ಹೊಯ್ಸಳರ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅನೇಕ ಉತ್ಕೃಷ್ಟ ಗ್ರಂಥಗಳು ರಚಿಸಲ್ಪಟ್ಟವು ರಾಜರ ಆಸ್ಥಾನದಲ್ಲಿ ಕವಿಗಳಿಗೆ ವಿಶೇಷವಾದ ಮನ್ನಣೆಯಿತ್ತು. ಹೊಯ್ಸಳರ ಕಾಲದ ದೇಶಪ್ರೇಮ, ರಾಜನಿಷ್ಠೆ, ಧಾರ್ಮಿಕ ಶ್ರದ್ಧೆ, ಸಾಮಾಜಿಕ ಜೀವನ ಅಂದಿನ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗಿದೆ. ನಾಗಚಂದ್ರ ಅಥವಾ ಅಭಿನವ ಪಂಪನು ವಿಷ್ಣುವರ್ಧನನ ಆಸ್ಥಾನದಲ್ಲಿದ್ದನು. ಇವನು ರಾಮಚಂದ್ರ ಚರಿತ ಮತ್ತು ಮಲ್ಲಿನಾಥ ಪುರಾಣ ಎಂಬ ಶ್ರೇಷ್ಠ ಕೃತಿಗಳನ್ನು ರಚಿಸಿರುವನು. ಕಂತಿ ಹಂಪನ ಸಮಸ್ಯೆ ಎಂಬ ಗ್ರಂಥವನ್ನು ಬರೆದ ಕಂತಿ ಎಂಬ ಕವಿಯತ್ರಿಯು ಈ ಕಾಲಕ್ಕೆ ಸೇರಿದವಳು. ಧರ್ಮಾಮೃತ ಎಂಬ ಕೃತಿಯ ಕರ್ತೃವಾದ ನಯಸೇನನೂ, ಕ್ಷೇತ್ರಗಣಿತ, ವ್ಯವಹಾರರತ್ನ, ಚಿತ್ರ ಹಸುಗೆ ಮೊದಲಾದ ಗ್ರಂಥಗಳನ್ನು ರಚಿಸಿದ ರಾಜಾದಿತ್ಯನೂ ವಿಷ್ಣುವರ್ಧನನ ಕಾಲದ ಇತರ ಪ್ರಸಿದ್ಧ ಕವಿಗಳಾಗಿದ್ದರು. ಕವಿ ಸುನೋಬಾಣನು ಮತ್ತು ಈತನ ಮಗನಾದ ಜನ್ನನೂ ಎರಡನೆ ವೀರ ಬಲ್ಲಾಳನ ಕಾಲದವರು. ಸುಮನೋ ಬಾಣನು ಜೈನ ಪುರಾಣದ ಒಂದು ಗ್ರಂಥವನ್ನು ಬರೆದನು. ಜನ್ನನಿಗೆ ವೀರಬಲ್ಲಾಳನು ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದ್ದನು. ಜನ್ನನು ‘ಅನಂತನಾಥಪುರಾಣ’ ಮತ್ತು ‘ಯಶೋಧರ ಚರಿತೆ’ ಎಂಬ ಗ್ರಂಥಗಳನ್ನು ರಚಿಸಿರುವನು. ಜನ್ನನ ಭಾವನಾದ ಮಲ್ಲಿಕಾರ್ಜುನನು ಸೂಕ್ತಿಸುಧಾರ್ಣವನನ್ನು ಮಲ್ಲಿಕಾರ್ಜುನನ ಪುತ್ರನಾದ ಕೇಶಿರಾಜನು ‘ಶಬ್ದ ಮಣಿದರ್ಪಣ’ ಎಂಬ ಕೃತಿಯನ್ನು ರಚಿಸಿದನು. ಎರಡನೆ ವೀರಬಲಾಳನ ಕಾಲದ ಮತ್ತೊಬ್ಬ ಪ್ರಸಿದ್ಧ ಜೈನ ಕವಿಯಾದ ನೇಮಿಚಂದ್ರನು ಅರ್ಧ ನೇಮಿ ಮತ್ತು ಲೀಲಾವತಿ ಎಂಬ ಪ್ರಸಿದ್ಧ ಗ್ರಂಥಗಳನ್ನು ರಚಿಸಿರುವನು. ‘ಜಗನ್ನಾಥವಿಜಯ’ ಮತ್ತು ‘ರಸಗಲಿಕೆ’ ಎಂಬ ಕೃತಿಗಳನ್ನು ರಚಿಸಿದ ರುದ್ರ ಭಟ್ಟನು ವೀರಬಲ್ಲಾಳನ ಸಮಕಾಲೀನನಾಗಿದ್ದನು. ಇವರುಗಳಲ್ಲದೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸುಪ್ರಸಿದ್ಧರಾಗಿರುವ ಹರಿಹರ ಮತ್ತು ರಾಘವಾಂಕ ಕವಿಗಳು ಒಂದನೆಯ ನರಸಿಂಹನ ಕಾಲಕ್ಕೆ ಸೇರಿದವರೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಹರಿಹರನು ಪಂಪಾಶತಕ, ರಕ್ಷಾಶತಕ ಮತ್ತು ಗಿರಿಜಾಕಲ್ಯಾಣ ಎಂಬ ಸುಪ್ರಸಿದ್ಧ ಕೃತಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ಕೀರ್ತಿಗಳಿಸಿದ್ದಾನೆ. ಹರಿಹರನ ಕೃತಿಗಳಲ್ಲಿ ಭಕ್ತಿಯು ಪ್ರಧಾನವಾಗಿದೆ.ಹರಿಹರನ ಸೋದರಳಿಯನಾದ ರಾಘವಾಂಕನು ಉತ್ತಮೋತ್ತಮ ಕವಿಗಳಲ್ಲಿ ಒಬ್ಬನಾಗಿದ್ದಾನೆ. ಇವನು ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ’ಕರ್ಣಾಟಕ ಕಲ್ಯಾಣಕಾರಕ’ ಎಂಬ ಕೃತಿಯನ್ನು ರಚಿಸಿದನು. ಹೀಗೆ ಇವರೆಲ್ಲರ ಬರವಣಿಗೆಗಳಿಂದ ಕನ್ನಡ ಸಾಹಿತ್ಯದಲ್ಲಿ ವಿಶೇಷ ಪಗತಿಯು ಕಂಡುಬಂದಿತು.
ಹೊಯ್ಸಳ ರಾಜ್ಯದಲ್ಲಿ ಸಂಸ್ಕೃತ ಭಾಷೆ ಮತ್ತು ಸಾಹಿತ್ಯಕ್ಕೂ ಅಪಾರ ಪ್ರೋತ್ಸಾಹವಿದ್ದಿತು. ವಂಶಪಾರಂಪರವಾಗಿ ಬಂದಿದ್ದ ಒಂದು ಕುಟುಂಬದ ಕವಿಗಳು ಹೊಯ್ಸಳರ ಆಸ್ಥಾನದಲ್ಲಿ ‘ವಿದ್ಯಾಚಕ್ರವರ್ತಿಗಳು’ ಎಂಬ ಸ್ಥಾನವನ್ನು ಅಲಂಕರಿಸಿದ್ದರು. ಈ ವಿದ್ಯಾಚಕ್ರವರ್ತಿಗಳು ರುಕ್ಕಿಣಿ ಕಲ್ಯಾಣ ಎಂಬ ಮಹಾಕಾವ್ಯವನ್ನೂ ಮತ್ತು ಅಲಂಕಾರಸರ್ವಸ್ವ ಹಾಗೂ ಕಾವ್ಯಪ್ರಕಾಶ ಎಂಬ ಶಾಸ್ತ್ರೀಯ ಗ್ರಂಥಗಳ ಮೇಲೆ ವ್ಯಾಖ್ಯಾನಗಳನ್ನು ಬರೆದನು. ತ್ರಿವಿಕ್ರಮ ಪಂಡಿತನು ಉಷಾಹರಣ ಎಂಬ ಕವಿತೆಯನ್ನೂ ನಾರಾಯಣ ಪಂಡಿತನು ‘ಮಾಧ್ವವಿಜಯ’, ‘ಮಣಿಮಂಜರಿ’ ಮತ್ತು ‘ಪಾರಿಜಾತಹರಣ’ ಎಂಬ ಕೃತಿಗಳನ್ನು ರಚಿಸಿದರು. ವೀರ ಬಲ್ಲಾಳನ ಆಳ್ವಿಕೆಯ ಕೊನೆಯ ಕಾಲಕ್ಕೆ ಸೇರಿದ ವಿದ್ಯಾಚಕ್ರವರ್ತಿ ಎಂಬ ಕವಿಯು ಗದ್ಯವರ್ಣಾಮೃತ’ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದನು.
ಹೊಯ್ಸಳರ ಕಾಲದ ಧಾರ್ಮಿಕ ಸಾಹಿತ್ಯಕ್ಕೆ ಶ್ರೀರಾಮಾನುಜಾಚಾರ್ಯರೂ, ಮಧ್ವಾಚಾರ್ಯರೂ ಅಮೂಲ್ಯ ಕಾಣಿಕೆಗಳನ್ನು ಸಲ್ಲಿಸಿರುವರು. ಶ್ರೀ ರಾಮಾನುಜಾಚಾರ್ಯರು ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳ ಮೇಲೆ ಭಾಷ್ಯವನ್ನು ಬರೆದರು. ವೇದಾಂತಸಂಗ್ರಹ, ವೇದಾಂತಸಾರ, ವೇದಾಂತದೀಪ ಮೊದಲಾದ ಟಕಾಗ್ರಂಥಗಳೂ ಅವರಿಂದ ರಚಿಸಲ್ಪಟ್ಟವು. ಪರಾಶರ ಭಟ್ಟರ ‘ಶ್ರೀ ಗುಣರತ್ನ ಕೋಶ’ ರಾಮಮಿರ್ಶರದೇಶಿಕರ ಶ್ರೀ ಭಾಷ್ಯವಿವೃತಿ’, ವತ್ಸವರದರ ‘ತತ್ವಸಾರ’ ಪರಾಶರರ ‘ತತ್ವ ರತ್ನಾಕರ’ ವಿಷ್ಣುಚಿತ್ತರ ‘ಪ್ರಮೇಯಸಂಗ್ರಹಸಂಗತಿಮಾಲಾ’ ಮೊದಲಾದವುಗಳು ಈ ಕಾಲದಲ್ಲಿ ಸಂಸ್ಕೃತದಲ್ಲಿ ರಚಿಸಲ್ಪಟ್ಟ ಪ್ರಸಿದ್ಧ ಕೃತಿಗಳಾಗಿದ್ದವು.