ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಅಪೌಷ್ಠಿಕತೆ ನೀಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಮೊಟ್ಟೆ ಪೂರೈಕೆಯು ಒಂದಾಗಿದೆ. ಆದರೆ ಈಗ ರಾಜ್ಯದ ಬಹುತೇಕ ಕಡೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ಪೂರೈಕೆಯಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿದೆ.
ಪೌಷ್ಠಕತೆಗೆ ಸಹಾಯವಾಗಬೇಕಾದ ಮೊಟ್ಟೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗರ್ಭಿಣಿಯರ, ಚಿಕ್ಕಮಕ್ಕಳ ಆರೋಗ್ಯಕ್ಕೆ ಕುತ್ತು ತರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕೆಟ್ಟು ಹೋಗಿವೆ. ಬೇಯಿಸಿದ ನಂತರ ಸಿಪ್ಪೆತೆಗೆದು ನೋಡಿದರೆ, ಮೊಟ್ಟೆ ಕಪ್ಪಾಗಿದ್ದು ಗೊತ್ತಾಗಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ರಾಜ್ಯದ ವಿವಿಧೆಡೆ ಕೊಳೆತ ಮೊಟ್ಟೆ ವಿತರಣೆ ಆರೋಪ:
ಹಾಸನ:
ಜುಲೈ 6 ರಂದು ಹೊಳೆನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದ ಕಿಕ್ಕೀರಮ್ಮದೇವಾಲದ ಸಮೀಪ ಇರುವ ಅಂಗನವಾಡಿಯಲ್ಲಿ ವಿತರಣೆ ಮಾಡಿದ್ದ ಮೊಟ್ಟೆಗಳು ಕಳಪೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಹೊಳೆನರಸೀಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿತರಣೆ ಮಾಡಿರೊ ಮೊಟ್ಟೆಗಳು ಕಳಪೆಯಾಗಿದ್ದು ಮಹಿಳೆಯರ ಅಕ್ರೋಶಕ್ಕೆ ಕಾರಣವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ನೀಡಿದ ಮೊಟ್ಟೆಗಳನ್ನು ಪಡೆದು ಮನೆಯಲ್ಲಿ ಬೇಯಿಸಿ ಸಿಪ್ಪೆ ಸುಲಿದಾಗ ಮೊಟ್ಟೆಗಳು ಕೊಳೆತಿರುವುದು ಬೆಳಕಿಗೆ ಬಂದಿದೆ.
ಕೊಡಗು:
ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆಯಿಂದ ಕೂಡಿದ ಕೋಳಿ ಮೊಟ್ಟೆಗಳನ್ನು ವಿತರಿಸಿದ್ದು, ಈ ಕುರಿತು ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆ ಭಾಗದ ಹಲವು ಫಲಾನುಭವಿ ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಯಿಂದ ಮಹಿಳೆ ಗೀತಾ ಎಂಬುವರು ಮೊಟ್ಟೆ ಪಡೆದುಕೊಂಡಿದ್ದರು. ಮನೆಗೆ ತಂದು ಮೊಟ್ಟೆ ಬೇಯಿಸಿದಾಗ ಅವುಗಳು ಹಾಳಾಗಿರುವುದು ಗೊತ್ತಾಗಿತ್ತು. ಬಳಿಕ ಒಂದೊಂದೇ ಮೊಟ್ಟೆಯನ್ನು ಒಡೆದು ನೋಡಿದಾಗ ಒಳಭಾಗದಲ್ಲಿ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ, ವಾಸನೆ ಬರುತ್ತಿತ್ತು ಎಂದು ದೂರಲಾಗಿದೆ.
ದಾವಣಗೆರೆ:
ಜಿಲ್ಲೆಯಲ್ಲಿ ಬಾಣಂತಿಯರು ಮತ್ತು ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನಿಷ್ಠ 50 ಗ್ರಾಂಕ್ಕಿಂತ ಹೆಚ್ಚು ತೂಕವಿರಬೇಕಾದ ಮೊಟ್ಟೆಗಳು 30 ರಿಂದ 35 ಗ್ರಾಂ ಮಾತ್ರ ಇವೆ. ಪೂರೈಕೆದಾರರು ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಇಂತಹ ಮೊಟ್ಟೆಗಳನ್ನೇ ಅಂಗನವಾಡಿ ಸಿಬ್ಬಂದಿ ಗರ್ಭಿಣಿಯರಿಗೆ ನೀಡುತ್ತಿದ್ದಾರೆ. ಸುಮಾರು ಎರಡು ತಿಂಗಳಿನಿಂದ ಇದೇ ರೀತಿ ಮೊಟ್ಟೆಗಳನ್ನು ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯ:
ಅಂಗನವಾಡಿ ಮೂಲಕ ಗರ್ಭಿಣಿ, ಮತ್ತು ಮಕ್ಕಳಿಗೆ ಕೆಟ್ಟುಹೋದ ಮೊಟ್ಟೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಈ ಮೊಟ್ಟೆಗಳು ಒಡೆದರೆ ಕೊಳೆತ ವಾಸನೆ ಬರುತ್ತಿದವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಕೂಡಲೇ ವಿತರಕರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನೊಂದ ಮಹಿಳೆಯರು ಆಗ್ರಹಿಸಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ:
ಕೊಳೆತ ಮೊಟ್ಟೆ ವಿತರಣೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದಾರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಅಂತಹಾ ಪೂರೈಕೆದಾರರನ್ನು ಸಪ್ಲೈ ಲಿಸ್ಟ್ ನಿಂದಲೂ ಕೈ ಬಿಡುವಂತೆ ಸೂಚನೆ ನೀಡಿದ್ದೇನೆ. ಖರೀದಿ ವಿಕೇಂದ್ರೀಕರಣ ಮಾಡಿದ ಕಾರಣದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲೂ ಮೊಟ್ಟೆ ಖರೀದಿ ಆಗುತ್ತಿದೆ. ಯಾವುದೇ ನಿಯಂತ್ರಣ ಇಲ್ಲದೆ ಖರೀದಿ ನಡೆಯುತ್ತಿದೆ ಎಂಬುದು ಗಮನಕ್ಕೆ ಬಂದಿದೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶ. ಆದರೆ, ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುವುದು ಗಮನಕ್ಕೆ ಬಂದಿದೆ. ಮೊಟ್ಟೆ ವಿಚಾರ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲಾಖೆಯ ಉದ್ದೇಶ ಈಡೇರಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ವಿಕೇಂದ್ರೀಕರಣ ಮಾದರಿಯ ಖರೀದಿಯಿಂದ ಪ್ರಾಮಾಣಿಕವಾಗಿ ಪೂರೈಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಖರೀದಿ ವ್ಯವಸ್ಥೆ ಕೇಂದ್ರೀಕೃತ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ನಿಗಾ ಇಡಲಾಗುತ್ತದೆ. ಖಾಸಗಿ ಜೊತೆಗೆ ಸರ್ಕಾರದ ಸಂಸ್ಥೆಗಳಿಂದ ಖರೀದಿಗೆ ಚಿಂತನೆ ಮಾಡಲಾಗಿದೆ. ಎಲ್ಲಾ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.