ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳ ಮೂಲಕ ಮದುವೆಯಾಗಿ ಮಹಿಳೆಯರಿಗೆ ವಂಚಿಸಿದ ಮೊಕದ್ದಮೆಯ ತನಿಖೆ ನಡೆಸುತ್ತಿರುವ ಮೈಸೂರು ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂ ರಾಧಾ ಅವರಿಗೆ ತನಿಖೆಯ ಆಳಕ್ಕೆ ಇಳಿಯುತ್ತಿರುವಂತೆ ಶಾಕ್ ಆಗಿತ್ತು. ಏಕೆಂದರೆ ಈತ ಇನ್ನೂ ಒಂಭತ್ತು ಮಹಿಳೆಯರೊಂದಿಗೆ ಮದುವೆ ಮಾತುಕತೆಯನ್ನೂ ನಡೆಸುತಿದ್ದ !
5ನೇ ತರಗತಿವರೆಗೆ ಮಾತ್ರ ಓದಿರುವ ವಂಚಕ ಕೆ ಬಿ ಮಹೇಶ್ ನಾಯಕ್ (35) ಕಳೆದ 10 ವರ್ಷಗಳಿಂದ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲಿ ಡಾಕ್ಟರ್ ಅಥವಾ ಇಂಜಿನಿಯರ್ ಎಂದು ಬಿಂಬಿಸಿ ಮಹಿಳೆಯರನ್ನು ಮದುವೆಯಾಗುವಂತೆ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಮದುವೆಯಾಗಿದ್ದ ಸಾಫ್ಟ್ವೇರ್ ಇಂಜಿನಿಯರ್ ದೂರು ನೀಡಿದ ನಂತರ ಕಳೆದ ವಾರ ಅವರನ್ನು ಬಂಧಿಸಲಾಗಿತ್ತು.
ಅಧಿಕಾರಿಯೊಬ್ಬರ ಪ್ರಕಾರ, ನಾಯಕ್ ಗೆ ಮೂವರು ಹೆಂಡತಿಯರೊಂದಿಗೆ ಒಟ್ಟು ಐದು ಮಕ್ಕಳಿದ್ದಾರೆ. ಈತ ಕನಿಷ್ಠ ಮೂವರು ಮಹಿಳೆಯರಿಂದ 3 ಕೋಟಿ ರೂ.ಗೂ ಹೆಚ್ಚು ಹಣವನ್ನು ದೋಚಿದ್ದಾನೆ ಎನ್ನಲಾಗಿದೆ. ನಾಯಕ್ ಬಂಧನಕ್ಕೆ ಕಾರಣವಾದ ದೂರನ್ನು ನೀಡಿರುವ ಬೆಂಗಳೂರಿನಲ್ಲಿ ವಾಸಿಸುತ್ತಿರುವ 45 ವರ್ಷದ ಸಾಫ್ಟ್ವೇರ್ ಇಂಜಿನಿಯರ್,ದಾಖಲಿಸಿರುವ ಎಫ್ಐಆರ್ ಪ್ರಕಾರ, ಅವರು ಕಳೆದ ಆಗಸ್ಟ್ 22, 2022 ರಂದು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ವಂಚಕನನ್ನು ಭೇಟಿಯಾದರು. ನಾಯಕ್ ಮೈಸೂರಿನಲ್ಲಿ ನೆಲೆಸಿರುವ ಮೂಳೆ ತಜ್ಞ ಎಂದು ಹೇಳಿಕೊಂಡು ಆಕೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ.
ಡಿಸೆಂಬರ್ 22, 2022 ರಂದು, ನಾಯಕ್ ಮಹಿಳೆಯನ್ನು ಮೈಸೂರಿಗೆ ಕರೆತಂದರು, ಅಲ್ಲಿ ಅವರು ಅವಳನ್ನು ದೃಶ್ಯವೀಕ್ಷಣೆ ಮತ್ತು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಗೆ ಕರೆದೊಯ್ದದ್ದೇ ಅಲ್ಲದೆ ತಾನೇ ಮನೆಯ ಮಾಲೀಕ ಎಂದು ಹೇಳಿಕೊಂಡಿದ್ದ. ತಾನು ನಗರದಲ್ಲಿ ಹೊಸ ಕ್ಲಿನಿಕ್ ಆರಂಭಿಸುತ್ತಿರುವುದಾಗಿಯೂ ತಿಳಿಸಿದ್ದಾನೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ಅವರು ಈ ವರ್ಷ ಜನವರಿ 28 ರಂದು ವಿಶಾಖಪಟ್ಟಣಂನ ಐಷಾರಾಮಿ ಹೋಟೆಲ್ನಲ್ಲಿ ವಿವಾಹವಾದರು, ಮರುದಿನ, ಅವರು ಮೈಸೂರಿಗೆ ಮರಳಿದರು, ಮತ್ತು ಅದರ ಮರುದಿನ, ಜನವರಿ 30 ರಂದು, ವಂಚಕ ತನಗೆ ಆಸ್ಪತ್ರೆಯಲ್ಲಿ ಮುಖ್ಯವಾದ ಆಪರೇಶನ್ ಮಾಡಲಿಕ್ಕಿದೆ ಮೂರು ದಿನಗಳ ಕಾಲ ಆಸ್ಪತ್ರೆಗೆ ಹೋಗಬೇಕೆಂದು ಹೇಳಿ ಹೋಗಿದ್ದಾನೆ. ನಂತರ ಕ್ಲಿನಿಕ್ ಆರಂಭಿಸಲು 70 ಲಕ್ಷ ರೂಪಾಯಿ ಸಾಲ ಕೇಳಿದ್ದು, ಮಹಿಳೆ ನಿರಾಕರಿಸಿದಾಗ ಬೆದರಿಕೆ ಹಾಕಿದ್ದಾನೆ. ಆಮೇಲೆ ಫೆಬ್ರವರಿ 5 ರಂದು ನಾಯಕ್ ಮಹಿಳೆಗೆ ಸೇರಿದ 15 ಲಕ್ಷ ರೂಪಾಯಿ ನಗದು ಮತ್ತು ಚಿನ್ನವನ್ನು ಅಪಹರಿಸಿದ್ದಾನೆ.
ನಾಯಕ್ನನ್ನು ಫೋನ್ನಲ್ಲಿ ಸಂಪರ್ಕಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾಗಿತ್ತು. ನಂತರ ನಾಯಕ್ ತನ್ನ ಪತಿ ಎಂದು ಇನ್ನೊಬ್ಬ ಮಹಿಳೆ ಮನೆಗೆ ಬಂದು ಹೇಳಿ ಕೊಂಡದ್ದರಿಂದ ಮಹಿಳೆ ಆಘಾತಕ್ಕೀಡಾಗಿದ್ದಳು.
ನಂತರ ಆಕೆ ಪೊಲೀಸರಿಗೆ ಹೋಗಿ ದೂರು ದಾಖಲಿಸಿದ್ದು, ಅಂತಿಮವಾಗಿ ನಾಯಕ್ ಬಂಧನಕ್ಕೆ ಕಾರಣವಾಯಿತು.
ನಾಯಕ್ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾರೆ ಎಂದು ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ ಎಂದು ಎಸ್ಐ ರಾಧಾ ತಿಳಿಸಿದ್ದಾರೆ. ಪೊಲೀಸರು ವಂಚಕನನ್ನು ಠಾಣೆಗೆ ಕರೆಯಲು ಪ್ರಯತ್ನಿಸಿದಾಗ ಆತ ಸಂಪರ್ಕಕ್ಕೆ ಬರಲಿಲ್ಲ. “ನಾವು ಅವನ ಮೊಬೈಲ್ ಫೋನ್ ಮೂಲಕ ಅವನನ್ನು ಟ್ರ್ಯಾಕ್ ಮಾಡಿದ್ದೇವೆ ಮತ್ತು ಅವನು ತುಮಕೂರು ಬಳಿ ಇದ್ದಾನೆ ಎಂದು ಪತ್ತೆ ಹಚ್ಚಿದೆವು. ನಾವು ಅವರ ಕರೆ ವಿವರಗಳ ದಾಖಲೆಯನ್ನು (ಸಿಡಿಆರ್) ಪರಿಶೀಲಿಸಿದಾಗ, ಎಲ್ಲಾ ಕರೆಗಳನ್ನು ಮಹಿಳೆಯರೇ ಮಾಡಿದ್ದಾರೆ. ಕುತೂಹಲದಿಂದ, ನಾವು ಈ ಮಹಿಳೆಯರನ್ನು ಪರಿಚಯಿಸಿಕೊಂಡು ಮಾಹಿತಿ ಸಂಗ್ರಹಿಸಿದೆವು. ಅವರಲ್ಲಿ ವಿಶ್ವಾಸ ಮೂಡಿಸಿದ ನಂತರ ಮಹಿಳೆಯರು ಮನಬಿಚ್ಚಿ ಎಲ್ಲವನ್ನೂ ಹೇಳಿಕೊಂಡರು ಮತ್ತು ಅವರು ನಾಯಕ್ ಅವರನ್ನು ಮದುವೆಯಾಗಿದ್ದೇವೆ ಎಂದು ಹೇಳಿದರು.
ಜುಲೈ 9 ರಂದು ಮೈಸೂರಿನ ವಿಶೇಷ ತಂಡ ನಾಯಕ್ ಅವರನ್ನು ಬಂಧಿಸಿತ್ತು. ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲಿನ ಅವರ ಖಾತೆಯನ್ನು ಪರಿಶೀಲಿಸಿದಾಗ, ಅವರು ಮದುವೆಯಾಗಲು ಸಿದ್ಧರಾಗಿರುವ ಇತರ ಒಂಬತ್ತು ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದರು. ತನಿಖಾಧಿಕಾರಿಗಳು ಪ್ರಕರಣವನ್ನು ಆಳವಾಗಿ ಅಗೆದು ಹಾಕಿದಾಗ, ಸರಣಿ ವಂಚಕನ ಸಂಪೂರ್ಣ ಚಿತ್ರಣ ಹೊರಗೆ ಬಂದಿತು.
5 ನೇ ತರಗತಿಯ ನಂತರ ವಂಚಕ ಶಾಲೆ ಬಿಟ್ಟಿದ್ದು ಜೀವನದ ಬಹುಪಾಲು ಚಲನಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಹುಡುಕುತ್ತಿದ್ದ. ಆದರೆ ಅವಕಾಶ ಸಿಗಲೇ ಇಲ್ಲ. ವಂಚಕ ತಮ್ಮ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ , ಈತನಿಗೆ ತಂದೆ ತಾಯಿ ಮತ್ತು ಇಬ್ಬರು ಸಹೋದರರೂ ಇದ್ದಾರೆ. ಆದರೆ, ವಂಚಕನನ್ನು ಬಂಧಿಸುವ ಮೊದಲು, ನಾಯಕ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು ಇದು 2013 ರಲ್ಲಿ ಆಗಿತ್ತು.
ನಾಯಕ್ ಅವರ ವಂಚನೆಯ ಮೊದಲ ಬಲಿಪಶು 2013 ರಲ್ಲಿ ಬೆಂಗಳೂರಿನಲ್ಲಿ ಅವರ ವಿರುದ್ಧ ದೂರು ದಾಖಲಿಸಿದ್ದರು, ಅವರು ಆರಂಭದಲ್ಲಿ ತಲೆಮರೆಸಿಕೊಂಡಿದ್ದರು. ಆರಂಭಿಕ ತನಿಖೆಯನ್ನು ಪ್ರಾರಂಭಿಸಲಾಗಿದ್ದರೂ, ಅದು ಅಂತಿಮವಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆ ಆಗಿದ್ದ. ಅದರ ನಂತರ ಇದುವರೆಗೆ ಆತನ ವಿರುದ್ಧ ಯಾವುದೇ ದೂರುಗಳು ಬಂದಿರಲಿಲ್ಲ’ ಎಂದು ಎಸ್ಐ ತಿಳಿಸಿದರು.
ತನ್ನ ವಿರುದ್ಧದ ಮೊದಲ ಪ್ರಕರಣದ ನಂತರ, ನಾಯಕ್ ಕೆಲವು ದಿನಗಳವರೆಗೆ ಸಂಭಾವ್ಯ ವಧುಗಳ ಬೇಟೆಯನ್ನು ನಿಲ್ಲಿಸಿದ್ದಾನೆ. ನಂತರ, ಆನ್ಲೈನ್ ಮ್ಯಾಟ್ರಿಮೋನಿಯಲ್ ಪೋರ್ಟಲ್ಗಳಲ್ಲಿ ಅನೇಕ ಖಾತೆಗಳನ್ನು ತೆರೆದು ಆರ್ಥಿಕವಾಗಿ ಸ್ವತಂತ್ರರಾಗಿರುವ ವಿದ್ಯಾವಂತ ಮತ್ತು ಶ್ರೀಮಂತ ಮಹಿಳೆಯರನ್ನು ಸಂಪರ್ಕಿಸಿದ್ದಾನೆ. “ಅವನಿಗೆ ಇಂಗ್ಲಿಷ್ ಚೆನ್ನಾಗಿ ಮಾತನಾಡಲು ತಿಳಿದಿಲ್ಲ, ಮತ್ತು ಅನೇಕ ಮಹಿಳೆಯರು ಅವನನ್ನು ತಿರಸ್ಕರಿಸಿದರು ಏಕೆಂದರೆ ಇದು ಅವರ ಅನುಮಾನವನ್ನು ಹೆಚ್ಚಿಸಿತು. ಹಾಗಾಗದೇ ಇದ್ದಿದ್ದರೆ ಆತನ ಬಲಿಪಶುಗಳ ಸಂಖ್ಯೆ ಹೆಚ್ಚಾಗುತ್ತಿತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದರು.