ಮಂಗಳೂರು : ಕ್ಯಾಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ (ಸಿ.ಎಸ್.ಕೆ) ಹಾಗೂ ಸಿ.ಎಸ್.ಕೆ ಸೆಂಟನರಿ ಟ್ರಸ್ಟ್ ಜಂಟಿಯಾಗಿ ನಡೆಸುವ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, 30 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ವಿದ್ಯಾರ್ಥಿವೇತನವನ್ನು ವಿತರಿಸಲಾಗುವುದು. ಈ ಕಾರ್ಯಕ್ರಮವು ಮಂಗಳೂರು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಸೆಂಟಿನರಿ ಆಡಿಟೋರಿಯಂನಲ್ಲಿ 2024, ಜೂನ್ 29ರಂದು ನಡೆಯಲಿದೆ.
ಈ ವಿದ್ಯಾರ್ಥಿವೇತನವನ್ನು ಯಾವುದೇ ಧರ್ಮ, ಭಾಷೆ, ಅಂಕ ಅಥವಾ ಯೋಗ್ಯತೆಯನ್ನು ಪರಿಗಣಿಸದೆ ಅರ್ಜಿದಾರರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ, ಮಂಜೂರು ಮಾಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಸಿ.ಎಸ್.ಕೆಯ ಪೋಷಕರು – ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಅನಿವಾಸಿ ಲೋಕೋಪಕಾರಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ಪುರಸ್ಕೃತರು, ಅವರ ಪೋಷಕರು, ದಾನಿಗಳು ಮತ್ತು ಸಿ.ಎಸ್.ಕೆ./ಸಿ.ಎಸ್.ಕೆ. ಟ್ರಸ್ಟ್’ನ ಪೋಷಕರು ಭಾಗವಹಿಸಲಿದ್ದಾರೆ.
ಕ್ಯಾಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ ಸಂಘಟನೆಯು 1914ರ ಜುಲೈನಲ್ಲಿ ಸ್ಥಾಪನೆಯಾಯಿತು ಮತ್ತು ಈ ವರ್ಷ 110 ವರ್ಷಗಳ ಸಮುದಾಯ ಸೇವೆಯನ್ನು ಪೂರ್ಣಗೊಳಿಸುತ್ತಿದೆ. ಸಿ.ಎಸ್.ಕೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲುಪುವ ಹಾಗೂ ಮಂಗಳೂರಿನ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸಿದೆ. 2013-2014ರ ಸಿ.ಎಸ್.ಕೆಯ ಶತಮಾನೋತ್ಸವದ ಆಚರಣೆಯ ನಂತರ, ಸಿ.ಎಸ್.ಕೆ ಶತಮಾನದ ಟ್ರಸ್ಟ್’ಅನ್ನು ಸ್ವತಂತ್ರ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಮತ್ತು ಸಂಸ್ಥೆಯ ಎಲ್ಲಾ ಕಲ್ಯಾಣ ಚಟುವಟಿಕೆಗಳನ್ನು ಸಿ.ಎಸ್.ಕೆ ಸೆಂಟಿನರಿ ಟ್ರಸ್ಟ್ ಮೂಲಕ ಬೆಂಬಲಿಸಲಾಗುತ್ತದೆ.
ಸಿ.ಎಸ್.ಕೆ ಟ್ರಸ್ಟ್’ನ ಕಾರ್ಯಕ್ರಮಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುವುದನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳಿಂದ, ಒಬ್ಬರು/ಇಬ್ಬರೂ ಪೋಷಕರ ಸಾವು ಅಥವಾ ಭಾರಿ ಆಸ್ಪತ್ರೆ ವೆಚ್ಚ ಅಥವಾ ಉದ್ಯೋಗ ನಷ್ಟಕ್ಕೆ ಬಲಿಯಾದ ಕೋವಿಡ್ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯು ಬೆಂಬಲ ನೀಡುತ್ತಿದೆ. ಕಳೆದ ವರ್ಷ – ಸೈಂಟ್ ಅಗ್ನೇಸ್ ಕಾಲೇಜಿಗೆ ಸೇರಿಕೊಂಡ ಮೂವತ್ತು (30) ಮಣಿಪುರ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಈ ಸಂಸ್ಥೆಯು ಪ್ರಾಯೋಜಿಸಿದೆ.
ಸಂಸ್ಥೆಯ ಇತರ ಕಾರ್ಯಕ್ರಮಗಳು ಯಾವುವು ಎಂದರೆ – ಶಿಕ್ಷಕರ ಬೋಧನೆ ಮತ್ತು ಸಬಲೀಕರಣವನ್ನು ಸುಧಾರಿಸಲು ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು, ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು, ಕಾಲೇಜು ಮಕ್ಕಳಿಗೆ ಪಾದರಕ್ಷೆಗಳನ್ನು ಒದಗಿಸುವುದು, ಗ್ರಾಮೀಣ ಶಾಲೆಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು ಮತ್ತು ರಕ್ತದಾನ, ಅಂಗಗಳು ಮತ್ತು ಸಂಪೂರ್ಣ ದೇಹದ ದಾನವನ್ನು ಉತ್ತೇಜಿಸುವುದು ಮತ್ತು ವಿಶೇಷ ಮಕ್ಕಳು ಅಥವಾ ಅಂಗವಿಕಲ ಅಥವಾ ವೃದ್ಧರ ಆರೈಕೆಯನ್ನು ನೀಡುವ ಸಂಸ್ಥೆಗಳನ್ನು ಬೆಂಬಲಿಸುವುದು ಇತ್ಯಾದಿ.
1927 ರಿಂದ, ಸಿ.ಎಸ್.ಕೆ ತನ್ನ ಮಾಸಿಕ ಪತ್ರಿಕೆ “ಮಂಗಳೂರು”ವನ್ನು ಪ್ರಕಟಿಸುತ್ತಿದೆ, ಇದು ಮಂಗಳೂರಿನ ಸುದ್ದಿಗಳನ್ನು ಓದುಗರಿಗೆ ಒದಗಿಸುವ ಮೂಲಕ ವಿಶ್ವವ್ಯಾಪಿ ಮಂಗಳೂರಿನವರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಪತ್ರಿಕೆ ಪ್ರಸ್ತುತ ತನ್ನ 98 ನೇ ವರ್ಷದ ನಿರಂತರ ಪ್ರಕಟಣೆಯಲ್ಲಿದೆ.
ಸಿ.ಎಸ್.ಕೆ / ಸಿ.ಎಸ್.ಕೆ ಟ್ರಸ್ಟ್ – ವಿಶ್ವವ್ಯಾಪಿ ತನ್ನ 1,200 ಸದಸ್ಯರ ಸದ್ಭಾವನೆ, ಉದಾರತೆ ಮತ್ತು ಸಮುದಾಯದ ಶುಭ ಚಿಂತಕರು ಹಾಗೂ ಉದಾರ ಮನಸ್ಥರರ ಸಹಾಯದಿಂದ ತನ್ನ ವಿವಿಧ ಪರಿಣಾಮಕಾರಿ ದತ್ತಿ ಚಟುವಟಿಕೆಗಳನ್ನು ನಡೆಸುತ್ತಿದೆ.