ಸಂಸತ್ತಿನಲ್ಲಿ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಸೂಚನೆಗೆ ಸೋಲಾಗುತ್ತದೆಂಬುದು ಎಲ್ಲರಿಗೂ ತಿಳಿದ ವಿಷಯವೆ. ಆದರೆ ಅವಿಶ್ವಾಸ ಸೂಚನೆ ಮಂಡಿಸಿದ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಪ್ರಧಾನಿ ಮೋದಿಯವರು ಚರ್ಚೆಗೆಉತ್ತರ ಕೊಡುವಾಗ ಗದ್ದಲ ಮಾಡಿದ್ದನ್ನು ಮತ್ತು ಸೂಚನೆ ಪರವಾಗಿ ಮತ ಹಾಕದೇ ಪಲಾಯನ ಮಾಡಿದ್ದು ಮಾತ್ರ ನಾಚಿಕೆಗೇಡಿತನ. ಅದು ಪ್ರಜಾಸತ್ತೆಗೆ ಅವರು ಮಾಡಿದ ಅವಮಾನ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ. ಇಂಥವರಿಗೆ ಪ್ರಜಾಸತ್ತೆ , ಸಂವಿಧಾನ, ಅಂಬೇಡಕರರ ಬಗ್ಗೆ ಮಾತಾಡುವ ಯಾವ ನೈತಿಕ ಹಕ್ಕು ಇದೆ? ತಮ್ಮ ಮಾತನ್ನು ಆಡಳಿತ ಪಕ್ಷದವರು ಕೇಳಬೇಕು , ಆದರೆ ಸರಕಾರದ ಮಾತನ್ನು ತಾವು ಕೇಳುವುದಿಲ್ಲ ಎನ್ನುವ ರಾಹುಲ ಗಾಂಧಿಯ ಅವಿವೇಕದ ನಡೆ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಗೌರವ ತರುವಂತಹ ವರ್ತನೆಯೇನಲ್ಲ. ಚರ್ಚೆಯಾಗಬೇಕೆಂದವರೂ ತಾವೇ ಮತ್ತು ಚರ್ಚೆಗೆ ಪ್ರಧಾನಿ ಉತ್ತರ ಕೊಡುವಾಗ ಪಲಾಯನ ಮಾಡಿದವರೂ ತಾವೇ. ಏಕೆ? ಮೋದಿಯವರ ಮಾತಿನ ಏಟು ತಾಳಿಕೊಳ್ಳುವ ಯಾವ ಸಾಮರ್ಥ್ಯವೂ ರಾಹುಲ್ ಗಾಗಲೀ ಪ್ರತಿ ಪಕ್ಷದ ಇತರರಿಗಾಗಲೀ ಇಲ್ಲ ಎನ್ನುವುದು ಇದರಿಂದ ಸ್ಪಷ್ಟ. ಅವಿಶ್ವಾಸ ಸೂಚನೆ ಮಂಡಿಸಿದವರೇ ಮತ ಹಾಕದೇ ಓಡಿಹೋಗುವುದು ಹೇಡಿತನದ ಸಂಗತಿ.
ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ಸೂಚನೆ ತರುವುದು, ಚರ್ಚಿಸುವುದು, ಮತಕ್ಕೆ ಹಾಕುವುದು ಹಿಂದಿನ ಎಲ್ಲ ಸರಕಾರಗಳ ಅವಧಿಯಲ್ಲೂ ಇದ್ದದ್ದೇ. ಆದರೆ ಬಹಳ ಹಿಂದೆ ಪ್ರತಿಪಕ್ಷಗಳು ನಡೆದುಕೊಳ್ಳುತ್ತಿದ್ದ ರೀತಿಗೂ ಈಚೆಗೆ ನಡೆದುಕೊಳ್ಳುವ ರೀತಿಗೂ ಸಾಕಷ್ಟು ವ್ಯತ್ಯಾಸ ಇದೆ.ಹಿಂದೆ ಪ್ರಜಾಸತ್ತೆ ಮತ್ತು ಕಾನುನು ಸಂವಿಧಾನಗಳ ಬಗ್ಗೆ ತಿಳಿದುಕೊಂಡವರು, ಅವುಗಳ ಬಗ್ಗೆ ಗೌರವ ಇರುವವರು ಸದನದಲ್ಲಿರುತ್ತಿದ್ದರು. ಸದಸ್ಯರ ವರ್ತನೆ ತೀರಾ ಈಗಿನಷ್ಟು ಅಸಹ್ಯಕರವಾಗಿರುತ್ತಿದ್ದಿಲ್ಲ. ಅಪರೂಪಕ್ಕೆ ಏನಾದರೂ ಗದ್ದಲ ಗೊಂದಲ ಆಗುತ್ತಿತ್ತಾದರೂ ಅದು ಸಭ್ಯತನದ ಗಡಿ ಮೀರುತ್ತಿರಲಿಲ್ಲ. ಆದರೆ ಬರಬರುತ್ತ ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಲ್ಲೂ ಹಣ ಮತ್ತು ಜಾತಿಯ ಪ್ರಭಾವ ಜಾಸ್ತಿಯಾದದ್ದರಿಂದ ಯಾವ ಮೂಲಭೂತ ಅರ್ತೆಗಳಿಲ್ಲದ , ಕೇವಲ ಕೋಟ್ಯಧಿಪತಿಗಳು ಸದನ ಪ್ರಬಮವೇಶ ಮಾಡುತ್ತಿರುವುದೂ ಇಂದಿನ ಹಲವು ಬಗೆಯ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ. ಈ ವಿಷಯದಲ್ಲಿ ಪಕ್ಷ ಭೇದವೇನೂ ಇಲ್ಲ. ಎಲ್ಲ ಪಕ್ಷಗಳಲ್ಲೂ ಅಂತಹದೇ ಪರಿಸ್ಥಿತಿಯಿದೆ. ಇದರಲ್ಲಿ ಬಗೆಬಗೆಯ ಆಸೆ ಆಮಿಷಗಳಿಗೆ ಬಲಿಯಾಗಿ ಅನರ್ಹರಿಗೆ ಮತ ಹಾಕಿ ಆಯ್ಕೆ ಮಾಡುವ ಪ್ರಜೆಗಳ ತಪ್ಪೂ ಇದ್ದೇಇದೆ. ಅಲ್ಲದೆ ಇದನ್ನು ಸರಿಪಡಿಸುವುದೂ ಮತದಾರಪ್ರಜೆಗಳಿಂದ ಮಾತ್ರ ಸಾಧ್ಯ. ಮತದಾರರ ಪ್ರಜ್ಞಾವಂತಿಕೆಯನ್ನು ಅವಲಂಬಿಸಿದ ವಿಷಯ ಇದು.
ಇನ್ನೊಂದು ವರ್ಷದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಆಗ ದೇಶದ ರಾಜಕೀಯದಲ್ಲಿ ಪರಿವರ್ತನೆ ತರುವ ಅವಕಾಶ ಪ್ರಜೆಗಳೆದುರಿಗಿದೆ. ಅದು ಮುಂದಿನ ಐದು ವರುಷಗಳ ಆಡಳಿತದ ಸ್ವರೂಪವನ್ನು ನಿರ್ಧರಿಸಲಿದೆ. ಪ್ರಜೆಗಳ ಬುದ್ಧಿವಂತಿಕೆಯ ಪರೀಕ್ಷೆ ಆಗ ನಡೆಯಲಿದೆ.