ಕನ್ನಡ ಚಿತ್ರನಟಿ ಪವಿತ್ರಾ ಲೋಕೇಶ್ ಅವರು ಭಾಷಾ ವಿಭಾಗದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು. ನಟಿ ಪವಿತ್ರಾ ಲೋಕೇಶ್ ಅವರಿಗೆ ಪಿಎಚ್ಡಿ ಮಾಡಬೇಕು ಎಂಬ ಕನಸಿದೆ. ಕೊನೆಗೂ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.
ಈಗ ಕನ್ನಡ ವಿಶ್ವವಿದ್ಯಾಲಯದ ಪಿಎಚ್ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ವಿವಿಯಲ್ಲಿ ವಿಜ್ಞಾನ ವಿಭಾಗದ ಹೊರತಾಗಿ ಭಾಷಾ ವಿಭಾಗ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ವಿಭಾಗ ಸೇರಿ ವಿವಿಧ ವಿಭಾಗಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ವಿಭಾಗಗಳ ಅಡಿ ಸಂಶೋಧನೆಗೆ ಆಸಕ್ತಿ ತೋರಿ 981 ಸ್ಪರ್ಧಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆದಿದ್ದರು. ಆ ಪೈಕಿ ಒಟ್ಟು 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ ಮಾಹಿತಿ ನೀಡಿದ್ದಾರೆ.
ಪವಿತ್ರಾ ಲೋಕೇಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟ ನರೇಶ್ ಜೊತೆ ಅವರು ಮದುವೆ ಆಗಿದ್ದಾರೆ ಎಂದು ಸುದ್ದಿ ಆಗಿತ್ತು. ‘ಮನಸ್ಸಿನ ನಡುವೆ ನಡೆದ ವಿವಾಹ’ ಎಂದು ನರೇಶ್ ಹೇಳಿದ್ದರು.
ಈ ಮೂಲಕ ಇಬ್ಬರೂ ಒಟ್ಟಿಗೆ ಇರುವ ವಿಚಾರವನ್ನು ಅಧಿಕೃತ ಮಾಡಿದ್ದರು. ತಮ್ಮದೇ ಜೀವನದ ಕಥೆ ಇಟ್ಟುಕೊಂಡು ‘ಮತ್ತೆ ಮದುವೆ’ ಸಿನಿಮಾನ ನಿರ್ಮಾಣ ಮಾಡಿದ್ದರು ನರೇಶ್. ಇವರ ಜೀವನದಲ್ಲಿ ನಡೆದ ಘಟನೆಗಳಿಗೆ, ಸಮಾಜಕ್ಕೆ ತಿಳಿದ ವಿಚಾರಗಳಿಗೆ ವಿಸ್ತಾರವಾಗಿ ವಿವರಣೆ ನೀಡಿದಂತೆ ಈ ಸಿನಿಮಾ ಮೂಡಿ ಬಂದಿದೆಯಂತೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮೊದಲು ಥಿಯೇಟರ್ನಲ್ಲಿ ಬಿಡುಗಡೆ ಆದ ಈ ಚಿತ್ರ ಬಳಿಕ ಒಟಿಟಿ ಮೂಲಕ ರಿಲೀಸ್ ಆಗಿ ಯಶಸ್ಸು ಕಂಡಿದೆ.
ಒಟ್ಟಿನಲ್ಲಿ ಪವಿತ್ರ ಲೋಕೇಶ್ ಅವರು ಒಳ್ಳೆಯ ಸಾಧನೆಯನ್ನು ಮಾಡಲು ಹೊರಟಿದ್ದಾರೆ.