ಕರ್ನಾಟಕ ರಾಜ್ಯ ರಚನೆಯಾಗಿ ಅರ್ಧ ಶತಮಾನ ಕಳೆದ ಮೇಲೂ ನಮ್ಮ ನಾಡಗೀತೆಯ ವಿವಾದವೇ ಮುಗಿಯುತ್ತಿಲ್ಲ. ಕುವೆಂಪು ಅವರ ” ಭಾರತ ಜನನಿಯ ತನುಜಾತೆ , ಜಯ ಹೇ ಕರ್ನಾಟಕ ಮಾತೆ” ಎಂಬ ಹಾಡನ್ನು ಯಾವುದೋ ಒಂದು ಸರಕಾರವಿದ್ದಾಗ ಸ್ವೀಕರಿಸಲಾಯಿತು. ಜನರೂ ಒಪ್ಪಿಕೊಂಡರು. ಕ್ರಮೆಣ ಕೆಲವರಿಗೆ ತಲೆ ತುರಿಕೆ ಆರಂಭವಾಯಿತು. ಆ ಹಾಡು ಹೀಗಿರಬೇಕು, ಅವರ ಹೆಸರು ಬೇಡ, ಇವರ ಹೆಸರು ಬೆಕು ಎಂದೆಲ್ಲ ಕ್ಯಾತೆ ಸುರುವಾಗಿ ನಂತರ ಹಾಡುವ ಧಾಟಿ ಅವರದಿರಬೇಕು, ಇವರದಿರಬೇಕು ಎನ್ನುವ ತಕರಾರು ಸುರುವಾಯಿತು. ಸರಕಾರ ಅದಕ್ಕಾಗಿ ಸಮಿತಿ ರಚಿಸಿಯೂ ಆಯಿತು. ಪ್ರಕರಣ ಕೋರ್ಟಿನ ಕಟ್ಟೆ ಏರಿತು. ಈಗಲೂ ಪ್ರಕರಣ ಕೋರ್ಟಿನಲ್ಲಿದೆ. ಈ ಮಧ್ಯೆ ಜನ ತಮ್ಮ ತಮ್ಮದೇ ಆದ ರೀತಿಯಲ್ಲಿ ನಾಡಗೀತೆ ಹಾಡುತ್ತಲೇ ಇದ್ದಾರೆ. ಕೆಲವರು ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ, ಕೆಲವರು ಸಿ. ಅಶ್ವಥ್ ಧಾಟಿಯಲ್ಲಿ ಹಾಡುತ್ತಿದ್ದಾರೆ. ಬೇರೆ ದಾಟಿಯಲ್ಲಿ ಹಾಡುವವರೂ ಇದ್ದಾರೆ. ಸಂಗಡ ಪದ್ಯ ಉದ್ದವಾಯಿತು, ಸಮಯ ಕಡಿತವಾಗಬೇಕು ಎಂಬ ಒತ್ತಾಯ ಬೇರೆ. ಕೆಲ ಸಾಲುಗಳನ್ನು ತೆಗೆದು ಎರಡೂವರೆ ನಿಮಿಷಗಳಿಗೆ ಸೀಮಿತಗೊಳಿಸಲಾಯಿತು. ಈಗ ನಾಡಗೀತೆ ಹೀಗೇ ಹಾಡಬೇಕು ಎಂಬ ನಿರ್ಬಂಧ ಇದೆಯೆ ಎಂಬ ವಿಚಾರ ನ್ಯಾಯಾಲಯದ ಮುಂದೆ ಬಂದಿದೆ.
ಮೊದಲನೆಯದಾಗಿ ಕುವೆಂಪು ಅವರು ಇದನ್ನು ನಾಡಗೀತೆಗಾಗಿ ಎಂದೇನೂ ಬರೆದದ್ದಲ್ಲ. ನಾಡಿನ ಅಭಿಮಾನದಿಂದ ಬರೆದದ್ದು. ಹಿಂದೆ ಹುಯಿಲಗೋಳ ನಾರಾಯಣರಾಯರು ಸಹ ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡು ಬರೆದಿದ್ದುಂಟು. ಅದನ್ನು ಮಹಾತ್ಮಾ ಗಾಂದೀಜಿ ಎದುರು ೧೯೨೪ ರಲ್ಲಿ ಬೆಳಗಾವಿಯಲ್ಲೇ ಹಾಡಲಾಗಿತ್ತು. ಅದೇ ನಾಡಗೀತೆಯಾಗಲು ಹೆಚ್ಚು ಯೋಗ್ಯವಿತ್ತೆಂದೂ ಅಭಿಪ್ರಾಯವಿದೆ. ಅದೇನೇ ಇದ್ದರೂ ಕುವೆಂಪು ಹಾಡನ್ನು ನಾಡಗೀತೆಯಾಗಿ ಸ್ವೀಕರಿಸಿದ ನಂತರ ಅದನ್ನು ಹಾಡುತ್ತ ಬರಲಾಗಿದೆ.
ಎರಡನೆಯದಾಗಿ ಕವಿ ಬರೆದ ಹಾಡನ್ನು ಕವಿಯ ಅನುಮತಿ ಇಲ್ಲದೇ ನಮ್ಮ ಮನಸ್ಸಿಗೆ ಬಂದಂತೆ ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಇದನ್ನು ಗಮನಿಸಬೇಕಿತ್ತು. ಅದು ಅಕ್ಷಮ್ಯ ಅಪರಾದ.
ಮೂರನೆಯದಾಗಿ ಜನರು ಅಥವಾ ಹಾಡುವವರು ತಮತಮಗೆ ಅನುಕೂಲವಾದ ಧಾಟಿಯಲ್ಲಿ ಅದನ್ನು ಹಾಡಲು ಸ್ವಾತಂತ್ರ್ಯ ಇರಬೇಕು ಹೊರತು ಇಂತಹದೇ ಧಾಟಿ ಇರಬೇಕು ಎಂದು ಒತ್ತಾಯಿಸುವ ಅಗತ್ಯವೇನಿದೆ? ಅದನ್ನು ತಪ್ಪಿಲ್ಲದೇ ಹಾಡಬೇಕು ಎನ್ನುವ ನಿಯಮ ಇದ್ದರೆ ಸಾಕು. ಹಾಡುಗಾರರು ತಮಗೆ ಬೇಕಾದ ರಾಗವನ್ನು ಬಳಸಿ ಹಾಡಿದರೆ ತಪ್ಪೇನಿದೆ? ಈ ವಿಷಯ ಈಗ ಕೋರ್ಟಿನಲ್ಲಿ ಇರುವುದರಿಂದ ನಾವೇನೂ ಹೇಳಲು ಬರುವುದಿಲ್ಲ. ಆದರೆ ಇವೆಲ್ಲ ಅನಗತ್ಯ ಉಪದ್ವ್ಯಾಪವೆಂದು ಅನಿಸುತ್ತದೆ ಹೊರತು ಮತ್ತೇನಿಲ್ಲ. ನಾಡಗೀತೆ ಹಾಡುವಾಗ ನಾಡಿನ ಬಗ್ಗೆ ಭಕ್ತಿ ಶ್ರದ್ಧೆ ಅಭಿಮಾನ ಇರುವುದು ಮುಖ್ಯ. ಅದರ ಉದ್ದಗಲ ಅಥವಾ ಅದರ ಧಾಟಿ ಮುಖ್ಯವಲ್ಲ. ಕೇಳಲು ಇಂಪಾಗಿರಬೇಕು. ಭಾಷಾದೋಷವಿರಬಾರದು. ಅಷ್ಟೇ. ಅದು ಹಾಡುವವರ / ಹಾಡಿಸುವವರ ಸ್ವಾತಂತ್ರ್ಯ