ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕು ಎಂದು ರಾಷ್ಟ್ರಮಟ್ಟದಲ್ಲಿ ವಿಪಕ್ಷಗಳು ಟೊಂಕಕಟ್ಟಿನಿಂತಿವೆ. ಮಹಾಘಟ್ ಬಂಧನ್ ಹೆಸರಿನಲ್ಲಿ ಕೇಂದ್ರ ಎನ್ ಡಿಎಗೆ ಸೆಡ್ಡು ಹೊಡೆದು ಅಧಿಕಾರಕ್ಕೆ ಬರಲು ತಂತ್ರ ರೂಪಿಸುತ್ತಿದ್ದು ಅದರ ಭಾಗವಾಗಿ ಇಂದು ಬೆಂಗಳೂರಿನಲ್ಲಿ ಸಭೆ ಸೇರುತ್ತಿವೆ.
ಕಳೆದ ಬಾರಿ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಅದರ ಮುಂದುವರಿದ ಭಾಗ ಎರಡನೇ ಸಭೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿದೆ.
ಎರಡು ದಿನಗಳ ಕಾಲ ನಡೆಯಲಿರುವ ಸಭೆಯ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಚಾರ ವ್ಯವಸ್ಥೆಯಲ್ಲೂ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ನಗರದೆಲ್ಲೆಡೆ ವಿಪಕ್ಷ ನಾಯಕರ ಫ್ಲೇಕ್ಸ್ಗಳು ರಾರಾಜಿಸುತ್ತಿವೆ. ರೇಸ್ ಕೋರ್ಸ್ ರಸ್ತೆ ಹಾಗೂ ಸಭೆ ನಡೆಯುವ ಹೋಟೆಲ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಾಂಗ್ರೆಸ್, ಸ್ಥಳೀಯ ಪಕ್ಷಗಳು ಸೇರಿದಂತೆ ಕನಿಷ್ಠ 26 ಮಂದಿ ವಿರೋಧ ಪಕ್ಷ ನಾಯಕರು ಸಭೆ ಭಾಗಯಾಗಲಿದ್ದು, ಸಭೆಯ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ನಾಯಕರಿಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸುಮಾರು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, ನಾನಾ ರಾಜಕೀಯ ಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಅನೌಪಚಾರಿಕ ಸಭೆಯೊಂದು ನಡೆಯಲಿದ್ದು ಅದು ಮುಗಿದ ನಂತರ ಎಲ್ಲಾ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ. ನಾಳೆ ಜುಲೈ 18ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಭೆ ಸಾಯಂಕಾಲ 4 ಗಂಟೆಯವರೆಗೆ ಮುಂದುವರಿಯಲಿದೆ. ಮುಂದಿನ ವರ್ಷ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಕಟ್ಟಿ ಹಾಕಲು ಬೇಕಾದ ತಂತ್ರಗಾರಿಕೆ ಬಗ್ಗೆ ಚರ್ಚಿಸುವುದು ಈ ಸಭೆಯ ಪ್ರಮುಖ ಅಜೆಂಡಾವಾಗಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ:
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಮಮತಾ ಬ್ಯಾನರ್ಜಿ, ಡಿ ರಾಜಾ, ಸೀತರಾಮ್ ಯಚೂರಿ, ಶದರ್ ಪವಾರ್, ನಿತೀಶ್ ಕುಮಾರ್, ಎಂ.ಕೆ ಸ್ಟಾಲಿನ್, ಅರವಿಂದ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಸೋನಿಯಾ ನಾಯಕತ್ವದಲ್ಲಿ ಸಭೆ:
ಪಟನಾದ ಸಭೆ ನಿತೀಶ್ಕುಮಾರ್ ಉಸ್ತುವಾರಿಯಲ್ಲಿ ನಡೆದಿತ್ತು. ಈ ಬಾರಿ ಸಭೆಯ ನೇತೃತ್ವವನ್ನು ಸೋನಿಯಾ ಗಾಂಧಿ ವಹಿಸಿಕೊಳ್ಳಲಿದ್ದಾರೆ. ಸಮನ್ವಯ ಮತ್ತು ನಾನಾ ಅಂಗಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವ ದೃಷ್ಟಿಯಿಂದ ಸೋನಿಯಾ ಅವರೇ ಈ ಜವಾಬ್ದಾರಿ ವಹಿಸಿಕೊಳ್ಳಬೇಕು ಎನ್ನುವುದು ಮಹಾಘಟಬಂಧನದ ನಾಯಕರ ಇಚ್ಛೆಯೂ ಆಗಿದೆ. ಅದರಂತೆ ಸೋನಿಯಾ ಗಾಂಧಿಯವರು ಸೋಮವಾರವೇ ಬೆಂಗಳೂರಿಗೆ ಆಗಮಿಸಲಿದ್ದು, ಪರ್ಯಾಯ ರಾಜಕೀಯ ರಂಗ ರಚನೆಯ ಮಹತ್ವದ ಸಭೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ.
ಜೆಡಿಎಸ್ನ್ನು ದೂರವಿಟ್ಟ ವಿಪಕ್ಷಗಳು:
ಇಂದು ಮತ್ತು ನಾಳೆ ನಡೆಯಲಿರುವ ವಿಪಕ್ಷಗಳ ಮೈತ್ರಿ ಸಭೆಗೆ ಜೆಡಿಎಸ್ಗೆ ಆಹ್ವಾನ ಕೊಟ್ಟಿಲ್ಲ. ಇನ್ನು ಈ ಬಗ್ಗೆ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ. ಜೆಡಿಎಸ್ ಮುಳುಗಿಹೋಗಿದೆ ಎಂಬ ಭ್ರಮೆಯಲ್ಲಿ ಮಹಾಘಟಬಂಧನ್ ಇದೆ. ನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟರೂ ಕೊಡದಿದ್ದರೂ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.