ಬಾಗಲಕೋಟೆ: ಆಲಮಟ್ಟಿ ಹಿನ್ನೀರಿಗಾಗಿ ಬಹುದೊಡ್ಡ ನಗರವಾದ ಬಾಗಲಕೋಟೆ ಜನತೆ ತಮ್ಮ ಮನೆ, ಮಠ ತ್ಯಾಗ ಮಾಡಿದ್ದಾರೆ. ಅವರಿಗಾಗಿ ಪುನರ್ ವಸತಿ ಕಲ್ಪಿಸಲು ನವನಗರದ ಸ್ಥಾಪಿಸಲಾಗಿದೆ. ಬೃಹತ್ ಪ್ರಮಾಣದಲ್ಲಿರುವ ಈ ಹೊಸ ನಗರಕ್ಕೆ ಮೂಲಕ ಸೌಕರ್ಯ ನಿರ್ವಹಣೆ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಕಾರ್ಪಸ್ ಫಂಡ್ ತನ್ನ ಖಾತೆ ವರ್ಗಾಯಿಸುವಂತೆ ಅನೇಕ ವರ್ಷಗಳಿಂದ ಬೆನ್ನು ಬಿದ್ದಿದ್ದ ಕೆಬಿಜೆಎನ್ಎಲ್ ಕೊನೆಗೂ ಹಠ ಸಾಧಿಸಿದೆ.!
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಹಿಡಿತದಲ್ಲಿದ್ದ ಬರೋಬ್ಬರಿ 370 ಕೋಟಿ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಳ್ಳುವಲ್ಲಿ ಕೆಬಿಎನ್ಎಲ್ ಯಶಸ್ವಿಯಾಗಿದೆ. ಅಧಿಕಾರವಿದ್ದರು ಅಂಧಾಕಾರದ ವರ್ತಿಸಿ ಬಿಟಿಡಿಎ ನೀರವ ಮೌನಕ್ಕೆ ಜಾರಿದೆ. ಜನಪ್ರತಿನಿಗಳು, ಹೋರಾಟ ಸಮಿತಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದು, ನವನಗರದ ಯೂನಿಟ್-1, 2 ರಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಬದುಕಿನ ಮೇಲೆ ಕರಿ ನೆರಳು ಆವರಿಸಿದೆ. ಶೀಘ್ರದಲ್ಲಿ ನಗರಸಭೆಗೆ ಯೂನಿಟ್-1, 2 ನವನಗರದ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ.
ಕಾರ್ಪಸ್ ಫಂಡ್ ಕನಸು ಛಿದ್ರ ಛಿದ್ರ:
ನವನಗರದಲ್ಲಿ ನೀರು ಸರಬರಾಜು, ಒಳ ಚರಂಡಿ, ವಿದ್ಯುತ್ ದೀಪಗಳು, ರಸ್ತೆ ಹಾಗೂ ಒಳ ಚರಂಡಿ, ಉದ್ಯಾನವನಗಳ ಹಾಗೂ ಇತರೆ ನಿರ್ವಹಣೆಗಾಗಿ ಪ್ರತಿ ವರ್ಷ ಹಣ ಬೇಕು. ಸರ್ಕಾರದಿಂದ ಪ್ರತ್ಯೇಕ ಅನುದಾನ ಪಡೆಯುದಕ್ಕಿಂತ ಸಂತ್ರಸ್ತರ ಅನುಕೂಲಕ್ಕಾಗಿ ಎರಡು ದಶಕಗಳ ಹಿಂದೆ ಯೂನಿಟ್-1 ರಲ್ಲಿನ ಮೂಲೆ ನಿವೇಶನ ಹರಾಜು ಪ್ರಕ್ರಿಯೆ ಆರಂಭಿಸಿ ಅದರಿಂದ ಬಂದ ಹಣವನ್ನು ಬಿಟಿಡಿಎ ಬ್ಯಾಂಕನಲ್ಲಿ ಠೇವಣಿ ಮಡಲಾಗಿತ್ತು. 2005 ರಲ್ಲಿ ಯುಕೆಪಿ ಅಧಿಕಾರಿ ಎಸ್.ಎಂ.ಜಾಮದಾರ ಹೊಸ ಕಾನ್ಸೆಪ್ಟ್ ಹುಟ್ಟುಹಾಕಿದ್ದರು. ಆರಂಭದಲ್ಲಿ 50 ಕೋಟಿ ರೂ. ಸಂಗ್ರಹಿಸಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ನಂತರ 200 ಕೋಟಿ ರೂ. ವರೆಗೆ ಸಂಗ್ರಹವಾಗಿತ್ತು, ಕಳೆದ ಮೂರು ವರ್ಷಗಳಲ್ಲಿ ಹರಾಜು ಮಾಡಲಾದ ನಿವೇಶನದಿಂದ 150 ಕೋಟಿ ರೂ. ಹಾಗೂ ಬಡ್ಡಿ ಸೇರಿ ಲಭ್ಯವಿರುವ ಒಟ್ಟು 377 ಕೋಟಿ ರೂ. ಬಿಟಿಡಿಎ ಬಳಿ ಇತ್ತು. ಇದನ್ನು ನೀಡುವ ಕೃಷ್ಣಾ ಭಾಗ್ಯ ಜಲ ನಿಗಮ ನಿ. ಹಠಕ್ಕೆ ಬಿದ್ದು ಆದೇಶಿಸಿತ್ತು. ನವನಗರದ ನಿರ್ವಹಣೆಗಾಗಿ ಮೀಸಲಿಟ್ಟ ಹಣ ಇದೀಗ ವರ್ಗಾವಣೆಯಾಗಿದೆ. ಮಾದರಿ ನಗರ ಎನ್ನುವ ಕನಸು ಛಿದ್ರ ಛಿದ್ರವಾಗುವ ಲಕ್ಷಣ ಗೋಚರಿಸಿದ್ದು, ಭವಿಷ್ಯದ ದಿನಗಳು ಹೊಸ ಸವಾಲು, ಕಠಿಣ ಜವಾಬ್ ಸ್ವೀಕರಿಸುವ ಅನಿವಾರ್ಯತೆ ಎದುರಾಗಿದೆ.
ಹಸ್ತಾಂತರ ಫಿಕ್ಸ್.. ನಗರಸಭೆಗೆ ಹೊಣೆಗಾರಿಕೆ..!
ನವನಗರದ ಯೂನಿಟ್-1, 2 ನಿರ್ವಹಣೆ ಈ ವರೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಮಾಡಲಾಗುತ್ತಿತ್ತು. ಕಾರ್ಪಸ್ ಫಂಡ್ ಹಸ್ತಾಂತರ ಬಳಿಕ ಪರಿಸ್ಥಿತಿ ಅದೋಗತಿಗೆ ಇಳಿಯಲಿದೆ. ಪ್ರತಿ ವರ್ಷ ಸರ್ಕಾರ ಅಥವಾ ಕೆಬಿಜೆಎನ್ಎಲ್ನಿಂದ ಪ್ರತ್ಯೇಕ ಹಣ ಬಿಡುಗಡೆಗೊಳಿಸಿ ನಿರ್ವಹಿಸಬೇಕು. ಇದು ಅಸಾಧ್ಯವಾದ ಮಾತು. ಹೀಗಾಗಿ ಯೂನಿಟ್-1 ಮತ್ತು 2 ನಗರಸಭೆಗೆ ಹಸ್ತಾಂತರ ಮಾಡುವುದು ಬಹುತೇಕ ಫಿಕ್ಸ್. ಸಣ್ಣ ಪ್ರಮಾಣದ ಆರ್ಥಿಕ ಶಕ್ತಿ ಹೊಂದಿರುವ ನಗರಸಭೆಯಿಂದ ಹಳೇ ಬಾಗಲಕೋಟೆ, ವಿದ್ಯಾಗಿರಿ ನಿರ್ವಹಿಸುವುದೇ ಕಷ್ಟದ ಕೆಲಸವಾಗಿತ್ತು. ಇನ್ನು ಹಸ್ತಾಂತರ ಬಳಿಕ ನವನಗರ ನಿರ್ವಹಣೆ ಮಾಡುವುದು ಮತ್ತಷ್ಟು ದುರ್ಲಬವಾಗಲಿದೆ.
ಸಂತ್ರಸ್ತರಿಗೆ ತೆರಿಗೆ ಶುರು..
ನವನಗರದ ಎಲ್ಲ ಆಸ್ತಿಗಳು ನಗರಸಭೆ ಹಸ್ತಾಂತರವಾದ ಬಳಿಕ ಅಭಿವೃದ್ಧಿ ಹೊಣೆ ನಗರಸಭೆಗೆ ಬೀಳಲಿದೆ. ಈ ವರೆಗೆ ಆಸ್ತಿ ತೆರಿಗೆ ವಿನಾಯಿತಿ ಇದ್ದ ನವನಗರ ನಿವಾಸಿಗಳಿಗೆ ತೆರಿಗೆ ಶುರುವಾಗಲಿದೆ. ಪ್ರತಿಯೊಬ್ಬ ಆಸ್ತಿ ಮಾಲೀಕರು ತೆರಿಗೆ ಕಟ್ಟಲೆ ಬೇಕು. ಈಗಾಗಲೇ ಪಾಪರ್ಟಿ ಕಾಡ್ ವಿತರಣೆ ಕಾರ್ಯ ಆರಂಭವಾಗಿದೆ. ಪೂರ್ಣಗೊಂಡ ಬಳಿಕ ಬಿಟಿಡಿಎ ನಗರಸಭೆಗೆ ನವನಗರವನ್ನು ಹಸ್ತಾಂತರ ಮಾಡಿ ಅಧಿಕೃತ ದಾಖಲೆಗಳನ್ನು ವರ್ಗಾಯಿಸಲಿದೆ.
ಕೆಬಿಎನ್ಎಲ್ ಮತ್ತೇನು ಹೇಳಿದೆ..?
ಕೆಬಿಎನ್ಎಲ್ ಆದೇಶ ಪತ್ರದಲ್ಲಿ ಕಾರ್ಪಸ್ ಫಂಡ್ ಅಷ್ಟೆ ಅಲ್ಲದೆ ಅನೇಕ ವಿಷಯಗಳ ಪ್ರಸ್ತಾಪ ಆಗಿದೆ. ನವನಗರದ ಯೂನಿಟ್ -1 ಮಾ.31 2023 ರೊಳಗೆ ಬಾಗಲಕೋಟೆ ನಗರಸಭೆಗೆ ಹಸ್ತಾಂತರ ಮಾಡಬೇಕು, ಯೂನಿಟ್-2 ಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಈಗಿನಿಂದಲೇ ನಗರಸಭೆಗೆ ಮುಂದಿನ ನಿರ್ವಹಣೆಗಾಗಿ ಶೀಘ್ರದಲ್ಲಿ ಹಸ್ತಾಂತರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪಸ್ತಾವನೆ ಸಲ್ಲಿಸಬೇಕು, ಮೂಲೆ ನಿವೇಶನದ ಮೊತ್ತವನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆದು ಈ ಹಣದಲ್ಲಿ ಪುನರ್ ವಸತಿ, ಪುನರ್ ನಿರ್ಮಾಣ ಮತ್ತು ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ವಿನಿಯೋಗಿಸುವುದು, 2022-2023 ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಹೊರತು ಪಡಿಸಿ ನಿಗಮದಿಂದದ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವುದು, ಅದರಂತೆ 377 ಕೋಟಿ ರೂ. ನಿಗಮಕ್ಕೆ ಉಪಯೋಗಿಸಿಕೊಳ್ಳಲು ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಅದರಂತೆ ಬಿಟಿಡಿಎದಿಂದ ಹಿಂಪಡೆದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ 377 ಕೋಟಿ ರೂ. ಜಮೆ ಮಾಡಿದೆ.
ಇಷ್ಟಕ್ಕೂ ಈ ಹಣ ವರ್ಗಾಯಿಸಬೇಕಿತ್ತಾ?
377 ಕೋಟಿ ರೂ. ಸರ್ಕಾರ ಸಂತ್ರಸ್ತರಿಗಾಗಿ ನೀಡಿದ ಹಣವಲ್ಲ. ನವನಗರದ ನಿರ್ಮಾಣವಾದ ಬಳಿಕ ಮೂಲೆ ನಿವೇಶನ ಹರಾಜು ಮಾಡುವ ಪ್ರಕ್ರಿಯೆ ಆರಂಭಗೊAಡಿತ್ತು. ಇದಕ್ಕೆ ಮೊದಲಿನಿಂದಲು ಸಂತಸ್ತರು ವಿರೋಧ ವ್ಯಕ್ತಪಡಿಸಿದ್ದರು. ಅನೇಕ ಹೋರಾಟ, ಪ್ರತಿಭಟನೆ ನಡೆಸಲಾಗಿತ್ತು. ಕೊನೆಗೆ ಹರಾಜಿನಿಂದ ಬಂದ ಹಣ ನವನಗರ ಅಭಿವೃದ್ಧಿ, ನಿರ್ವಹಣೆಗೆ ಮೀಸಲಿಡಲಾಗುವುದು ಭರವಸೆ ನೀಡಿದ ಬಳಿಕ ಸಂತ್ರಸ್ತರು ಸಮಾಧಾನಗೊಂಡಿದ್ದರು. ಬೃಹತ್ ಮೊತ್ತವನ್ನು ನವನಗರವನ್ನು ನಗರಸಭೆಗೆ ಹಸ್ತಾಂತರ ರೀತಿ ಹಣವನ್ನು ವರ್ಗಾಯಿಸಿದಲ್ಲಿ ಬಾಗಲಕೋಟೆ ಅಭಿವೃದ್ಧಿಗೆ ಸಹಕಾರವಾಗುತ್ತಿತ್ತು. ಇಲ್ಲವೇ ಮೂಲೆ ನಿವೇಶನ ಹರಾಜು ಪ್ರಕ್ರಿಯೆ ಎನ್ನುವ ವ್ಯಾಪಾರಿಕರಣ ಬಿಟ್ಟು ಮೂಲ ಉದ್ದೇಶದಂತೆ ಸಂತಸ್ತರಿಗಾಗಿ ಮೂಲೆ ನಿವೇಶನ ಮೀಸಲಿಡಬೇಕಿತ್ತು. ಸಂತ್ರಸ್ತರಿಗೆ ನಿವೇಶನ ನೀಡಲು ನೊರೆಂಟು ನಿಯಮ, ಕಟ್ಟನೆ ಮೀರಿಸುವ ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರವು ಯಾವ ಸಾಧನಗೆ ಮೂಲೆ ನಿವೇಶನ ಹರಾಜು ಹಾಕಿ ಹಣ ಮಾಡುವ ಕೆಲಸಕ್ಕೆ ಹಾಕಿದ್ದು ಸರಿನಾ ಎನ್ನುವ ಪ್ರಶ್ನೆ ಕಾಡತೊಡಗಿದೆ. ಕೆಬಿಜೆಎನ್ ಮಾಡಿರುವ ಕುತಂತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗುವ ಲಕ್ಷಣ ಗೋಚರಿಸಿದೆ.
ನವನಗರದ ಮೂಲೆ ನಿವೇಶನ ಹರಾಜಿನಿಂದ ಬಂದ 377 ಕೋಟಿ(ಬಡ್ಡಿ) ಸೇರಿ ಕಾರ್ಪಸ್ ಫಂಡ್ ಇರಿಸಲಾಗಿತ್ತು. ಕೆಬಿಜೆಎನ್ಎಲ್ ಆದೇಶ ಅನ್ವಯ ಹಣವನ್ನು ವರ್ಗಾಯಿಸಲಾಗಿದೆ. ನನಗೆ ಹೆಚ್ಚೆನು ಗೊತ್ತಿಲ್ಲ. ಸರ್ಕಾರ, ಕೃಷ್ಣಾ ಜಲ ಭಾಗ್ಯ ನಿಗಮ ಆದೇಶ ಪಾಲನೆ ಮಾಡಿದ್ದೇನೆ. ಎಂದು ಬಿಟಿಡಿಎ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಸ್ವಾಮಿ ಹೇಳಿದ್ದಾರೆ.