ಬಾಗಲಕೋಟೆ: ದಿನ ಬೆಳಗಾದರೆ ಮಹಿಳಾ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದು ಮಾತನಾಡುವ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಒಬ್ಬ ಮಹಿಳೆಗೂ ಚುನಾವಣೆ ಟಿಕೆಟ್ ನೀಡದೆ ಇಬ್ಬಗೆಯ ನೀತಿ ಅನುಸರಿಸಿದೆ.
ಮಹಿಳೆಯರ ಸ್ಪರ್ಧೆಗೆ ಅವಕಾಶ ನೀಡದ ಪಕ್ಷಗಳು:
ಇಡೀ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ರಾಜಕೀಯ ಪಕ್ಷಗಳಿಂದ ಕೊನೆಗೆ ಒಂದೇ ಒಂದು ಕ್ಷೇತ್ರದಲ್ಲಾಗಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಬಾಗಲಕೋಟೆ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಕ್ಷಿತಾ ಈಟಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ವರಿಷ್ಠರು ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್. ವೈ. ಮೇಟಿ ಯವರಿಗೆ ಮಣೆಹಾಕಿದ್ದಾರೆ.
ಇನ್ನು ಜೆಡಿಎಸ್ ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಿಂದ ಬಂಡಾಯ ಎದ್ದು ಪಕ್ಷಾಂತರಗೊಂಡ ಡಾ. ದೇವರಾಜ್ ಪಾಟೀಲ್ ಗೆ ಟಿಕೆಟ್ ನೀಡಿದ್ದು ಪ್ರಬಲ ಆಕಾಂಕ್ಷಿ ರೇಣುಕಾ ಭಜಂತ್ರಿ ಅವರಿಗೆ ಟಿಕೆಟ್ ಮಿಸ್ ಆಗುವಂತಾಯಿತು.
ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯಲ್ಲಿದ್ದ ಉಮಾಶ್ರೀ ಯವರಿಗೆ ಕೂಡ ಟಿಕೆಟ್ ನೀಡದೆ ಇರುವುದು ಅಚ್ಚರಿಯಾಗಿದೆ.
ಇಬ್ಬರು ಶಾಸಕಿಯರು:
1957ರಿಂದ ಇಲ್ಲಿಯವರೆಗೆ ಕೇವಲ ಇಬ್ಬರು ಶಾಸಕಿಯರು ಮಾತ್ರ ಜಿಲ್ಲೆಯಿಂದ ಆಯ್ಕೆಗೊಂಡಿದ್ದಾರೆ. 2003ರಲ್ಲಿ ಹುನಗುಂದ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್. ಆರ್. ಕಾಶಾಪ್ಪನವರ ಅಕಾಲಿಕ ನಿಧಾನದಿಂದ ತೆರವಾದ ಸ್ಥಾನವನ್ನು ಉಪಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಕಾಶಾಪ್ಪನವರ ತುಂಬಿದರು.
ಇನ್ನು 2013ರಲ್ಲಿ ತೇರಾದಾಳ ಕ್ಷೇತ್ರದಿಂದ ನಟಿ ಉಮಾಶ್ರೀ ಶಾಸಕಿಯಾಗಿ ಆಯ್ಕೆಗೊಂಡು ಸಿದ್ದರಾಮಯ್ಯ ಸಂಪುಟದಲ್ಲಿ ಐದು ವರ್ಷಗಳ ಕಾಲ ಮಂತ್ರಿಯಾಗಿದ್ದರು.
ಶೇ. 50 ಕ್ಕಿಂತ ಹೆಚ್ಚು ಮಹಿಳಾ ಮತದಾರರು
ಜಿಲ್ಲೆಯಲ್ಲಿ ಒಟ್ಟು 1542059 ಮತದಾರರು ಇದ್ದಾರೆ. ಇದರಲ್ಲಿ 772946 ಮಹಿಳಾ ಮತದಾರರು ಇದ್ದಾರೆ. ಶೇ. 50ಕ್ಕಿಂತ ಹೆಚ್ಚು ಮಹಿಳಾ ಮತದಾರರು ಇದ್ದಾರೆ. ಏಳು ಮತಕ್ಷೇತ್ರಗಳ ಪೈಕಿ ಮುಧೋಳ, ಬೀಳಗಿ, ಬಾಗಲಕೋಟೆ ಹಾಗೂ ಹುನಗುಂದ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ