ಹಲವಾರು ಜನರು ಮೋದಿ ಮತ್ತು ಕೇಂದ್ರದ ಬಿಜೆಪಿ ಸರಕಾರ ಏನು ಕ್ರಮ ಕೈಗೊಂಡರೂ ಅದನ್ನು ವಿರೋಧಿಸುವುದನ್ನೇ ರೂಢಿಸಿಕೊಂಡಿದ್ದಾರೆ. ಅವರಿಗೆ ಏನು ಮಾಡಬೇಕೆಂಬುದು ಸಧ್ಯಕ್ಕೆ ಗೊತ್ತಾಗುತ್ತಿಲ್ಲ. ಆದರೆ ಏನಾದರೊಂದನ್ನು ಮಾಡಲೇಬೇಕಾದ ಅನಿವಾರ್ಯತೆಯನ್ನು ತಮಗೆ ತಾವೇ ಹೇರಿಕೊಂಡು ಹೋರಾಡುತ್ತಿದ್ದಾರೆ. ಸಧ್ಯಕ್ಕೆ ಅವರಿಗೆ ಯಾರ ವಿರುದ್ಧ ತಾವು ಎನ್ನುವುದಷ್ಟೇ ಸ್ಪಷ್ಟವಾಗಿ ಗೊತ್ತಿದೆ. ಆದರೆ ಯಾರ ಪರ ತಾವು ಎನ್ನುವುದು ಗೊಂದಲವಾಗಿದೆ. ಏಕೆಂದರೆ ಅವರು ಕಣ್ಮುಚ್ಚಿಕೊಂಡು ಕತ್ತಲು ಕತ್ತಲು ಎಂದು ಅಳುತ್ತಿದ್ದರೆ, ಕೈಹಿಡಿದು ನಡೆಸುವ ಜ್ಯೋತಿ ಹಿಡಿಯುವ ಇವರಿಗೆ ಬೇಕಾದ ನಾಯಕನಾರೂ ಸಧ್ಯಕ್ಕೆ ಅವರ ಕಣ್ಮುಂದೆ ಇಲ್ಲ. ಇಂಥ ವಿಚಿತ್ರ ಸನ್ನಿವೇಶದಲ್ಲೂ ವಿರೋಧವೊಂದೇ ನಮ್ಮ ದಾರಿ ಎಂದು ನಂಬಿಕೊಂಡು, ಕಣ್ಮುಚ್ಚಿಕೊಂಡು ನಡೆಯುತ್ತಿದ್ದಾರೆ.
ಯಾವ ವಿಷಯ ತೆಗೆದುಕೊಂಡು ಮೋದಿಯ ಬೆನ್ನು ಹತ್ತಿದ ಬೇತಾಳವಾಗಬೇಕೆಂಬುದೂ ಅವರಿಗೀಗ ಪ್ರಶ್ನೆಯಾಗಿದೆ. ನೋಟು ಬ್ಯಾನು ಬಡವರ ವಿರುದ್ಧ ಎಂದರು, ಆದರೆ ಹೇಗೆ ಎಂದು ವಿವರಿಸಲು ಅವರ ಹತ್ತಿರ ಕಾರಣಗಳಿಲ್ಲ. ಆದರೂ ಬಡವರ ಕೈಗಳು ನೋಟು ಬ್ಯಾನಿನಂದಲೇ ಖಾಲಿಯಾಗಿವೆ ಎಂದು ಬಿಂಬಿಸಲು ಹೊರಟರು, ಪಾಪ ಆಗಲಿಲ್ಲ. ಕ್ಯಾಂಪಸ್ಸಗಳ ಕಲುಷಿತ ನೀರನ್ನು ಸರಕಾರದ ಮೇಲೆರಚಿ ರಾಡಿ ಮಾಡಲು ನೋಡಿದರು. ತಮ್ಮ ಕೈಗಳೇ ಕೊಳೆಯಾದವು. ಬುದ್ಧಿಜೀವಿಗಳ ಹತ್ಯೆಯ ರಕ್ತವನ್ನು ಬಿಜೆಪಿಯ ಕೈಗಂಟಿಸಲು ನೋಡಿದರು, ಯಾಕೋ ಅಂಟಲೇ ಇಲ್ಲ. ಇದೀಗ ಪರ್ಯಾಯ ಶಕ್ತಿಗಳು ಹುಟ್ಟಲೇ ಬೇಕು ಅಂತ ಹಟ ಹಿಡಿದು, ಟೆಸ್ಟ್ಯೂಬ್ ಬೇಬಿಯಾದರೂ ಪರವಾಗಿಲ್ಲ, ಜನ್ಮ ಕೊಟ್ಟೇ ತೀರುತ್ತೇವೆ ಅಂತ ಸಮಾವೇಶ ಮಾಡಿದರು. ಯಾಕೋ ಅದೂ ಫ್ಲಾಪ್ ಆಧಂಗಿದೆ, ಯಾವ ಸುದ್ದಿಯೂ ಇಲ್ಲ, ಸದ್ದೂ ಇಲ್ಲ. ಟೆಸ್ಟ್ಯೂಬ ಬೇಬಿ ಹುಟ್ಟಿತೋ ಇಲ್ಲವೋ, ಯಾಕೆಂದರೆ ನಗುವ ಸದ್ದು ಬಿಡಿ, ಅಳುವ ಸದ್ದೂ ಇಲ್ಲ. ಎಸ್. ಎಲ್. ಭೈರಪ್ಪನವರು ಶಿವಮೊಗ್ಗೆಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬಂದರೆ, ಧಿಕ್ಕಾರ ಕೂಗುತ್ತೇವೆ, ಸಮ್ಮೇಳನವನ್ನೇ ಬಹಿಷ್ಕರಿಸುತ್ತೇವೆ ಎಂದೆಲ್ಲ ಆವಾಜು ಹಾಕಿ ಇದೀಗ ಅಲ್ಲಿಯೇ ಮಾಡಿದ ಸಮಾವೇಶದ ನಾಮೋನಿಶಾನೆ ಇಲ್ಲದಂತಾಗಿದೆ.
ಇವರೆಲ್ಲ ನಂಬಿಕೊಂಡು ಬಂದ ರಾಜಕುಮಾರ ಮತ್ತು ಮಹಾರಾಣಿಯವರು ಯಾಕೋ ಚೈತನ್ಯವೆಲ್ಲ ಸೋರಿ ಹೋಗಿ ಎಲ್ಲೋ ಮರೆಯಾಗಿದ್ದರೆ, ಟಾರ್ಚು ಹಿಡಿಯುವರಾರೂ ಇಲ್ಲದೇ ಸೈನಿಕರೆಲ್ಲ ದಿಕ್ಕೆಟ್ಟು ಪರಾರಿಯಾಗಿದ್ದರೆ, ಇದ್ದ ಸೂರ್ಯನನ್ನು ನೋಡಲಾಗದೇ, ಕಣ್ಮುಚ್ಚಿ ಕತ್ತಲೆಯನ್ನು ಅನುಭವಿಸುತ್ತಿರುವ ಸ್ವಯಂಕೃತಾಪರಾಧಿಗಳಿಗೆ ಜಾಣ ಜನ ಉದಾಸೀನ ಮಾಡಿ ಮಾಡಿಯೇ ಬುದ್ಧಿ ಕಲಿಸುತ್ತಿದ್ದಾರೆ.
ಅಯ್ಯಾ ಪಂಡಿತರೇ, ಸಾಮಾನ್ಯ ಜನ ನಿಮ್ಮ ಮುಚ್ಚಿದ ಸಭಾಗೃಹದ ಸಮ್ಮೇಳನಗಳಿಗೆ ಬರುವುದಿಲ್ಲ. ಆದರೆ ಅವರಿಗೆ ಏನೂ ಗೊತ್ತಾಗುವುದಿಲ್ಲವೆಂದು ತಿಳಿದು ಹಿಲಾಲು ಹಿಡಿಯುವುದಕ್ಕೆ ಮುಂಚೆ ನಿಮ್ಮೊಳಗಿನ ಕತ್ತಲನ್ನು ಹೊಡೆದೋಡಿಸಿ. ನೀವು ಜನಸಾಮಾನ್ಯರನ್ನೆಲ್ಲ ಮುಗ್ಧರೆಂದು ತಿಳಿದು ಅ, ಆ, ಇ, ಈ, ಹೇಳಿಕೊಟ್ಟು ಪುಣ್ಯಕಟ್ಟಿಕೊಳ್ಳಬೇಕೆಂದಿರುವುದೇನೋ ನಿಜ. ಆದರೆ ಜನ ನೀವು ತಿಳಿದಷ್ಟು ದಡ್ಡರಲ್ಲ. ಅವರಿಗೆ ಕಲಿಸಲು, ಕಲಿಯಲು ಬಹಳಷ್ಟು ಬೇರೆ ಮಾರ್ಗಗಳಿವೆ ಎನ್ನುವುದು ಕ್ಲಾಸ್-ರೂಮಿನ ನಾಲ್ಕು ಗೋಡೆಗಳ ಮಧ್ಯೆ ಒದರುವ ನಿಮಗೆ ಅರ್ಥ ಮಾಡಿಸುವುದಾದರೂ ಹೇಗೆ? ಇದೀಗ ಬರೀ ನಿಮ್ಮ ಕ್ಲಾಸ್-ರೂಮುಗಳು, ಲೇಖನಗಳು, ನಿಮಗಾಗಿಯೇ ಇರುವ ಕೆಲವು ಪತ್ರಿಕೆಗಳು, ಚ್ಯಾನಲ್ಲುಗಳನ್ನು ಮೀರಿಯೂ ವಿಷಯಗಳು, ಸಂಗತಿಗಳು, ಘಟನೆಗಳು ಜನರನ್ನು ತಲುಪುತ್ತವೆ, ಮತ್ತು ಅವುಗಳ ಸತ್ಯಾಸತ್ಯತೆಯ ಬಗ್ಗೆ ಅವರದೂ ಒಂದು ತನಿಖಾ ವರದಿ ಮನಸ್ಸಿನಲ್ಲೇ ತಾನೇ ತಾನಾಗಿ ತಯಾರಾಗಿರುತ್ತದೆ. ಹಿಂದಿನಂತೆಯೇ ಇನ್ನೂ ಶಂಖದಿಂದ ಬಂದಾಗಲೇ ತೀರ್ಥ ಅನ್ನುವ ಮನೋಭಾವಬಿಟ್ಟು ಹೋಗಿದೆ, ನಿಮಗಷ್ಟೇ ಅದಿನ್ನೂ ಅರ್ಥವಾಗಬೇಕಿದೆ.
ಈ ದೇಶಕ್ಕೆ ಒಳ್ಳೆಯ ಕೆಲಸವನ್ನು ಪ್ರಾಮಾಣಿಕತನದಿಂದ ಯಾರೇ ಮಾಡಲಿ ಅವರನ್ನು ಒಪ್ಪಿಕೊಂಡು, ಮಾಡುವ ಕೆಲಸಗಳಿಗೆ ಬೆಂಬಲ ಸೂಚಿಸದಿದ್ದರೂ ಪರವಾಗಿಲ್ಲ, ತಡೆಯೊಡ್ಡುವ ಕೆಟ್ಟ ಕೆಲಸವನ್ನಾದರೂ ಮಾಡದಿರಿ. ಹಾಗೆ ಮಾಡುವುದಕ್ಕೆ ಮುನ್ನ ಈಗಿನ ಸರಕಾರ ಏನೇನು ಮಾಡುತ್ತಿದೆ, ಹಿಂದಿನ ಸರಕಾರ ಏನೇನು ಮಾಡಿದೆ, ಏನೇನು ಮಾಡಬಹುದಿತ್ತು ಎಂದು ಒಮ್ಮೆಯಾದರೂ ಕುಳಿತು ಶಾಂತಚಿತ್ತದಿಂದ ಯೋಚಿಸಿ. ಮೋದಿ ಮಾಡಿದಷ್ಟು ಕೆಲಸಗಳನ್ನು ಹಿಂದಿನ ೬೭ ವರ್ಷಗಳಲ್ಲಿ ಯಾರಾದರೂ ಮಾಡಿದ್ದರೇ?
೧. ಸುಮಾರು ೨೫ ಕೋಟಿ ಜನ-ಧನ ಖಾತೆಗಳನ್ನು ತೆರೆಯುವುದೆಂದರೆ ಸಾಮಾನ್ಯವೇ? ಈ ಎಲ್ಲ ಖಾತೆಗಳಿಗೆ ಉಚಿತ ವಿಮಾ ಸೌಲಭ್ಯವಿದೆ, ಗೊತ್ತು ತಾನೇ?
೨. ಎಲ್ಲ ಸಂಸ್ಥೆಗಳ ಕೆಲಸಗಾರರಿಗೆ ಕಡ್ಡಾಯ ಭವಿಷ್ಯ ನಿಧಿ ಮತ್ತು ಇ.ಎಸ್.ಐ.ಯೋಜನೆಯನ್ನು ವಿಸ್ತರಿಸಿತು ಇದರಿಂದ ಸಾವಿರಾರು ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ಇ.ಎಸ್.ಐ. ನ ಲಾಭ ದೊರಕಿದಂತಾಯಿತು. ಹಿಂದಿನ ಯಾವ ಸರಕಾರ ಇಂಥದೊಂದು ದಿಟ್ಟ ನಿರ್ಣಯ ಕೈಗೊಂಡಿತ್ತು?
೩. ಕಾಳ ಧನಿಕರ ಪಾಲಿಗೆ ಸಿಂಹಸ್ವಪ್ನವಾಗಿರುವ ಮೋದಿ, ಬಡವರ ಪಾಲಿಗೆ ಪ್ರೀತಿಯ ಪ್ರಧಾನಿಯಾಗಿದ್ದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾದರೆ ಅದು ನಿಮ್ಮ ದೃಷ್ಟಿದೋಷವೇ ಸರಿ.
೪. ಕಪ್ಪು ಹಣ ಸಾಕಷ್ಟು ಹೊರ ಬಂದಿದೆ, ಬಾರದೇ ಮನೆಗಳಲ್ಲೇ ಇರುವ ಹಳೆ ನೋಟುಗಳು ಜೀರ್ಣವಾಗಿ ಸವೆದು ಹೋಗುತ್ತವೆ. ಇದು ಒಂದು ಪ್ರಯತ್ನ. ಇನ್ನು ಮುಂದೆ ಕಪ್ಪು ಹಣ ಸಂಗ್ರಹವಾಗುವುದಿಲ್ಲ ಎಂದು ಮೋದಿಯಾಗಲಿ, ಸರಕಾರವಾಗಲಿ ಭರವಸೆ ಕೊಟ್ಟಿಲ್ಲವಲ್ಲಾ? ಅದನ್ನು ಮಾಡಬೇಕಿರುವುದು ಜನ. ಈ ದೇಶದ, ಈ ದೇಶದ ಜನತೆಯ ಸಂಪತ್ತನ್ನು ಕೊಳ್ಳೆ ಹೊಡೆದು ಲೂಟಿ ಮಾಡಿರುವ ಜನ ಇನ್ನು ಮುಂದಾದರೂ ಬುದ್ಧಿ ಕಲಿತು ಪ್ರಾಮಾಣಿಕವಾಗಿರಬೇಕು. ಮಾಡುವ ದಂಡವನ್ನು ಒಮ್ಮೆ ಮೋದಿ ಮಾಡಿದ್ದಾರೆ. ಮುಂದಿನದು ನಮ್ಮ ಜವಾಬ್ದಾರಿಯೂ ಅಲ್ಲವೇ?
ಇದು ಕೇವಲ ಟ್ರೇಲರ್ ಅಷ್ಟೇ ಪಿಚ್ಚರ್ ಇನ್ನೂ ಬಾಕಿಯಿದೆ.
ಸುಮ್ಮಸುಮ್ಮನೇ ಬೊಗಳೆ ಬಿಡುತ್ತಿರುವ ಬುದ್ಧಿಜೀವಿಗಳೇ, ವಿಶ್ವವಿದ್ಯಾಲಯಗಳ ಖಾಲಿ ಮಾಸ್ತರುಗಳೇ, ನಿಮ್ಮದೂ ಒಂದಿಷ್ಟು ಜವಾಬ್ದಾರಿಗಳಿವೆ. ಮೊದಲು ನಿಮ್ಮ ತರಗತಿಗಳ ಪಾಠಗಳನ್ನು ಸರಿಯಾಗಿ ಮಾಡಿ ಮುಗಿಸಿ. ಯೂಜಿಸಿಯವರು ಕೊಡುವ ಲಕ್ಷ-ಲಕ್ಷ ಪಗಾರವನ್ನು ಜೇಬಿಗಿಳಿಸಿ, ಸಭೆ-ಸಮ್ಮೇಳನಗಳಲ್ಲೇ ಟೈಂ ಪಾಸ್ ಮಾಡುವ ಅಧ್ಯಾಪಕರಿಗೆ ಗೇಟ್-ಪಾಸ್ ಮಾಡಿಸುವ ಕೆಲಸವಾಗುವಂತೆ ಪ್ರಚೋದಿಸದಿರಿ. ಅದರ ಬದಲಾಗಿ ನಿಜವಾದ ಕಳಕಳಿ ಇದ್ದರೆ, ಹಳ್ಳಿ ಹಳ್ಳಿಗಳಿಗೆ ಸೋಷಿಯಲ್ ಪ್ರಾಜೆಕ್ಟಗಳನ್ನು ಒಯ್ದು, ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳನ್ನು, ಡಿಜಿಟಲ್ ವ್ಯವಹಾರಗಳನ್ನು ಮಾಡುವ ರೀತಿಯನ್ನು ತಿಳಿಸಿಕೊಡಿ, ಸಾಲಗಳನ್ನು ಯಾಕೆ, ಯಾವಾಗ ಮಾಡಬೇಕು ಅಂತ ಹೇಳಿ, ಮಾಡರ್ನ್ ರೈತರಾಗುವಂತೆ ಪ್ರೋತ್ಸಾಹಿಸಿ. ಅವರೂ ನಮ್ಮಂತೆಯೇ ಒಳ್ಳೆಯ ಗೆಟಪ್ಪಿನಲ್ಲಿ ಕೆಲಸ ಮಾಡಲಿ, ಕೆಲಸಕ್ಕೆ ಡಿಗ್ನಿಟಿ ತರಲಿ ಎಂದು ಆಶಿಸಿ. ಅದು ಬಿಟ್ಟು ಬರಿ ಮುಚ್ಚಿದ ಕದಗಳ ಹವಾ ನಿಯಂತ್ರಿತ ಸಭಾಂಗಣದಲ್ಲಿ ಮಾತಿನ ತಲವಾರುಗಳಿಂದ ಇರಿದು ಸೋಲಿಸುತ್ತೇವೆನ್ನುವ ಭ್ರಮೆ ಇನ್ನಾದರೂ ಬಿಡಿ. ಬೇರೆಯವರೆಲ್ಲ ಎಂದೋ ಬಿಟ್ಟಾಯ್ತು.