ಬಾಗಲಕೋಟೆ: ಡೀಸೆಲ್, ಪೆಟ್ರೋಲ್ ಬೆಲೆಯನ್ನು ಮೀರಿ ಹೊರಟಿರುವ ಟೊಮ್ಯಾಟೋ ಇದೀಗ ಬೆಳೆಗಾರರ ಪಾಲಿಗೆ ಚಿನ್ನದ ಮೊಟ್ಟೆ ಆಗಿದ್ದರೆ ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಹಾಕುತ್ತಿರುವುದು ಸುಳ್ಳಲ್ಲ. ಭಾರಿ ಬೆಲೆಯೇನೋ ಇದೆ, ಆದರೆ, ರೈತರ ಬಳಿ ಬೆಳೆಯೇ ಇಲ್ಲವಾಗಿದೆ. ಈ ನಡುವೆ ಟೊಮ್ಯಾಟೋ ಶಿವಪ್ಪ ಎಂದೇ ಕರೆಯಲ್ಪಡುವ ಬಾದಾಮಿಯ ಶಿವಪ್ಪ ಕುರಿ ಎನ್ನುವ ರೈತ 6 ಎಕರೆ ಟೊಮ್ಯಾಟೋ ಬೆಳೆದಿದ್ದು, ಲಕ್ಷ ಲಕ್ಷ ಹಣ ಎಣೆಸುತ್ತಿದ್ದಾರೆ.
ಅಂದ್ಹಾಗೆ ಈ ರೈತ ಶಿವಪ್ಪ ಟೊಮ್ಯಾಟೋ ಬೆಳೆಯುತ್ತಿರುವುದು ಇದು ಮೊದಲ ಸಲವೇನು ಅಲ್ಲ. ಬಾದಾಮಿ ಪಟ್ಟಣದಲ್ಲಿ 25 ವರ್ಷಗಳಿಂದ ಟೊಮ್ಯಾಟೋ ಬೆಳೆಯುತ್ತ ಬಂದಿದ್ದು, ಟೊಮ್ಯಾಟೋ ಎಂದೂ ಇವರನ್ನು ಕೈಬಿಟ್ಟಿಲ್ಲ ಎನ್ನುವುದು ಅಚ್ಚರಿ ಎನ್ನಿಸಿದರೂ ಅದುವೆ ಸತ್ಯ!
ಕಳೆದ ವರ್ಷ ಭರ್ತಿ 18 ಎಕರೆ ಟೊಮ್ಯಾಟೋ ಬೆಳೆದಿದ್ದ ಶಿವಪ್ಪ ಕುರಿ ಅವರಿಗೆ ಉತ್ತಮ ಬೆಲೆಯೂ ಸಿಕ್ಕಿತ್ತು. ಇದರಿಂದ ಬಂದಿದ್ದು ಬರೊಬ್ಬರಿ 1.10 ಕೋಟಿ ರೂಪಾಯಿ. ಶಿವಪ್ಪ ಅವರು ಕೋಲು ಹಾಕಿ, ತಂತಿ, ಸೆಣಬು ಕಟ್ಟಿ ಬೆಳೆಯುವುದರಿಂದ ಖರ್ಚು ಸಹ ಅಽಕ ಮಾಡುತ್ತಾರೆ. ಹೀಗಾಗಿ ಕಳೆದ ವರ್ಷ 30 ಲಕ್ಷ ಖರ್ಚು ತೆಗೆದು ಲಾಭ ಆಗಿದ್ದು 80 ಲಕ್ಷ ಅಂತಾರೆ ರೈತ ಶಿವಪ್ಪ.
ಈ ವರ್ಷ ಸಹ ಶಿವಪ್ಪ ಅವರು ೧೧ ಎಕರೆ ಟೊಮ್ಯಾಟೋ ಬೆಳೆದಿದ್ದು, ಎಕರೆಗೆ ಒಂದು ಲಕ್ಷದಂತೆ ೧೧ ಲಕ್ಷ ರೂ. ಖರ್ಚು ಮಾಡಿದ್ದಾರೆ. ಮೊದಲು ಬೆಳೆದಿದ್ದ ೫ ಎಕರೆಗೆ ಕನಿಷ್ಠ ಬೆಲೆ ಸಿಕ್ಕಿದ್ದರಿಂದ ಮಾಡಿದ ಖರ್ಚು ಮಾತ್ರ ಹಿಂತಿರುಗಿದ್ದು, ಲಾಭ ಆಗಿರಲಿಲ್ಲ. ಇದೀಗ ಕಟಾವು ಆಗುತ್ತಿರುವ ೬ ಎಕರೆ ಟೊಮ್ಯಾಟೋಗೆ ಚಿನ್ನದ ಬೆಲೆ ಸಿಗುತ್ತಿದ್ದು, 8-10 ಲಕ್ಷ ಲಾಭ ತಂದುಕೊಟ್ಟಿದೆ. ಇನ್ನು ಒಂದುವರೆ ತಿಂಗಳು ಕಟಾವು ಆಗಲಿದ್ದು, ಇದೇ ಬೆಲೆ ಸಿಕ್ಕರೆ ಇನ್ನೂ 20 ರಿಂದ 25 ಲಕ್ಷ ಲಾಭ ಆಗಲಿದೆ ಎನ್ನುತ್ತಾರೆ.
ಶಿವಪ್ಪನ ಸಾಧನೆ ಯಾರಿಗೂ ಕಡಿಮೆ ಇಲ್ಲ :
ಶಿವಪ್ಪ ಕುರಿ ಅವರು ಮೂಲತಃ ಕುಷ್ಟಗಿ ತಾಲೂಕಿನ ನಿಲುಗಲ್ಲ ಗ್ರಾಮದವರು. ಹಿರಿಕರದ್ದು ಅಂತ ಇದ್ದಿದ್ದು ಬರೀ ಎರಡು ಎಕರೆ ಜಮೀನು. ಹೀಗಾಗಿ 25 ವರ್ಷಗಳ ಹಿಂದೆ ಬಾದಾಮಿಗೆ ಕುಟುಂಬ ಸಮೇತ ಆಗಮಿಸಿದ ಶಿವಪ್ಪ ಅವರು ಲೀಜ್ ಮೇಲೆ ಜಮೀನು ಪಡೆದು ಕೃಷಿ ಆರಂಭಿಸುತ್ತಾರೆ. ಈ ಮೊದಲು ಟೊಮ್ಯಾಟೋ ಬೆಳೆಯುತ್ತಿದ್ದ ಅವರು ಲೀಜ್ ಪಡೆದ ಜಮೀನುಗಳಲ್ಲೂ ಟೊಮ್ಯಾಟೋ ಬೆಳೆಯುವುದನ್ನು ಮುಂದುವರೆಸಿದೆ. ಬೆಳೆ ಕೈಹಿಡಿದು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಲಾಭ ಪಡೆದುಕೊಂಡರು. ಊರಲ್ಲಿ ಇದ್ದ 2 ಎಕರೆ ಜಮೀನು ಮಾರಾಟ ಮಾಡಿ ಹಾಗೂ ಇಲ್ಲಿ ಕೃಷಿಯಿಂದ ಬಂದ ಆದಾಯದಲ್ಲಿ ಸ್ವಂತಕ್ಕೆಂದು 5 ಎಕರೆ ಜಮೀನು ಹಿಡಿದರು. ಹೀಗೆ ವರ್ಷ ವರ್ಷ ಆದಾಯ ಹೆಚ್ಚಿ ಸದ್ಯ ಬಾದಾಮಿಯಲ್ಲಿ 12 ಎಕರೆ ಹಾಗೂ ಕೊಪ್ಪಳ ಜಿಲ್ಲೆಯ ತಳಕಲ್ಲನಲ್ಲಿ ೬ ಎಕರೆ ಸ್ವಂತ ಜಮೀನು ಹೊಂದಿದ್ದಾರೆ.
ಬಾದಾಮಿ ಪಟ್ಟಣದಲ್ಲಿ ತಮ್ಮ ಸ್ವಂತ ೧೨ ಎಕರೆ ಜೊತೆಗೆ ೪೦ ಎಕರೆ ಲೀಜ್ ಪಡೆದು ಒಟ್ಟು 52 ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ 30 ಎಕರೆಯಷ್ಟು ದಾಳಂಬೆ ಬೆಳೆದು ಅಲ್ಲೂ ಸಹ ಲಕ್ಷ ಲಕ್ಷ ಆದಾಯ ಮಾಡಿಕೊಂಡಿದ್ದರು. ಇದೀಗ ಎರಡುವರೆ ವರ್ಷದ ಹಿಂದೆ 15 ನಂಬರ್ ತಳಿಯ 17 ಎಕರೆ ಪಪ್ಪಾಯಿ ಬೆಳೆದಿದ್ದು, ಈ ವರೆಗೂ ಬೆಳೆಗೆ ಮಾಡಿದ ಖರ್ಚ ತೆಗೆದು 60 ಲಕ್ಷ ರೂ. ಪಪ್ಪಾಯಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹೊಸದಾಗಿ 18 ಎಕರೆ ಪಪ್ಪಾಯಿ ಬೆಳೆದಿದ್ದು, ಇದೀಗ ಕಟಾವು ಶುರುವಾಗಿದ್ದು, 5 ಲಕ್ಷ ಎಣಿಸಿಕೊಂಡಿದ್ದಾರೆ. ಸದ್ಯ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಕೆಜಿಗೆ 14 ರೂ. ಬೆಲೆ ಸಿಗುತ್ತಿದ್ದು, ಭಾರಿ ಲಾಭದ ಬರುವುದು ಪಕ್ಕಾ ಆಗಿದೆ.
ಒಂದುವರೆ ಎಕರೆ ಡ್ರ್ಯಾಗನ್ ಫ್ರೂಟ್:
ದಾಳಿಂಬೆ, ಟೊಮ್ಯಾಟೋ, ಪಪ್ಪಾಯಿಯಲ್ಲಿ ಭರ್ಜರಿ ಲಾಭ ಪಡೆದಿರುವ ಶಿವಪ್ಪ ಹಾಗೂ ಅವರ ಮಕ್ಕಳು ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಒಂದುವರೆ ಎಕರೆ ಡ್ರ್ಯಾಗನ್ ಫ್ರೂಟ್ ಹಚ್ಚಿದ್ದು, ಇದಕ್ಕಾಗಿ 7 ಲಕ್ಷ ರೂ. ಖರ್ಚು ಮಾಡಿದ್ದು, ಇದೀಗ ಕಟಾವಿಗೆ ಬಂದಿದೆ. ಮೊದಲ ಸಲ 50 ಕೆಜಿ ಕಟಾವು ಆಗಿದ್ದು ಕೆಜಿಗೆ 80 ರೂ. ಬೆಲೆ ಸಿಕ್ಕಿದೆ. ಮುಂದಿನ ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಆರಂಭವಾಗಲಿದೆ. ಹೀಗಾಗಿ ಯುಟ್ಯೂಬ್ ನಲ್ಲಿ ನೋಡಿಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆದಿರುವ ಕುರಿ ಅವರ ಕುಟುಂಬಕ್ಕೆ ಇದು ಸಹ ಉತ್ತಮ ಫಲ ನೀಡುವ ಸೂಚನೆ ನೀಡಿದೆ ಅಂತಾರೆ ಶಿವಪ್ಪ ಅವರ ಪುತ್ರ ಸಿದ್ದಪ್ಪ ಕುರಿ.
ಕೃಷಿ ಕಾಯಕ ನಮಗೆಲ್ಲ ಕೊಟ್ಟಿದೆ :
ಬಾದಾಮಿಗೆ ಬಂದು ಕೃಷಿ ಆರಂಭಿಸಿ 25 ವರ್ಷಗಳಲ್ಲಿ ಲಾಸ್ ಅನುಭವಿಸಿದ್ದು ಬಹಳ ಕಡಿಮೆ. ಲಾಭ ಪಡೆದಿದ್ದೆ ಜಾಸ್ತಿ ಎನ್ನುವುದು ಶಿವಪ್ಪ ಅವರು ಹೇಳುವ ಮಾತು. ಶಿವಪ್ಪ ಅವರಿಗೆ ಒಟ್ಟು ೪ ಗಂಡು ಮಕ್ಕಳು ಇದ್ದು, ಇವರಲ್ಲಿ ಮೂವರಿಗೆ ಮದುವೆ ಆಗಿದ್ದು, ಮಕ್ಕಳು ಮತ್ತು ಸೊಸೆಯಂದಿರು ಎಲ್ಲರಿಗೂ ಕೃಷಿ ಕಾಯಕ. ಒಬ್ಬ ಮಗನನ್ನು ಮಂಗಳೂರಲ್ಲಿ ಪಿಯುಸಿ ಓದಿಸುತ್ತಿದ್ದಾರೆ. ಮನೆಯವರೆಲ್ಲರೂ ಭೂತಾಯಿ ನಂಬಿಕೊಂಡು ಬೆವರು ಹರಿಸುತ್ತಿರುವ ಪರಿಣಾಮ ಭೂತಾಯಿಯೂ ಅವರನ್ನು ಕೈಬಿಟ್ಟಿಲ್ಲ. ಕೃಷಿ ಆದಾಯದಿಂದಲೇ ಬಾದಾಮಿಯಲ್ಲಿ ಒಟ್ಟು ಮೂರು ಮನೆ ಕಟ್ಟಿಸಿದ್ದೇವೆ. ಒಬ್ಬ ಮಗ ಮಂಗಳೂರ ಹಾಗೂ ಒಬ್ಬ ಮೊಮ್ಮಗ ಮೂಡಬಿದರೆಯಲ್ಲಿ ಓದುತ್ತಿದ್ದಾರೆ. ಉಳಿದ ಮೊಮ್ಮಕ್ಕಳು ಬಾದಾಮಿಯಲ್ಲಿ ಕಲಿಯುತ್ತಿದ್ದಾರೆ. ಅವರ ಶಿಕ್ಷಣಕ್ಕಾಗಿ ವರ್ಷಕ್ಕೆ ೭ ಲಕ್ಷ ರೂ. ಖರ್ಚು ಮಾಡುತ್ತಿದ್ದೇವೆ. ಕಾರಣ ನಾನು ಬರೀ 5ನೇ ತರಗತಿ ಓದಿದ್ದೆ. ಭೂತಾಯಿ ಕೈಹಿಡಿದಳು. ಮೂವರು ಮಕ್ಕಳು ಸಹ ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದಾರೆ. ನಮಗೆ ಕೃಷಿ ಕಾಯಕದಿಂದ ಎಲ್ಲವೂ ಸಿಕ್ಕಿದೆ. ಇದರಲ್ಲೆ ಅತ್ಯಂತ ಸಂತೃಪ್ತರಾಗಿದ್ದೇವೆ ಎನ್ನುವುದು ಶಿವಪ್ಪ ಹಾಗೂ ಅವರ ಮಕ್ಕಳಾದ ಸಿದ್ದಪ್ಪ, ಗುರುನಾಥ ಹೇಳುತ್ತಾರೆ.
8 ಕೊಳವೆಬಾವಿ, ಭರ್ಜರಿ ಇಳುವರಿ :
ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು 8 ಕೊಳವೆಬಾವಿ ಕೊರೆಸಿದ್ದು, ಎಲ್ಲವೂ ಉತ್ತಮ ಇಳುವರಿ ಕೊಡುತ್ತಿವೆ. ಹೀಗಾಗಿ ತಾವು ಲಾವಣಿ ಮಾಡಿದ 40 ಎಕರೆ ಹಾಗೂ ಸ್ವಂತದ್ದು 12 ಎಕರೆಗೆ ನೀರಿನ ಕೊರತೆ ಆಗಲ್ಲ. ಜೊತೆಗೆ ಒಂದು ಬೃಹತ್ ಹಾಗೂ ಒಂದು ಸಣ್ಣ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಕೃಷಿ ಕಾಯಕದಲ್ಲಿ ಶಿವಪ್ಪ ಹಾಗೂ ಅವರ ಕುಟುಂಬ ಸಾಧನೆ ಮಾಡಿದ್ದು, ಅನೇಕ ರೈತರಿಗೆ ಮಾದರಿಯಾಗಿದ್ದರೂ ಈ ವರೆಗೂ ತಮ್ಮ ಸಾಧನೆಗೆ ಪ್ರಚಾರ ಬಯಸಿಲ್ಲ. ಪ್ರಶಸ್ತಿ, ಪುರಸ್ಕಾರ ಅಂತ ಹೋಗಿಲ್ಲ. ತಾವಾಯಿತು, ತಮ್ಮ ಜಮೀನಾಯಿತು ಅಂತ ಇದ್ದಾರಷ್ಟೆ. ಕೃಷಿ ಕಾರ್ಯಕ್ಕೆ 4 ಟ್ರ್ಯಾಕ್ಟರ್ ಗಳನ್ನು ಖರೀದಿಸಿದ್ದಾರೆ. ಎರಡು ದೊಡ್ಡ ಟ್ರ್ಯಾಕ್ಟರ್ ಎರಡು ಸಣ್ಣ ಟ್ರ್ಯಾಕ್ಟರ್ ಗಳು ಇವೆ.
ಕೃಷಿ ಕಾಯಕದಲ್ಲಿ ಲಾಭ ಇಲ್ಲ ಎಂದಲ್ಲ. ಕರಾರುವಕ್ಕಾಗಿ ವಿವಿಧ ತಂತ್ರಜ್ಞಾನ, ತಿಳಿದವರಿಂದ ಮಾಹಿತಿ ಪಡೆದು ಮಾಡಬೇಕು. ಔಷಧ, ಗೊಬ್ಬರ ಇತ್ಯಾದಿಗಳನ್ನು ನಿಗದಿತವಾಗಿ ಕೊಡಬೇಕು. ಇಂದು, ನಾಳೆ ಎಂದು ನಿರ್ಲಕ್ಷ್ಯ ಮಾಡವಂತಿಲ್ಲ. ಎಲ್ಲವನ್ನು ಕಾರ್ಮಿಕರಿಂದ ಮಾಡಿಸಿದರೆ ಆಯಿತು ಎನ್ನುವ ಭಾವನೆ ಬಿಟ್ಟು, ಸಂಪೂರ್ಣವಾಗಿ ನಾವು ತೊಡಗಿಸಿಕೊಳ್ಳಬೇಕು. ಒಮ್ಮೊಮ್ಮೆ ಮಾರುಕಟ್ಟೆಯಲ್ಲಿ ಬೆಲೆ ಏರುಪೇರು ಆಗುತ್ತದೆ. ಯಾವ ಸಂದರ್ಭದಲ್ಲಿ ಯಾವ ತರಕಾರಿ, ಹಣ್ಣಿಗೆ ಬೆಲೆ ಇರುತ್ತದೆ ಎಂದು ಅಧ್ಯಯನ ಮಾಡಿ ಬೆಳೆಗಳನ್ನು ಬೆಳೆಯಬೇಕು, ಎಂದು
ಶಿವಪ್ಪ ಕುರಿ ಹೇಳುತ್ತಾರೆ