ಭಾರತದಲ್ಲಿ ಆಡಳಿತವೆಂಬುದು ಅತ್ಯಂತ ಪುರಾತವಾದ ಸಂಸ್ಥೆಯಾಗಿದೆ ಇದನ್ನು ಕೇವಲ ರಾಜ ಮಹಾರಾಜರ ಕಾಲದಿಂದಲ್ಲ, ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಸ್ವಯಂ ಆಡಳಿತದ ಕುರುಹುಗಳು ಕಂಡುಬರುತ್ತವೆ. ಅದು ಮುಂದುವರೆದಂತೆ ಹರಪ್ಪ ನಾಗರಿಕತೆಯಲ್ಲಿ ಅಷ್ಟಾಗಿ ರಾಜಕೀಯ ಸಂಸ್ಥೆಗಳು ಕಂಡು ಬರದಿದ್ದರೂ ಉತ್ತರ ವೈದಿಕಕಾಲ ಮತ್ತು ಪೂರ್ವ ವೈದಿಕ ಕಾಲದಲ್ಲಿ ಗ್ರಾಮ ಆಡಳಿತದ ಬಗ್ಗೆ ಮಾಹಿತಿಯಿದೆ ಮತ್ತು ಮೌರ್ಯರ ಕಾಲದಲ್ಲಿ ಅನೇಕ ಸಣ್ಣಪುಟ್ಟ ಗಣರಾಜ್ಯಗಳು ಅಸ್ಥಿತ್ವದಲ್ಲಿದ್ದವು ಮತ್ತು ಗುಪ್ತರ ಕಾಲದಲ್ಲಿಯೂ ಸ್ವಯಂ ಆಡಳಿತವು ಅಲ್ಲಲ್ಲಿ ಇತ್ತು ಎಂಬುದು ಇತಿಹಾಸದಲ್ಲಿ ಕಂಡುಬರುತ್ತದೆ. ಇದಕ್ಕೆ ಪೂರಕ ಕುರುಹಾಗಿ
‘ಭಾರತವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದ್ದು, ಇದು ಪ್ರಜಾಪ್ರಭುತ್ವದ ತಾಯಿಯಾಗಿದೆ. ಇದಕ್ಕೆ ಹಲವಾರು ಐತಿಹಾಸಿಕ ಉಲ್ಲೇಖಗಳಿವೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಉತ್ತರಮೇರೂರ ಶಾಸನ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಗ್ರಾಮಸಭೆಗೆ ಸ್ಥಳೀಯ ಸಂವಿಧಾನದಂತಿರುವ ಈ ಶಾಸನದಲ್ಲಿ ಶಾಸನಸಭೆಗೆ ಸದಸ್ಯರ ಆಯ್ಕೆ, ಅರ್ಹತೆ, ಅನರ್ಹತೆ ಮುಂತಾದವುಗಳ ಕುರಿತು ವಿವರಿಸಲಾಗಿದೆ. ಇದು ಪ್ರಜಾಪ್ರಭುತ್ವ ಆಡಳಿತದ ಮಾದರಿಯೇ ಎಂಬ ಚರ್ಚೆಗಳನ್ನೂ ಶಾಸನವು ಹುಟ್ಟುಹಾಕಿದೆ.
ಉತ್ತರಮೇರೂರಿನಲ್ಲಿ ಹಲವಾರು ಶಾಸನಗಳಿದ್ದು ಅದರಲ್ಲಿ ಒಂದು ಶಾಸನವು ‘ಪರಾಂತಕ 1’ (ಕ್ರಿ.ಶ. 907-953) (ಪರಾಂತಕ ಚೋಳ-1 ಎಂಬ ಚೋಳ ವಂಶಕ್ಕೆ ಸೇರಿದ ರಾಜ) ಆಳ್ವಿಕೆಯದ್ದಾಗಿದೆ. ಇವು ಗ್ರಾಮದ ಸ್ವಯಂ ಆಡಳಿತದ ಬಗ್ಗೆ ವಿವರಣೆಯನ್ನು ನೀಡುತ್ತವೆ.
ಈ ಶಾಸನದಲ್ಲಿ ಸ್ಥಳೀಯ ಸಭೆ, ಅಂದರೆ ಗ್ರಾಮ ಸಭೆ ಕುರಿತ ಕಾರ್ಯನಿರ್ವಹಣೆಯ ವಿವರಗಳನ್ನು ನೀಡುತ್ತದೆ. ಈ ಸಭೆಯು ಬ್ರಾಹ್ಮಣರಿಂದ ಕೂಡಿದ ಒಂದು ಸಭೆಯಾಗಿತ್ತು. ಅಲ್ಲದೆ, ವಿವಿಧ ವಿಷಯಗಳಿಗೆ ವಿಶೇಷವಾದ ಸಮಿತಿಗಳನ್ನೂ ಹೊಂದಿತ್ತು. ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತಿತ್ತು, ಅಗತ್ಯವಿರುವ ಅರ್ಹತೆಗಳು, ಅವರ ಕರ್ತವ್ಯಗಳು, ಜವಾಬ್ದಾರಿಗಳು ಮತ್ತು ಅವರನ್ನು ತೆಗೆದುಹಾಕಬಹುದಾದ ಸಂದರ್ಭಗಳನ್ನು ಉತ್ತರಮೇರೂರಿನ ಶಾಸನವು ವಿವರಿಸುತ್ತದೆ.
ಅಧಿಕಾರಿಯ ಆಯ್ಕೆ ಹೇಗೆ ?
ಸಭೆಯ ಅಸ್ಥಿತ್ವವು ಹೇಗಿರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಗ್ರಾಮವನು ಹಲವು ವಿಭಾಗದಲ್ಲಿ ವಿಂಗಡನೆ ಮಾಡಿ ಅಲ್ಲಿಯ ಜನಗಳ ಮೂಲಕ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಎಂದು ಶಾಸನದಲ್ಲಿ ಹೇಳಲಾಗಿದೆ. ಇಂತಹ ಪ್ರತಿನಿಧಿಗೆ ಅರ್ಹತೆಗಳು ಏನಾಗಿರಬೇಕು ಎಂಬುದನ್ನು ಕೂಡ ಅದು ವಿವರಿಸುತ್ತದೆ. ನಿಗದಿತ ಪ್ರಮಾಣದಲ್ಲಿ ಜಮೀನಿನ ಮಾಲೀಕತ್ವ ಹೊಂದುವುದು, ಮತ್ತು ಸ್ವತಃ ಮನೆಯನ್ನು ಹೊಂದಿರುವುದು ಅಗತ್ಯವಾಗಿತ್ತು. 35 ರಿಂದ 70 ವರ್ಷ ವಯಸ್ಸಿನವರಾಗಿರುವುದು ಹಾಗೂ ಮಂತ್ರಗಳನ್ನು ಮತ್ತು ಬ್ರಾಹ್ಮಣಕಗಳನ್ನು ತಿಳಿದುಕೊಳ್ಳುವುದು ವೈದಿಕ ಆಚರಣೆಗಳನ್ನು ಪ್ರೋತ್ಸಾಹಿಸುವುದು ಮತ್ತು ಅವುಗಳ ಜ್ಞಾನವನ್ನು ಸಂಗ್ರಹಿಸುವುದು ಅಗತ್ಯವಾಗಿತ್ತು. ಪ್ರತಿನಿಧಿಯು ಕನಿಷ್ಠ ಪಕ್ಷ ಒಂದು ವೇದ ಮತ್ತು ನಾಲ್ಕು ಭಾಷ್ಯಗಳನ್ನು ಕಲಿತಿದ್ದರೆ ಭೂಮಿಯ ಮಾಲೀಕತ್ವದ ಅರ್ಹತೆ ಕುರಿತು ವಿನಾಯಿತಿ ನೀಡುವುದನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ. ಪ್ರತಿನಿಧಿಗಳು ವ್ಯವಹಾರದಲ್ಲಿ ಚೆನ್ನಾಗಿ ಪರಿಣತರು ಮತ್ತು ಸದ್ಗುಣಶೀಲರು ಆಗಿರಬೇಕು ಎಂಬುದು ಕೂಡ ಅರ್ಹತೆಗಳಲ್ಲಿ ಸೇರಿದೆ.
ಅಧಿಕಾರಿಗಳ ಅನರ್ಹತೆಯ ನಿಯಮ
ಈ ಶಾಸನದ ಮತ್ತೊಂದು ವಿಶೇಷವೆಂದರೆ ಅಧಿಕಾರಿಗಳನ್ನು ಅನರ್ಹಗೊಳಿಸುವ ಅಂಶಗಳನ್ನು ಪಟ್ಟಿ ಮಾಡುತ್ತದೆ. ಈ ಹಿಂದೆ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಲೆಕ್ಕವನ್ನು ಸಲ್ಲಿಸದಿರುವುದು; ಐದು ’ಮಹಾ ಪಾಪಗಳಲ್ಲಿ’ ಮೊದಲ ನಾಲ್ಕರಲ್ಲಿ (ಬ್ರಾಹ್ಮಣನನ್ನು ಕೊಲ್ಲುವುದು, ಮದ್ಯಪಾನ, ಕಳ್ಳತನ ಮತ್ತು ವ್ಯಭಿಚಾರ) ಯಾವುದಾದರೂ ಒಂದನ್ನು ಎಸಗುವುದು; ಬಹಿಷ್ಕೃತರೊಂದಿಗೆ ಸಂಬಂಧ ಹೊಂದುವುದು ಮತ್ತು ನಿಷೇಧಿತ ಭಕ್ಷ್ಯಗಳನ್ನು ತಿನ್ನುವುದು ಇದರಲ್ಲಿ ಸೇರಿವೆ. ಈ ಎಲ್ಲ ಅರ್ಹತೆಗಳನ್ನು ಹೊಂದಿರುವವರು ಮತ್ತು ಇಚ್ಛೆಯುಳ್ಳ ಎಲ್ಲರೂ ತಮ್ಮ ಹೆಸರನ್ನು ತಾಳೆಗರಿಯ ಮೇಲೆ ಬರೆದು ಅರ್ಜಿ ಸಲ್ಲಿಸಬೇಕು ಅನಂತರ ಪುರೋಹಿತರ ಮುಖಾಂತರ ಚೀಟಿಯನ್ನು ಎತ್ತುವುದರ ಮುಖಾಂತರ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದರು.
ಕಾರ್ಯಭಾರದ ಹಂಚಿಕೆ
ಸಭಾದೊಳಗಿನ ಹಲವಾರು ಪ್ರಮುಖ ಸಮಿತಿಗಳನ್ನು ರಚನೆ ಮಾಡಲಾಗಿತ್ತು ಎಂದು ಶಾಸನವು ತಿಳಿಸುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಉದ್ಯಾನ, ಕೆರೆ , ನ್ಯಾಯ ಮೇಲ್ವಿಚಾರಣೆ, ನೇಮಕಾತಿ ಹಾಗೂ ಆಯ್ಕೆ, ದೇವಸ್ಥಾನದ ಚಿನ್ನದ ಆಭರಣಗಳ ಸಮಿತಿ ಮತ್ತು ವಾರ್ಷಿಕ ಸಮಿತಿ (ಪೂರ್ವಾನುಭವ ಮತ್ತು ಸಾಕಷ್ಟು ಜ್ಞಾನವುಳ್ಳವರ ಕಾರ್ಯಕಾರಿ ಸಮಿತಿ), ಈ ರೀತಿಯ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿತ್ತು.
ಈ ಸಮಿತಿಯ ಕಾರ್ಯಾವಧಿಯು 360 ದಿನಗಳವರೆಗೆ ಇರುತ್ತಿತ್ತು. ದುಷ್ಕೃತ್ಯ ಅಥವಾ ಅವ್ಯವಹಾರ ಮತ್ತು ಯಾವುದೇ ರೀತಿಯ ತಪ್ಪು ಎಸಗಿರುವ ಸಮಿತಿಯ ಸದಸ್ಯರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಹಣಕಾಸಿನ ನಿರ್ವಹಣೆಗೆ ಶಾಸನವು ಒತ್ತು ನೀಡುತ್ತದೆ. ಯಾವುದೇ ಅವ್ಯವಹಾರ ಕಂಡುಬಂದರೆ ಸಭಾ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದೂ ಹೇಳಲಾಗಿದೆ.
ಜಗತ್ತಿಗೆ ಜ್ಞಾನದ ಬೆಳಕನ್ನು ನೀಡುತ್ತಿರುವ ಭಾರತವೇ ಪ್ರಜಾಪ್ರಭುತ್ವದ ತಾಯಿ ಎಂದು ಸಾಕಾರಗೊಳಿಸಲು ಈ ಉತ್ತರ ಮೇರೂರು ಶಾಸನವು ಸಾಕಷ್ಟು ಪುಷ್ಟಿಯನ್ನು ನೀಡುತ್ತದೆ.