ಜೀ ಕನ್ನಡ ವಾಹಿನಿಯಲ್ಲಿ ಒಂಭತ್ತೂವರೆಗೆ ಪ್ರಸಾರ ಆಗುತ್ತಿರುವ ಸೀರಿಯಲ್ ‘ಸೀತಾರಾಮ’. ಇದರಲ್ಲಿ ಸೀತೆ ಮತ್ತು ರಾಮ ನಾಯಕಿ, ನಾಯಕಿ. ಇವರಿಬ್ಬರ ನಡುವೆ ದೇವತೆಯಂತಿರುವ ಪುಟಾಣಿ ಹುಡುಗಿ ಒಂದಿದೆ. ಆ ಪಾತ್ರದ ಹೆಸರು ಸಿಹಿ. ಈ ಪಾತ್ರದ ಹೆಸರಿನ ಹಾಗೆ ಈ ಪುಟಾಣಿ ಮಾತು, ವರ್ತನೆ, ಆಟ, ತುಂಟಾಟ, ಹಠ ಎಲ್ಲವೂ ನೋಡುವವರಿಗೆ ಸಿಹಿಯೇ. ಈ ಪುಟಾಣಿ ಈ ಕಾಲದ ಮಕ್ಕಳ ಪ್ರತಿನಿಧಿ ಅನ್ನೋದಕ್ಕೆ ಒಂದು ಮೇಜರ್ ಅಂಶವನ್ನು ತಂದಿದ್ದಾರೆ. ಅದು ಮತ್ತೇನಲ್ಲ, ಈ ಪಾಪುಗೆ ಶುಗರ್ ಇದೆ. ಈ ಕಾಲದ ಬಹಳಷ್ಟು ಮಕ್ಕಳು ಡಯಾಬಿಟಿಕ್ ಆಗಿರೋದು ಎಲ್ಲರಿಗೂ ಗೊತ್ತಿರೋದು. ಅದರಂತೆ ಈ ಪುಟಾಣಿಯೂ ಡಯಾಬಿಟಿಕ್. ಶುಗರ್ಗೆ ಈಕೆ ಪ್ರತಿದಿನ ಇಂಜೆಕ್ಷನ್ ತಗೋಬೇಕು. ಹಾಗೆ ಇವಳಿಗೆ ಇಂಜೆಕ್ಷನ್ ಕೊಡುವಾಗ ಇವಳ ಅಮ್ಮ ಸೀತಮ್ಮ ಅಳ್ತಾಳೆ, ಅವಳ ಜೊತೆ ಈ ಸೀರಿಯಲ್ ನೋಡೋ ಪ್ರೇಕ್ಷಕರೂ ಕಣ್ಣೀರು ಹಾಕ್ತಾರೆ. ಆದರೆ ಈ ಪುಟಾಣಿ ಮಾತ್ರ ತಾಯಂತೆ ಅಮ್ಮನನ್ನು ಸಮಾಧಾನ ಮಾಡ್ತಾಳೆ.
ಇಂಥದ್ದೊಂದು ಪಾತ್ರಕ್ಕೆ ಬೇರ್ಯಾವ ಮಗು ಬಂದಿದ್ದರೂ ಇಷ್ಟು ಅದ್ಭುತವಾಗಿ ನಟಿಸುತ್ತಿತ್ತೋ ಇಲ್ವೋ ಗೊತ್ತಿಲ್ಲ. ಬಹುಶಃ ಕಷ್ಟ ಅನಿಸುತ್ತೆ. ಆದರೆ ಈ ಪುಟ್ಟ ಕಲಾವಿದೆಯ ಅಭಿನಯಕ್ಕೆ ಮಾರು ಹೋಗದವೇ ಇಲ್ಲ ಅನ್ನಬಹುದು. ಅಂದಹಾಗೆ ಈ ಪಾತ್ರಕ್ಕೆ ಬಣ್ಣ ಹಚ್ಚಿರೋ ಪುಟಾಣಿ ಇಲ್ಲಿಯವಳಲ್ಲ. ಬದಲಿಗೆ ನೇಪಾಳದವಳು. ಇವರ ಪಟ್ಟ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರೋದು ನೇಪಾಳದಲ್ಲಿ. ಇಷ್ಟಕ್ಕೂ ಸಿಹಿಯಾಗಿ ಈಕೆ ಸೀತಾರಾಮ ಪ್ರೊಮೋದಲ್ಲಿ ಕಾಣಿಸಿಕೊಂಡಾಗ ಈ ಮಗುವನ್ನ ಎಲ್ಲೋ ನೋಡಿದ್ದಾವಲ್ಲಾ ಅಂದುಕೊಂಡರು ಒಂದಿಷ್ಟು ಪ್ರೇಕ್ಷಕರು. ಮರುಕ್ಷಣ ಅವರಿಗೆ ಹೊಳೆದ ಹೆಸರೇ ರಿತು ಸಿಂಗ್.
ಹೌದು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡ್ರಾಮಾ ಜ್ಯೂನಿಯರ್ಸ್ನಲ್ಲಿ ರಿತೂ ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು. ರವಿಚಂದ್ರನ್ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದ ಕೇಂದ್ರಬಿಂದು. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾಯಿ ಬಳಿ ದೃಷ್ಟಿ ತೆಗೆಸಿಕೋ ಎಂದು ಕೂಡ ಹೇಳಿದ್ದಾರೆ.
ಅಷ್ಟಕ್ಕೂ ಈ ಪೋರಿ ಈ ಸೀರಿಯಲ್ಗೆ ಆಯ್ಕೆ ಆದದ್ದು ಹೇಗೆ ಅನ್ನೋ ಪ್ರಶ್ನೆ ಕೆಲವರದು. ಡ್ರಾಮಾ ಜ್ಯೂನಿಯರ್ಸ್ನಲ್ಲಿ ಈಕೆಯ ಪರ್ಫಾಮೆನ್ಸ್ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ. ಆದರೆ ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ.