ಕರ್ನಾಟಕದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದು ಎರಡು ವಾರಕಳೆದಿದೆ. ಇನ್ನು ಚುನಾವಣೆಯ ಮುನ್ನ ನೀಡಿದ್ದ ಗ್ಯಾರಂಟಿ ಜಾರಿಯಾಗುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡ ಹೇರಲಾಗುತ್ತಿದೆ.
ಒಂದೆಡೆ ಕರೆಂಟ್ ಬಿಲ್ ಕಟ್ಟೋದಿಲ್ಲ ಅಂತಾ ಜನ ಗಲಾಟೆ ಮಾಡುತ್ತಿದ್ದರೆ ಮತ್ತೊಂದೆಡೆ ಬಸ್ನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ತಗೊಳ್ಳಲ್ಲ ಅಂತಾ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ವಿರೋಧ ಪಕ್ಷಗಳಂತೂ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದೆ. ಇನ್ನೂ ಜೂನ್ 1ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳನ್ನ ಘೋಷಣೆ ಮಾಡೋ ನಿರೀಕ್ಷೆ ಇದೆ ಅನ್ನೋ ಮಾತು ಕೇಳಿ ಬರ್ತಿದೆ.
ಎರಡು ಕಡೆ ಗ್ಯಾರಂಟಿ ಸಭೆ:
ಇಂದು ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಸಭೆಯನ್ನು ನಡೆಸಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದೆ. ನಂತರ ಶಕ್ತಿ ಸೌಧದಲ್ಲಿ ಉಚಿತ ವಿದ್ಯುತ್ ಗ್ಯಾರಂಟಿ ಯೋಜನೆಯ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಐದು ಇಲಾಖೆಗಳಿಗೆ ಹೆಚ್ಚು ಜವಾಬ್ದಾರಿ:
ಕಾಂಗ್ರೆಸ್ ಗ್ಯಾರಂಟಿಗಳಿಗೆ ಸಂಬಂಧಿಸಿದ ಹಣಕಾಸು ಇಲಾಖೆ, ಶಿಕ್ಷಣ, ಸಾರಿಗೆ, ಆಹಾರ, ಇಂಧನ ಇಲಾಖೆಗಳಿಗೆ ದೊಡ್ಡ ಜವಾಬ್ದಾರಿ ಮುಂದಿದೆ. ಯೋಜನೆಗಳಿಗೆ ಸಂಬಂಧಿಸಿದಂತೆ ಐದು ಇಲಾಖೆಗಳಿಗೆ ನಿಯಮಾವಳಿಗಳನ್ನು ರೂಪಿಸುವಂತೆ ಸೂಚಿಸಲಾಗಿದೆ.
ಗ್ಯಾರಂಟಿ ಜಾರಿಗೆ ಷರತ್ತುಗಳು ಅನ್ವಯ:
ಇನ್ನು ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು ಆದರೆ ಈಗ ಸರ್ಕಾರ ಉಲ್ಟಾ ಹೊಡೆದಂತಿದೆ. ಕಾಂಗ್ರೆಸ್ ನಾಯಕರುಗಳು ಈಗ ಗ್ಯಾರಂಟಿ ಜಾರಿಯಾಗಬೇಕಾದರೆ ಷರತ್ತುಗಳು ಅನ್ವಯ. ಹಾಗೆಯೇ ನಿರ್ಗತಿಕರು, ಬಡವರನ್ನ ಗುರುತಿಸಿ ಗ್ಯಾರಂಟಿ ಯೋಜನೆಗಳನ್ನ ತಲುಪಿಸುತ್ತೇವೆ. ಎಲ್ಲರಿಗೂ ಕೊಡೋಕೆ ಆಗಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಗ್ಯಾರಂಟಿ ವಿಚಾರವಾಗಿ ಡಿಸಿಎಂ ಡಿಕೆಶಿ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದೇವೆ, ಹಾಗಂತಾ ಎಲ್ಲರಿಗೂ ಹಣ ಕೊಡೋಕೆ ಆಗುತ್ತಾ? ಮನೆ ಯಜಮಾನಿಗೆ ಹಣ ಕೊಡ್ತೀವಿ. ಎಲ್ಲರಿಗೂ ಕೊಡೋಕೆ ಆಗಲ್ಲ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆ ವೇಳೆ ಹೇಳಿದ ರೀತಿಯಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆ ಜಾರಿ ಸಾಧ್ಯ ಇಲ್ಲ ಅನ್ನೋದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಗ್ಯಾರಂಟಿ ಜಾರಿಗೆ ಸರ್ಕಾರ ಮುಂದಿರುವ ಸವಾಲುಗಳು:
*ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಲು ಕನಿಷ್ಟ 50 ಸಾವಿರ ಕೋಟಿ ರೂಪಾಯಿ ಬೇಕು ಅಂತಾ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಇದು ದೊಡ್ಡ ಹೊರೆಯಾಗಲಿದೆ. ಇನ್ನು ರಾಜ್ಯದ ಮೇಲಿರುವ ಸಾಲ ಕೂಡಾ ಇನ್ನಷ್ಟು ಹೆಚ್ಚಾಗೋದು ಖಚಿತ. ಹೀಗಾಗಿ, ರಾಜ್ಯದ ಅಭಿವೃದ್ದಿ ಕಾರ್ಯಗಳ ಕಥೆ ಏನು ಅನ್ನೋ ಪ್ರಶ್ನೆ ಮೂಡುತ್ತಿದೆ.
*ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕೋಕೆ ಗ್ಯಾರಂಟಿಗಳೂ ಮುಖ್ಯ ಕಾರಣ ಅಂತ ಹೇಳಲಾಗುತ್ತಿದೆ. ಒಂದು ವೇಳೆ ಗ್ಯಾರಂಟಿ ಜಾರಿ ವೇಳೆ ಸಮಸ್ಯೆಗಳಾದರೆ, ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
*ಕಾಂಗ್ರೆಸ್ ಗ್ಯಾರಂಟಿ ಜಾರಿ ತಡವಾಗಿರುವುದನ್ನು ವಿಪಕ್ಷಗಳು ಸರ್ಕಾರದ ವಿರುದ್ಧ ಮಾತನಾಡಲು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಹಾಗೆಯೇ ಕೆಲವು ನಾಯಕರುಗಳು ಕರೆಂಟ್ ಬಿಲ್ ಕಟ್ಟಬೇಡಿ ಎಂದು ಜನರಿಗೆ ಕರೆ ನೀಡಿ ಜನರು ಸರ್ಕಾರವಿರುದ್ಧ ರೊಚ್ಚಿಗೇಳುವಂತೆ ಮಾಡುತ್ತಿದ್ದಾರೆ.