ರಾಜ್ಯ ಸರ್ಕಾರವು ‘ಕಾವೇರಿ-2.0’ ತಂತ್ರಾಂಶವನ್ನು ಪರಿಚಯಿಸಿದ್ದು, ಈ ಮೂಲಕ ಕರ್ನಾಟಕದಲ್ಲಿ ಇನ್ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಲಭವಾಗಲಿದೆ. ಅಲ್ಲದೇ ಇದರ ಅನುಷ್ಠಾನದಿಂದ ಉಪನೋಂದಾಣಿ ಕಚೇರಿಯಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ. ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಹೇಳಿದ್ದಾರೆ.
ಸಾರ್ವಜನಿಕರು ವಿಳಂಬವಿಲ್ಲದೆ ತಮ್ಮ ದಾಸ್ತಾವೇಜುಗಳನ್ನು ನೋಂದಾಣಿ ಮಾಡಿಕೊಳ್ಳಲು ಸಹಕಾರಿಯಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ನೀಡುವ ಸೇವೆಗಳನ್ನು ಸಾರ್ವಜನಿಕರು ಆನ್ಲೈನ್ ಮುಖಾಂತರ ಪಡೆಯಬಹುದಾಗಿದೆ. ರಾಜ್ಯದ 251 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ-2 ಸಾಫ್ಟ್ವೇರ್ ಕಾರ್ಯಾರಂಭ ಮಾಡಿದ್ದು, ಉಳಿದವುಗಳನ್ನು ಈ ವಾರದ ಅಂತ್ಯದೊಳಗೆ ಪೂರೈಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ, ಮೂಲ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ಉಪನೋಂದಾಣಿಧಿಕಾರಿಗೆ ಕಳುಹಿಸಬಹುದಾಗಿದೆ. ಅಧಿಕಾರಿಗಳು ಪರಿಶೀಲಿಸಿದ ನೋಂದಾಣಿಗೆ ತಗಲುವ ವೆಚ್ಚವನ್ನು ಆನ್ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿತ ದಿನಾಂಕದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಾಣಿ ಮಾಡಿಕೊಡಲಾಗುತ್ತದೆ.
ಆಸ್ತಿ ನೋಂದಣಿ ಎನ್ನುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ, ಸರಿಯಾದ ಸಮಯಕ್ಕೆ ನೋಂದಣಿಯಾಗದೆ ಇರುವುದು, ಲಂಚ, ಭ್ರಷ್ಟಾಚಾರ ಇತ್ಯಾದಿಗಳೆಲ್ಲವೂ ಇತ್ತು. ಆದರೆ, ಕಾವೇರಿ-2 ಆನ್ಲೈನ್ ಪ್ರಕ್ರಿಯೆಯಿಂದಾಗಿ ಇಂತಹ ತೊಂದರೆಗಳು ತಪ್ಪಲಿವೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಹೇಗೆ ಕಾರ್ಯನಿರ್ವಹಿಸಲಿದೆ ಕಾವೇರಿ -2 ತಂತ್ರಾಂಶ?
ನೋಂದಣಿ ಪೂರ್ವ, ನೋಂದಣಿ ಮತ್ತು ನೋಂದಣಿ ನಂತರ ಎಂದು ಮೂರು ವಿಭಾಗಗಳಲ್ಲಿ ಕಾವೇರಿ ತಂತ್ರಾಂಶವನ್ನು ವಿಭಜಿಸಲಾಗಿದೆ.
*ಪೂರ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣ ಸಂಪರ್ಕರಹಿತವಾಗಿರುತ್ತದೆ. ಅಂದರೆ, ಸಂಪೂರ್ಣ ಆನ್ಲೈನ್ ಆಗಿರುತ್ತದೆ. ನಾಗರಿಕರು ನೋಂದಣಿ ಕಚೇರಿಗೆ ಆಗಮಿಸುವ ಮೊದಲೇ ಎಲ್ಲಾ ಮಾಹಿತಿಗಳನ್ನು ತಂತ್ರಾಂಶದಲ್ಲಿ ನಮೂದಿಸಿರಬೇಕು. ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿರಬೇಕು. ಆನ್ಲೈನ್ ಮೂಲಕವೇ ಉಪನೋಂದಣಾಧಿಕಾರಿಗಳ ಪರಿಶೀಲನೆಗೆ ಸಲ್ಲಿಸಲಾಗುತ್ತದೆ. ಇದನ್ನು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಶುಲ್ಕವನ್ನು ಪಾವತಿಸಲು ಸೂಚಿಸಲಾಗುತ್ತದೆ. ಬಳಿಕ ನಾಗರಿಕರು ತಮ್ಮ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಉಪನೋಂದಣಾಧಿಕಾರಿ ಕಚೇರಿಗೆ ಹೋಗಬಹುದು.
*ನೋಂದಣಿ ಹಂತವಾಗಿದೆ. ಸರಕಾರದ ಪ್ರಕಾರ ಇದು ಕೇವಲ 10 ನಿಮಿಷಗಳ ಕೆಲಸ. ಹೋಗಿ ತಮ್ಮ ಭಾವಚಿತ್ರ ಮತ್ತು ಹೆಬ್ಬೆರಳಿನ ಗುರುತನ್ನು ಸೆರೆಹಿಡಿಯುವ ಸಲುವಾಗಿ ನಾಗರಿಕರು ನಿಗದಿತ ದಿನಾಂಕ, ಸಮಯದಂದು ಉಪ ನೋಂದಣಿ ಕಚೇರಿಗೆ ಹೋಗಿಬರಬೇಕು.
*ನೋಂದಣಿ ಪ್ರಕ್ರಿಯೆ ಪೂರ್ತಿಯಾದ ಬಳಿಕ ಡಿಜಿಟಲ್ ಸಹಿ ಮಾಡಿದ ದಸ್ತಾವೇಜನ್ನು ನಾಗರಿಕರ ಲಾಗಿನ್ ಮತ್ತು ಅವರ ಡಿಜಿಲಾಕರ್ ಖಾತೆಗೆ ಕಳುಹಿಸಲಾಗುತ್ತದೆ. ನೋಂದಾಯಿತ ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಖಾತೆ ಬದಲಾವಣೆಗಾಗಿ ಕಳುಹಿಸಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.