ಸಹನಾ ವಿಜಯಕುಮಾರ್ ಅವರು ಬರೆದ ಕಶೀರ ಕಾದಂಬರಿ ನಾನು ಇತ್ತೀಚೆಗೆ ಓದಿದ ಒಂದೊಳ್ಳೆ ಪುಸ್ತಕವಾಗಿದೆ. ಕಶೀರ ಎಂದರೆ ಕಾಶ್ಮೀರ. ಕಾಶ್ಮೀರದ ತಲ್ಲಣಗಳನ್ನು ಕಾಲ್ಪನಿಕ ಪಾತ್ರಗಳ ಮೂಲಕ ಅನಾವರಣಗೊಳಿಸುವ ಅವರ ಕಲೆಗಾರಿಕೆಯನ್ನು ತುಂಬು ಹೃದಯದಿಂದ ಕನ್ನಡ ಸಾಹಿತ್ಯಲೋಕಕ್ಕೆ ಸ್ವಾಗತಿಸಬೇಕಿದೆ. ಪಾತ್ರಗಳು ಕಾಲ್ಪನಿಕವಾದರೂ ವಿವರಗಳು ನೈಜ ಘಟನೆಗಳಿಂದಲೇ ಹುಟ್ಟಿಬಂದಂಥವುಗಳು ಎನ್ನುವ ಸತ್ಯ ಕಾದಂಬರಿ ಓದುವ ಎಲ್ಲ ಸಹೃದಯ ಮನಸ್ಸುಗಳನ್ನು ಘಾಸಿಗೊಳಿಸುವುದು ಮಾತ್ರ ಸುಳ್ಳಲ್ಲ.
ಕಾಶ್ಮೀರದ ಇತಿಹಾಸವನ್ನು ದೊಡ್ಡ ದೊಡ್ಡ ವಿದ್ವಾಂಸರು, ರಾಜರು ಶ್ರೀಮಂತಗೊಳಿಸಿದ್ದಾರೆ. ಸಂಸ್ಕೃತದ ಶ್ರೇಷ್ಠ ಗ್ರಂಥಗಳು ಈ ನೆಲದಲ್ಲಿ ರಚಿಸಲ್ಪಟ್ಟಿವೆ. ಒಂದು ಕಾಲಕ್ಕೆ ಕ್ಷಾತ್ರ ತೇಜಸ್ಸಿನಿಂದ ಕಂಗೊಳಿಸಿದ, ಆದಿ ಶಂಕರಾಚಾರ್ಯರು ಸಂಚಾರ ಮಾಡಿದ, ವಿದ್ಯಾಯ ಅಧಿದೇವತೆ ಶಾರದೆಯ ಆವಾಸವಾಗಿದ್ದ ಕಾಶ್ಮೀರವಿಂದು ದಿನ ಬೆಳಗಾದರೆ ಗುಂಡಿನ ಮೊರೆತ, ಬಾಂಬುಗಳ ಸಿಡಿತ, ಉಗ್ರರ ದಾಳಿಗಳಿಂದ ತತ್ತರಿಸಿಹೋಗಿದೆ. ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಕಾಶ್ಮೀರಿ ಪಂಡಿತರು ತಮ್ಮ ಮೂಲಸ್ಥಾನವನ್ನು, ಅಲ್ಲಿರುವ ತಮ್ಮ ದೊಡ್ಡ ದೊಡ್ಡ ಮನೆಗಳನ್ನು ರಾತ್ರೋರಾತ್ರಿ ಖಾಲಿಮಾಡಿ ದೇಶದ ನಾನಾಭಾಗಗಳಿಗೆ, ವಿದೇಶಗಳಿಗೆ ಓಡಿ ಹೋಗಿದ್ದಾರೆ. ತಮ್ಮ ಜೀವನದಲ್ಲಿ ಇನ್ನೊಮ್ಮೆ ಎಂದಾದರೂ ತಾವು ಉಟ್ಟಿ ಬೆಳೆದ ನೆಲವನ್ನು ಮತ್ತೆ ನೋಡುತ್ತೇವೆ ಎನ್ನುವ ಭ್ರಮೆ ಕೂಡ ಇಲ್ಲದೇ, ಬೇರುಗಳನ್ನು ಕಳೆದುಕೊಂಡು ಎಲ್ಲೋ ಬದುಕುತ್ತಿದ್ದಾರೆ. ಕೆಲವೇ ಕೆಲವು ಗಟ್ಟಿ ಮತ್ತು ಬೇರೆಡೆ ಹೋಗಲಿಚ್ಛಿಸದ ಹಿಂದುಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸರಕಾರ ನಿರ್ಮಿಸಿಕೊಟ್ಟ ದುಸ್ಥಿತಿಯಲ್ಲಿರುವ ತಾತ್ಕಾಲಿಕ ಮನೆಗಳಲ್ಲಿ ಬದುಕುತ್ತಿದ್ದಾರೆ. ಆದರೆ ಅಲ್ಲಿ ಕೂಡ ಅವರ ಪ್ರಾಣಗಳಿಗೆ ಯಾವುದೇ ಭರವಸೆ ಇಲ್ಲ ಎನ್ನುವ ಕಟುಸತ್ಯ ಅವರಿಗೆ ಗೊತ್ತಿದೆ. ಹಾಗಾಗಿಯೇ ಕಾದಂಬರಿಯಲ್ಲಿ ಬರುವ ಸಂಜೇವ ಮತ್ತವರ ಹೆಂಡತಿ ಆರತಿ ಕೌಲ್ ಇನ್ನೂ ಅಲ್ಲೇ ಇದ್ದಾರೆ. ತಾನು ತನ್ನ ನಾಡನ್ನು ತೊರೆದು ಬೇರೆಡೆ ಹೋಗಲಾರೆನೆಂಬ ಹಟಕ್ಕೆ ಬಿದ್ದು ಬಿದ್ದು ಕೊನೆಗೂ ಅನಿವಾರ್ಯವಾಗಿ ಹೋಗಲು ತಯಾರಾದಾಗ ತನ್ನ ಮಗನನ್ನೇ ಕಳೆದುಕೊಳ್ಳುವ ಕೈಲಾಶ್ ಮಾಸ್ಟರ್ ತಮ್ಮೆದುರೇ ತಮ್ಮ ಪ್ರಾಯಕ್ಕೆ ಬಂದ ಮಗಳನ್ನು ಎಳೆದುಕೊಂಡು ಹೋಗುವ ಕ್ರೂರ ಮತಾಂಧರನ್ನೆದುರಿಸಲಾರದೇ ಎಲ್ಲ ಅನಾಹುತಗಳನ್ನು ಕಣ್ಣಾರೆ ನೋಡಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾರೆ. ಇದನ್ನೆಲ್ಲ ನೋಡಲಾಗದ ಅವರ ಪತ್ನಿ ಶಿವನ ಪಾದ ಸೇರುತ್ತಾರೆ. ಇನ್ನೊಂದು ಕಡೆ ನಲವತ್ತು ವರ್ಷಗಳಿಂದ ದೇವಸ್ಥಾನದ ಪೂಜೆಯನ್ನು ಮಾಡಿಕೊಂಡೇ ಇರುವ ಹೃದಯನಾಥ ಪಂಡಿತರು. ತಾನು ಆದರಿಸಿದ ಕೈಲಾಶ್ ಮಾಸ್ಟರಜಿಯ ಮಗ ಮತ್ತು ಮಗಳನ್ನು ತನ್ನದೇ ಮಗ ಮತಾಂಧನಾಗಿ ಕೊಲೆ ಮಾಡಿದಾಗಲೂ ಧರ್ಮದ ಕೆಲಸವೆಂದು ಸುಮ್ಮನಿರುವ ಬಶೀರ ಅಹಮ್ಮದ ಕೊನೆಗೆ ಜೆಹಾದನ ದಾವಾನಲಕ್ಕೆ ತನ್ನಿಬ್ಬರೂ ಗಂಡುಮಕ್ಕಳನ್ನೂ ಆಹುತಿಗೈಯ್ಯುತ್ತಾನೆ. ಆಗ ಅವನಿಗೆ ಪಶ್ಚಾತ್ತಾಪ ಆಗಿ ಒಂದಾದರೂ ಒಳ್ಳೆಯ ಕೆಲಸ ಮಾಡುತ್ತಾನೆ. ಪಂಡಿತರ ತಾತ್ಕಾಲಿಕ ಮನೆಗಳ ಮೇಲೂ ಪ್ರಚೋದಿತ ಗುಂಪುಗಳು ದಾಳಿ ನಡೆಸಲು ಮಾಡಿರುವ ಸಂಚನ್ನು ತಿಳಿಸಿ ಅವರು ಅಲ್ಲಿಂದ ಪಾರಾಗಿ ಹೋಗಿ ಜೀವರಕ್ಷಣೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದರ ಮೂಲಕ ಪ್ರಾಯಶ್ಚಿತ ಮಾಡಿಕೊಳ್ಳುತ್ತಾನೆ. ಈ ಎಲ್ಲ ಪಾತ್ರಗಳಿಗೆ ಒಂದು ಸ್ಪಷ್ಟವಾದ ನಿಲುವು, ಧ್ಯೇಯ, ಧೈರ್ಯ ತುಂಬುವ ಸೂತ್ರಧಾರನಾಗಿ ನರೇಂದ್ರನ ಪಾತ್ರ ಅತ್ಯಂತ ಸಶಕ್ತವಾಗಿ ಇಡೀ ಕಾದಂಬರಿಯುದ್ದಕ್ಕೂ ನಮ್ಮನ್ನಾವರಿಸಿಕೊಳ್ಳುತ್ತದೆ.
ಭಾರತೀಯ ಸೇನೆಯೂ, ದಾರಿತಪ್ಪಿದ ಕಾಶ್ಮೀರಿ ಯುವಸಮುದಾಯವೂ, ಎಲ್ಲ ಗೊತ್ತಿದ್ದೂ ಕುರುಡು ಜಾಣತನವನ್ನು ಪ್ರದರ್ಶಿಸುವ ಹಿರಿತಲೆಗಳೂ ಅನಿವಾರ್ಯ ಪಾತ್ರಗಳಾಗಿಯೇ ಕಾದಂಬರಿಯುದ್ದಕ್ಕೂ ಇರುತ್ತಾರೆ. ವಿದ್ಯೆ ತಲೆಗೆ ಹತ್ತದ ಯುವಕ ಮುಷ್ತಾಕ್ ದಾರಿ ತಪ್ಪಿದ ಕಾಶ್ಮೀರಿ ಯುವಸಮುದಾಯದ ಪ್ರತಿನಿಧಿಯಾಗಿದ್ದರೆ, ಎಮ್.ಎ. ಮಾಡಿ ಟ್ಯಾಕ್ಸಿ ನಡೆಸುವ ವಿಚಾರವಂತ ಯುವಕ ಸಲೀಂ ಪ್ರಗತಿ ಬೇಕು, ದ್ವೇಷ ಸಾಕು ಎನ್ನುವ ಮನಸ್ಥಿತಿಯ ಶಿಕ್ಷಿತ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಾನೆ. ಆದರೆ ಸಲೀಂನಂಥ ಯುವಕರ ಬಾಯಿಗೆ ಪಟ್ಟಿ ಕಟ್ಟಿಟ್ಟುಬಿಟ್ಟಿದ್ದಾರೆ ಮತಾಂಧ ಧರ್ಮಗುರುಗಳು. ಇಂದು ಕಾಶ್ಮೀರ ಒಂದೆರಡು ಸಮಸ್ಯೆಗಳಲ್ಲ, ಇಂಥ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗಿಹೋಗಿದೆ. ಕಥೆಯ ಮೂಲಕ ಅದರ ತೀವ್ರತೆಯನ್ನು ಓದುಗರಿಗೆ ಫೀಲ್ ಮಾಡಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ತಮ್ಮ ನಿಲುವು ಮತ್ತು ವಾದಗಳನ್ನು ಮಂಡಿಸುವಾಗ ಕಾದಂಬರಿಕಾರ್ತಿ ಸಾಕಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದಾರೆ. ಇಂಥದೊಂದು ಕಾದಂಬರಿಯನ್ನು ಬರೆಯುವುದೆಂದರೇನು, ಅದರ ಪರಿಣಾಮಗಳೇನು ಎನ್ನುವುದರ ಸ್ಪಷ್ಟ ಕಲ್ಪನೆ ಸಹನಾ ಅವರಿಗಿದೆ. ಹಾಗಾಗಿಯೇ ಮುಸ್ಲಿಂ ಧರ್ಮದ ಪ್ರತಿಯೊಂದು ನೀತಿ-ನಿಯಮಗಳನ್ನು ಹೇಳಬೇಕಾದರೆ ಅಲ್ಲಿಯೇ ಕಂಸಗಳಲ್ಲಿ ಕುರಾನಿನ ಮತ್ತು ಇತರ ಗ್ರಂಥಗಳ ಪುಟಸಂಖ್ಯೆ ಮತ್ತಿತರ ವಿವರಗಳನ್ನು ಕೊಟ್ಟೇ ಇದ್ದಾರೆ. ಇಲ್ಲವಾದರೆ ಹೀಗೆ ಹೇಳಿಯೇ ಇಲ್ಲ ಎಂದು ಮೊಂಡು ಹಿಡಿಯುವ ಅನೇಕರು ನಮ್ಮ ಮಧ್ಯೆಯೇ ಇರುವುದು ನಮಗೆಲ್ಲ ಗೊತ್ತೇ ಇರುವ ವಿಚಾರ. ಅವರ ಅಧ್ಯಯನಶೀಲತೆ ಮತ್ತು ಪ್ರತ್ಯಕ್ಷದರ್ಶಿಯಾಗಿ ಕಾಶ್ಮೀರವನ್ನು ಸುತ್ತಾಡಿ ಅಲ್ಲಿನ ಹಿಂದುಗಳ ಬವಣೆಯನ್ನು ಕಣ್ಣಾರೆ ಕಂಡು ದಾಖಲಿಸುವ ಕ್ರಮ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದಲ್ಲದೇ ತಮ್ಮ ಕೆಲಸದ ಮೇಲಿರುವ ಅವರ ಶ್ರದ್ಧೆ ಮತ್ತು ಕರ್ತವ್ಯಪ್ರಜ್ಞೆಯನ್ನೂ ತೋರಿಸುತ್ತದೆ. ಮುನ್ನುಡಿಯಲ್ಲಿ ಡಾ. ಎಸ್.ಎಲ್.ಭೈರಪ್ಪನವರು ಹೇಳಿದಂತೆ ಕಾದಂಬರಿಯ ಪಾತ್ರಗಳು ಮತ್ತು ಅವನ್ನೆಲ್ಲ ಒಳಗೊಂಡ ಒಂದು ಕಥೆಯ ರೂಪದಲ್ಲಿ ಹೆಣೆಯುವಲ್ಲಿ ನೈಜ ವಿವರಗಳನ್ನು ಕಲೆಯ ಹದಕ್ಕೆ ಕರಗಿಸಿ ಬೆಸೆಯುವಲ್ಲಿ ಸಹನಾ ಅವರು ಯಶಸ್ವಿಯಾಗಿದ್ದಾರೆ. ಓದಿ ಮುಗಿಸಿದ ಮೇಲೂ ಪಾತ್ರಗಳು ನಮ್ಮನ್ನು ಕಾಡುತ್ತವೆ. ವಿವರುಗಳು ರಾತ್ರಿಯ ನಿದ್ದೆಯಲ್ಲೂ ಬೆನ್ನು ಹತ್ತುತ್ತವೆ.
ನಮ್ಮ ಬುದ್ಧಿಜೀವಿಗಳು, ಪ್ರಗತಿಪರರು ಎಂದೂ ಮೆಚ್ಚದ ಇಂಥ ವಸ್ತುಗಳನ್ನೊಳಗೊಂಡ ಕಾದಂಬರಿಗಳು ಸುದ್ದಿ ಮಾಡುವುದಕ್ಕೆ ಅವರಿಂದಲೇ ಆಳಲ್ಪಡುವ ಮಾಧ್ಯಮಗಳು ಬಿಡುವುದೇ ಇಲ್ಲವಾದರೂ ಸತ್ಯಶೋಧನೆಯಲ್ಲಿ ತೊಡಗಿರುವ ಜಾಣ ಸಾಮಾನ್ಯಮನುಷ್ಯ ಇಂಥ ಕಾದಂಬರಿಗಳನ್ನು ಇಷ್ಟಪಟ್ಟು ಕೊಳ್ಳುತ್ತಾನೆ ಮತ್ತು ಓದುತ್ತಾನೆ ಎನ್ನುವುದಕ್ಕೆ ಕಾದಂಬರಿಯು ಬಿಡುಗಡೆಯಾದ ವರ್ಷದಲ್ಲೇ (೨೦೧೮) ಮೂರು ಮುದ್ರಣಗಳನ್ನು ಕಂಡಿರುವುದೇ ಸಾಕ್ಷಿ. ಸಹನಾ ಅವರಿಂದ ಇನ್ನೂ ಅನೇಕ ಪ್ರಬುದ್ಧ ಕಾದಂಬರಿಗಳನ್ನು ಕನ್ನಡಿಗರು ನಿರೀಕ್ಷಿಸಬಹುದು ಎನ್ನುವುದು ನನ್ನ ನಂಬಿಕೆ.