ಇದೀಗ ಶಾಲಾ ಮಕ್ಕಳಿಗೆಲ್ಲಾ ಮಳೆಗಾಲದ ರಜಾ ಹಬ್ಬ. ಯಾವಾಗ ಸಂಜೆಯಾಗುತ್ತೋ, ಯಾವಾಗ ಜಿಲ್ಲಾಧಿಕಾರಿಗಳು ರಜೆ ಘೋಷನೆ ಮಾಡುತ್ತಾರೋ ಎಂಬ ಕಾತುರದಲ್ಲೇ ಪುಟ್ಟ ಮಕ್ಕಳಿರುತ್ತಾರೆ.
ಒಂದು ಜಿಲ್ಲೆಯ ಎಲ್ಲಾ ಆಡಳಿತಾತ್ಮಕ ಹೊಣೆಯನ್ನು ಹೊತ್ತಿರುವ ಜಿಲ್ಲಾಧಿಕಾರಿಗಳು, ಜನರಿಗೆ ಅತ್ಯಂತ ಸಮೀಪರೂ, ಮತ್ತು ಜಿಲ್ಲೆಯ ಜನತೆಗೆ ವಿಪತ್ತು ಬಂದಾಗ ಕೈಗೆಟಕುವ ಅಂತರದಲ್ಲಿ ಸಂಪರ್ಕಕ್ಕೆ ಸಿಗುವಂತಹವರೂ ಆಗಿರುತ್ತಾರೆ. ಮಳೆಗಾಲದಲ್ಲಿ ತೆಗೆದುಕೊಳ್ಳುವ ಮೊನ್ನೆಚ್ಚರಿಕಾ ಕ್ರಮ, ಪ್ರತೀ ನಿತ್ಯ ‘ಜಿಲ್ಲಾಧಿಕಾರಿಗಳಿಂದ ರಜೆ ಘೋಷಣೆ’ ಎಂಬ ಮಾಧ್ಯಮ ತಲೆ ಬರಹ, ಇಡೀ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳೇ ಕೇಂದ್ರ ಬಿಂದುವಾದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಜಿಲ್ಲಾಧಿಕಾರಿಗಳೆಂದರೆ ಯಾರು, ಪ್ರತೀ ಜಿಲ್ಲೆಯಲ್ಲೂ ಜಿಲ್ಲಾ ಅಧಿಕಾರಿ ಎಂಬ ಜನ ಸೇವಕರು ನೇಮಕಗೊಂಡಿರುತ್ತಾರೆ ಎಂಬ ಅರಿವು ಆಯಾ ಜಿಲ್ಲೆಯ ಪ್ರತೀ ನಾಗರಿಕರಲ್ಲೂ ಇರಬೇಕಾದಂತಹ ಮೂಲಭೂತ ಜ್ಞಾನ.
ದಕ್ಷಿಣ ಕನ್ನಡ ಜಿಲ್ಲೆಗೆ ಅದೆಷ್ಟೋ ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ, ಆದರೆ ಜನರ ತನು, ಮನದಲ್ಲಿ ಅಚ್ಚಳಿಯದೆ ಉಳಿದಂತಹ ಹೆಸರುಗಳು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಆನ್ಲೈನ್ನಲ್ಲಿ ಲಭ್ಯವಿರುವ ಆಡಳಿತಧಿಕಾರಿಗಳ ಮೊಬೈಲ್ ಸಂಖ್ಯೆಯಿಂದ ಸಂಪರ್ಕ ನಿರರ್ಗಳವಾಗಿದೆ. ಆದರೆ ಜನ ಸಾಮಾನ್ಯರ ಸೇವೆಗಾಗಿಯೇ ಆಡಳಿತಧಿಕಾರಿಗಳು ಇರುವುದು ಎಂಬ ಅರಿವು ನಮ್ಮಲ್ಲಿ ಇಲ್ಲ.
ಜಿಲ್ಲಾಧಿಕಾರಿಗಳೆಂದರೆ, ಮಳೆ ಬರುವಾಗ ರಜೆ ಘೋಷಿಸುವವರು ಎಂಬ ಸಾಮಾನ್ಯ ಕಲ್ಪನೆ ಮಕ್ಕಳಲ್ಲಿ ಸೃಷ್ಟಿಯಾಗಿದೆ. ಇವೆಲ್ಲಕ್ಕೆ ಕಾರಣ ಜಿಲ್ಲಾಧಿಕಾರಿ ಎಂಬ ಹೆಸರು ಮಳೆಗಾಲದ ರಜೆ ಘೋಷಣೆ ಸಂದರ್ಭ ಮಾತ್ರ ಖ್ಯಾತಿ ಪಡೆಯುತ್ತಿರುವುದು. ಹಾಗಿದ್ದರೆ ತಮ್ಮ ಆಡಳಿತ ಅವಧಿಯಲ್ಲಿ ಆಯಾ ಜಿಲ್ಲೆಯ ಜನ ಸಾಮಾನ್ಯರ ಬಗೆಗಿನ ಕಾಳಜಿಯಲ್ಲಿ ಜಿಲ್ಲಾಧಿಕಾರಿಗಳ ಹೊಣೆಗಾರಿಕೆ ಮಳೆ ಸಂದರ್ಭ ಮಾತ್ರ ಸೀಮಿತವಾಗಿದೆಯೇ ಎಂಬ ಅವಲೋಕನ ಅತ್ಯಗತ್ಯ.