ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲ ಮಳೆಯನ್ನು ಮಾತ್ರವಲ್ಲದೇ ಹಲವಾರು ಆರೋಗ್ಯ ಸಮಸ್ಯೆಗಳನ್ನು ಕೂಡ ಹೊತ್ತು ತಂದಿರುತ್ತದೆ. ಜ್ವರ ಶೀತ, ಕೆಮ್ಮುನಂತಹ ಸಮಸ್ಯೆಗಳು ಮಳೆಗಾಲದಲ್ಲಿ ತೀರಾ ಸಾಮಾನ್ಯವಾಗಿದೆ. ಆದರೊಂದಿಗೆ ಇತ್ತೀಚಿನ ದಿನಗಳಲ್ಲಿ ಫುಡ್ ಪಾಯಿಸನ್ ಕೂಡಾ ಮಳೆಗಾಲದ ಆರೋಗ್ಯ ಸಮಸ್ಯೆಗಳೊಂದಿಗೆ ಸೇರಿಕೊಂಡಿದೆ.
ಮಳೆಗಾಲದಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಎಷ್ಟು ಗಮನಹರಿಸಿದರು ಸಾಲುವುದಿಲ್ಲ. ಅದರಲ್ಲೂ ಬೀದಿ ಬದಿ ಆಹಾರಗಳನ್ನು ಸೇವಿಸುವಾಗ, ಫಾಸ್ಟ್ಫುಡ್ಗಳನ್ನು ಸೇವಿಸುವಾಗ ಬಹ ಎಚ್ಚರಿಕೆಯಿಂದ ಇರಬೇಕು. ನೈರ್ಮಲ್ಯವನ್ನು ಕಾಪಾಡಬೇಕು. ಮಳೆಗಾಲದಲ್ಲಿ ಫುಡ್ಪಾಯಿಸನ್ ಹೆಚ್ಚಾಗಿ ಆಗುತ್ತದೆ. ಅದಕ್ಕೆ ವಿಭಿನ್ನ ಕಾರಣಗಳಿರಬಹುದು. ಆದರೆ ಮಳೆಗಾಲದಲ್ಲಿ ವೈರಸ್, ಬ್ಯಾಕ್ಟೀರಿಯಾಗಳ ಕಾರಣದಿಂದ ಫುಡ್ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು.
ಮಳೆಗಾಲದಲ್ಲಿ ನೈರ್ಮಲ್ಯ ರಹಿತ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಆಹಾರ ವಿಷವಾಗುತ್ತದೆ. ವಾಸ್ತವವಾಗಿ ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶವು ಹೆಚ್ಚಾಗುತ್ತದೆ ಮತ್ತು ರೋಗಾಣುಗಳು ಸಹ ಹೆಚ್ಚಾಗುತ್ತವೆ. ಹಾಗೆಯೇ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡಲು ಪ್ರಾರಂಭಿಸುತ್ತವೆ. ಈ ಕಾರಣಗಳಿಂದ ಮಳೆಗಾಲದಲ್ಲಿ ಹೆಚ್ಚಾಗಿ ಫುಡ್ಪಾಯಿಸನ್ ಕಾಣಿಸಿಕೊಳ್ಳುತ್ತದೆ.
ಮಳೆಗಾಲದಲ್ಲಿ ಫುಡ್ ಪಾಯಿಸನಿಂಗ್ ಆಗಲು ಕಾರಣಗಳು:
*ಆಹಾರ ತಯಾರಿಸುವಾಗ ನಿರ್ಲಕ್ಷ್ಯ ತೋರುವುದು.
*ಆಹಾರವನ್ನು ಸರಿಯಾಗಿ ಬೇಯಿಸದೆ ಇರುವುದು.
*ಅರೆ ಬೆಂದ ಆಹಾರವನ್ನು ಸೇವಿಸುವುದು
*ಮಳೆಗಾಲದಲ್ಲಿ ಹಳಸಿದ ಆಹಾರವನ್ನು ಸೇವಿಸುವುದು
*ಅಶುದ್ದ ನೀರಿನ ಸೇವನೆ
ಫುಡ್ ಪಾಯಿಸನ್ ಲಕ್ಷಣಗಳು :
ತೀವ್ರ ಹೊಟ್ಟೆ ನೋವು, ವಾಕರಿಕೆ, ವಾಂತಿ, ಹಸಿವಾಗದೇ ಇರುವುದು, ಅತಿಸಾರ, ನಿಶ್ಯಕ್ತಿ, ಆಯಾಸ,ತಲೆನೋವು ಕಾಣಿಸಿಕೊಳ್ಳಬಹುದು.
ಫುಡ್ ಪಾಯಿಸನಿಂಗ್ ತಡೆಯುವುದು ಹೇಗೆ:
*ಹಿಂದಿನ ದಿನ ಮಾಡಿದ ಊಟವನ್ನು ತಿನ್ನಬೇಡಿ ಮಳೆಗಾಲದಲ್ಲಿ ಹಳಸಿದ ಆಹಾರವನ್ನು ಎಂದಿಗೂ ಸೇವಿಸಬಾರದು. ಏಕೆಂದರೆ ಹಳಸಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಪರಿಸರದಲ್ಲಿನ ತೇವಾಂಶದಿಂದ ಬ್ಯಾಕ್ಟೀರಿಯಾಗಳು ಆಹಾರಕ್ಕೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ಹಿಂದಿನ ದಿನ ಮಾಡಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.
*ಅರ್ಧ ಬೇಯಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಅರ್ಧ ಬೇಯಿಸಿದ ಆಹಾರವನ್ನು ಎಂದಿಗೂ ತಿನ್ನಬೇಡಿ. ಏಕೆಂದರೆ ಹೊರಗಿನಿಂದ ತಂದ ತರಕಾರಿ ಅಥವಾ ಮಾಂಸಾಹಾರಿ ವಸ್ತುಗಳ ಮೇಲೆ ಬ್ಯಾಕ್ಟೀರಿಯಾಗಳು ಈಗಾಗಲೇ ಇರುತ್ತವೆ. ನೀವು ಅದನ್ನು ಸರಿಯಾಗಿ ಬೇಯಿಸದಿದ್ದರೆ, ಈ ಸೂಕ್ಷ್ಮಜೀವಿಗಳು ಸಾಯುವುದಿಲ್ಲ ಮತ್ತು ಆದ್ದರಿಂದ ಫುಡ್ ಪಾಯಿಸನ್ ಉಂಟಾಗಬಹುದು. ಯಾವಾಗಲೂ ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸಿ ತಿನ್ನುವುದು ಉತ್ತಮ.
*ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ನೀವು ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಏಕೆಂದರೆ ಮಳೆಗಾಲದಲ್ಲಿ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಅವುಗಳನ್ನು ಸೇರುತ್ತವೆ. ಹಣ್ಣುಗಳು ಅಥವಾ ತರಕಾರಿಗಳನ್ನು ತೊಳೆಯದೆ ತಿಂದರೆ ಆ ಬ್ಯಾಕ್ಟೀರಿಯಾಗಳು ನಿಮ್ಮ ದೇಹದೊಳಗೆ ಹೋಗಬಹುದು.
*ಅಡುಗೆ ಮನೆಯ ಸ್ವಚ್ಛತೆ ಅವಶ್ಯ ಮಳೆಗಾಲದಲ್ಲಿ ಅಡುಗೆ ಮನೆಯ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ತರಕಾರಿಗಳನ್ನು ಕತ್ತರಿಸುವ ಹಲಗೆಗಳು, ಚಾಕುಗಳು ಮತ್ತು ಪಾತ್ರೆಗಳನ್ನು ತೊಳೆಯುತ್ತಿರಿ.
*ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ ಮಳೆಗಾಲದಲ್ಲಿ ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ. ಏಕೆಂದರೆ ಬ್ಯಾಕ್ಟೀರಿಯಾಗಳು ಹಣ್ಣುಗಳ ಮೇಲೆ ಅಂಟಿಕೊಳ್ಳಬಹುದು, ಇದರಿಂದಾಗಿ ಅವು ನಿಮ್ಮ ಹೊಟ್ಟೆಗೆ ಹೋಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ನೀವು ಹಣ್ಣುಗಳನ್ನು ಸೇವಿಸಲು ಬಯಸಿದಾಗ, ತಾಜಾ ಹಣ್ಣುಗಳನ್ನು ಕತ್ತರಿಸಿ ತಿಂದುಬಿಡಿ.
*ಸ್ಟ್ರೀಟ್ ಫುಡ್ ತಿನ್ನಬೇಡಿ. ಬೀದಿ ಆಹಾರದಿಂದ ದೂರವಿರಿ ಏಕೆಂದರೆ ಈ ಆಹಾರಗಳು ತೆರೆದಿರುವುದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚು, ನೀವು ಈ ಆಹಾರವನ್ನು ಸೇವಿಸಿದರೆ ನಿಮ್ಮ ಹೊಟ್ಟೆ ಹಾಳಾಗುವುದು ಖಂಡಿತ.