಾಲುಗಳು ಎಷ್ಟೋ ಜನಕ್ಕೆ ಸ್ಪೂರ್ತಿಯಾಗಲೂಬಹುದು. ಬೇಸರದಲ್ಲಿದ್ದವರಿಗೆ ನಗು ತರಿಸಲೂಬಹುದು. ಪ್ರೀತಿಯಲ್ಲಿ ಮುಳುಗಿದವರಿಗೆ ಪ್ರೀತಿಯ ಬರಹ ನೋಡಿ ಪ್ರೀತಿ ಹೆಚ್ಚಾಗಲೂಬಹುದು. ರಿಕ್ಷಾ ಚಾಲಕರ ಈ ಕ್ರಿಯೇಟಿವಿಟಿಯನ್ನು ನೋಡಿದಾಗ, ಆಟೋ ಹಿಂದಿನ ಸಾಲುಗಳನ್ನು ಸಾಹಿತ್ಯದ ಒಂದು ಪ್ರಕಾರ ಅಂತ ಘೋಷಿಸಿದರೂ ತಪ್ಪೇನಿಲ್ಲ. ಓದುಗರ ಮನಸ್ಸಿಗೆ ನಾಟುವ ಸಾಲುಗಳನ್ನು ಬರೆಸುವ ಚಾಲಕರ ಕ್ರೀಯಾ ಶೀಲತೆಗೊಂದು ಸಲಾಂ!