ದೇಶದಲ್ಲಿ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಕೇಂದ್ರ ಸರ್ಕಾರವು ಸಿದ್ದತೆ ನಡೆಸುತ್ತಿದ್ದು, ಇದರ ಭಾಗವಾಗಿ 22ನೇ ಭಾರತೀಯ ಕಾನೂನು ಆಯೋಗವು ಸಾರ್ವಜನಿಕರು ಹಾಗೂ ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅಧ್ಯಕ್ಷತೆಯ 22ನೇ ಭಾರತೀಯ ಕಾನೂನು ಆಯೋಗವು 30 ದಿನಗಳಲ್ಲಿಅಭಿಪ್ರಾಯ ಸಲ್ಲಿಸಬೇಕು ಎಂದು ನಾಗರಿಕರಿಗೆ ಸೂಚಿಸಿದೆ. ಜನರು ಆಯೋಗದ membersecretary-lci@gov.in ಇಮೇಲ್ಗೆ ತಮ್ಮ ಅಭಿಪ್ರಾಯ ಕಳುಹಿಸಬಹುದಾಗಿದೆ.
ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಯೇ ಸಿದ್ದ ಎಂದು ಹೇಳಿದ್ದಾರೆ. ಇದೀಗ ಕಾನೂನು ಆಯೋಗವು ಮತ್ತೆ ಹೊಸದಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.
ಈ ಮೊದಲು 21ನೇ ಕಾನೂನು ಆಯೋಗವು ಸಮಸ್ಯೆ ಪರಿಶೀಲಿಸಿತ್ತು. ಆಗ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ಆದರೆ ವಿಷಯದ ಕುರಿತು ವಿವಿಧ ನ್ಯಾಯಾಲಯಗಳ ಆದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು 22ನೇ ಕಾನೂನು ಆಯೋಗವು ಮತ್ತೊಮ್ಮೆ ಚರ್ಚಿಸಲು ಹೊಸದಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.
ಏನಿದು ಏಕರೂಪ ನಾಗರಿಕ ಸಂಹಿತೆ?
ಯಾವುದೇ ಜಾತಿ, ಧರ್ಮ, ಪ್ರಾಂತ್ಯ ಭೇದ ಮಾಡದೆ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ. ಸಂವಿಧಾನದ ಆರ್ಟಿಕಲ್ 44ರ ಆಶಯ ಕೂಡಾ ಇದೇ ಆಗಿದೆ. ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಅನ್ನುವುದು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಹೀಗಾಗಿ, ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರೋದಿಲ್ಲ. ಹಾಗೆ ನೋಡಿದರೆ, ದೇಶದಲ್ಲಿ ಸದ್ಯ ಕ್ರಿಮಿನಲ್ ಕಾನೂನು ಎಲ್ಲರಿಗೂ ಒಂದೇ ಇದೆ. ಕ್ರಿಮಿನಲ್ಗಳಿಗೆ ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಶಿಕ್ಷೆ ನೀಡಲಾಗುತ್ತದೆ. ಆದ್ರೆ, ವೈಯಕ್ತಿಕ ಕಾನೂನು, ಸಿವಿಲ್ ಕಾನೂನಿನಲ್ಲಿ ಮಾತ್ರ ಬದಲಾವಣೆ ಇದೆ.
ಏಕರೂಪ ನಾಗರಿಕ ಸಂಹಿತೆ ಬೇಕು ಎನ್ನುವವರ ವಾದ ಏನು?
ಎಲ್ಲರಿಗೂ ಎಲ್ಲ ಕಾನೂನುಗಳೂ ಒಂದೇ ಇದ್ದಾಗ ದೇಶದಲ್ಲಿ ಸಮಗ್ರತೆ, ಏಕತೆ ಹಾಗೂ ಸಮಾನತೆ ಮೂಡುತ್ತದೆ. ಈ ಮೂಲಕ ದೇಶದಲ್ಲಿ ಶಾಂತಿ ನೆಲೆಸುತ್ತೆ. ಒಂದೊಂದು ಧರ್ಮದ ಜನತೆ ಒಂದೊಂದು ಕಾನೂನು ಪಾಲಿಸೋದು ಸಂವಿಧಾನದ ಆರ್ಟಿಕಲ್ 44ರ ಆಶಯಕ್ಕೆ ವಿರುದ್ಧವಾಗುತ್ತದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ, ಒಂದು ಧರ್ಮದ ಜನತೆ ಮತ್ತೊಂದು ಧರ್ಮವನ್ನು ಅನುಸರಿಸುವ ಜನರ ಜೊತೆ ಬೆರೆಯಲು, ವ್ಯವಹಾರ ಮಾಡಲು, ಬಾಂಧವ್ಯ ವೃದ್ದಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಎಲ್ಲ ಧರ್ಮಗಳ ನಡುವೆ ಸಮನ್ವಯತೆ ಏರ್ಪಡುತ್ತೆ. ಜೊತೆಗೆ ಎಲ್ಲಾ ಧರ್ಮಗಳ ಜನರಿಗೂ ಒಂದೇ ಕಾನೂನು ಇದ್ದರೆ ಪ್ರಜಾಪ್ರಭುತ್ವ ಕೂಡಾ ಬಲವಾಗುತ್ತೆ ಎನ್ನುವುದು ಏಕರೂಪ ನಾಗರಿಕ ಸಂಹಿತೆ ಬೇಕು ಎನ್ನುವವರ ವಾದವಾಗಿದೆ.
ಏಕರೂಪ ನಾಗರಿಕ ಸಂಹಿತೆ ಬೇಡ ಎನ್ನುವವರ ವಾದ ಏನು?
ಸಂವಿಧಾನದ ಆರ್ಟಿಕಲ್ 25 ಹಾಗೂ 28ರ ಅಡಿ ದೇಶದ ಯಾವುದೇ ಪ್ರಜೆ ತನ್ನ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡುತ್ತೆ. ವಿವಾಹ, ವಿಚ್ಛೇದನ ಸೇರಿದಂತೆ ಹಲವು ಆಚರಣೆಗಳು ಧರ್ಮದಲ್ಲೇ ಇವೆ ಅನ್ನೋದು ಕೆಲವರ ವಾದ. ಜೊತೆಗೆ ಏಕರೂಪ ಕಾನೂನು ಎಂಬ ಸುಧಾರಣೆಯನ್ನು ಅಳವಡಿಕೆ ಮಾಡಿಕೊಳ್ಳೋಕೆ ದೇಶದ ಜನ ಮಾನಸಿಕವಾಗಿ ಇನ್ನೂ ಸಿದ್ಧರಾಗಿಲ್ಲ . ಒಂದು ವೇಳೆ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿ ಮಾಡಿದರೆ, ವೈವಿಧ್ಯತೆ ಇರೋದಿಲ್ಲ, ಸಮಾಜದಲ್ಲಿ ಅಸ್ಥಿರತೆ ಮೂಡಬಹುದು. ಎಲ್ಲಕ್ಕಿಂತಾ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ತನ್ನ ಧಾರ್ಮಿಕ ಆಚರಣೆ, ಸಂಸ್ಕೃತಿ ಹಾಗೂ ಸಂಪ್ರದಾಯ ಪಾಲನೆ ಮಾಡೋದಕ್ಕೆ ಅವಕಾಶ ನೀಡದೇ ಇದ್ದರೆ ಅವರಿಗೆ ಪ್ರತ್ಯೇಕತೆಯ ಭಾವ ಮೂಡುತ್ತೆ, ಅಭದ್ರತೆ ಸೃಷ್ಟಿಯಾಗುತ್ತೆ ಎನ್ನುವುದು ಏಕರೂಪ ನಾಗರಿಕ ಸಂಹಿತೆ ಬೇಡ ಎನ್ನುವವರ ವಾದವಾಗಿದೆ.