ಪಶ್ಚಿಮಘಟ್ಟದ ಹಸಿರು ಸೆರಗಿನ ಮರೆಯಾಚೆ, ನಿತ್ಯಹರಿದ್ವರ್ಣ ಕಾಡುಗಳಿಂದ ಸುತ್ತುವರೆದ, ಫಲವತ್ತಾದ ಕಪ್ಪು-ಕೆಂಪು ಮಣ್ಣಿನ ಭೂಮಿ ಹೊಂದಿದ, ಪೌರಾಣಿಕ ಮಹತ್ವ ಪಡೆದ ವೈವಿದ್ಯಮಯ ಸಂಸ್ಕೃತಿಯ ಸೌರಭ ಸೂಸುವ, ವಿವಿಧ ರಾಜಮನೆತನಗಳಾದ ಶಾತವಾಹನ, ಕದಂಬ, ಚಾಳುಕ್ಯ, ರಾಷ್ಟ್ರಕೂಟ, ಹೊಯ್ಸಳ, ಕಲಚೂರಿ, ವಿಜಯನಗರ, ಬಹಮನಿ, ಆದಿಲಶಾಹಿ, ರಟ್ಟರು, ಗೋವೆ ಕದಂಬರು ಮುಂತಾದವರ ರಾಜಕೀಯ ಪೋಷಣೆಯ ತಂಪು ತೊಟ್ಟಿಲಲ್ಲಿ ಬೆಳೆದ ಸಮೃದ್ಧ ನಾಡು ಬೆಳಗಾವಿ, ತಿಲಕರ ಕೆಚ್ಚೆದೆಯ ಸ್ವಾತಂತ್ರ್ಯ ಸಿಂಹಗರ್ಜನೆಯ ಮಾರ್ದನಿಗೆ ದನಿಗೂಡಿಸಿ, ಮಹಾತ್ಮ ಗಾಂಧೀಜಿಯವರ ಪಾದಸ್ಪರ್ಶದ ಮತ್ತು ಬೆಳಗಾವಿ ಕಾಂಗ್ರೆಸ ಅಧಿವೇಶನದಲ್ಲಿ ಸ್ವಾತಂತ್ರ್ಯದ ಕನಸು ಸಾಕಾರ ಗೊಳಿಸುವ ಪಣತೊಟ್ಟ ಪುಣ್ಯಭೂಮಿ. ಇಂದು ಕರ್ನಾಟಕದ ಎರಡನೆಯ ರಾಜಧಾನಿ, ಕುಂದಾನಗರಿ ಎಂಬ ಖ್ಯಾತಿಯ ಬೆಳಗಾವಿ: ಗೋವೆಯ ಆಧುನಿಕತೆ, ಮಹಾರಾಷ್ಟ್ರದ ಶಿಸ್ತು ಮತ್ತು ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕದ ಉದಾರತೆಯ ತ್ರಿವೇಣಿ ಸಂಗಮವಾಗಿ ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಒಲವು ನೆಲವುಗಳನ್ನು ಮೈಗೂಡಿಸಿಕೊಂಡ ಪವಿತ್ರನಾಡು. ಎರಡು ಸಹಸ್ರಮಾನಗಳ ಆಗು ಹೋಗುಗಳನ್ನು ಮೈಗೂಡಿಸಿಕೊಂಡ ನಿರಂತರವಾದ ಉಜ್ವಲ ಭವ್ಯ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಬೀಡು.
ವೇಣುಗ್ರಾಮ, ಇಕ್ಷುಗ್ರಾಮ, ಬೆಳಗುಗ್ರಾಮ, ಮುಝಾಫರ ನಗರ, ಮುಸ್ತಾಫಾಬಾದ, ಅಜಂನಗರ ಮುಂತಾದ ವಿವಿಧ ಹೆಸರುಗಳಿಂದ ಶಾಸನೊಲ್ಲೇಖಿತವಾದ ಬೆಳಗಾವಿಯಲ್ಲಿ ಇತಿಹಾಸದ ಪ್ರಾರಂಭಯುಗದಿಂದ ರಾಜಕೀಯ ನಕ್ಷೆಯಲ್ಲಿ ಹಲವಾರು ರಾಜಮನೆತನಗಳು ಹೆಸರು ನೋಂದಾಯಿಸಿವೆ. ಸ್ಥಳೀಯ ಸಂಸ್ಥಾನಗಳಿಂದ ಹಿಡಿದು, ರಾಜ್ಯ ಸಾಮ್ರಾಜ್ಯಗಳ ಆಳ್ವಿಕೆಯಲ್ಲಿ ಅನೇಕ ಏರಿಳಿತಗಳನ್ನು ಕಂಡುಂಡ ಬೆಳಗಾವಿ ಪ್ರದೇಶ ಅತ್ಯಂತ ರೋಮಾಂಚಕಾರಿ ಇತಿಹಾಸ ಹೊಂದಿದೆ. ಕರ್ನಾಟಕದ ಮೇರು ರಾಜಮನೆತನಗಳೆನಿಸಿದ ಬಹುತೇಕ ರಾಜವಂಶಜರು ಬೆಳಗಾವಿ ಜಿಲ್ಲೆಯ ಒಂದಲ್ಲೊಂದು ಪ್ರದೇಶದ ಮೇಲೆ ತಮ್ಮ ಸ್ವಾಮ್ಯತೆಯನ್ನು ಹೊಂದಿದ್ದರು. ಹೀಗಾಗಿ ಐತಿಹಾಸಿಕತೆ ಬೆಳಗಾವಿ ಪ್ರದೇಶದಲ್ಲಿ ಹಾಸುಕೊಕ್ಕಾಗಿದೆ.
ಇತಿಹಾಸದ ರಸ ನಿಮಿಷಗಳ ಅಮೃತದೌತಣವನ್ನು ಸವಿಸುವ ಬೆಳಗಾವಿ ನಿಸರ್ಗ ಸೌಂದರ್ಯದ ಖನಿ ಸಮೃದ್ಧ ಬೆಳಗಾವಿ, ನಾಡು ಕರ್ನಾಟಕದ ವಾಯುವ್ಯಕ್ಕಿದ್ದು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಜಿಲ್ಲೆಯಲ್ಲಿ ಹೇರಳ ಪ್ರಮಾಣದಲ್ಲಿ ಬೆಳೆಯುವ ಕಬ್ಬಿನಿಂದಾಗಿ ಅನೇಕ ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿ: ಬೆಳಗಾವಿಗೆ ಸಕ್ಕರೆ ಜಿಲ್ಲೆ ಎಂಬ ಖ್ಯಾತಿ ಒದಗಿಸಿವೆ. ಕಬ್ಬು, ಹತ್ತಿ, ಭತ್ತ, ತಂಬಾಕು ಈ ಪ್ರದೇಶದ ಮುಖ್ಯ ಬೆಳೆಗಳು.
ವಿದೇಶಿಯರು ಕಂಡಂತೆ ಬೆಳಗಾವಿ ಜಿಲ್ಲಾ ಪ್ರದೇಶ
ಬೆಳಗಾವಿ ಜಿಲ್ಲಾ ಪ್ರದೇಶಕ್ಕೆ ಅನೇಕ ವಿದೇಶಿ ಪ್ರವಾಸಿಗರು ಬಂದಿದ್ದು ಈ ಪ್ರದೇಶವನ್ನು ನೋಡಿ, ಆಶ್ಚರಚಕಿತರಾಗಿ ಇದರ ಕುರಿತು ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. ಗ್ರೀಸಿನ ಟಾಲೆಮಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಸಿಯನ್ನು ‘ಪಸಗೆ’ ಎಂಬ ಹೆಸರಿನಿಂದ ಉಲ್ಲೇಖಿಸುತ್ತ. ಇದು ಕರ್ನಾಟಕದ ಖ್ಯಾತ ಐದು ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳಲ್ಲಿ ಒಂದು ಎಂದು ತಿಳಿಸುತ್ತಾನೆ. ಈ ಪ್ರದೇಶವನ್ನು ಕ್ರಿಶ. 1720 ರಲ್ಲಿ ಸಂದರ್ಶಿಸಿದ ಕ್ಯಾಪ್ಟನ್ ಮೂ ಇದು ವಿಶಾಲವಾದ ನಗರವಾಗಿದ್ದು, ಇಲ್ಲಿಯ ವಿಸ್ತಾರವಾದ ಮಾರುಕಟ್ಟೆ ಕುರಿತು ಬರದಿದ್ದಾನೆ.
ಕ್ರಿ.ಶ. 1680 ರಲ್ಲಿ ಗೋವಾ ಮಾರ್ಗವಾಗಿ ಬೆಳಗಾವಿಗೆ ಬಂದ ಇಂಗ್ಲೀಷ ಭೂಗೋಳಶಾಸ್ತ್ರಜ್ಞ ಒಗ್ಲಿಬಿ ಬೆಳಗಾವಿಯ ನಗರ ಯೋಜನೆಯ ಕುರಿತು ಮೆಚ್ಚುಗೆ ಮಾತು ಬರೆದಿದ್ದಾನೆ. ಕ್ರಿ.ಶ. 1827 ರಲ್ಲಿ ಕ್ಯಾಪ್ಟನ್ ಕ್ಯೂನ್ ಜಿಲ್ಲೆಯ ಚಿಕ್ಕೋಡಿ ಪ್ರದೇಶವನ್ನು ‘ಚಿಕೋರಿ’ ಎಂದು ವರ್ಣಿಸುತ್ತ ‘ಕೊಲ್ದಾಪೂರಕ್ಕೆ ಸೇರಿದ ನಗರ ಎಂದು ವಿವರಿಸುತ್ತಾನೆ. ಜರ್ಮನ ಪ್ರವಾಸಿ ಮ್ಯಾಂಡೆಲ್ಲ ಕ್ರಿ.ಶ. 1639ರಲ್ಲಿ ಅಥಣಿ ಪ್ರದೇಶಕ್ಕೆ ಭೇಟಿ ಕೊಟ್ಟು ‘ಅಟೆನಿ ಬಿಜಾಪೂರ ಗೋವಾ ಪ್ರದೇಶಗಳ ನಡುವಿನ ಮಾರುಕಟ್ಟೆ ನಗರ’ ಎನ್ನುತ್ತಾನೆ. ಒಗ್ಲಿಬಿ ಕೂಡ ‘ಅಥಣಿ ವ್ಯಾಪಾರಿ ಕೇಂದ್ರ’ ಎಂದಿದ್ದಾನೆ. ಕ್ರಿ.ಶ. 1675 ರಲ್ಲಿ ಇಲ್ಲಿ ಸಂದರ್ಶಿಸಿದ ಬ್ರಿಟಿಷ್ ಪ್ರವಾಸಿ, ಪ್ರಯ ಅಥಣಿಯ ರಾಜಕೀಯ ಸ್ಥಿತಿ ಕುರಿತು ಬರೆದಿದ್ದಾನೆ. 1788 ರ ಹೊತ್ತಿಗೆ ಅಥಣಿಯಲ್ಲಿ ಇಂಗ್ಲೀಷರು ಮಳಿಗೆ ಸ್ಥಾಪಿಸದ್ದನ್ನು ಕಿನ್ನೆಲೆ ಉಲ್ಲೇಖಿಸುತ್ತಾನೆ. ಕ್ಯಾಪ್ಟನ ಮೂರ್ ಕೂಡ ಇಲ್ಲಿಯ ವ್ಯಾಪಾರಿ ವಹಿವಾಟು ಕುರಿತು ಬರೆದಿದ್ದಾನೆ. ಕ್ರಿಶ. 1583 ರಲ್ಲಿ ಬೆಳಗಾವಿ ನಗರವನ್ನು ಸಂದರ್ಶಿಸಿದ ರಾಲ್ಪ ಫಿಲ್ಟ’ ‘ಬಿಜಾಪೂರ- ಗೋವಾ ನಡುವಿನ ದೊಡ್ಡ ವ್ಯಾಪಾರ ಕೇಂದ್ರ’ ಎಂದಿದ್ದಾನೆ. ಓಗ್ಲಿಬಿ ‘ಬೆಳಗಾವಿ, ಚಾಮೋರ (ಶಾಹಾಪೂರ) ನಾಲ್ಕು ಪ್ರಮುಖ ಯೋಜಿತ ಪ್ರದೇಶಗಳಲ್ಲಿ ಒಂದು ಎಂದಿದ್ದಾನೆ. ಕ್ರಿ.ಶ. 1695 ರಲ್ಲಿ ಭೇಟಿಕೊಟ್ಟ ಇಟಲಿಯ ಕಾಲೇರಿ ಎಂಬಾತ ಬೆಳಗಾವಿ, ಜನನಿಬಿಡ ನಗರವಾಗಿದ್ದು ದೊಡ್ಡ ಮಾರುಕಟ್ಟೆಯನ್ನೊಳಗೊಂಡ ವ್ಯಾಪಾರಿ ಕೇಂದ್ರ’ ಎಂದು ವರ್ಣಿಸುತ್ತಾನೆ.
ಪೌರಾಣಿಕ ಮಹತ್ವ
ಬೆಳಗಾವಿ ಪೌರಾಣಿಕವಾಗಿಯೂ ಮಹತ್ವವಾದ ಪ್ರದೇಶ. ಇಲ್ಲಿರುವ ಅನೇಕ ಸ್ಥಳಗಳಲ್ಲಿ ಪೌರಾಣಿಕ ಪರಂಪರೆ ಹಾಸುಹೊಕ್ಕಾಗಿದೆ. ಜಿಲ್ಲೆಯಲ್ಲಿ ರಾಮಾಯಣಕ್ಕೆ ಸಂಬಂಧಿತ ಐದು ರಾಮತೀರ್ಥಗಳಿವೆ ಪರಸಗಡದ ಕೋಟೆಯ ಒಳಗೆ ರಾಮದುರ್ಗ ಸಮೀಪದ ಮುಲ್ಲೂರು, ಬೆಳಗಾವಿ ಹತ್ತಿರದ ಕಣಬರ್ಗಿ, ಅಥಣಿ ತಾಲೂಕಿನ ರಾಮತೀರ್ಥ ಮತ್ತು ಖಾನಾಪೂರ ತಾಲೂಕಿನ ಹಲಸಿಯಲ್ಲಿ. ಐತಿಹ್ಯದಂತೆ ಈ ಸ್ಥಳಗಳು ಶ್ರೀರಾಮಚಂದ್ರನ ಚರಣಧೂಳಿಯಿಂದ ಪಾವನಗೊಂಡಿದ್ದು ಶ್ರೀರಾಮ ಪ್ರತಿಷ್ಠಾಪಿಸಿದ ರಾಮಲಿಂಗಗಳನ್ನು ಒಳಗೊಂಡಿವೆ. ರಾಮದುರ್ಗದ ಕೋಟೆ ರಾಮನಿಗೆ ಸಂಬಂಧಿತವಾಗಿದ್ದು, ಸುರೇಬಾನದ ಶಬರಿಕೊಳ್ಳ ಭಕ್ತಿ ಶಬರಿ ರಾಮನಿಗೆ ಕಾಲದ್ದು. ಬೋರೆ ಹಣ್ಣು ಅರ್ಪಿಸಿದ ಸ್ಥಳ, ಸೊಗಲಮುನಿ ತಪಸ್ಸನ್ನಾಚರಿಸಿದ ಸೊಗಲ್ ಮತ್ತು ದಕ್ಷಬ್ರಹ್ಮಯಜ್ಞವನ್ನು ನೆರವೇರಿಸಿದ ಪವಿತ್ರಭೂಮಿ ಕೃಷ್ಣಯ ತಟದ ಯಡೊರನಲ್ಲಿ ದಕ್ಷ ಬ್ರಹ್ಮನಿಂದ ನಿರ್ಮಿತವಾದುದೆಂದು ಹೇಳಲಾದ ವೀರಭದ್ರ ದೇವಾಲಯವಿದೆ. * ಋಷ್ಯಶೃಂಗಮುನಿಯ ವಾಸಸ್ಥಾನ ಶಿರಸಂಗಿಯಾದರೆ, ತಂದೆ ಜಮದಗ್ನಿಯ ಆಜ್ಞೆಯಂತೆ ತಾಯಿ ರೇಣುಕೆಯ ಶಿರದನ ಮಾಡಿದ ಪರಶುರಾಮನ ಭೂಮಿ ಯಲ್ಲಮ್ಮನ ಗುಡ್ಡ, ರೇಣುಕೆಯನ್ನು ಸವದತ್ತಿ ಯಲ್ಲಮ್ಮ ಎಂದು ಆರಾಧಿಸಲಾಗುತ್ತಿದೆ. ಕೃಷ್ಣನೆ ಮನದನ್ನೆ ಮತ್ತು ಜಾಂಬವಂತನೆ ಮಗಳಾದ ಜಾಂಬವಂತೆಯ ಸ್ಥಳ ಬೆಳಗಾವಿ ಸಮೀಪದ ಜಾಂಬೋಟಿ, ಪ್ರಾಗೈತಿಹಾಸಿಕ ಸೂಚಿಸುತ್ತದೆ. ನೆಲೆಯಾದ ಅಥಣಿ ತಾಲೂಕಿನ ಸಪ್ತಸಾಗರ ಸಪ್ತ ಋಷಿಗಳ ನೆಲೆವೀಡಾಗಿದ್ದು, ಇಲ್ಲಿ ಕಾಣಸಿಗುವ ಬೂದಿದಿಣ್ಣೆಗಳು. ಋಷಿಗಳು ನೆರವೇರಿಸಿದ ಯಜ್ಞಗಳಿಂದ ನಿರ್ಮಾಣವಾದುವೆಂಬ ಪ್ರತೀತಿ ಇದೆ. ಮುಗುಟಖಾನ ಹುಬ್ಬಳ್ಳಿಯ ನರಸಿಂಹ ದೇವಾಲಯವಿರುವ ಸ್ಥಳ ಚವಣ ಋಷಿ ಯಜ್ಞ ಕೈಗೊಂಡ ಭೂಮಿ. ಕೊಣ್ಣೂರು ಹುಕ್ಕೇರಿ, ನಿರ್ವಾಣಹಚ್ಚಿ ಈ ಪ್ರದೇಶಗಳಲ್ಲಿರುವ ಬೃಹತ ಗೋರಿಗಳು ಪಾಂಡವ ಮನೆಗಳೆಂಬ ಪ್ರತೀತಿಯಿದೆ.