ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಚುನಾವಣೆಗಳನ್ನು ಗೆಲ್ಲಲು ತಂತ್ರಗಾರಿಕೆ ಅತೀ ಮುಖ್ಯವಾಗಿದೆ. ಏಕೆಂದರೆ ಇಂದು ಕ್ಷಣಾರ್ಧದಲ್ಲಿ ಎಲ್ಲಾ ಮಾಹಿತಿಯು ಎಲ್ಲರಿಗೂ ಅಂಗೈನಲ್ಲೇ ತಲುಪುತ್ತಿದೆ.
ಮೊನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಸ್ಥಾನಗಳಿಸುವಲ್ಲಿ ಯಶಸ್ವಿ ಆಗಿರುವುದು ಕೂಡ ಇದೇ ತಂತ್ರಗಾರಿಕೆಯಿಂದ. ಈ ತಂತ್ರಗಾರಿಕೆಯ ರೂವಾರಿ ಸುನಿಲ್ ಕನುಗೋಲು ಅವರೇ ಆಗಿದ್ದಾರೆ. ಮೂಲತಃ ಕರ್ನಾಟಕದವರಾದ ಇವರು ಚೆನ್ನೈನಲ್ಲಿ ವಿದ್ಯಾಬ್ಯಾಸ ಮುಗಿಸಿ ಹೈದರಾಬಾದ್ ನಲ್ಲಿ ತಮ್ಮದೇ ಒಡೆತನದ ಮೈಂಡ್ ಶೇರ್ ಅನಾಲಿಟಿಕ್ಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿದ್ದಾರೆ.
ದೇಶದ ಖ್ಯಾತ ಚುನಾವಣಾ ತಂತ್ರಜ್ಷ ಪ್ರಶಾಂತ್ ಕಿಶೋರ್ ಅವರ ತಂಡದ ಜತೆ ಕೆಲಸ ಮಾಡಿದ್ದ ಕನುಗೋಲು ಅವರು ೨೦೧೪ ರಲ್ಲಿ ತಮ್ಮದೇ ಕಂಪೆನಿ ಸ್ತಾಪಿಸಿದರು.ಅವರು 300 ಜನರ ತಂಡದ ಸಹಾಯದಿಂದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳ ಚುನಾವಣೆ ಸೇರಿದಂತೆ ಬಿಜೆಪಿಗಾಗಿ ಯಶಸ್ವಿ ಪ್ರಚಾರಗಳನ್ನು ರೂಪಿಸಿದರು. ೨೦೧೮ ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರ ಅಧಿಕ ಸ್ತಾನಗಳನ್ನು ಗೆಲ್ಲಲು ಇವರ ತಂಡವೇ ಕಾರಣವಾಗಿತ್ತು.
೨೦೨೨ ರಲ್ಲಿ ಕಾಂಗ್ರೆಸ್ನ ನಾಯಕಿ ಸೋನಿಯಾ ಗಾಂಧಿ ಅವರು ಸುನಿಲ್ ಅವರ ಮೈಂಡ್ ಶೇರ್ ಸಂಸ್ಥೆಯನ್ನು ಚುನಾವಣಾ ತಂತ್ರಗಾರಿಕೆ ರೂಪಿಸಲು ನೇಮಿಸಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಕನುಗೋಲು ಕಂಪೆನಿ ನೀಡಿದ ಸಮೀಕ್ಷೆಗಳ ಆಧಾರದಲ್ಲಿ ಮಾತ್ರ. ಎಲ್ಲಾ ಜಿಲ್ಲೆಗಳಲ್ಲೂ ತನ್ನ ಉದ್ಯೋಗಿಗಳನ್ನು ಹೊಂದಿರುವ ಕನುಗೋಲು ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಗುರುತಿಸಿದರು. ಅಲ್ಲದೆ ಬಿಜೆಪಿಯ ಪ್ರಚಾರದ ಎದುರು ಮಂಕಾಗಿದ್ದ ಕಾಂಗ್ರೆಸ್ ಗೆ ಪೇಸಿಎಂ ಅಭಿಯಾನ ವನ್ನು ರೂಪಿಸಿದ್ದು ಇದೇ ತಂಡ.
ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡದಂತೆ, ಹಿಂದು-ಮುಸ್ಲಿಂ ಕುರಿತಾದ ವಿಚಾರ ಮುನ್ನಲೆಗೆ ತರದಂತೆ ಈ ಟೀಮ್ ಸಲಹೆಯನ್ನೂ ನೀಡಿತ್ತು. ಅದರೊಂದಿಗೆ ಕೆಲವೊಂದು 70 ಸೀಟ್ಗಳಲ್ಲಿ ಕಾಂಗ್ರೆಸ್ನ ಸ್ಪರ್ಧೆ ನೆಪಮಾತ್ರ ಎನ್ನುವುದನ್ನೂ ಈ ಟೀಮ್ ಮೊದಲೇ ತಿಳಿಸಿಬಿಟ್ಟಿತ್ತು. ಇಡೀ ರಾಜ್ಯ ಕಾಂಗ್ರೆಸ್ ಸಂಭ್ರಮ ಪಡುವಂತೆ ಸುನೀಲ್ ಕುನಗೋಳು ಅವರ ಮಾಸ್ಟರ್ ಮೈಂಡ್ ರಾಜ್ಯ ರಾಜಕಾರಣದಲ್ಲಿ ವರ್ಕ್ ಆಗಿದೆ.
ಅದಾದ ನಂತರ 40% ಸರ್ಕಾರ ಅನ್ನೋ ಕ್ಯಾಂಪೇನ್ ಅನ್ನು ಕಾಂಗ್ರೆಸ್ ಮಾಡಿತ್ತು. ಇದರ ನಂತರ ಬೆಲೆ ಏರಿಕೆಯಿಂದ ಬೇಸತ್ತಿದ್ದ ರಾಜ್ಯದ ಜನತೆಗೆ ಒಂದಷ್ಟು ನೆಮ್ಮದಿ ನೀಡುವ ತಿಂಗಳಿಗೆ ೨೦೦ ಯೂನಿಟ್ ವಿದ್ಯುತ್ ಉಚಿತ, ಪ್ರತೀ ಗೃಹಿಣಿಗೆ ತಿಂಗಳಿಗೆ ೨೦೦೦ ರೂಪಾಯಿ, ಪ್ರತೀ ನಿರುದ್ಯೋಗಿಗೆ ತಿಂಗಳಿಗೆ ೩೦೦೦ ರೂಪಾಯಿ ಯೋಜನೆ ಯನ್ನು ರೂಪಿಸಿದ್ದು ಇದೇ ತಂಡ. ಜತೆಗೆ ಬರೀ ಭರವಸೆ ನೀಡದೆ ಗ್ಯಾರಂಟಿ ಕಾರ್ಡ್ಗಳ ಮೂಲಕ ಮನೆ ಮನೆ ತಲುಪಿಸಿದ ಕಾರಣದಿಂದ ಜನತೆ ಕಾಂಗ್ರೆಸ ನತ್ತ ಮುಖ ಮಾಡಿದರು. ಹೀಗಾಗಿ ನಿರೀಕ್ಷೆಗೂ ಮೀರಿ ಸ್ಥಾನ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿ ಆಯಿತು.
ಸೋಷಿಯಲ್ ಮೀಡಿಯಾ ಸ್ಟ್ರ್ಯಾಟಜಿ ಟೀಮ್ನಲ್ಲಿದ್ದರೂ, ಕನುಗೋಳು ಯಾವುದೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ. ಸುನಿಲ್ ಕುನಗೋಳು ಅವರು 2014 ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯ ಎಬಿಎಂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ರೂವಾರಿಯೂ ಇವರೇ ಆಗಿದ್ದಾರೆ. ನಿರ್ಣಾಯಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆಯು ಹೆಚ್ಚಿನ ಪರಿಣಾಮ ಬೀರಿದೆ. ಮುಂದೆ ತೆಲಂಗಾಣದಲ್ಲಿ ಕಾಂಗ್ರೆಸ್ನ ರಾಜಕೀಯ ಭವಿಷ್ಯವನ್ನು ಮರುಸ್ಥಾಪಿಸುವುದು, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳುವುದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ಯುವುದು ಮತ್ತು ಮುಖ್ಯವಾಗಿ, ಕಾಂಗ್ರೆಸ್ ಅನ್ನು ಕೇಂದ್ರದ ಪ್ರಬಲ ಬಿಜೆಪಿ ವಿರುದ್ದ ಗೆಲ್ಲುವಂತೆ ಮಾಡುವುದು ಇವರ ಮುಂದಿನ ಯೋಜನೆಗಳಾಗಿವೆ.