ಆಯುರ್ವೇದವು ಜಗತ್ತಿಗೆ ಭಾರತವು ನೀಡಿದ ಕೊಡುಗೆಯಾದರೂ, ತೀರಾ ಇತ್ತೀಚಿನವರೆಗೂ ಭಾರತದಲ್ಲೇ ಇದು ಅಪರಿಚಿತವಾಗಿತ್ತು. ಈಗಲೂ, ಮೊದಲಿಗಿಂತ ಹೆಚ್ಚು ಜನರ ಬಳಿ ತಲುಪಿದ್ದರೂ ಸರಿಯಾದ ಮತ್ತು ಸಂಪೂರ್ಣ ಮಾಹಿತಿಯ ಕೊರತೆ ಇನ್ನೂ ಇದೆ. ಹಾಗಾಗಿ, ಈ ಬರಹವು ಆಯುರ್ವೇದದ ಬಗೆಗಿನ ಕೆಲವು ಸರಿಯಾದ ಮತ್ತು ತಪ್ಪಾದ ನಂಬಿಕೆಗಳನ್ನು ವಿವರಿಸುವ ಪ್ರಯತ್ನವಾಗಿದೆ.
1. ಆಯುರ್ವೇದವೆಂದರೆ ಕೇವಲ ಗಿಡಮೂಲಿಕೆಗಳ ವೈದ್ಯಕೀಯ – ತಪ್ಪು
ಗಿಡಮೂಲಿಕೆಗಳ ಬಳಕೆ ಆಯುರ್ವೇದ ವೈದ್ಯಪದ್ಧತಿಯ ಒಂದು ಭಾಗ ಮಾತ್ರವಾಗಿದೆ. ಆದರೆ ಮೂಲದಲ್ಲಿ ಇದು ಆರೋಗ್ಯಕರ ಜೀವನಶೈಲಿಯನ್ನು ಕಲಿಸುವ ಶಾಸ್ತ್ರವಾಗಿದೆ. ಆದ್ದರಿಂದ, ಆಯುರ್ವೇದದ ಮೊದಲರ್ಧದಲ್ಲಿ ರೋಗಗಳನ್ನು ತಡೆಗಟ್ಟಲು ಸಹಾಯಕವಾದ ಆಹಾರ ಪದ್ಧತಿಗಳು, ದೈನಂದಿನ ಚಟುವಟಿಕೆಗಳು, ಋತುವಿಗನುಸಾರವಾದ ಆಹಾರ-ವಿಹಾರ, ಉತ್ತಮ ಸಂತಾನಕ್ಕಾಗಿ ನಿಯಮಗಳು, ಗರ್ಭಿಣಿ-ಶಿಶುವಿನ ಆರೋಗ್ಯ, ವೃದ್ಧಾಪ್ಯದಲ್ಲಿ ಆರೋಗ್ಯ, ಲೈಂಗಿಕ ಆರೋಗ್ಯ ಇತ್ಯಾದಿಗಳನ್ನು ವಿವರಿಸಿದ್ದಾರೆ. ನಂತರ, ರೋಗಗಳು ಬರಲು ಕಾರಣಗಳು, ರೋಗ ಲಕ್ಷಣಗಳು, ವಿಧಗಳು, ಚಿಕಿತ್ಸೆ ಇತ್ಯಾದಿಗಳನ್ನು ವಿವರಿಸಿದ್ದಾರೆ. ಚಿಕಿತ್ಸೆಯನ್ನು ವಿವರಿಸುವಾಗ ಪಂಚಕರ್ಮಗಳು, ಮೂಲಿಕೆಗಳ ಔಷಧಗಳು, ಪಥ್ಯಾಪಥ್ಯಗಳು ಮುಂತಾದವುಗಳನ್ನು ವಿವರಿಸಿದ್ದಾರೆ.
ಅಲ್ಲದೇ, ಇಡಿಯ ಆಯುರ್ವೇದವನ್ನು ಅಧ್ಯಯನ ಮತ್ತು ಬಳಕೆಯ ಅನುಕೂಲಕ್ಕಾಗಿ ಎಂಟು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಅವೆಂದರೆ, 1. ಕಾಯಚಿಕಿತ್ಸೆ – ಸಾಮಾನ್ಯ ಸಾರ್ವದೈಹಿಕ ರೋಗಗಳ (ಜ್ವರ, ಅತಿಸಾರ, ಪಕ್ಷವಾತ ಇತ್ಯಾದಿ) ಚಿಕಿತ್ಸೆ. 2. ಬಾಲರೋಗ ಚಿಕಿತ್ಸೆ – ಮಕ್ಕಳ ಚಿಕಿತ್ಸೆ 3. ಗ್ರಹ ಚಿಕಿತ್ಸೆ – ಕಾಣದ ಕಾರಣಗಳಿಂದಾದ (ಉದಾ: ಸೂಕ್ಷ್ಮಜೀವಿಗಳು ಇತ್ಯಾದಿ) ರೋಗಗಳ ಚಿಕಿತ್ಸೆ 4. ಶಾಲಾಕ್ಯ ತಂತ್ರ – ಕುತ್ತಿಗೆಯ ಮೇಲ್ಭಾಗದ ರೋಗಗಳ ಚಿಕಿತ್ಸೆ 5. ಶಲ್ಯ ತಂತ್ರ – ಶಸ್ತ್ರ ಚಿಕಿತ್ಸೆ 6. ವಿಷ ಚಿಕಿತ್ಸೆ – ಬೇರೆ ಬೇರೆ ಬಗೆಯ ವಿಷ ಪ್ರಯೋಗಗಳಿಗೆ ಚಿಕಿತ್ಸೆ 7. ರಸಾಯನ ತಂತ್ರ – ಆರೋಗ್ಯಯುತ ವೃದ್ಧಾಪ್ಯಕ್ಕಾಗಿ ಯುಕ್ತಿಗಳು 8. ವಾಜೀಕರಣ ತಂತ್ರ – ಉತ್ತಮ ಲೈಂಗಿಕತೆ ಮತ್ತು ಸಂತಾನಕ್ಕಾಗಿ ಸೂತ್ರಗಳು.
ಇಷ್ಟು ವಿಸ್ತಾರವಾದ ಆಯುರ್ವೇದ ಶಾಸ್ತ್ರವನ್ನು ಬರಿಯ ಮೂಲಿಕೆಗಳ ಪ್ರಯೋಗವೆಂದರೆ ತಪ್ಪಲ್ಲವೇ?!
2. ಆಯುರ್ವೇದದ ಪರಿಣಾಮ ಯಾವಾಗಲೂ ಬಲು ನಿಧಾನ – ತಪ್ಪು
ಆಯುರ್ವೇದದಲ್ಲಿ ಚಿಕಿತ್ಸೆಯ ವಿಧಾನವು ಆಧುನಿಕ ಪದ್ಧತಿಗಿಂತ ಭಿನ್ನವಾಗಿದೆ. ಇಲ್ಲಿ ರೋಗದ ಮೂಲವನ್ನು ಹುಡುಕಿ ಅದನ್ನು ಸರಿಪಡಿಸಲಾಗುತ್ತದೆ. ಉದಾಹರಣೆಗೆ, ಅಸಿಡಿಟಿಯಲ್ಲಿ ಕೇವಲ ಜಠರದಲ್ಲಿನ ಅಮ್ಲಗಳ ಸ್ರವಿಸುವಿಕೆಯನ್ನು ತಡೆಯುವ ಬದಲು ಜೀರ್ಣಕ್ರಿಯೆಯನ್ನು ಸರಿಪಡಿಸುವ, ದೇಹಕ್ಕೆ ಬೇಡದ ಅಂಶಗಳನ್ನು ಹೊರಹಾಕುವ / ನಿವಾರಿಸುವ ಪ್ರಯತ್ನ ಮಾಡಲಾಗುತ್ತದೆ. ಹಾಗಾಗಿ ಪರಿಣಾಮವನ್ನು ಕಾಣಲು ಕೆಲವೊಮ್ಮೆ ಹೆಚ್ಚು ಸಮಯವಾದಂತೆ ತೋರುತ್ತದೆ. ಕೇವಲ ಲಕ್ಷಣಗಳನ್ನು (ಜ್ವರ, ನೋವು, ಭೇದಿ ಇತ್ಯಾದಿ) ಮುಚ್ಚಿ ಅಥವಾ ನಿವಾರಿಸಿ ರೋಗವು ಗುಣವಾದಂತೆ ಅನಿಸಿದರೆ, ಅದರಿಂದ ಪುನಃ ಪುನಃ ರೋಗವು ಮರುಕಳಿಸಬಹುದು ಅಥವಾ ದೀರ್ಘಕಾಲದಲ್ಲಿ ಹೆಚ್ಚು ತೊಂದರೆಯಾಗಬಹುದು. ಉದಾಹರಣೆಗೆ, ಸಂಧಿವಾತದಲ್ಲಿ ಕೇವಲ ನೋವುನಿವಾರಕಗಳ ಸೇವನೆಯಿಂದ ಅಡ್ಡ ಪರಿಣಾಮಗಳೂ, ರೋಗವು ತುಂಬಾ ಆಳಕ್ಕಿಳಿಯುವ ಸಾಧ್ಯತೆಯೂ ಇರುತ್ತದೆ.
ಇಷ್ಟಲ್ಲದೇ, ಕೆಲವು ರೋಗಗಳಲ್ಲಿ ಹಾಗೂ ಅವಸ್ಥೆಗಳಲ್ಲಿ ನಿಧಾನ ಮತ್ತು ಹಂತ ಹಂತವಾಗಿಯೇ ಚಿಕಿತ್ಸೆ ಮಾಡಬೇಕು. ಇಲ್ಲವಾದಲ್ಲಿ ಸರಿಯಾದ ಗುಣವಾಗುವಿಕೆ ಸಾಧ್ಯವಿಲ್ಲ. ಉದಾಹರಣೆಗೆ, ಜ್ವರದಲ್ಲಿ ಕೇವಲ ಜ್ವರನಿವಾರಕವನ್ನು ಸೇವಿಸಿ ಎಂದಿನಂತೆ ಕೆಲಸ ಮಾಡಿಕೊಂಡಿದ್ದರೆ ದೋಷಗಳು ಶರೀರದಲ್ಲೇ ಉಳಿದು ಜ್ವರ ಅಥವಾ ಬೇರೆ ರೂಪದಲ್ಲಿ ಮರುಕಳಿಸುವ ಸಾಧ್ಯತೆ ಬಹಳ.
ಇನ್ನು, ದೀರ್ಘಕಾಲದಿಂದ ಇರುವ ರೋಗಗಳಲ್ಲಿ ಹಂತ ಹಂತವಾಗಿ ದೋಷಗಳನ್ನು ಸರಿಪಡಿಸಿ, ದೇಹಕ್ಕೆ ಬಲ ನೀಡಿ ಹಾಗೂ ಮೂಲ ಕಾರಣಗಳನ್ನು ದೂರ ಮಾಡಿ ಚಿಕಿತ್ಸೆ ಮಾಡಬೇಕು. ಹೀಗಿರುವಾಗ ಅತಿ ಶೀಘ್ರದಲ್ಲಿ ಗುಣಪಡಿಸಲು ಸಾಧ್ಯವಿಲ್ಲ.
3. ಆಯುರ್ವೇದ ಔಷಧಗಳಿಗೆ ಅಡ್ಡಪರಿಣಾಮಗಳಿಲ್ಲ – ತಪ್ಪು
ಪರಿಣಾಮವಿದ್ದಲ್ಲಿ ಅಡ್ಡಪರಿಣಾಮಗಳೂ ಇರುತ್ತವೆ! “ಅತಿಯಾದರೆ ಅಮೃತವೂ ವಿಷ” ಎಂಬುದರ ಜೊತೆಯಲ್ಲಿ, “ಅಲ್ಪಜ್ಞಾನವು ಅಪಾಯಕಾರಿ” ಎಂಬುದೂ ಇಲ್ಲಿ ಸಲ್ಲುತ್ತದೆ.
ಆಯುರ್ವೇದದ ಔಷಧಗಳನ್ನೂ ವಿವೇಚನಾರಹಿತರಾಗಿ ಬಳಸಿದರೆ ಅನಗತ್ಯ ಅಥವಾ ಅಡ್ಡ ಪರಿಣಾಮಗಳು ಉಂಟಾಗಬಹುದು, ಅಂದುಕೊಂಡ ಪರಿಣಾಮಕ್ಕೆ ವಿರುದ್ಧ ಪರಿಣಾಮವಾಗಬಹುದು ಅಥವಾ ಬಯಸಿದ ಪರಿಣಾಮವಾಗದಿರಬಹುದು. ಆದರೆ, ಈ ಔಷಧಗಳು ಪ್ರಾಕೃತಿಕ ಮೂಲದವುಗಳಾದ್ದರಿಂದ ತೀವ್ರ ಮತ್ತು ಪ್ರಾಣಘಾತಕ ಪರಿಣಾಮಗಳು ಆಗುವುದು ಕಡಿಮೆ. ಉದಾಹರಣೆಗೆ, ಅಸಿಡಿಟಿ ಹೆಚ್ಚಿರುವಾಗ ‘ಅರಿಷ್ಟ’ಗಳೆಂಬ ಔಷಧ ರೂಪವನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅಸಿಡಿಟಿಯು ಹೆಚ್ಚಾಗಿ ಹೊಟ್ಟೆಯಲ್ಲಿ ಉರಿ-ಸಂಕಟ ಆಗಬಹುದು. ದೇಹದಲ್ಲಿ ‘ಆಮ’ವೆಂಬ ಅಂಶವು ಹೆಚ್ಚಿರುವಾಗ ಕೆಲವು ತೈಲಗಳನ್ನು ಹಚ್ಚಿದರೆ ರೋಗ ಉಲ್ಭಣಿಸಬಹುದು.
ಹೀಗಾಗಿ, ಆಯುರ್ವೇದ ಚಿಕಿತ್ಸೆ-ಔಷಧ ಸೇವನೆಯನ್ನೂ ಸರಿಯಾಗಿ ತಿಳಿದು ಅಥವಾ ವೈದ್ಯರ ನಿರ್ದೇಶನದಂತೆ ಮಾಡಿದರೆ ಒಳಿತು.
4. ಆಯುರ್ವೇದದಿಂದ ಎಲ್ಲ ಖಾಯಿಲೆಗಳೂ ಗುಣವಾಗುತ್ತವೆ – ತಪ್ಪು
ಆಯುರ್ವೇದ ಗ್ರಂಥಗಳಲ್ಲಿ ಸ್ಪಷ್ಟವಾಗಿ ‘ಸಾಧ್ಯ’ ಮತ್ತು ‘ಅಸಾಧ್ಯ’ವೆಂದು ರೋಗಗಳನ್ನು ವರ್ಗೀಕರಿಸಿದ್ದಾರೆ. ರೋಗಿಯ ವಯಸ್ಸು, ಬಲ, ರೋಗದ ಸ್ಥಾನ, ತೀವ್ರತೆ ಇತ್ಯಾದಿ ಹಲವು ಅಂಶಗಳನ್ನು ಆಧರಿಸಿ ಈ ರೀತಿಯ ವಿಂಗಡನೆಯನ್ನು ಮಾಡಲಾಗಿದೆ. ಕೆಲವು ಖಾಯಿಲೆಗಳನ್ನು ಕೇವಲ ನಿರ್ವಹಣೆ ಮಾಡಬೇಕೆಂದೂ ಹೇಳಲಾಗಿದೆ. ಹಾಗಾಗಿ ಎಲ್ಲ ಖಾಯಿಲೆಗಳೂ ಎಲ್ಲ ಅವಸ್ಥೆಗಳಲ್ಲೂ ಸಂಪೂರ್ಣ ಗುಣವಾಗುತ್ತವೆ ಎಂಬುದು ಅರ್ಥರಹಿತ.
5. ಭಾರತೀಯ ಸಂಸ್ಕøತಿಯಲ್ಲಿ ಆಯುರ್ವೇದವು ಹಾಸುಹೊಕ್ಕಾಗಿದೆ – ಸರಿ
ತಿಳಿದೋ ತಿಳಿಯದೆಯೋ ಭಾರತೀಯ ಆಚರಣೆಗಳಲ್ಲಿ ಆಯುರ್ವೇದದ ಸಿದ್ಧಾಂತಗಳ ಅಳವಡಿಕೆ ಕಂಡುಬರುತ್ತದೆ. ಆಯುರ್ವೇದವು ನಮ್ಮ ಜೀವನಶೈಲಿಯಾಗಿತ್ತು ಎಂಬುದೇ ಇದಕ್ಕೆ ಕಾರಣ.
ಅಡುಗೆ ಮಾಡಿ ಒಗ್ಗರಣೆ ಹಾಕುವುದು, ದೀಪಾವಳಿಯಂದು ಮಾಡುವ ಎಣ್ಣೆಸ್ನಾನ, ಯುಗಾದಿಯಂದು ಬೇವು ಸೇವನೆ, ಮನೆಯಲ್ಲಿ ಅಜ್ಜಿ / ಅಮ್ಮ ಮಾಡಿ ಕೊಡುವ ಕಷಾಯಗಳು, ದಣಿದು ಬಂದವರಿಗೆ ನೀರು-ಬೆಲ್ಲ ನೀಡುವುದು, ಹಿರಿಯರನ್ನು ಗೌರವಿಸುವುದು ಇತ್ಯಾದಿ ಬಹಳಷ್ಟು ಪದ್ಧತಿ-ಆಚರಣೆಗಳಲ್ಲಿ ಆಯುರ್ವೇದದಲ್ಲಿ ವಿವರಿಸಿದ ನಿಯಮಗಳೇ ಕಾಣುತ್ತವೆ.
6. ಗಿಡಮೂಲಿಕೆಗಳಿರುವ ವಸ್ತುಗಳೆಲ್ಲ ಆಯುರ್ವೇದಕ್ಕೆ ಸೇರಿದವುಗಳು – ತಪ್ಪು
ರಾಸಾಯನಿಕಗಳಿಂದಲೇ ತುಂಬಿದ ಸಾಬೂನು, ಶಾಂಪೂ, ಕ್ರೀಂ, ಪೇಸ್ಟ್ ಇತ್ಯಾದಿಗಳನ್ನು ಕೇವಲ ಕೆಲವು ಮೂಲಿಕೆಗಳ ‘ಅಂಶ’ಗಳನ್ನು ಬಳಸಿದ ಕಾರಣದಿಂದ ‘ಆಯುರ್ವೇದೀಯ’ ಎಂಬ ಹೆಸರಿನಲ್ಲಿ ಪ್ರಚಾರ ಮಾಡಲಾಗುತ್ತದೆ. ಆದರೆ, ಆಯುರ್ವೇದದ ಯಾವುದೇ ಸಿದ್ಧಾಂತಕ್ಕೆ ಅನುಗುಣವಾಗಿ ಇಲ್ಲದ ಉತ್ಪನ್ನಗಳನ್ನು ಆಯುರ್ವೇದೀಯ ಎನ್ನುವುದು ಕೇವಲ ಸಪ್ತಸ್ವರಗಳ ಬಳಕೆಯಾಗಿದೆ ಎಂಬ ಕಾರಣದಿಂದ ‘ಪಾಪ್’ಸಂಗೀತವನ್ನು ‘ಭಾರತೀಯ’ ಎಂದಂತೆ! ಕೇವಲ ಮೂಲಿಕೆಗಳಿದ್ದು ಆಯುರ್ವೇದದ ಸಿದ್ಧಾಂತಗಳಿಗನುಗುಣವಾಗಿಲ್ಲದಿದ್ದಾಗ ‘ಮೂಲಿಕೆಗಳಿಂದ ಕೂಡಿದೆ’ ಎಂಬುದು ಸೂಕ್ತ. ‘ಹರ್ಬಲ್’ ಎಂಬುದೂ ಕೂಡ ಕೇವಲ ಸಸ್ಯಜನ್ಯ ಪದಾರ್ಥಗಳೇ ಬಹುಪಾಲು ಇದ್ದಲ್ಲಿ ಮಾತ್ರ (ಉದಾ: ಹರ್ಬಲ್ ಹಲ್ಲುಪುಡಿ, ಸೀಗೆಹುಡಿ, ಶುದ್ಧ ಮದರಂಗಿ) ನಿಜವಾದ ಅರ್ಥ ನೀಡುತ್ತದೆ ಅಲ್ಲವೇ?
7. ಆಯುರ್ವೇದ ಔಷಧಗಳಲ್ಲಿ ಹಾನಿಕಾರಕ ಲೋಹ, ವಿಷವಸ್ತುಗಳಿರುತ್ತವೆ – ತಪ್ಪು
ಆಯುರ್ವೇದದಲ್ಲಿ ಬಳಸುವ ರಸೌಷಧಗಳಲ್ಲಿ ಪಾದರಸ, ಗಂಧಕ, ಲೋಹ, ಸತು ಮುಂತಾದವುಗಳು ಇರುವುದು ಸತ್ಯ. ಆದರೆ, ಹಾನಿಕಾರಕ ರೂಪ ಅಥವಾ ಪ್ರಮಾಣದಲ್ಲಿ ಅಲ್ಲ! ಪ್ರತಿಯೊಂದು ಇಂತಹ ಅಂಶವನ್ನೂ ಶಾಸ್ತ್ರಬದ್ಧವಾಗಿ ಶುದ್ಧೀಕರಿಸಿ, ಮೂಲಿಕೆಗಳೊಡನೆ ವಿವಿಧ ರೀತಿಯಲ್ಲಿ ಸಂಸ್ಕಾರ ನೀಡಿ, ಭಸ್ಮ ಇತ್ಯಾದಿ ರೂಪಗಳಲ್ಲಿ ಬಳಸಲಾಗುತ್ತದೆ. ಅದೂ ಕೆಲವೇ ಮಿಲಿಗ್ರಾಂ ಪ್ರಮಾಣದಲ್ಲಿ. ಇಷ್ಟೆಲ್ಲ ಸಂಸ್ಕಾರಕ್ಕೊಳಪಟ್ಟ ಲೋಹಾದಿಗಳು ಮೂಲರೂಪದಲ್ಲಿರದೆ ‘ಆಕ್ಸೈಡ್’ ಇತ್ಯಾದಿ ರೂಪಾಂತರ ಹೊಂದಿರುತ್ತವೆ ಮತ್ತು ಆಗ ಅವು ಹಾನಿಕಾರಕವಾಗಿರುವುದಿಲ್ಲ. ಉದಾ: ಸೋಡಿಯಂ ಹಾಗೂ ಕ್ಲೋರಿನ್ ವಿಷವಸ್ತುಗಳಾಗಿದ್ದರೂ ಅವುಗಳು ಸೇರಿದಾಗ ಸೇವನೆಗೆ ಯೋಗ್ಯವಾದ ಉಪ್ಪು ದೊರೆತಂತೆ. ಅಲ್ಲದೇ, ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿರುವ ಈ ಔಷಧಗಳು ಯಾವುದೇ ಹಾನಿ ಮಾಡಿದ ಪುರಾವೆಯಿಲ್ಲ.
ಆದರೂ, ಮೇಲೆ ಹೇಳಿದಂತೆ ಸರಿಯಾಗಿ ತಯಾರಿಸದ ಮತ್ತು ಶಾಸ್ತ್ರಾನುಸಾರ ಬಳಸದ ಔಷಧಗಳು ಕೆಲವೊಮ್ಮೆ ಹಾನಿಗೆ ಕಾರಣವಾಗಿರಬಹುದು. ಅನ್ನವನ್ನೇ ಆದರೂ ನಿಯಮ ಮೀರಿ ಸೇವಿಸಿದಾಗ ಹಾನಿಯಾಗುವುದಿಲ್ಲವೇ?
8. ಪಂಚಕರ್ಮ ಚಿಕಿತ್ಸೆಯೆಂದರೆ ‘ಮಸಾಜ್’ – ತಪ್ಪು
ಪಂಚಕರ್ಮವೆಂದರೆ ಐದು ಬಗೆಯ ಚಿಕಿತ್ಸಾಕ್ರಮಗಳು. ದೇಹದಲ್ಲಿ ಸೇರಿದ ಬೇಡದ ಅಂಶಗಳನ್ನು ಅಥವಾ ದೋಷಗಳನ್ನು ಹೊರಹಾಕಲು ಬಳಸುವ ದೇಹಶೋಧನ ವಿಧಾನಗಳಿವು. ಅವುಗಳೆಂದರೆ 1. ವಮನ – ಬಾಯಿಯ ಮುಖಾಂತರ ಶುದ್ಧಿ 2. ವಿರೇಚನ – ಗುದದ್ವಾರದ ಮೂಲಕ ಶುದ್ಧಿ 3. ಬಸ್ತಿ – ಎನಿಮಾ ಮೂಲಕ ಶುದ್ಧಿ 4. ನಸ್ಯ – ಮೂಗಿನ ಮೂಲಕ ಶುದ್ಧಿ 5. ರಕ್ತಮೋಕ್ಷಣ – ರಕ್ತಶುದ್ಧಿ.
ಹೀಗೆ ಶುದ್ಧಿಯಾಗಬೇಕಾದರೆ ಮೊದಲು ದೋಷಗಳನ್ನು ದೇಹದ ವಿವಿಧ ಭಾಗಗಳಿಂದ ಸಡಿಲಗೊಳಿಸಿ ಜಠರ-ಕರುಳಿಗೆ ಬರುವಂತೆ ಮಾಡಲು ಪೂರ್ವಕರ್ಮಗಳೆಂಬ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಅವುಗಳಲ್ಲಿ ತೈಲಗಳನ್ನು ಹಚ್ಚಿ ಮಾಲೀಶು ಮಾಡುವುದೂ ಒಂದು. ಅಲ್ಲದೇ, ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ತೈಲಾಭ್ಯಂಗವನ್ನು ಮಾಡುವಂತೆ ಆಯುವೇದದಲ್ಲಿ ಹೇಳಲಾಗಿದೆ.
ಆದ್ದರಿಂದ, ಬರಿಯ ಮಸಾಜ್ ಎಂಬುದು ಪಂಚಕರ್ಮವಲ್ಲ! ಅದು ಕೇವಲ ಅಭ್ಯಂಗ ಅಥವಾ ಪೂರ್ವಕರ್ಮ ಅಷ್ಟೇ.
9. ಆಯುರ್ವೇದವನ್ನು ಬೇರೆಲ್ಲ ಚಿಕಿತ್ಸೆಗಳು ವಿಫಲವಾದಾಗ ಮಾತ್ರ ಪ್ರಯತ್ನಿಸಬಹುದು – ತಪ್ಪು
ಹೆಚ್ಚಿನ ಸಂದರ್ಭಗಳಲ್ಲಿ ಧೀರ್ಘಕಾಲದವರೆಗೆ ವಿವಿಧ ಚಿಕಿತ್ಸೆಗಳನ್ನು ಪ್ರಯತ್ನಿಸಿ ಅಥವಾ ಯಾವುದೇ ಚಿಕಿತ್ಸೆಯನ್ನೂ ಮಾಡದೇ ಕಳೆದಲ್ಲಿ ಸಮಸ್ಯೆಯು ಆಳಕ್ಕಿಳಿಯಬಹುದು ಅಥವಾ ರೋಗಬಲವು ಹೆಚ್ಚಿ ರೋಗಿಬಲವು ಕಡಿಮೆಯಾಗಬಹುದು. ಆಗ ಖಾಯಿಲೆಯು ಕಷ್ಟಸಾಧ್ಯ ಅಥವಾ ಅಸಾಧ್ಯವಾಗುತ್ತದೆ. ಬಹಳಷ್ಟು ಖಾಯಿಲೆಗಳಲ್ಲಿ ಒಂದು ವರ್ಷದ ಒಳಗಾಗಿ ಚಿಕಿತ್ಸೆ ಮಾಡಿದರೆ ಗುಣವಾಗುವ ಸಾಧ್ಯತೆಯು ಜಾಸ್ತಿ. ತುಂಬಾ ತಡವಾಗಿ ಆಯುರ್ವೇದ ಚಿಕಿತ್ಸೆಯನ್ನು ಮಾಡುವಾಗ ಅಷ್ಟು ಉತ್ತಮ ಪರಿಣಾಮವು ಕಾಣದಿರಬಹುದು.
10. ಆಯುರ್ವೇದ ಔಷಧಗಳಲ್ಲಿ ಸ್ವರ್ಣಭಸ್ಮ ಇತ್ಯಾದಿಗಳಿರುವುದರಿಂದ ಅವು ಬಹು ದುಬಾರಿ – ತಪ್ಪು
ಆಯುರ್ವೇದದ ಬಹಳಷ್ಟು ಔಷಧಗಳು ಸಸ್ಯಮೂಲದಿಂದ ತಯಾರಿಸಲ್ಪಟ್ಟಿರುತ್ತವೆ. ಕೆಲವೇ ಕೆಲವು ಔಷಧಗಳಲ್ಲಿ ಭಸ್ಮ ಇತ್ಯಾದಿ ರೂಪಗಳಲ್ಲಿ ಚಿನ್ನ, ಬೆಳ್ಳಿ, ಮುತ್ತು ಇತ್ಯಾದಿಗಳನ್ನು ಬಳಸಿರುತ್ತಾರೆ. ಅಲ್ಲದೇ ಎಲ್ಲ ಸಂದರ್ಭಗಳಲ್ಲೂ ಇವುಗಳ ಬಳಕೆ ಅಗತ್ಯವಿಲ್ಲ. ಆದ್ದರಿಂದ ಎಷ್ಟೋ ಸಲ ಅತಿ ಕಡಿಮೆ ಖರ್ಚಿನಲ್ಲೂ ಚಿಕಿತ್ಸೆ ಸಾಧ್ಯ.
11. ಔಷಧೀಯ ಮೂಲಿಕೆಗಳ ನಿತ್ಯ ಸೇವನೆಯಿಂದ ಖಾಯಿಲೆಗಳ ನಿವಾರಣೆ ಮತ್ತು ತಡೆಗಟ್ಟುವಿಕೆ ಸಾಧ್ಯ – ತಪ್ಪು
ಔಷಧೀಯ ಸಸ್ಯಗಳನ್ನು ಆರೋಗ್ಯಕ್ಕೆ ಒಳ್ಳೆಯದೆಂದು ನಿತ್ಯವೂ ಸೇವಿಸುವ ಮತ್ತು ಎಲ್ಲರೂ ಸೇವಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಉದಾ: ಬೇವಿನಸೊಪ್ಪು, ಹಾಗಲಕಾಯಿ ರಸ ಇತ್ಯಾದಿ. ಇದು ಸಂಪೂರ್ಣ ಸರಿಯಲ್ಲ. ಕೆಲವರಿಗೆ ಇದರಿಂದ ಒಳ್ಳೆಯ ಪರಿಣಾಮಗಳು ಕಂಡರೂ ಎಲ್ಲರಿಗೂ ಹೊಂದುತ್ತದೆ ಎನ್ನಲಾಗುವುದಿಲ್ಲ. ಇದಕ್ಕೆ ಕಾರಣಗಳು ಅನೇಕ. 1. ಪ್ರತಿ ವ್ಯಕ್ತಿಯ ಪ್ರಕೃತಿಯೂ, ಆರೋಗ್ಯ ಸ್ಥಿತಿಯೂ ಭಿನ್ನವಾಗಿದೆ. 2. ಆಹಾರವು ನಿತ್ಯ ಸೇವನೆಗೆ ಇರುವಂತಹುದು, ಔಷಧವಲ್ಲ! 3. ಮೇಲೆ ಹೇಳಿದಂತೆ, ಅತಿಯಾದರೆ ಅಮೃತವೂ ವಿಷವಾದೀತು. 4. ಆರೋಗ್ಯಕ್ಕೆ ಒಳ್ಳೆಯದಾದ ಸಸ್ಯಗಳು ಸಾವಿರಾರಿವೆ, ಎಲ್ಲವನ್ನೂ ವಿನಾಕಾರಣ ಸೇವಿಸಲು ಸಾಧ್ಯವೇ? ಸೂಕ್ತವೇ?
ಆದ್ದರಿಂದ, ಯಾವುದೇ ಮೂಲಿಕೆಯನ್ನಾದರೂ ಅದರ ಗುಣ-ಪರಿಣಾಮಗಳನ್ನು ತಿಳಿದು, ಅಗತ್ಯವಿದ್ದಲ್ಲಿ ಮಾತ್ರ ಬಳಸುವುದು ಒಳಿತು. ನಿಮ್ಮ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಸೂಕ್ತ.
12. ಪಂಚಕರ್ಮದಲ್ಲಿ ನೀಡುವ ತುಪ್ಪದ ಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚುತ್ತದೆ – ತಪ್ಪು
ಮೇಲೆ ವಿವರಿಸಿದಂತೆ, ಪಂಚಕರ್ಮಗಳಲ್ಲಿ ಸಿದ್ಧತೆಯಾಗಿ ಮಲವಸ್ತುಗಳನ್ನು, ದೂಷಿತ ಅಂಶಗಳನ್ನು ದೇಹದ ವಿವಿಧ ಭಾಗಗಳಿಂದ ಬೇರ್ಪಡಿಸಲು ಮತ್ತು ಚಲಿಸುವಂತೆ ಮಾಡಲು ‘ಸ್ನೇಹಪಾನ’ ನೀಡಲಾಗುತ್ತದೆ. ಅದರಲ್ಲಿ ಒಂದು ನಿರ್ದಿಷ್ಟ ವಿಧಾನದಲ್ಲಿ ಔಷಧಯುಕ್ತ ತುಪ್ಪದ ಸೇವನಾಕ್ರಮವಿದ್ದು ಅದು ದೇಹದಲ್ಲಿ ಕೊಬ್ಬು ಸೇರುವಂತೆ ಮಾಡುವುದಿಲ್ಲ. ಬದಲಿಗೆ ಬೇಡದ ಕೊಬ್ಬನ್ನು ಹೊರಹಾಕಲೂ ಉಪಯೋಗಿಯಾಗುತ್ತದೆ. ಅಲ್ಲದೇ ದೇಹಕ್ಕೆ ಬೇಕಾದ ಒಳ್ಳೆಯ (ಊಆಐ) ಕೊಲೆಸ್ಟರಾಲನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ವ್ಯಕ್ತಿಯು ಕೃಶನಾಗಿದ್ದು ತೂಕವನ್ನು ಹೆಚ್ಚಿಸಲು ಅನುಸರಿಸುವ ಸೇವನಾಕ್ರಮದಲ್ಲಿ (ಆಹಾರದೊಡನೆ) ಮಾತ್ರ ದೇಹದ ಕೊಬ್ಬು ಹೆಚ್ಚುವ ಸಾಧ್ಯತೆಯಿರುತ್ತದೆ.
13. ತೂಕವನ್ನಿಳಿಸಲು ಬಿಸಿನೀರಿಗೆ ಜೇನುತುಪ್ಪ ಸೇರಿಸಿ ಸೇವಿಸಬೇಕೆಂದು ಆಯುರ್ವೇದದಲ್ಲಿ ಹೇಳಿದೆ – ತಪ್ಪು
ಜೇನು ಅನೇಕ ಹೂವುಗಳಿಂದ ಸಂಗ್ರಹಿಸಲಾದ ಮಕರಂದವಾದ್ದರಿಂದ ಅದನ್ನು ಬಿಸಿ ಮಾಡಬಾರದು ಅಥವಾ ಬಿಸಿಯಾದ ದ್ರವ್ಯಗಳಿಗೆ ಸೇರಿಸಬಾರದು ಎಂದು ಆಯುರ್ವೇದದ ಸಿದ್ಧಾಂತ. ಹಾಗಾಗಿಯೇ ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಜೇನನ್ನು ಕೊನೆಯಲಿ,್ಲ ಸಿದ್ಧಪಡಿಸಿದ ಔಷಧವು ತಣಿದ ಬಳಿಕ ಸೇರಿಸಬೇಕೆಂದು ವಿವರಿಸಿರುತ್ತಾರೆ. ಬಹುಶಃ ಬಿಸಿಯಾದಾಗ ಜೇನಿನಲ್ಲಿ ಹಾನಿಕಾರಕ ಅಂಶಗಳಾಗಿ ಪರಿವರ್ತನೆಯಾಗುವ ಯಾವುದೋ ಪ್ರಕ್ರಿಯೆ ನಡೆಯಬಹುದು.
ಆದ್ದರಿಂದ, ಬಿಸಿನೀರಿಗೆ ಅಥವಾ ಯಾವುದೇ ಬಿಸಿಯಾದ ಆಹಾರ/ಪಾನೀಯಕ್ಕೆ ಜೇನು ಸೇರಿಸಿ ಸೇವಿಸುವುದು ಆಯುರ್ವೇದದ ಕ್ರಮವಲ್ಲ.
ಹೀಗೆ, ಆಯುರ್ವೇದದ ಬಗ್ಗೆ ಹೆಚ್ಚು ಪ್ರಚಾರದಲ್ಲಿರುವ ಕೆಲವು ಗ್ರಹಿಕೆಗಳನ್ನು ವಿವರಿಸುವುದು ಈ ಲೇಖನದ ಉದ್ದೇಶ. ಅಂತಿಮವಾಗಿ ಹೇಳುವುದೇನೆಂದರೆ, ಯಾವುದೇ ವೈದ್ಯಪದ್ಧತಿಗೂ ಅದರದ್ದೇ ಆದ ವೈಶಿಷ್ಟ್ಯ ಮತ್ತು ಪರಿಮಿತಿಗಳಿರುತ್ತವೆ. ಯಾವುದೇ ಪದ್ಧತಿಯೂ ಪರಿಪೂರ್ಣವಲ್ಲ. ಆದ್ದರಿಂದ ಭ್ರಮೆ ಮೂಡಿಸುವಂತಹ ಭರವಸೆಗಳನ್ನು ಅಥವಾ ಆಪಾದನೆಗಳನ್ನು ಪರಾಮರ್ಶಿಸದೇ ನಂಬಬಾರದು. ಆಯಾ ಪದ್ಧತಿಗಳನ್ನು ಚೆನ್ನಾಗಿ ತಿಳಿದುಕೊಂಡವರಲ್ಲಿ ಚರ್ಚಿಸಿ ನಿರ್ಧರಿಸುವುದು ಒಳಿತು. ಆಯುರ್ವೇದವನ್ನು ಓದದಿರುವ ಜನರು ಆಯುರ್ವೇದವನ್ನು ದೂಷಿಸಿದರೆ ಅಥವಾ ಸಲಹೆ ನೀಡಿದರೆ ಅದು ಸರಿಯಾಗಿರಲು ಸಾಧ್ಯವೇ?
“ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ”