ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕುವೈತ್ ತಂಡವನ್ನು ಮಣಿಸಿದ ಭಾರತ ಫುಟ್ಬಾಲ್ ತಂಡ 9ನೇ ಬಾರಿಗೆ ಚಾಂಪಿಯನ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ.
ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4 ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿ ಸಂಭ್ರಮಿಸಿತು. 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿದ್ದರಿಂದ ಆಟವನ್ನು ಹೆಚ್ಚುವರಿಯಾಗಿ 30 ನಿಮಿಷಗಳಿಗೆ ವಿಸ್ತರಿಸಲಾಯಿತು. ಇಲ್ಲಿ ಎರಡೂ ತಂಡಗಳು ಸಹ ಗೋಲು ಗಳಿಸುವಲ್ಲಿ ವಿಫಲವಾದವು. ಆದ್ದರಿಂದ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಲು ತೀರ್ಮಾನಿಸಲಾಯಿತು.
ಪಂದ್ಯ ಆರಂಭವಾದ ಮೊದಲ 14 ನಿಮಿಷಗಳಲ್ಲಿ ಭಾರತದ ವಿರುದ್ಧ ಗೋಲು ಗಳಿಸುವ ಮೂಲಕ ಕುವೈತ್ ಮುನ್ನಡೆ ಸಾಧಿಸಿತ್ತು. ಕುವೈತ್ ಪರ ಶಬೀಬ್ ಅಲ್ ಖಾಲಿದಿ 14ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 16ನೇ ನಿಮಿಷದಲ್ಲಿ ಭಾರತಕ್ಕೆ ಸಮಬಲ ಸಾಧಿಸುವ ಅವಕಾಶವಿತ್ತು, ಆದರೆ ಸುನಿಲ್ ಛೆಟ್ರಿ ಹೊಡೆದ ಗೋಲನ್ನು ತಡೆಯುವಲ್ಲಿ ಕುವೈತ್ ತಂಡದ ಗೋಲ್ ಕೀಪರ್ ಯಶಸ್ವಿಯಾದರು. ಬಳಿಕ ಪಂದ್ಯದ 38 ನೇ ನಿಮಿಷದಲ್ಲಿ ಕುವೈತ್ ನ ಅಲ್ ಧ್ ಪಿರಿ ಅವರ ಪಾಸ್ ಕೊಡುವ ಪ್ರಯತ್ನವನ್ನು ವಿಫಲಗೊಳಿಸಿದ ಕುನಿಯನ್ ಅವರು ಸಹಾಲ್ ಗೆ ಪಾಸ್ ನೀಡಿದರು. ನಂತರ ಸಹಾಲ್ ಅವರಿಂದ ಪಾಸ್ ಪಡೆದ ಚೆಂಡನ್ನು ನಾಯಕ ಸುನೀಲ್ ಛೇಟ್ರಿಯವರು ಲಾಲಿಂಜುವಾಲಾ ಚಾಂಗ್ಟೆಗೆ ತಲುಪಿಸಿದರು. ಚಾಂಗ್ಟೆ ಚೆಂಡನ್ನು ಸುರಕ್ಷಿತವಾಗಿ ಎದುರಾಳಿ ತಂಡದ ಗೋಲು ಪೆಟ್ಟಿಗೆ ಹಾಕುವ ಮೂಲಕ ಅಂಕಗಳನ್ನು ಸಮಬಲಗೊಳಿಸಿದರು.
ಮೊದಲ ಅವಧಿ 1-1 ರಿಂದ ಪಂದ್ಯ ಸಮಬಲಗೊಂಡಿತ್ತು. ಎರಡನೇ ಅವಧಿಯಲ್ಲಿ ಎರಡು ತಂಡಗಳು ಮತ್ತಷ್ಟು ಅಕ್ರಮಣ ಹಾಗೂ ರಕ್ಷಣಾತ್ಮಕ ಆಟ ಆಡಿದ್ದರಿಂದ ಒಂದು ಗೋಲು ಕೂಡಾ ಬಾರಿಸಲು ವಿಫಲರಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.
ಮೈದಾನದಲ್ಲಿ ಮೊಳಗಿದ ವಂದೇ ಮಾತರಂ ಘೋಷ:
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಚಾಂಪಿಯನ್ ಷಿಪ್ 2023ರಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಕಂಠೀರವಾ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರತೀಯ ಫುಟ್ಬಾಲ್ ಪ್ರೇಮಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರಲ್ಲದೇ ಎಲ್ಲರೂ ಸಾಮೂಹಿಕವಾಗಿ ವಂದೇ ಮಾತರಂ ಗೀತೆಯನ್ನು ಹಾಡಿದರು.