ಗ್ರಾಮೀಣ ಕ್ರೀಡೆಗಳಾದ ಕಂಬಳ, ಜಲ್ಲಿಕಟ್ಟು ಹಾಗೂ ಎತ್ತಿನಗಾಡಿ ಓಟಕ್ಕೆ ಅನುಮತಿಯನ್ನು ನೀಡಿ ಸುಪ್ರೀಂ ಕೊರ್ಟ್ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.
ಸುಪ್ರೀಂಕೋರ್ಟಿನ ತೀರ್ಪಿನಿಂದ ತುಳುನಾಡಿನ ಜಾನಪದ, ಸಾಂಸ್ಕೃತಿಕ ಪರಂಪರೆ ಭಾಗವಾಗಿರುವ ಕಂಬಳಕ್ಕೆ ಇದ್ದ ಆತಂಕವೂ ದೂರವಾಗಿದೆ. ಕರಾವಳಿಯಲ್ಲಿ ನಡೆಯುವ ಕಂಬಳಕ್ಕೂ ಅಲ್ಲಿನ ಜನಜೀವನಕ್ಕೂ ಅವಿಭಾವ ನಂಟಿದೆ. ತುಳುನಾಡಿನಲ್ಲಿ ಓಟದ ಕಂಬಳಕ್ಕೆ 800 ವರ್ಷಗಳ ಇತಿಹಾಸ ಇದೆ. ತುಳುನಾಡಿನ ಶಾಸನ, ಪಾಡ್ದನಗಳಲ್ಲಿ ಕಂಬಳದ ಉಲ್ಲೇಖವಿದೆ.
ಕರಾವಳಿಯ ಕಂಬಳದ ಮೇಲೆ ಪೆಟಾ ಪ್ರಾಣಿ ದಯಾ ಸಂಘ ಕೆಲವು ವರ್ಷಗಳಿಂದ ತಗಾದೆಯನ್ನು ತೆಗೆದಿತ್ತು. ಕಂಬಳ ಕ್ರೀಡೆಯು ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಆಶಯಗಳಿಗೆ ಮತ್ತು ಇತರ ಹಲವು ಕಲಂಗಳಿಗೆ ವಿರುದ್ಧವಾಗಿದೆ ಎಂದು ಪೆಟಾ ವಾದಿಸುತ್ತಾ ಬಂದಿದೆ . ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎಂಬ ವಿಚಾರವನ್ನಿಟ್ಟುಕೊಂಡು ಪೆಟಾ ಕಂಬಳದ ನಿಷೇಧಕ್ಕೆ ಪ್ರಯತ್ನಿಸುತ್ತಿತ್ತು.
2014ರಲ್ಲಿ ಮೊದಲ ಬಾರಿ ಕಂಬಳ ನಿಷೇಧಗೊಂಡಿತು. ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಂಬಳಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದವು. 2017ರಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ 6 ತಿಂಗಳ ಕಾಲ ಕಂಬಳಕ್ಕೆ ಅವಕಾಶ ಕಲ್ಪಿಸಿದ ಬೆನ್ನಿಗೆ, ತಿದ್ದುಪಡಿ ಮಸೂದೆ ಮಂಡಿಸಿ ಸದನದ ಅಂಗೀಕಾರ ಪಡೆದು ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು.
ಇದರೊಂದಿಗೆ ಕಂಬಳ ಪುನರಾರಂಭಗೊಂಡು, 2017ರಿಂದ ನಿರಂತರವಾಗಿ ನಡೆಯುತ್ತಿದೆ. ಈಗ ಸಾಂವಿಧಾನಿಕ ಮಾನ್ಯತೆಯೂ ಕಾಯ್ದೆಗೆ ದೊರೆತಿದ್ದು, ಕಂಬಳಕ್ಕಿದ್ದ ಆತಂಕ ಶಾಶ್ವತವಾಗಿ ದೂರವಾದಂತಾಗಿದೆ. ಸುಪ್ರೀಂ ಕೋರ್ಟು ತೀರ್ಪು ಲಕ್ಷಾಂತರ ಕಂಬಳಾಭಿಮಾನಿಗಳಲ್ಲಿ ಸಂತಸವನ್ನು ಉಂಟುಮಾಡಿದೆ.
ಇನ್ನೂ ತಮಿಳುನಾಡು ಮತ್ತು ಮಹಾರಾಷ್ಟ್ರದ ಗ್ರಾಮೀಣ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಎತ್ತಿಗಾಡಿ ಓಟಕ್ಕೆ ಸುಪ್ರಿಂ ಮಾನ್ಯತೆ ಕೊಡುವ ಮೂಲಕ ಗ್ರಾಮೀಣ ಸಂಪ್ರದಾಯಿಕ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ.