ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ವೈದ್ಯ ಪದ್ಧತಿ ರೂಢಿಯಲ್ಲಿತ್ತೆಂದು ಎಲ್ಲರಿಗೂ ತಿಳಿದ ವಿಷಯವಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಹಿಂದಿನ ಕಾಲದಲ್ಲಿ ಗಿಡಮೂಲಿಕೆಗಳನ್ನು ಬಳಸಲಾಗುತಿತ್ತು. ಇವು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಒದಗಿಸುತ್ತದೆ.
ಒತ್ತಡ, ಖಿನ್ನತೆ, ಆತಂಕ, ಭಯದಂತಹ ಮಾನಸಿಕ ಸಮಸ್ಯೆಗಳು ಇತ್ತೀಚೆಗೆ ಜನರನ್ನು ಹೆಚ್ಚಾಗಿ ಕಾಡುತ್ತಿವೆ. ಅಂತ ಸಮಯದಲ್ಲಿ ಚಿಂತಿಸದೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಕೆಲವೊಂದು ಗಿಡಮೂಲಿಕೆಗಳಲ್ಲಿ ಮಾನಸಿಕ ಸ್ವಾಸ್ಥ್ಯ ವೃದ್ಧಿಸುವ ಗುಣವಿರುತ್ತದೆ. ಅಂತಹ ಗಿಡಮೂಲಿಕೆಗಳು ಯಾವುದೆಂದು ನೋಡುವುದಾದರೆ:
ಅಶ್ವಗಂಧ:
ಅಶ್ವಗಂಧ ಒಂದು ಜನಪ್ರಿಯ ಆಯುರ್ವೇದ ಮೂಲಿಕೆಯಾಗಿದ್ದು ಇದನ್ನು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಹಿಂದಿನಿಂದಲೂ ಬಳಸಲಾಗುತ್ತಿದೆ. ದೇಹವು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವ ಅಡಾಪ್ಟೋಜೆನಿಕ್ ಅಂಶವನ್ನು ಇದು ಹೊಂದಿದೆ.
ಬ್ರಾಹ್ಮಿ:
ಬ್ರಾಹ್ಮಿ ಗ್ರಹಣಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಇದು ಅತ್ಯುತ್ತಮ ಗಿಡಮೂಲಿಕೆಯಾಗಿದೆ ಎಂಬುವುದರಲ್ಲಿ ಅನುಮಾನವೇ ಇಲ್ಲ.
ಶಂಖಪುಷ್ಪ:
ಶಂಖಪುಷ್ಪ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವುದರೊಂದಿಗೆ, ಮಾನಸಿಕ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಆತಂಕ ಮತ್ತು ನಿದ್ರಾಹೀನತೆಗೂ ಇದು ಪರಿಹಾರ ಒದಗಿಸುತ್ತದೆ. ಶಂಖಪುಷ್ಪವು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ. ಇದು ಬುದ್ಧಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಜಟಾಮಾನ್ಸಿ:
ಜಟಮಾನ್ಸಿ ಮೆದುಳಿನಲ್ಲಿರುವ ಕೆಲವು ನರಗಳ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದು ನ್ಯೂರೋಪ್ರೊಟೆಕ್ಟಿವ್ ಪರಿಣಾಮವನ್ನು ಹೊಂದಿದ್ದು, ಆಕ್ಸಿಡೇಟಿವ್ ಹಾನಿಯಿಂದ ಮೆದುಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಹಾಗಾಗಿ ಇದನ್ನು ಕೂಡ ಒಂದು ಆಯುರ್ವೇದ ಗಿಡಮೂಲಿಕೆ ಎನ್ನಬಹುದು.
ತುಳಸಿ:
ತುಳಸಿಯನ್ನು ಪವಿತ್ರ ಎಂದೂ ಪುರಾಣಗಳಲ್ಲಿ ಹೇಳಲಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಪ್ರಬಲವಾದ ಆಯುರ್ವೇದ ಮೂಲಿಕೆಯಾಗಿದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಮಾನಸಿಕ ಸ್ವಾಸ್ಥ್ಯವನ್ನು ಸರಿಪಡಿಸುವಲ್ಲಿ ಇದರ ಪಾಲು ಹೆಚ್ಚಾಗಿದೆ.
ಅಮೃತಬಳ್ಳಿ:
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಮಾನಸಿಕ ಸ್ವಾಸ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಒಂದೇಲಗ:
ಒಂದೇಲಗವು ನೆನಪಿನ ಶಕ್ತಿ ಹೆಚ್ಚಿಸಲು ಬಹಳ ಉಪಯುಕ್ತ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಉತ್ತಮ. ಇದು ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿ.
ಎಲ್ಲಾ ಗಿಡಮೂಲಿಕೆಗಳನ್ನು ಬಳಸುವ ಮೊದಲು ಇದರ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅರ್ಹ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಬಳಸುವುದು ಒಳ್ಳೆಯದು ಎಂದು ಅಭಿಪ್ರಾಯ ಪಡಬಹುದು.