ನಮ್ಮ ದೇಶ ಅನೇಕ ರಾಷ್ಟ್ರಪತಿ, ಪ್ರಧಾನಮಂತ್ರಿ ಅಸಂಖ್ಯಾತ ರಾಜಕಾರಣಿಗಳು ಮತ್ತು ತಮಗೆ ತಾವೇ ಅನೇಕ ಪುರಸ್ಕಾರಗಳನ್ನು ಮತ್ತು ಸಾಂವಿಧಾನಿಕವಲ್ಲದಿದ್ದರೂ ತಾಯಿಯ ನಂತರ ಮಗ ಅಧಿಕಾರವನ್ನು ವಹಿಸಿಕೊಂಡಿದ್ದನ್ನು ನೋಡಿದ್ದೇವೆ, ಈಗ ಪ್ರಸ್ತುತದಲ್ಲಿ ಒಬ್ಬ ವ್ಯಕ್ತಿಯನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಸೈದ್ಧಾಂತಿಕ ಭೇದವನ್ನು ಬದಿಗಿಟ್ಟು ಅಧಿಕಾರಕ್ಕಾಗಿ ಹವಣಿಸುತ್ತಿರುವವರನ್ನು ಕಂಡಿದ್ದೇವೆ ಆದರೆ, ಇಲ್ಲೋಬ್ಬ ರಾಜಕಾರಣಿ ದೇಶಕ್ಕೆ ಸುಸ್ಥಿರವಾದ ಸರ್ಕಾರದ ಅಗತ್ಯವಿದೆಯೇ ಹೊರತು ಕಪ್ಪೆ ತೂಕದ ಸರ್ಕಾರವಲ್ಲ ಎಂದು ಹೇಳಿ ಲೋಕಸಭೆಯಲ್ಲೇ ರಾಜನಾಮೆಯನ್ನು ನೀಡದಂತಹ ರಾಜಕಾರಣಿ.
ದೇಶದ ಮೊದಲ ಪ್ರಧಾನಿ ನೆಹರು ಅವರು ಸದನದಲ್ಲಿದ್ದರೆ ಸುಮಾರು 30/35 ವರ್ಷ ಆಸುಪಾಸಿನ ಯುವಕ ಪ್ರಶ್ನೆ ಮತ್ತು ಚರ್ಚೆಯನ್ನು ಆರಂಭಿಸಿದರೆ ಸ್ವತಃ ನೆಹರು ಅವಕ್ಕಾಗುತ್ತಿದ್ದರು ಕೊನೆಗೆ ಅವರ ಬಳಿ ಸ್ವತಃ ನೆಹರೂ ಬಂದು ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳದರು. ಚೀನಾದ ಉಪಟಳವನ್ನು ತಾಳಲಾರದೆ ನೆಹರೂ ಅಕ್ಷೈಚಿನ ಪ್ರದೇಶವನ್ನು ಬಿಟ್ಟು ಕೊಟ್ಟನಂತರ ಆ ಪ್ರದೇಶದಲ್ಲಿ ಎನು ಬೆಳೆಯಲಾಗುವುದಿಲ್ಲ ಅದು ಬರಡು ಭೂಮಿ ಎಂದಾಗ ಈ ಯುವಕ ಧೈರ್ಯವಾಗಿ ನೆಹರೂ ಅವರೇ ನಿಮ್ಮ ತಲೆಯ ಮೇಲಿಯೂ ಕೂದಲಿಲ್ಲ ಅದನ್ನು ಚೀನಾದವರಿಗೆ ಬಿಟ್ಟು ಕೊಡಬಹುದಲ್ಲವೇ ? ಎಂದು ಪ್ರಶ್ನೆ ಮಾಡಿ ಸಂಪೂರ್ಣ ಸದವನ್ನೇ ತನ್ನ ಆಕರ್ಷಿಸಿಕೊಂಡಿದ್ದ ಯುವಕ ಮತ್ತಾರೂ ಅಲ್ಲ ಅಟಲ್ ಬಿಹಾರಿ ವಾಜಪೇಯಿ.
ಇಂದು ಆ ಅದಮ್ಯ ಚೇತನ ಭೂಮಿಯನ್ನು ಬಿಟ್ಟು ಹೊದಂತಹ ದಿನ ವಾಜಪೇಯಿ 2018 ವರ್ಷದ, ಆಗಸ್ಟ್ 16ರಂದು ಹೋಗಿಬಿಟ್ಟರು. ಅದಕ್ಕೂ ಒಂದು ದಶಕದ ಹಿಂದಿನಿನದಲೇ ಅನಾರೋಗ್ಯದಿಂದ ನಮ್ಮ ಬದುಕಿನ ಕಣ್ಣಿಗೆ ಅಜ್ಞಾತರಾಗಿದ್ದರು. ಅವರಂತಹ ಒಬ್ಬ ಶ್ರೇಷ್ಠ ಪ್ರಧಾನಿ ನಾವಿರುವ ದೇಶವನ್ನು ಆಳಿದ್ದರು ಎಂಬ ಕೃತಜ್ಞತೆ ಇಲ್ಲದೆ, ನಮ್ಮ ಸಮಾಜ ಅವರ ಸರ್ಕಾರವನ್ನೇ ಸೋಲಿಗೀಡುಮಾಡಿತು ಎಂಬುದು ಬಹಳಷ್ಟನ್ನು ಹೇಳುತ್ತದೆ. ಒಂದು ದೇಶವಾದ ನಾವು ಈ ಕುರಿತು ಆತ್ಮವಿಮರ್ಶೆ ಮಾಡಿಕೊಂಡು, ಇನ್ನೂ ಆಳವಾಗಿ ದುಃಖಿಸಿ, ನಮ್ಮ ಸಮಾಜದ ಪಾಪವನ್ನು ಕಳೆದುಕೊಳ್ಳುವ ಅಗತ್ಯ ಇನ್ನೂ, ಇನ್ನೂ, ಇನ್ನೂ ಬಹಳಷ್ಟು ಹೆಚ್ಚಿದೆ.
ಒಮ್ಮೆ ಪ್ರಧಾನಿಯಾಗಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದ್ವಜಾರೋಹಣ ಮಾಡಿ ಮಾತನಾಡಿದ್ದ ವಾಜಪೇಯಿ ಅವರು “ನಾನೊಬ್ಬ ಶಿಕ್ಷಕನ ಮಗ, ಇಂದು ಪ್ರಧಾನಿ ಆಗಿದ್ದೇನೆ. ಈ ದೇಶದ ಋಣವನ್ನು ತೀರಿಸಬೇಕಿದೆ” ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಈ ಮಹಾನುಭಾವ ದೇಶಕ್ಕೆ ಮಾಡಿದ ಸೇವೆಯ ಋಣ ನಮ್ಮೆಲ್ಲರ ಮೇಲೆ ತುಂಬಾ ಇದೆ. ಇಂತಹ ಒಬ್ಬ ವ್ಯಕ್ತಿ ಪ್ರಧಾನಿಯಾಗಿದ್ದರು, ಪ್ರಧಾನಿಯಾಗಿಯೂ ಸರಳರಾಗಿದ್ದರು, ಪ್ರಧಾನಿ ಸ್ಥಾನದಿಂದ ಮೂರು ಬಾರಿ ಇಳಿದಾಗಲೂ ಅದನ್ನು ವಿನಮ್ರವಾಗಿ, ಯಾವುದೇ ಖೇದವನ್ನೂ ಪರಿಭಾವಿಸದೆ ನಿಸ್ಪ್ರಹತೆಯನ್ನು ಮೆರೆದರು. ಒಮ್ಮೆ ನಮ್ಮ ನೆರೆ ರಾಷ್ಟ್ರದ ದುಷ್ಕೃತ್ಯಕ್ಕೆ ಇನ್ನೇನು ಯುದ್ಧದ ಮೂಲಕವೇ ಪ್ರತ್ಯುತ್ತರ ನೀಡಬಹುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಯುದ್ಧದ ಭೀಕರತೆಗೆ ಮನಗೊಡದೆ ಶಾಂತಿಯ ಕಹಳೆ ಊದಿದರು. ಪರಮಾಣು ಪರೀಕ್ಷಣವನ್ನು ನಾವು ಯುದ್ಧಕ್ಕೆ ಬಳಸಲು ಮಾಡುತ್ತಿಲ್ಲ, ಶಾಂತಿಯ ಸ್ಥಾಪನೆಯ ಸಿದ್ಧತೆಯಾಗಿ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರೂಪಿಸಿ, ಇಡೀ ವಿಶ್ವ ವಿಧಿಸಿದ್ದ ಬಹಿಷ್ಕಾರಗಳೆಲ್ಲವೂ ತಾನೇ ತಾನಾಗಿ ಉದುರಿಹೋಗುವಂತೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ. ಅಷ್ಟೊಂದು ವಿಭಿನ್ನ ಪಕ್ಷಗಳ ವಿಭಿನ್ನ ಪ್ರಭೃತಿಗಳು ತುಂಬಿದ್ದರೂ ಅವರೆಲ್ಲರನ್ನೂ ತಮ್ಮ ಆಂತರಿಕ ಅಯಸ್ಕಾಂತೀಯ ಶಕ್ತಿಯಲ್ಲಿ ಒಟ್ಟಿಗೆ ನಡೆಸುವುದು ಇನ್ಯಾರಿಗೂ ಸಾಧ್ಯ ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ. ಪ್ರಧಾನಿ ಸ್ಥಾನದಲ್ಲಿದ್ದಾಗಲೂ ಸ್ವಯಂ ಸೇವಕ ಸಂಘದ ಒಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತನಾಗಿ ಪಾಲ್ಗೊಳ್ಳುವಾಗ ಎಲ್ಲರೊಂದಿಗೆ ಒಂದು ಸಾಮಾನ್ಯ ಕೋಣೆಯಲ್ಲಿ ಮಲಗಿದ್ದ ಮಗುವಿನಂತಹ ನಿಷ್ಕಲ್ಮಶ ಹೃದಯಿ ಆತ. ಅಬ್ದುಲ್ ಕಲಮ್ ಅಂತಹ ಶ್ರೇಷ್ಠ ವಿಜ್ಞಾನಿ – ಸಜ್ಜನನನ್ನು ರಾಷ್ಟ್ರಪತಿಯಾಗಿ ಕೊಡುಗೆ ಕೊಡುವುದೂ ಕೂಡಾ ಅವರಿಗಷ್ಟೇ ಸಾಧ್ಯವಾಯಿತು. ದೇಶವನ್ನು ಶ್ರೇಷ್ಠ ಮಟ್ಟದ ರಸ್ತೆ ಸಂಪರ್ಕಗಳ ಮೂಲಕ ಒಂದುಗೂಡಿಸುವುದು ಅವರ ಭವ್ಯಕಲ್ಪನೆಯ ಕಾವ್ಯದಂತೆಯೇ ಬೆಳಗಿತು. ನದಿಗಳನ್ನೂ ಜೋಡಿಸುವ ಅವರ ಬೃಹತ್ ಕನಸೂ ಕೂಡಾ ಎಂತಹ ಭವ್ಯವಾಗಿತ್ತು ಎಂದು ಯೋಚಿಸಿದರೇ ರೋಮಾಂಚನವಾಗುತ್ತದೆ.
ವಾಜಪೇಯಿ ಭಾಷಣ ಅಂದರೆ ಅದೊಂದು ಜಲಪಾತದ ಧಾರೆಯಂತೆ ನಿರ್ಗಳ ಮತ್ತು ನೇರ ನುಡಿ ದೇಶಕ್ಕೆ ಕಂಟಕ ಎದುರಾದರೆ ಅದನ್ನು ಎದುರಿಸುವ ಛಾತಿಯನ್ನು ಕೇಳುಗರಲ್ಲೂ ಮುಡಿಸುವಂತಹ ಪ್ರವಾಹದಂತಹ ಮಾತುಗಳು, ಅಲ್ಲಲ್ಲಿ ಲಘು ಹಾಸ್ಯ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು.
“ಸರ್ಕಾರ್ ಆಯೇಗೀ ಜಾಯೇಂಗೀ, ಪಾರ್ಟಿ ಬನೇಗೀ ಬಿಗಡೇಗೀ, ಲೆಕಿನ್ ಯೆ ದೇಶ್ ರೆಹನಾ ಚಾಹಿಯೇ, ಇಸ್ ದೇಶ್ ಕಾ ಪ್ರಜಾತಂತ್ರ ರಹನಾ ಚಾಹಿಯೇ!” ಎಂದು ಧೈರ್ಯವಾಗಿ ಎಲ್ಲರ ಮುಂದೆ ಘಂಟಾ ಘೋಷವಾಗಿ ಹೇಳಿದ ಅಪರೂಪದ ರಾಜಕಾರಣಿ.
1980 ರಲ್ಲಿ ಭವಿಷ್ಯ ನುಡಿದಿದ್ದರು ಅದು ಮೂಲತಃ ಇಂದು ನೆರವೇರಿದೆ.” ಕತ್ತಲು ಹೋಗುತ್ತದೆ ಬೆಳಕು ಪ್ರಜ್ವಲಿಸುತ್ತದೆ. ಭಾರತ ದೇಶದ ಮೂಲೆ ಮೂಲೆಯಲ್ಲಿ ಕಮಲ ಅರಳುತ್ತದೆ ” ಎಂದು ಹೇಳಿದ ನಾಯಕ.
ರಾಜಕೀಯ ಎಂದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಎನ್ನುವಂತಹ ದಿನಗಳಲ್ಲಿ ಉತ್ತಮ ಆಡಳಿತ ಎಂದರೇನು ಎಂಬುದನ್ನು ಭಾರತಕ್ಕೆ ಪರಿಚಯಿಸಿ ಅದನ್ನು ಅನುಷ್ಠಾನವನ್ನು ಮಾಡಿದ ಸಾಧನೆ ನಿಮ್ಮದು.ಆದಕ್ಕಾಗಿಯೇ ನಿಮ್ಮ ಹುಟ್ಟುಹಬ್ಬವನ್ನು ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಲಾಗುತ್ತಿದೆ.