ಜೈಪುರ: ವಿವಾಹೇತರ ಸಂಬಂಧ ಹನಿ ಟ್ರ್ಯಾಪ್ಗೆ ತಿರುಗಿ ಬ್ಲಾಕ್ಮೇಲ್ ಮಾಡಿರುವ ಆರೋಪದ ಮೇರೆಗೆ ಐಪಿಎಸ್ ಅಧಿಕಾರಿಯೊಬ್ಬರು ಮಹಿಳಾ ವೈದ್ಯೆಯೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 2021 ರ ಬ್ಯಾಚ್ನ ಐಪಿಎಸ್ ರಾಜೇಶ್ ಕುಮಾರ್ ಮೀನಾ ಅವರು ರಾಜಾಸ್ಥಾನದ ಜೈಪುರದ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ಪರಿಚಿತ ಮಹಿಳಾ ವೈದ್ಯೆ ಪ್ರಿಯಾಂಕಾ ಅವರು ಕಳೆದ ನಾಲ್ಕು ತಿಂಗಳಿಂದ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
“ತಮ್ಮ ಪತ್ನಿಯನ್ನು ಬಿಟ್ಟು ಬಿಡುವಂತೆ ವೈದ್ಯೆ ಪದೇ ಪದೇ ಒತ್ತಡ ಹೇರುತ್ತಿದ್ದಾರೆ ಎಂದು ಅಧಿಕಾರಿ ಐಪಿಎಸ್ ಹೇಳಿದ್ದಾರೆ. ನಿನಗಾಗಿ ನನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ. ನೀನೂ ನಿನ್ನ ಹೆಂಡತಿಯನ್ನು ಬಿಟ್ಟು ನನ್ನನ್ನು ಮದುವೆಯಾಗು,” ಎಂದು ವೈದ್ಯೆ ಒತ್ತಡ ಹಾಕುತ್ತಿರುವುದಾಗಿ ಅಧಿಕಾರಿ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ವೈದ್ಯೆ 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಮೀನಾ ತಿಳಿಸಿದ್ದಾರೆ.
ಮೀನಾ ಅವರು ಈ ಹಿಂದೆ ರಾಜಸ್ಥಾನ ಆಡಳಿತ ಸೇವೆಯಲ್ಲಿ (RAS) ಪ್ರೊಬೇಷನರ್ ಅಧಿಕಾರಿ ಆಗಿ ಸೇವೆ ಸಲ್ಲಿಸುತಿದ್ದಾಗ 2020 ರಲ್ಲಿ ಅವರನ್ನು ಡುಂಗರ್ಪುರ ಜಿಲ್ಲೆಯ ಗಲಿಯಾಕೋಟ್ನ ಉಪವಿಭಾಗಾಧಿಕಾರಿಯಾಗಿ ನೇಮಿಸಲಾಯಿತು, ಅಲ್ಲಿ ಅವರು ಕೋವಿಡ್ ಡ್ಯೂಟಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರನ್ನು ಭೇಟಿಯಾದರು. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯೆ ಕಾರ್ಯನಿರ್ವಹಿಸುತ್ತಿದ್ದು ಆ ಅವಧಿಯಲ್ಲಿ ಇಬ್ಬರೂ ಹತ್ತಿರವಾಗಿ ಮತ್ತು ಸ್ನೇಹಿತರಾದರು. ಆಗಲೇ ವೈದ್ಯೆ ಪ್ರಿಯಾಂಕಾ ಮದುವೆಯಾಗಿದ್ದರು. ಆದರೆ ಆಕೆ ರಾಜೇಶ್ ಅವರಿದ್ದ ಮನೆಗೆ ಬಂದು ಅಡುಗೆ ಮಾಡುತ್ತಿದ್ದಳು. ಇವರಿಬ್ಬರ ಸ್ನೇಹ ಗಾಢವಾಗಿದ್ದು , ಪ್ರಿಯಾಂಕಾ ರಾಜೇಶ್ ಅವರಿಗೆ 3 ಲಕ್ಷ ರೂಪಾಯಿಗಳನ್ನು ಸಾಲವಾಗಿಯೂ ಕೊಟ್ಟಿದ್ದರು. ನಂತರ ಅದನ್ನು ಅವರು ಹಿಂದಿರುಗಿಸಿದ್ದರು.
ನಂತರ ರಾಜೇಶ್ ಅವರನ್ನು ಚಕ್ಸುಗೆ (ಜೈಪುರ ಜಿಲ್ಲೆ) ಎಸ್ಡಿಎಂ ಆಗಿ ವರ್ಗಾಯಿಸಲಾಯಿತು. ಆಗಲೂ ಪ್ರಿಯಾಂಕಾ ಔಷಧಿ ಡಿಸ್ಕ್ರಿಪ್ಷನ್ ನೀಡುವ ನೆಪದಲ್ಲಿ ಅವರನ್ನು ಭೇಟಿಯಾಗುತ್ತಿದ್ದರು. ಸೆಪ್ಟೆಂಬರ್ 2021 ರಲ್ಲಿ, ರಾಜೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು IPS ಗೆ ಆಯ್ಕೆಯಾದರು. ಈ ವಿಷಯ ತಿಳಿದ ಪ್ರಿಯಾಂಕಾ, ಪತಿಯಿಂದ ವಿಚ್ಛೇದನ ಪಡೆದ ನಂತರ ರಾಜೇಶ್ನನ್ನು ಮದುವೆಯಾಗುವಂತೆ ಕೇಳಿದ್ದಾಳೆ. ಆದರೆ ರಾಜೇಶ್ ಗೆ ಪ್ರಿಯಾಂಕಾಳನ್ನು ಮದುವೆ ಆಗಲು ಇಷ್ಟವಿರಲಿಲ್ಲ. ಸ್ನೇಹವು ಮದುವೆಗೆ ಸಂಬಂಧಿಸಿಲ್ಲ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ ಎಂದು ಐಪಿಎಸ್ ಅಧಿಕಾರಿ ಹೇಳಿದ್ದರೆನ್ನಲಾಗಿದೆ.
ರಾಜೇಶ್ ಕಳೆದ ಮೇ 2023 ರಲ್ಲಿ ಕುಟುಂಬದ ಒಪ್ಪಿಗೆಯೊಂದಿಗೆ ಮತ್ತೊಬ್ಬ ಯುವತಿಯನ್ನು ವಿವಾಹವಾದರು. ಆದರೆ ಮದುವೆಯಾದ ನಂತರ ಪ್ರಿಯಾಂಕಾ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದರು. ರಾಜೇಶ್ ಪ್ರಕಾರ, ಜುಲೈನಿಂದ ಒತ್ತಡವು ತೀವ್ರವಾಗಿ ಏರಲು ಪ್ರಾರಂಭಿಸಿತು ಮತ್ತು ತನ್ನ ವಿರುದ್ದ ಅತ್ಯಾಚಾರದ ಎಫ್ಐಆರ್ ದಾಖಲಿಸುವುದಾಗಿ ಪ್ರಿಯಾಂಕ ಬೆದರಿಕೆ ಹಾಕಲು ಪ್ರಾರಂಭಿಸಿದಳು.
ನನಗೆ 50 ಲಕ್ಷ ರೂಪಾಯಿ ಕೊಡಿ ಇಲ್ಲದಿದ್ದರೆ ಅತ್ಯಾಚಾರದ ಮೊಕದ್ದಮೆ ದಾಖಲಿಸುವುದಾಗಿ ಪ್ರಿಯಾಂಕಾ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಎಫ್ಐಆರ್ ದಾಖಲಿಸಲಾಗಿದೆ. ರಾಜೇಶ್ ಕುಮಾರ್ ಮೀನಾ ಸವಾಯಿ ಮಾಧೋಪುರ ದವರಾಗಿದ್ದು ಅವರು 2019 ರಲ್ಲಿ RAS ನಲ್ಲಿ ಮೊದಲ ಬಾರಿಗೆ ಆಯ್ಕೆಯಾದರು ಮತ್ತು 2021 ರಲ್ಲಿ IPS ನಲ್ಲಿ ಆಯ್ಕೆಯಾಗುವ ಮೊದಲು SDO ಗಲಿಯಾಕೋಟ್, ಡುಂಗರ್ಪುರ್ ಮತ್ತು SDM, ಚಕ್ಸು ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಧನ್ಬಾದ್ ನಲ್ಲಿ ಪೆಟ್ರೋಲಿಯಂ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಹಿಂದಿ ಸಾಹಿತ್ಯವನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅವರು 622 ರ್ಯಾಂಕ್ ಗಳಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.