ಬಾಗಲಕೋಟೆ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆಸ್ತಿಯ ಮೂಲ ಹಕ್ಕಿಕತ್ತು ತಿಳಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಅನೇಕ ನಿಬಂದನೆಗಳನ್ನು ಹಾಕಿ ಸರ್ವೇ ಮಾಡಲು ಮುಂದಾಗಿತ್ತು, ಈ ಬಗ್ಗೆ ಆದೇಶ ಹೊರಡಿಸಿದ್ದರು ಅಧಿಕಾರಿಗಳ ನಿರ್ಲಕ್ಷ್ಯ, ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಬರೀ ಕಾಗದದ ಹುಲಿಯಾಗಿದ್ದು ವಿರ್ಯಾಸ..!
ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನ ಹಾಗೂ ಅದಕ್ಕೆ ಸಂಬಧಿಸಿದ ಆಸ್ತಿಗಳನ್ನು ಗುರುತಿಸಿ ಹದ್ದು ಬಸ್ತು ಮಾಡಬೇಕು, ಸರ್ವೇ ನಡೆಸಿ ಉತಾರದಲ್ಲಿ ಧಾರ್ಮಿಕ ಸಂಸ್ಥೆಯ ಹೆಸರು, ಇಲಾಖೆ ಹೆಸರು ನಮೂದಿಸಬೇಕು. 2021 ಡಿಸೆಂಬರ್ 30 ರೊಳಗೆ ಎಲ್ಲ ಕಾರ್ಯ ಕೈಗೊಂಡು ವರದಿ ನೀಡಲು ಸೂಚನೆ ನೀಡಿತ್ತು, ಆದರೇ ಈ ವರೆಗೆ ಅದು ಜಾರಿಯಾಗಿಲ್ಲ. ಇದು ವರೆಗೂ ಸರ್ವೇ ಕಾರ್ಯ ನಡೆಸದೇ, ಯಾವುದೇ ಪ್ರಕ್ರಿಯೆ ಮಾಡದ ಕಾರಣ ಸತ್ಯ ಮುಚ್ಚಿಡುವ ಯತ್ನ ನಡೆತಾ ಎನ್ನುವ ಅನುಮಾನ ಕಾಡತೊಡಗಿದೆ.
ಸರ್ವೇ ಕಾರ್ಯ ಹಿಂದೇಟು ಏಕೆ?
ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಎ,ಬಿ,ಸಿ ಕೆಟಗೇರಿಯಲ್ಲಿ 1,166 ದೇವಸ್ಥಾನಗಳಿವೆ. ನೂರಾರು ಎಕರೆ ಕೃಷಿ ಭೂಮಿ, ವಾಣಿಜ್ಯ ನಿವೇಶನ ಹಾಗೂ ಮಳಿಗೆಗಳಿವೆ. ಆದರೇ ಸರಿಯಾದ ನಿರ್ವಹಣೆ, ಸರಂಕ್ಷಣೆ ಇಲ್ಲದೆ ಸೊರಗಿವೆ. ಹಲವು ಕಡೆ ಪ್ರಭಾವಿಗಳಿಂದ ಒತ್ತುವರಿಯಾಗಿರುವ ಬಗ್ಗೆ ನಿಖರ ಮಾಹಿತಿ ಇದೆ. ದತ್ತಿ ಇಲಾಖೆಯು ಕಂದಾಯ ಇಲಾಖೆ, ಸರ್ವೇ ಇಲಾಖೆ ಸಹಕಾರದೊಂದಿಗೆ ಈ ಬಗ್ಗೆ ವಿಶೇಷವಾದ ಒತ್ತು ನೀಡಿ ದತ್ತಾಂಶ ಹಾಗೂ ವಾಸ್ತವ ಅಂಶ ತೆರೆದಿಡಬೇಕಿತ್ತು. ಆದರೇ ದತ್ತಿ ಇಲಾಖೆ ಕಾಟಾಚಾರಕ್ಕೆ ಸರ್ವೇ ನಡೆಸಿದೆ. ಅನೇಕ ಕಡೆ ಸರ್ವೇ ನಡೆಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೇಟು ಹಾಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ರೀತಿ ನಡೆದು ಕೊಂಡಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ದೇವಸ್ಥಾನಗಳ ವಿಷಯದಲ್ಲಿಯೂ ಇಲಾಖೆ ನಿರ್ಲಕ್ಷ್ಯ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
387 ದೇವಸ್ಥಾನಗಳ ಸರ್ವೇ ಬಾಕಿ:
ಜಿಲ್ಲೆಯಲ್ಲಿನ 1166 ದೇವಸ್ಥಾನಗಳ ಪೈಕಿ 1040 ದೇವಸ್ಥಾನಗಳ ಆಸ್ತಿ ಸರ್ವೇ ನಡೆಸಲಾಗಿದೆ. ಯಾವುದೇ ಒತ್ತುವರಿಯಾಗಿಲ್ಲ ಅಂತ ಆಯಾ ತಾಲೂಕಿನ ತಹಸೀಲ್ದಾರಗಳು ಕಂದಾಯ ಇಲಾಖೆ ಮೂಲಕ ದತ್ತಿ ಇಲಾಖೆಗೆ ವರದಿ ನೀಡಿದ್ದಾರೆ. ಆದರೇ ವಾಸ್ತವದಲ್ಲಿ ಸರ್ವೇ ಕಾರ್ಯವೇ ನಡೆದಿಲ್ಲ ಅಂತ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರು ಮತ್ತು ದಾಖಲೆಗಳಿಲ್ಲದ ಒಟ್ಟು 387 ದೇವಸ್ಥಾನಗಳು ಜಿಲ್ಲೆಯಲ್ಲಿವೆ. ಅವುಗಳ ಸರಿಯಾದ ದಾಖಲೆ ಹಾಗೂ ಸದ್ಯ ಅನೇಕ ದೇವಸ್ಥಾನಗಳೇ ಇಲ್ಲದ ಪರಿಣಾಮ ಅವುಗಳ ಸರ್ವೇ ಕಾರ್ಯ ಬಾಕಿ ಉಳಿದಿವೆ. ಅವುಗಳ ದಾಖಲೆ ಪತ್ತೆ ಮಾಡುವ ಕಾರ್ಯವು ನಡೆದಿಲ್ಲ ಎನ್ನುವುದು ದುರಂತ ಸಂಗತಿ.
ಸಂಘ-ಸಂಸ್ಥೆಗಳ ದರ್ಬಾರ:
ದತ್ತಿ ಇಲಾಖೆಯ ದೇವಸ್ಥಾನಗಳಿಗೆ ಸೇರಿರುವ ಆಸ್ತಿಗಳು ಜಾತ್ರಾ ಸಮಿತಿ, ಅಭಿವೃದ್ಧ ಮಂಡಳಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಹೆಸರು ದಾಖಲೆಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿವೆ. ಅವುಗಳ ನೇತೃತ್ವದಲ್ಲಿ ದರ್ಬಾರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೇ ಸತ್ಯಾಂಶ ಪರಿಶೀಲನೆ ಕಾರ್ಯ ನಡೆದಿಲ್ಲ. ಈ ಬಗ್ಗೆ ಸಮಗ್ರ ಪರಿಶೀಲನೆ, ಸರ್ವೇ ಕಾರ್ಯ ನಡೆಸಲು ಮುಂದಾದಾಗ ವಿರೋಧ ವ್ಯಕ್ತಪಡಿಸಲಾಗಿದೆ. ಇದರಿಂದ ಆಸ್ತಿಗಳು ಹಾಗೂ ದಾಖಲಾತಿಗಳು ಪತ್ತೆ ಮಾಡುವುದು ಕೂಡಾ ಸವಾಲಿನ ಕೆಲಸವಾಗಿದೆ.
ಸರ್ಕಾರ ಆದೇಶ ಹೊರಡಿಸಿ ಎರಡು ವರ್ಷ ಸಮೀಪಿಸುತ್ತಾ ಬಂದರು ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗಳ ದೇವಸ್ಥಾನ ಹಾಗೂ ಆಸ್ತಿಗಳ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ ಎನ್ನುವುದು ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುವುದು ಅಭಿಮಾನದ ಮಾದರಿಯಲ್ಲಿ ವಿವಿಧ ಇಲಾಖೆಗಳ ಜಂಟಿಯಾಗಿ ಸರ್ವೇ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ ಜೊತೆಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು
ತಾಲೂಕು- ಒಟ್ಟು ದೇವಾಲಯಗಳು
ಬಾದಾಮಿ- 171
ಜಮಖಂಡಿ- 344
ಬಾಗಲಕೋಟೆ- 190
ಮುಧೋಳ- 164
ಬೀಳಗಿ- 112
ಹುನಗುಂದ- 185
ಒಟ್ಟು- 1,166