ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸಲ್ಲುತ್ತದೆ. ಹೀಗೆ ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು.
ಭಾರತದ ಸ್ವಾತಂತ್ರ್ಯಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸರಿಯೇ. ಒಟ್ಟಿನಲ್ಲಿ, ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು.
ವೆಂಕಟಕೃಷ್ಣಯ್ಯನವರ ‘ವೃತ್ತಾಂತ ಚಿಂತಾಮಣಿ’ (1885), ‘ಕನ್ನಡ ನಡೆಗನ್ನಡಿ’ (1895), ‘ಸಾಧ್ವಿ’ (1909), ಮೈಸೂರ್ ಪೇಟ್ರಿಯಟ್ (1913), ಬಿ. ನರಸಿಂಗರಾಯರ ‘ಸೂರ್ಯೋದಯ ಪ್ರಕಾಶಿಕಾ’ (1888), ಬಿ. ಶ್ರೀನಿವಾಸ ಅಯ್ಯಂಗಾರರ ‘ದೇಶಾಭಿಮಾನಿ’ (1894), ಮಣ್ಣೂರು ಗುಂಡೇರಾಯರ ‘ಕರ್ನಾಟಕ ವೈಭವ’ (1895), ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ’ (1896), ಹರ್ಡೇಕರ್ ಮಂಜಪ್ಪನವರ ‘ಧನುರ್ಧಾರಿ’ ತಿ.ತಾ. ಶರ್ಮರ ‘ವಿಶ್ವಕರ್ನಾಟಕ’ (1921), ಪಂದ್ಯದ ಬೆಳ್ಯಪ್ಪರ ‘ಕೊಡಗು’ (1921), ಆಲೂರ ವೆಂಕಟರಾಯರ ‘ಜಯ ಕರ್ನಾಟಕ’ (1922) ರಾಷ್ಟ್ರೀಯ ಚಳವಳಿ ಕಾವೇರುತ್ತಿದ್ದ ಕಾಲದಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನ, ಸ್ವದೇಶೀ ಪ್ರಜ್ಞೆಯನ್ನು ಅರಳಿಸಿದ ಪತ್ರಿಕೆಗಳು.
ತಿಲಕರ ಹೋರಾಟದ ಕೆಚ್ಚು 19ನೇ ಶತಮಾನದ ಕೊನೆಯ ಭಾಗದಲ್ಲಿ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಕನ್ನಡಪತ್ರಿಕೆಗಳಿಗೆ ದೊಡ್ಡ ಪ್ರೇರಣೆಯಾಗಿತ್ತು ಎಂಬುದು ಗಮನಾರ್ಹ ವಿಚಾರ.. ಅವರ ‘ಕೇಸರಿ’, ‘ಮರಾಠಾ’ ಪತ್ರಿಕೆಗಳು ರಾಷ್ಟ್ರೀಯ ಚಳವಳಿಯ ಕಹಳೆಗಳಂತೆ ಕೆಲಸ ಮಾಡಿದರೆ, ಅವುಗಳಿಂದಲೇ ಪ್ರೇರಣೆ ಪಡೆದು ಕನ್ನಡದಲ್ಲೂ ಅದೇ ಮಾದರಿಯ ಪತ್ರಿಕೆಗಳನ್ನು ಆರಂಭಿಸಿದವರು ಹಲವರು ಭಾರತೀಯರೆಲ್ಲರನ್ನೂ ರಾಷ್ಟ್ರೀಯ ಚಳವಳಿಯ ಮುಖ್ಯವಾಹಿನಿಯೊಂದಿಗೆ ಬೆಸೆಯುವಲ್ಲಿ ತಿಲಕರ ಪಾತ್ರ ಬಹಳ ದೊಡ್ಡದು. ಸ್ವದೇಶೀ ಚಳವಳಿ, ಸ್ವರಾಜ್ಯದ ವಿಚಾರಧಾರೆಯನ್ನು ಮೊದಲ ಬಾರಿಗೆ ಪರಿಣಾಮಕಾರಿಯಾಗಿ ಜನತೆಯ ಮನಸ್ಸಿಗೆ ತಲಪಿಸಿದ ವಿಶಿಷ್ಟ ಶಕ್ತಿ ಅವರು. ಸ್ವದೇಶೀ ಚಳವಳಿಯ ಮೈಸೂರು ಸಂಸ್ಥಾನದ ಪತ್ರಿಕೆಗಳಂತೂ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಬುದ್ಧ ಪಾತ್ರ ನಿರ್ವಹಿಸಿದವು. ಕನ್ನಡ ಪತ್ರಿಕೋದ್ಯಮದ ಪಿತಾಮಹ, ‘ತಾತಯ್ಯ’ ಎಂದೇ ಪ್ರಸಿದ್ಧಿ ಪಡೆದ ಎಂ. ವೆಂಕಟಕೃಷ್ಣಯ್ಯನವರು ತಮ್ಮ ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಸಂಪದಭ್ಯುದಯ, ಸಾಧ್ವಿ, ಪೌರ ಸಾಮಾಜಿಕ ಪತ್ರಿಕೆ, ಮೈಸೂರ್ ಪೇಟ್ರಿಯಟ್, ಮೈಸೂರು ಹೆರಾಲ್ಡ್ ಪತ್ರಿಕೆಗಳ ಮೂಲಕ ಕನ್ನಡದ ನೆಲದಲ್ಲಿ ಸ್ವದೇಶಾಭಿಮಾನ ಮೂಡಿಸುವಲ್ಲಿ ಮಾಡಿದ ಸಾಧನೆ ಅಪೂರ್ವವಾದದ್ದು. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಕ್ಕಾಗಿ ೧೯೦೮ರಲ್ಲಿ ಮೈಸೂರು ಸರ್ಕಾರವು ಜಾರಿಗೆ ತಂದ ಪತ್ರಿಕಾ ಶಾಸನದ ವಿರುದ್ಧ ಕನ್ನಡ ಪತ್ರಿಕೆಗಳು ಎದೆಸೆಟೆಸಿ ನಿಂತಾಗ ಆ ಹೋರಾಟದ ನೇತೃತ್ವ ವಹಿಸಿಕೊಂಡವರು ತಾತಯ್ಯನವರು. ಶಾಸನವನ್ನು ವಿರೋಧಿಸಿ ಸುಮಾರು ಎರಡು ವರ್ಷ ಸಂಸ್ಥಾನದಲ್ಲಿ ಯಾವುದೇ ಕನ್ನಡ ಪತ್ರಿಕೆಗಳು ಪ್ರಕಟವಾಗಲಿಲ್ಲ. “ತಾತಯ್ಯನವರು ದಾದಾಭಾಯಿ ನವರೋಜಿ ಹಾಗೂ ಬಾಲಗಂಗಾಧರ ತಿಲಕರಷ್ಟೇ ಉತ್ತಮವಾಗಿ ಮೈಸೂರಿನಲ್ಲಿ ಕೆಲಸ ಮಾಡಿದ್ದಾರೆ” ಎಂಬ ಗಾಂಧಿಯವರ ಮಾತು ವೆಂಕಟಕೃಷ್ಣಯ್ಯನವರಿಗೆ ದೊರೆತ ಅಮೂಲ್ಯ ಪ್ರಮಾಣಪತ್ರ.
ಸಿದ್ಧವನಹಳ್ಳಿ ಕೃಷ್ಣಶರ್ಮರು ‘ವಿಶ್ವಕರ್ನಾಟಕ’ದ ಸಂಪಾದಕರಾದ ಹೊತ್ತಿಗೆ ‘ಭಾರತ ಬಿಟ್ಟು ತೊಲಗಿ’ ಚಳವಳಿ ದೇಶದೆಲ್ಲೆಡೆ ಹರಡಿತ್ತು. ಕೃಷ್ಣಶರ್ಮರು ಅಂತಹ ಸನ್ನಿವೇಶದಲ್ಲಿ ಬಹಳ ಜವಾಬ್ದಾರಿಯುತವಾಗಿಯೇ ಕಾರ್ಯನಿರ್ವಹಿಸಿ ಸ್ವಾತಂತ್ರ್ಯಯೋಧರಿಗೆ ಬೆಂಬಲವಾಗಿ ನಿಂತರು. ೧೯೪೪ರಲ್ಲಿ ಅವರು ಬರೆದ ಒಂದು ಸಂಪಾದಕೀಯ ಹಾಗೂ ವೈಸ್ರಾಯ್ಗೆ ಬರೆದ ಬಹಿರಂಗ ಪತ್ರ ರಾಜದ್ರೋಹಕರವಾಗಿದೆಯೆಂಬ ಆಪಾದನೆ ಎದುರಿಸಿ ಜೈಲುವಾಸವನ್ನೂ ಅನುಭವಿಸಿದರು.
ತಿಲಕರಿಂದ ಪ್ರೇರಣೆ ಪಡೆದ ಪತ್ರಿಕೆಗಳು ಹಾಗೂ ಪತ್ರಕರ್ತರು ೧೯೨೦ರ ಬಳಿಕ ಭಾರತದ ರಾಷ್ಟ್ರೀಯ ಹೋರಾಟದ ನೇತೃತ್ವ ವಹಿಸಿಕೊಂಡ ಮಹಾತ್ಮ ಗಾಂಧಿಯವರ ಹೋರಾಟಕ್ಕೂ ಅದೇ ಬೆಂಬಲವನ್ನು ಮುಂದುವರಿಸಿದವು. ಗಾಂಧಿಯವರಂತೂ ಕರ್ನಾಟಕವೂ ಸೇರಿದಂತೆ ಭಾರತದ ಹಳ್ಳಿಹಳ್ಳಿಗೂ ಓಡಾಡಿ ಚಳವಳಿಯನ್ನು ಸಂಘಟಿಸಿದವರು. ನಿಪ್ಪಾಣಿ, ಬೆಳಗಾವಿ, ಮೀರಜ್, ಬಿಜಾಪುರ, ಮಂಗಳೂರು, ಬೆಂಗಳೂರು, ಮೈಸೂರು, ಬಳ್ಳಾರಿ, ಧಾರವಾಡ – ಎಲ್ಲ ಕಡೆ ಅವರು ಪ್ರವಾಸ ನಡೆಸಿದಾಗಲೂ ಕನ್ನಡದ ಪತ್ರಿಕೆಗಳು ವ್ಯಾಪಕ ಬೆಂಬಲ ನೀಡಿದವು; ಅವರ ಸಂದೇಶಗಳನ್ನು ನಿರಂತರವಾಗಿ ಪ್ರಕಟಿಸಿದವು. ಸಿದ್ಧವನಹಳ್ಳಿ ಕೃಷ್ಣಶರ್ಮರೇ ಅವರ ‘ಹರಿಜನ’ ಪತ್ರಿಕೆಯ ಕನ್ನಡ ಆವೃತ್ತಿಯ ಸಂಪಾದಕರಾಗಿದ್ದರು. ತಮ್ಮ ಲೇಖನಗಳನ್ನು ಯಾರು ಬೇಕಾದರೂ ಪ್ರಕಟಿಸುವ ಹಕ್ಕನ್ನು ಗಾಂಧಿಯವರು ಮುಕ್ತವಾಗಿಟ್ಟಿದ್ದರಿಂದ ಕನ್ನಡದ ಪತ್ರಿಕೆಗಳೂ ವಿವಿಧೆಡೆ ಪ್ರಕಟವಾಗುತ್ತಿದ್ದ ಅವರ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದವು.
ಅಸಹಕಾರ ಚಳವಳಿ, ಕರನಿರಾಕರಣೆ, ದಂಡೀಯಾತ್ರೆ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ – ಹೀಗೆ ಸ್ವಾತಂತ್ರ್ಯ ಹೋರಾಟ ವಿವಿಧ ಹಂತಗಳನ್ನು ದಾಟಿ ಮುಂದುವರಿಯುತ್ತಿದ್ದಾಗ ಪತ್ರಿಕೆಗಳು ಅವುಗಳನ್ನು ಬೆಂಬಲಿಸಿದ ರೀತಿ ಅನನ್ಯ. ಉಪ್ಪಿನ ಸತ್ಯಾಗ್ರಹ ದೊಡ್ಡ ಜನಾಂದೋಲನವಾಗಿ ಬೆಳೆದುದರ ಹಿಂದೆಯಂತೂ ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಶಿವಪುರದ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥದ ದುರ್ಘಟನೆಗಳನ್ನು ಕನ್ನಡದ ಪತ್ರಿಕೆಗಳಲ್ಲದೆ ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳೂ ಪ್ರಧಾನವಾಗಿ ಪ್ರಕಟಿಸಿದ್ದರಿಂದ ಅವು ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸಿದವು. ೧೯೩೮ರ ವಿದುರಾಶ್ವತ್ಥದ ಗೋಲಿಬಾರ್ ಬಳಿಕ “ಜನರು ಸ್ವಾತಂತ್ರ್ಯದ ಹೊಸದೃಷ್ಟಿಯನ್ನು ಕಾಣಲಾರಂಭಿಸಿದ್ದಾರೆ. ಯಾವುದೇ ರೀತಿಯ ದಬ್ಬಾಳಿಕೆ ಅವರು ಉದ್ದೇಶಿತ ಗುರಿಯತ್ತ ಸಾಗುವುದನ್ನು ತಡೆಯದು” ಎಂಬ ಗಾಂಧಿಯವರ ಹೇಳಿಕೆಯನ್ನು ‘ವಿಶ್ವಕರ್ನಾಟಕ’ ಪ್ರಮುಖವಾಗಿ ಪ್ರತಿಪಾದಿಸಿತು; ಜನವಾಣಿ, ತಾಯಿನಾಡು ಪತ್ರಿಕೆಗಳು ಕೂಡ ಬೆಂಬಲಕ್ಕೆ ನಿಂತವು.
ಬ್ರಿಟಿಷರ ಕಣ್ಣುತಪ್ಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನೇರ ಬೆಂಬಲ ನೀಡಿದ ಭೂಗತ ಪತ್ರಿಕೆಗಳೂ ದೊಡ್ಡ ಸಂಖ್ಯೆಯಲ್ಲಿ ಇವೆ. ಬ್ರಿಟಿಷರು ಪತ್ರಿಕೆಗಳನ್ನು ಹತ್ತಿಕ್ಕಿದಾಗ, ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಿದಾಗ, ರಾತೋರಾತ್ರಿ ಭೂಗತ ಪತ್ರಿಕೆಗಳು ಹುಟ್ಟಿಕೊಂಡು, ಪೊಲೀಸರ ಕಣ್ಣುತಪ್ಪಿಸಿ ಊರಿಂದೂರಿಗೆ ತಲಪಿ ಜನರ ನಡುವೆ ಪ್ರಸಾರವಾಗುತ್ತಿದ್ದವು.
‘ಆಜಾದ್’ ಎಂಬ ಭೂಗತ ಪತ್ರಿಕೆಯೊಂದು “ಸ್ವಾತಂತ್ರ್ಯ ಮತ್ತು ಗುಲಾಮಗಿರಿ ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಿ… ನೀವು ಹೆಚ್ಚುಕಾಲ ನೋಡುವವರಾಗಿಯೇ ಇರಲು ಸಾಧ್ಯವಿಲ್ಲ” ಎಂಬಂತಹ ಮಾತುಗಳಿಂದ ಜನರ ಆತ್ಮಸಾಕ್ಷಿಯನ್ನು ಕೆರಳಿಸಿತು.
ಒಟ್ಟಿನಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪತ್ರಿಕೆಗಳದ್ದು ಮರೆಯಲಾಗದ ಪಾತ್ರವನ್ನು ವಹಿಸಿವೆ.