ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್ ಎ ರಾಮ್ ದಾಸ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಬಿಜೆಪಿ ನಗರಾಧ್ಯಕ್ಷ ಟಿ.ಎಸ್ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಶಾಸಕ ಎಸ್ .ಎ.ರಾಮದಾಸ್ , ಮುಡಾ ಮಾಜಿ ಅಧ್ಯಕ್ಷ ಎಚ್ .ವಿ.ರಾಜೀವ್ , ಬಿಜೆಪಿ ನಗರಾಧ್ಯಕ್ಷ ಟಿ.ಎಸ್ .ಶ್ರೀವತ್ಸ, ಕೆ.ಆರ್ .ಮಾಜಿ ಅಧ್ಯಕ್ಷ ಡಾ.ಎ.ಎಸ್ .ಚಂದ್ರಶೇಖರ್ ಅವರ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಎಚ್.ವಿ.ರಾಜೀವ್ ಅವರಿಗೆ ಟಿಕೆಟ್ ನೀಡಿದರೆ ರಾಮದಾಸ್ ಬಂಡಾಯ ಏಳುವ ಸಾಧ್ಯತೆ ಇತ್ತು. ಹೀಗಾಗಿ ಹೈಕಮಾಂಡ್ ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಅವರಿಗೆ ಈ ಬಾರಿಯ ಟಿಕೆಟ್ ಅನ್ನು ನೀಡಿದೆ.
ಗುಜರಾತ್ ಮಾದರಿಯನ್ನು ಅನುಸರಿಸುವುದಾಗಿ ಹೈಕಮಾಂಡ್ ಈ ಮೊದಲೇ ಸೂಚನೆಯನ್ನು ನೀಡಿತ್ತು ಆದರಿಂದ ರಾಮ್ದಾಸ್ ಅವರಿಗೆ ಟಿಕೆಟ್ ಕೈ ತಪ್ಪಿರುವುದು ಅನೇಕರಿಗೆ ಆಶ್ಚರ್ಯವಾಗಲಿಲ್ಲ.
ಈ ಬಾರಿ ರಾಮ್ದಾಸ್ ಅವರಿಗೆ ಟಿಕೆಟ್ ನೀಡುಬಾರದು ಎಂದು ಕೆಲವು ಬ್ರಾಹ್ಮಣ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಟಿಕೆಟ್ ಗಾಗಿ ಪ್ರಬಲ ಪೈಪೋಟಿಯನ್ನು ನಡೆಸಿದ್ದರು. ನಗರಾಧ್ಯಕ್ಷ ಶ್ರೀವತ್ಸ ಅವರ ಹೆಸರೂ ಮುಂಚೂಣಿಯಲ್ಲಿತ್ತು ಆದರಿಂದ ಮೊದಲ ಪಟ್ಟಿಯಲ್ಲಿ ರಾಮದಾಸ್ಗೆ ಟಿಕೆಟ್ ಘೋಷಣೆಯಾಗಿಲ್ಲ.
ಆದರೆ ಎರಡನೇ ಪಟ್ಟಿಯಲ್ಲಿಯೂ ರಾಮ್ದಾಸ್ ಹೆಸರು ಬರಲಿಲ್ಲ. ಇದರಿಂದ ನಿರಾಸೆಗೊಂಡ ರಾಮದಾಸ್ ಬೆಂಬಲಿಗರು ವಿದ್ಯಾರಣ್ಯಪುರಂನ ಗೃಹ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸೇರುವಂತೆ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ರಾಮದಾಸ್ ತಮ್ಮ ಅಳಲು ತೋಡಿಕೊಂಡಿದ್ದು, ಹೈಕಮಾಂಡ್ ಗೆ ಎಲ್ಲವನ್ನೂ ವಿವರಿಸಿದ್ದಾರೆ. ಅವರ ಪ್ರಯತ್ನಗಳು ಫಲಸಲಿಲ್ಲ.
ಮೋದಿ ಮೈಸೂರಿಗೆ ಬಂದಾಗಲೆಲ್ಲ ಬೆನ್ನು ತಟ್ಟಿ ಪ್ರೀತಿಯಿಂದ ಕಿವಿ ಹಿಂಡುತ್ತಿದ್ದರು. ಅಲ್ಲದೆ ಅವರಿಗಾಗಿ ತಮ್ಮ ಶ್ರೀಕಾಂತ್ ದಾಸ್ ಊಟವನ್ನು ತೆಗೆದುಕೊಂಡು ಹೋಟೆಲ್ಗೆ ಕೊಟ್ಟು ಬರುತ್ತಿದ್ದರು ಇಷ್ಟಾದರೂ ನನಗೆ ಟಿಕೆಟ್ ನೀಡಲಿಲ್ಲ ಎಂದು ರಾಮ್ದಾಸ್ ಬೇಸರವನ್ನು ವ್ಯಕ್ತಪಡಿಸಿದ್ದರು.
ರಾಮ್ದಾಸ್ ಅವರು 1994, 1999, 2008 ಮತ್ತು 2018 ರಲ್ಲಿ ನಾಲ್ಕು ಬಾರಿ ಗೆದ್ದಿದ್ದರು ಹಾಗೆಯೇ 2004 ಮತ್ತು 2013 ರಲ್ಲಿ ಸೋತಿದ್ದರು. ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಕೆಲಸವನ್ನು ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದ ರಾಮದಾಸ್ ವರು ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಮ್ದಾಸ್ ಅವರಿಗೆ ಸಂಘಟನೆಯ ಬೆಂಬಲವು ಇತ್ತು ಆದರೆ ಪಕ್ಷದ ಕಾರ್ಯಕರ್ತರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವುದಿಲ್ಲ ಎಂಬ ದೂರ ಇತ್ತೀಚೆಗೆ ಅವರ ವಿರುದ್ಧ ಬಂದಿತ್ತು.
ಬಿಜೆಪಿಯಲ್ಲಿ ಟಿಕೆಟ್ ವಂಚಿತರಾದವರು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ಗೆ ಕಾಂಗ್ರೆಸ್ ಈಗಾಗಲೇ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಅನ್ನು ಅಂತಿಮಗೊಳಿಸಿದೆ. ಹೀಗಾಗಿ ರಾಮದಾಸ್ ಅವರಿಗೆ ಕಾಂಗ್ರೆಸ್ ಬಾಗಿಲು ಕೂಡ ಮುಚ್ಚಿದಂತಾಗಿದೆ.
ಸೋಮಶೇಖರ್ ಅವರು 1999ರಲ್ಲಿ ಮತ್ತು 2004ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದರು . 2008ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದರು. ಅವರು 2013 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದರು ಈ ಗೆಲುವಿಗೆ ಕಾರಣ ಬಿಜೆಪಿ ಮತ್ತು ಕೆಜೆಪಿ ನಡುವಿನ ಮತ ವಿಭಜನೆ. 2023ರ ಚುನಾವಣೆ ಅವರ ಐದನೇ ಚುನಾವಣೆಯಾಗಿದೆ.
ಇನ್ನೂ ಜೆಡಿಎಸ್ ಅಭ್ಯರ್ಥಿಯ ಬಗ್ಗೆ ನೋಡುವುದಾದರೆ ನಾಲ್ಕು ತಿಂಗಳ ಹಿಂದೆ ಜೆಡಿಎಸ್ನಲ್ಲಿ ನಗರಸಭೆ ಸದಸ್ಯ ಕೆ.ವಿ.ಮಲ್ಲೇಶ್ಗೆ ಟಿಕೆಟ್ ಘೋಷಿಸಲಾಗಿದೆ. ಮತದಾರರ ವಿಶ್ವಾಸ ಗಳಿಸಲು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿಯೂ ಅವರೇ ಅಭ್ಯರ್ಥಿಯಾಗಿದ್ದರು.
ರಾಮದಾಸ್ ಅವರು ಬಿಜೆಪಿ ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಏಪ್ರಿಲ್ 17 ರಂದು ರಾತ್ರಿ ಶ್ರೀವತ್ಸ ಮತ್ತು ಸಂಸದ ಪ್ರತಾಪ್ ಸಿಂಹ ಅವರು ರಾಮ್ದಾಸ್ ಮನೆಗೆ ಭೇಟಿ ನೀಡಿದಾಗ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ರಾಮದಾಸ್ ಅವರು ಏಪ್ರಿಲ್ 18 ರಂದು ಮಧ್ಯಾಹ್ನ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ. ಆದರೆ ಬೇರೆ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇಲ್ಲ