ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಮತದಾರರ ಒಲವಿನ ಬಗ್ಗೆ ದೇಶದ ವಿವಿಧ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿತ್ತು. ಇದರಿಂದ ಕಾಂಗ್ರೆಸ್ ನಾಯಕರೂ ಆನಂದತುಂದಿಲರಾಗಿದ್ದರು. ಆದರೆ ಇಂದು ಬಂದಿರುವ ಸಮೀಕ್ಷಾ ವರದಿಯು ಕಾಂಗ್ರೆಸ್ ಗೆ ಚಿಂತೆ ಉಂಟು ಮಾಡಿದರೆ ಬಿಜೆಪಿಗೆ ಸಂತೋಷವನ್ನುಂಟು ಮಾಡಿದೆ.
ಇದೀಗ ಪುನಃ ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲು ಸಾದ್ಯವಿಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸಿವೋಟರ್ ಮತ್ತು ಮ್ಯಾಟ್ರಿಜ್ ನ್ಯೂಸ್ ಕಮ್ಯುನಿಕೇಷನ್ಸ್ ಸಂಸ್ಥೆಗಳು ರಾಜ್ಯದ 224 ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿದ್ದು ಸುಮಾರು ೭೫ ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯವನ್ನ ಸಂಗ್ರಹಿಸಿ ನಡೆಸಲಾದ ಸಮೀಕ್ಷೆ ಇದಾಗಿದೆ. ಸಮೀಕ್ಷೆ ಪ್ರಕಾರ ರಾಜ್ಯದ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವ ಸಾಧ್ಯತೆ ಇದೆ. ಈ ಬಾರಿಯು ಅತಂತ್ರ ಫಲಿತಾಂಶ ಉಂಟಾಗಲಿದ್ದು ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ ಎನ್ನಲಾಗಿದೆ.
ಸಮೀಕ್ಷಾ ವರದಿಯ ಪ್ರಕಾರ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಾಗಿದೆ. ಮತಹಂಚಿಕೆ ಪ್ರಮಾಣದ ವಿಚಾರಕ್ಕೆ ಬಂದರೆ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಳೆದ ಬಾರಿಗಿಂತ ತುಸು ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಬಿಜೆಪಿಯ ಮತ ಹಂಚಿಕೆ ಕಳೆದ ಬಾರಿಗಿಂತ ತುಸು ಕಡಿಮೆ ಇರುವ ಸಾಧ್ಯತೆ ಇದೆ.
ಪ್ರತಿಪಕ್ಷ ಕಾಂಗ್ರೆಸ್ ಶೇ 40 ರಷ್ಟು ಮತಹಂಚಿಕೆ ಪಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ಶೇ 33.9 ಮತ್ತು ಜೆಡಿಎಸ್ ಶೇ 18.8 ರಷ್ಟು ಮತ ಹಂಚಿಕೆ ಪಡೆಯಲಿದೆ ಎಂದು ‘ ಸಮೀಕ್ಷಾ ವರದಿ ತಿಳಿಸಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 38ರ ಮತ ಹಂಚಿಕೆ ಹೊಂದಿತ್ತು. ಈ ಬಾರಿ ಅದು ಶೇಕಡಾ 40 ಕ್ಕೆ, ಅಂದರೆ ಶೇ 2 ರಷ್ಟು ಹೆಚ್ಚಳ ದಾಖಲಿಸಲಿದೆ. ಬಿಜೆಪಿಯ ಮತಹಂಚಿಕೆ ಪ್ರಮಾಣವು ಶೇಕಡಾ 36 ರಿಂದ ಶೇಕಡಾ 33.9 ಕ್ಕೆ, ಅಂದರೆ ಶೇ -2.2 ರಷ್ಟು ಇಳಿಕೆಯಾಗಬಹುದು ಎಂದು ಸಿವೋಟರ್ ಹೇಳಿದೆ. ಏತನ್ಮಧ್ಯೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನ ಮತಗಳನ್ನು ಶೇಕಡಾ 0.8 ರಷ್ಟು, ಅಂದರೆ ಶೇ 18 ರಿಂದ 18.8 ಕ್ಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಪಕ್ಷೇತರರ ಮತ ಹಂಚಿಕೆ ಪ್ರಮಾಣ 2018ರ ಚುನಾವಣೆಯಲ್ಲಿ ಶೇಕಡಾ 8 ಇದ್ದರೆ ಈ ಬಾರಿ ಶೇ 7.3 ಇರುವ ನಿರೀಕ್ಷೆ ಇದೆ.
‘ಸಮೀಕ್ಷಾ ವರದಿ ಪ್ರಕಾರ, ಕಾಂಗ್ರೆಸ್ ಪಕ್ಷವು 106 ರಿಂದ 116 ಸ್ಥಾನ ಗಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿ 79 ರಿಂದ 89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜೆಡಿಎಸ್ಗೆ 24 ರಿಮದ 34 ಸ್ಥಾನ ದೊರೆತರೆ ಇತರರು 0 ಯಿಂದ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಜನಬೆಂಬಲ ಉತ್ತಮ ಪಡಿಸಿಕೊಂಡಿದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 18 ರಿಂದ 22 ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಿಜೆಪಿ 13ರಿಂದ 17, ಜೆಡಿಎಸ್ ಹಾಗೂ ಇತರರು ತಲಾ 1 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದ್ದು ಬಿಜೆಪಿ 16 ರಿಂದ 20 ಸ್ಥಾನ ಪಡೆಯಲಿದೆ. ಕರಾವಳಿ ಪ್ರದೇಶದಲ್ಲಿ ಓರ್ವ ಪಕ್ಷೇತರ ಗೆಲ್ಲುವ ಸಾದ್ಯತೆಯೂ ಇದೆ.
ಗ್ರೇಟರ್ ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ 18 ರಿಂದ 22 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 7 ರಿಂದ 11, ಜೆಡಿಎಸ್ 1 ರಿಂದ 5 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 16 ರಿಂದ 20 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 11 ರಿಂದ 15, ಜೆಡಿಎಸ್ 1 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ. ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 25 ರಿಂದ 29 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 21 ರಿಂದ 25, ಜೆಡಿಎಸ್ 1 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಹಳೆ ಮೈಸೂರು ಭಾಗದಲ್ಲಿ ತನ್ನ ಪಾರುಪತ್ಯವನ್ನು ಜೆಡಿಎಸ್ ಮುಂದುವರಿಸಿದೆ. ಈ ಬಾರಿ ದಳಕ್ಕೆ 24 ರಿಂದ 28 ಸ್ಥಾನ ದೊರೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಪಡೆದರೆ ಆಡಳಿತಾರೂಢ ಬಿಜೆಪಿ 4 ರಿಂದ 8 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇತರರು 1 ಸ್ಥಾನ ಪಡೆಯಲಿದ್ದಾರೆ.
ಈ ಸಮೀಕ್ಷೆಯಿಂದ ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲಿ ಸಂತಸ ಕಂಡು ಬಂದಿದೆ. ಈ ನಡುವೆ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ಮಂಡ್ಯದ ಶ್ವಾನವೊಂದು ಕುಮಾರ ಸ್ವಾಮಿ ಅವರ ಫೋಟೋವನ್ನು ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಮುಂದಿನ ಮುಖ್ಯಮಂತ್ರಿ ಎಂದು ಸೂಚಿಸಿದೆ.
ಮಂಡ್ಯ ನಗರದ ಆಶೊಕನಗರ ಬಡಾವಣೆಯ ನಿವಾಸಿ ಗೋಪಿ ಅವರು ಕಾಲಭೈರವನ ಭಕ್ತರಾಗಿದ್ದು ಪ್ರತಿ ಸೋಮವಾರವೂ ಸಹ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ಅಲ್ಲದೇ ದೇವಸ್ಥಾನಕ್ಕೆ ತಮ್ಮ ಶ್ವಾನವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅದರಂತೆ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಬಸವರಾಜ ಬೊಮ್ಮಾಯಿ, ಹೆಚ್ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಈ ವೇಳೆ ಶ್ವಾನ ಹೆಚ್ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ತೋರಿಸಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎನ್ನುವ ಭವಿಷ್ಯ ನುಡಿದಿದೆ.
ಈ ಶ್ವಾನ ನೀಡಿರುವ ಸೂಚನೆಗಳು ನಿಜವಾಗಿವೆ ಎಂದು ಗೋಪಿ ಹೇಳುತ್ತಾರೆ. ಮೇ ೧೩ ರ ನಂತರವಷ್ಟೆ ಶ್ವಾನ ಭವಿಷ್ಯ ಗೊತ್ತಾಗಲಿದೆ