ಧಾರವಾಡದ ದುರ್ಗಾದೇವಿಗೆ ಸಲ್ಲಿಸಿರುವ ನಮನವೇ ‘ಧಾರವಾಡ ತಾಯಿ’ ಕವಿತೆ, ಸಖೀಗೀತದಲ್ಲಿರುವ ಬಿಡಿ ಕವನಗಳಲ್ಲಿ ಕೊನೆಯ ಕವನವಿದು. ಧಾರವಾಡದ ತಾಯಿ ದುರ್ಗೆಗೆ ನಮನದಿಂದ ಈ ಬಿಡಿ ಕವನಗಳು ಕೊನೆಗಾಣುವವು ಎಂದು ಬೇಂದ್ರೆ ಹೇಳಿದ್ದಾರೆ. ಸಖೀಗೀತದಲ್ಲಿ ಬಿಡಿಗವನಗಳು ಮುಗಿದಾಗ ಧಾರವಾಡದ ತಾಯಿಗೆ ನಮನ ಸಲ್ಲಿಸಿದ್ದಾರೆ.
ಮುಂದೆ ಬೇಂದ್ರೆ ಪ್ರಾರ್ಥಿಸುತ್ತಾ, ನಿನ್ನ ಕೃಪಾ ಕಟಾಕ್ಷ ನನ್ನ ಮೇಲಿರಲಿ, ನಿನ್ನ ಕಣ್ಣಿನ ಕಡೆಗೋಲಿನಿಂದ ನನ್ನ ಹೃದಯವನ್ನು ಕಡೆ; ಹಾಗೆ ಕಡೆದು ಬೆಣ್ಣೆಯನ್ನು ಹೊರ ಹಾಕಿಸು, ಆ ಬೆಣ್ಣೆಯನ್ನು ನಿನಗೆ ಕೊಡುವಂತೆ ಮಾಡು. ನೀನೆ ಬಾಯ್ಗೆ ಹಿಡಿ ಎನ್ನುತ್ತಾರೆ. ನನ್ನ ಹೃದಯದಿಂದ ಒಳಿತನ್ನೇ ಹೊರಹಾಕಿಸು, ಅದೆಲ್ಲವೂ ನಿನಗೆ ಸಮರ್ಪಿತವಾಗುವಂತೆ ಮಾಡು. ಧಾರವಾಡದ ತಾಯೇ, ನೀನಲ್ಲದೆ ನನಗೆ ಬೇರೆ ಯಾರ ಆಧಾರವೂ ಇಲ್ಲಿ ನನ್ನ ಭಾರವನ್ನು ಕಷ್ಟಗಳನ್ನು ನಿನ್ನ ಮೇಲೆ ಹಾಕಿದ್ದೇನೆ. ನೀನೇ ನನಗೆ ಎಲ್ಲ ಆದ್ದರಿಂದ ನನ್ನ ಹೃದಯವನ್ನು ಕಡೆದು ಒಳಿತಿನೆಡೆಗೆ ಸಾಗಿಸು.
ನನ್ನ ಮನಸ್ಸು ಆಸೆ ಆಕಾಂಕ್ಷೆಗಳ ಬಲೆಯಲ್ಲಿ ಸಿಲುಕಿದೆ. ಕಾಮದಿಂದ ಕಲುಷಿತಗೊಂಡ ಮನಕ್ಕೆ ನಿತ್ಯ ನೇಮ ಎಲ್ಲಿಂದ ಬರಲು ಸಾಧ್ಯ. ಸದಾಚಾರಗಳನ್ನು ಅದು ಮರೆತಿದೆ, ಸತ್ ರೀತಿ ನೀತಿಗಳನ್ನು ಮರೆತಿದೆ. ಪ್ರೇಮ ವಾಹಿನಿಯಾದ ನಿನ್ನ ಕರುಣೆ ನನ್ನ ಹೃದಯದಲ್ಲಿ ಹರಿಯದಿರೆ ನನ್ನೊಳಗಿನ ತಾಮಸ ಹರಿಯಲು ಸಾಧ್ಯವಿಲ್ಲ. ನಿನ್ನ ಕರುಣೆಯಿಂದ ನನ್ನೊಳಗಿನ ತಾಮಸ ಗುಣವಲ್ಲ ಕಳೆದು ಹೋಗುವಂತೆ ನನ್ನ ಹೃದಯವನ್ನು ನೀನು ಕಡೆ, ನೀನು ಗಂಗೆಯೂ ಹೌದು, ಗೌರಿಯೂ ಹೌದು, ದುರ್ಗೆ, ತುಂಗಭದ್ರೆ, ಶಾಲ್ಮಲೆ ಹೀಗೆ ವಿವಿಧ ರೂಪವಾಗಿ ಇರುವ ನೀನು ನನ್ನ ಹೃದಯಕ್ಕೆ ಹರಿ.
ನಿನ್ನ ನಂಬಿಯೇ ಈ ಅಂಬಿಕಾತನಯದತ್ತ ಇದ್ದಾನ. ಆ ನಂಬಿಕೆಯೂ, ಅದೊಂಥರ ನಿನ್ನಡಿಗೆ ಬಂದ ಜಂಭವೂ ಆಗಿದೆ. ನಿನ್ನ ಪಾದಪದ್ಯಗಳಲ್ಲಿ ಬೇಡುತ್ತಿರುವ ಎನ್ನ ಹೃದಯ ಕಡೆದು ಎನ್ನ ಕಾಯಿ ಎಂದು ಕವಿ ಬೇಡಿಕೊಳ್ಳುತ್ತಾರೆ