ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯೇ ಇರಲಿ ವಿಧಾನ ಸಭೆ ಚುನಾವಣೆಯೇ ಇರಲಿ ಪ್ರತಿಬಾರಿಯು ಸಿನಿಮಾ ಕ್ಷೇತ್ರದವರು ಸ್ವರ್ಧಿಯಾಗಿ ಇಲ್ಲವೋ ಪ್ರಚಾರಕರಾಗಿಯಾದರೂ ಪಾಲನ್ನು ಪಡೆದುಕೊಂಡಿರುತ್ತಾರೆ.
ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ರಾಜಕೀಯದ ಮೇಲೆ ಚಿತ್ರರಂಗದ ಪ್ರಭಾವ ತೀರಾ ಕಡಿಮೆಯಿದ್ದರೂ, ಸ್ಯಾಂಡಲ್ವುಡ್ನಲ್ಲಿ ಆಗೊಮ್ಮೆ ಈಗೊಮ್ಮೆ ಆಯ್ಕೆಯಾಗುವ ಸೆಲೆಬ್ರಿಟಿಗಳ ಪಾಲು ಇದೆ. ಈ ಬಾರಿಯ ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಸಿನಿಮಾ ಕ್ಷೇತ್ರದ ಹಲವರು ಅಭ್ಯರ್ಥಿಗಳು ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕುಮಾರ್ ಬಂಗಾರಪ್ಪ:
ಕುಮಾರ್ ಬಂಗಾರಪ್ಪ ಕರ್ನಾಟಕ ವಿಧಾನಸಭಾ ಚುನಾವಣೆ 2023ಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ, ದಿವಂಗತ ಸಾರೆಕೊಪ್ಪ ಬಂಗಾರಪ್ಪ ಅವರ ಹಿರಿಯ ಪುತ್ರ, ಕುಮಾರ್ ಬಂಗಾರಪ್ಪ ಅವರು 1980 ರ ದಶಕದ ಅಂತ್ಯ ಮತ್ತು 1990 ರ ದಶಕದಲ್ಲಿ ಸರಣಿ ಚಲನಚಿತ್ರಗಳೊಂದಿಗೆ ನಟರಾಗಿ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿದರು
“ಆಕ್ಷನ್ ಹೀರೋ” ಎಂದು ಜನಪ್ರಿಯರಾಗಿದ್ದ ಕುಮಾರ್ ಬಂಗಾರಪ್ಪ 1996 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ತಮ್ಮ ಸ್ಥಾನವನ್ನು ತೊರೆದ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 1999 ರಲ್ಲಿ, ವಿಧಾನ ಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಕದಿಂದ ಗೆದ್ದರು.
ಒಂದು ಕಾಲದಲ್ಲಿ ಬಂಗಾರಪ್ಪ ಕುಟುಂಬದ ಭದ್ರಕೋಟೆಯಾಗಿದ್ದ ಸೊರಬ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಒಡಹುಟ್ಟಿದವರ ಪೈಪೋಟಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷ ತೊರೆದ ಕುಮಾರ್ ಬಂಗಾರಪ್ಪ 2018 ರಲ್ಲಿ ಬಿಜೆಪಿ ಪಕ್ಷದಿಂದ ಸೊರಬ ಕ್ಷೇತ್ರದಲ್ಲಿ ಗೆದ್ದು ಮತ್ತೆ ಈ ಬಾರಿಯ 2023 ರ ಚುನಾವಣೆಯಲ್ಲಿ ತಮ್ಮ ಸಹೋದರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಧು ಬಂಗಾರಪ್ಪ ವಿರುದ್ಧ ಸ್ಪರ್ಧಿಸಿದ್ದಾರೆ.
ಕುಮಾರ್ ಬಂಗಾರಪ್ಪ ಕೊನೆಯ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚರ್ಕವರ್ತಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.
ಮಧು ಬಂಗಾರಪ್ಪ:
ಎಸ್ ಬಂಗಾರಪ್ಪ ಅವರ ಕಿರಿಯ ಪುತ್ರ ಮಧು ಬಂಗಾರಪ್ಪ ಕೂಡ ಕನ್ನಡ ಚಿತ್ರರಂಗದ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಮಧು ಬಂಗಾರಪ್ಪ ನಿರ್ಮಾಪಕರಾಗಿ ಸಿನಿ ಜರ್ನಿಯನ್ನು ಪ್ರಾರಂಭಿಸಿದರು ನಂತರ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರು ನಿರ್ಮಿಸಿದ ಅನೇಕ ಚಲನಚಿತ್ರಗಳಲ್ಲಿ ಅವರ ಹಿರಿಯ ಸಹೋದರ ಕುಮಾರ್ ಬಂಗಾರಪ್ಪ ನಟಿಸಿದ್ದಾರೆ. ಅವರು ಸ್ವತಃ ಒಂದೆರಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರೂ, ಟಿಎಸ್ ನಾಗಾಭರಣ ನಿರ್ದೇಶನದ 2006 ತೆರೆಕಂಡ ಕಲ್ಲರಳಿ ಹೂವಾಗಿ ಸಿನಿಮಾ ನಿರ್ಮಾಪಕರಾಗಿ ಅವರ ಕೊನೆಯ ಚಿತ್ರವಾಗಿದೆ.
ಬಂಗಾರಪ್ಪ ಕುಟುಂಬದವರು ಆರಂಭಿಸಿರುವ ಆಕಾಶ್ ಆಡಿಯೋ ಎಂಬ ಆಡಿಯೋ ಲೇಬಲ್ ಅನ್ನು ಅವರೇ ನೋಡಿಕೊಳ್ಳುತ್ತಿದ್ದರು.
ಕಾಂಗ್ರೆಸ್ ಪಕ್ಷ ಸೇರುವ ಮುನ್ನ 2013ರ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ೨೦೨೩ರ ಚುನಾವಣೆಯಲ್ಲಿ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಕಣದಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ:
ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುತ್ತಿದ್ದು, ಇವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಮುಂಖ್ಯಮಂತ್ರಿ ಕುಮಾರ ಸ್ವಾಮಿಯವರ ಪುತ್ರ. 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಶ್ ವಿರುದ್ಧ ಸೋತ ನಂತರ ನಿಖಿಲ್ ಕುಮಾರಸ್ವಾಮಿ ಎರಡನೇ ಬಾರಿಗೆ ೨೦೨೩ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ನಿಖಿಲ್ ಜಾಗ್ವಾರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಮೂಲಕ ನಟನೆಯನ್ನು ಪ್ರಾರಂಭಿಸಿ, ಇದುವರೆಗೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ನಿಖಿಲ್ ಕೊನೆಯ ಬಾರಿಗೆ ಮಹಾಭಾರತದ ಪೌರಾಣಿಕ ಸಿನಿಮಾ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಟಿಸಿದ್ದಾರೆ. ಈ ಬಾರಿ ಅವರು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಎಚ್ ಡಿ ಕುಮಾರ್:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರು ರಾಜಕೀಯಕ್ಕೆ ಕಾಲಿಡುವ ಮುನ್ನ ಕನ್ನಡ ಚಿತ್ರರಂಗದೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದರು. ಹೊಳೆನರಸೀಪುರದಲ್ಲಿ ಚೆನ್ನಾಂಬಿಕಾ ಥಿಯೇಟರ್ ಅನ್ನು ಪ್ರಾರಂಭಿಸಿ ಅದರ ಮೂಲಕ ಸಿನಿಮಾ ವಿತರಣೆ, ಪ್ರದರ್ಶನ ಮತ್ತು ನಿರ್ಮಾವನ್ನು ಪ್ರಾರಂಭಿಸಿದರು.
ಕುಮಾರಸ್ವಾಮಿ ತಮ್ಮ ಬ್ಯಾನರ್ ಅಡಿಯಲ್ಲಿ ಆರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಜಾಗ್ವಾರ್ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿಖಿಲ್ ಕುಮಾರ್ ಸ್ವಾಮಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚನ್ನಾಂಬಿಕಾ ಫಿಲ್ಮ್ಸ್ ಕುಮಾರ್ ಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ ನಿರ್ಮಿಸಲಾಗಿದೆ.
ಬಿ.ಸಿ ಪಾಟೀಲ್:
ಬಿ.ಸಿ.ಪಾಟೀಲ್ ಅವರು ಮೊದಲು ಕರ್ನಾಟಕ ಪೊಲೀಸ್ಗೆ ಇಲಾಖೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 1993 ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು 25 ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಮುನಿರತ್ನ:
ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ಮುನಿರತ್ನ ಅವರು ಬಿಬಿಎಂಪಿ ಗುತ್ತಿಗೆದಾರರಾಗಿದ್ದರು. ಅವರು ಮೊದಲು ಯಶವಂತಪುರದಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ನಂತರ ಅವರು ಚಲನಚಿತ್ರ ನಿರ್ಮಾಣವನ್ನು ಪ್ರಾರಂಭಿಸಿದರು. ಆಂಟಿ ಪ್ರೀತ್ಸೆ ಯಿಂದ ಸಿನಿ ಜರ್ನಿ ಪ್ರಾರಂಭವಾಗಿ ಇತ್ತೀಚೆಗೆ ತೆರಕಂಡ ಕುರುಕ್ಷೇತ್ರ ಕೊನೆಯ ಸಿನಿಮಾವಾಗಿದೆ.
ಮುನಿರತ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟಿಪ್ಪು ಸುಲ್ತಾನ್ನನ್ನು ಕೊಂದ ಚಾರಿತ್ರಿಕ ವ್ಯಕ್ತಿಗಳೆಂದು ಬಿಜೆಪಿಯು ಬಿಂಬಿಸಲು ಯತ್ನಿಸುತ್ತಿರುವ ಕಾಲ್ಪನಿಕ ಒಕ್ಕಲಿಗ ಮುಖಂಡರಾದ ಉರಿಗೌಡ ಮತ್ತು ನಂಜೇಗೌಡರ ಕುರಿತಾದ ಚಿತ್ರವೊಂದನ್ನು ನಿರ್ಮಾಣ ಮಾಡುವುದಾಗಿ ಪ್ರಕಟಿಸಿ ಸುದ್ದಿಯಾಗಿದ್ದರು.
ಸಿಪಿ ಯೋಗೀಶ್ವರ್:
ಸಿಪಿ ಯೋಗೀಶ್ವರ್ ಅವರು ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡದ್ದು ರಣಧೀರ ಚಿತ್ರದಲ್ಲಿ ನಂತರ ಸೈನಿಕ ಮತ್ತು ಉತ್ತರ ದ್ರುವದಿಂದ ದಕ್ಷಿಣ ದ್ರುವಕೂ ಸಿನಿಮಾದಲ್ಲಿ ನಟಿಸಿ ಅವರ ಪಾತ್ರಗಳಿಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು.
ವೀರಪ್ಪನ್ನ ಜೀವನವನ್ನು ಆಧರಿಸಿದ ಚಲನಚಿತ್ರವಾದ ಅಟ್ಟಹಾಸದಲ್ಲಿ ಅವರು ಕೊನೆಯದಾಗಿ ಪೋಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಎಂಎಲ್ಸಿ ಆಗಿದ್ದ ಅವರು ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ.
ಉಮಾಪತಿ ಶ್ರೀನಿವಾಸ ಗೌಡ:
ಉಮಾಪತಿ ಶ್ರೀನಿವಾಸ್ ಗೌಡ ಕಾಂಗ್ರೆಸ್ ಪಕ್ಷದಿಂದ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದು, ಉಮಾಪತಿ ಎಸ್ ಗೌಡ ಅವರು ತಮ್ಮ ಬ್ಯಾನರ್ ಉಮಾಪತಿ ಫಿಲಂಸ್ ಅಡಿಯಲ್ಲಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಅವರ ಚೊಚ್ಚಲ ಸಿನಿಮಾವಾಗಿದೆ. ನಂತರ, ಅವರು ರಾಬರ್ಟ್ , ಮದಗಜ ಮತ್ತು ಉಪಾಧ್ಯಕ್ಷರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.