ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ಹಲವಾರು ಕಲಾವಿದರು ವಿಭಿನ್ನ ವೇಷಗಳನ್ನು ಧರಿಸಿ, ಅರ್ಥಧಾರಿಗಳು ಪುರಾಣದ ಸಂದೇಶಗಳನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗುವಂತೆ ಪಾತ್ರಧಾರಿಗಳು ಸಂಭಾಷಣೆ ಮಾಡುತ್ತಾರೆ.
ಯಕ್ಷಗಾನ ಗಂಡು ಮಕ್ಕಳ ಕಲೆ ಎಂದು ಹೇಳಲಾಗುತ್ತದೆ. ಆದರೆ ಈ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು ಕೂಡ ಅದ್ವಿತೀಯ ಸಾಧನೆ ಮಾಡಿ, ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಬಂಟ್ವಾಳದ ಸಣ್ಣ ಗ್ರಾಮದಲ್ಲಿ ಸಂಗೀತ, ನಿರೂಪಣೆ, ನೃತ್ಯ, ಭಜನೆ, ಹೀಗೆ ಹಲವಾರು ಕಾರ್ಯಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಸಂಧ್ಯಾ ಪೂಜಾರಿ ದರ್ಬೆ.
ಸುಮಾರು 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟು ಇದೀಗ ಚಿಗುರು ಮೊಗ್ಗು ಆಗಿ ಅರಳುತ್ತಿರುವ ಯುವ ಪ್ರತಿಭೆ ಜೊತೆಗೆ ವೆರಿಟೊ ಮೀಡಿಯಾಗೆ ಸಿಕ್ಕ ಸಂಭಾಷಣೆಯ ಗುಚ್ಛ ಇಲ್ಲಿದೆ.
ಅದೆಷ್ಟೋ ಹವ್ಯಾಸ ಇದ್ದರೂ, ನೀವು ವೋಕಲ್ ಆರ್ಟಿಸ್ಟ್ ಆಗಿದ್ದು ಹೇಗೆ?
ನನ್ನ ತಂದೆ ದಿವಂಗತ ಚಂದಪ್ಪ ಅವರು ಭಾಗವತಿಕೆ ಮಾಡ್ತಾ ಇದ್ದರು, ಕಟೀಲು ಸೇರಿದಂತೆ ಇನ್ನಿತರ ಮೇಳಗಳಲ್ಲಿ ಅವರ ಭಾಗವತಿಕೆಯ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ನನ್ನನ್ನು ಅವರ ಜೊತೆ ಕರೆದುಕೊಂಡು ಹೋಗುತ್ತಿದ್ದರು. ಅವರ ಸ್ವರ ಮೇರು ಭಾಗವತರಾದ ಬಲಿಪ ನಾರಾಯಣ ಭಾಗವತರ ಧ್ವನಿಯನ್ನು ಹೋಲುತ್ತಿತ್ತು. ಅವರ ಹಾವ ಭಾವ ನನಗೆ ಒಂದು ಸ್ಪೂರ್ತಿ.
ಭಜನೆ, ಹಾಡು, ನಿರೂಪಣೆ, ಮಕ್ಕಳಿಗೆ ನೃತ್ಯ ಹೇಳಿ ಕೊಡುವ ಹವ್ಯಾಸ ಹೊಂದಿದ್ದ ನನಗೆ ನನ್ನ ತಂದೆ ಕಾಲವಾದ ನಂತರ ನನ್ನ ಸಹೋದರ ‘ನೀನು ಯಕ್ಷಗಾನ ತರಬೇತಿ ತರಗತಿಗೆ ಹೋಗು’ ಅನ್ನೋ ಮಾತು ನನಗೆ ಸ್ಪೂರ್ತಿ ನೀಡಿತು.
ಬಳಿಕ ಮೂಡಬಿದಿರೆಯ ಗುರುಗಳಾದ ಶ್ರೀ ಶ್ರೀನಿವಾಸ ಬಳ್ಳಮಂಜ, ರವಿಚಂದ್ರ ಕನ್ನಡಿಕಟ್ಟೆ ಅವರು ನನ್ನ ಮೊದಲ ಗುರುಗಳು. ಅದಾದ ಮೇಲೆ ದಯಾನಂದ ಕೋಡಿಕಲ್, ಮೋಹನ್ ಬೈಪಾಡಿತ್ತಾಯ ಅವರ ಬಳಿ ತರಬೇತಿ ಪಡೆದೆ.
ನಾನು ಇಷ್ಟ ಪಟ್ಟು ಈ ಕ್ಷೇತ್ರ ಆಯ್ಕೆ ಮಾಡಿಕೊಂಡದ್ದಕ್ಕಿಂತಲೂ ಪ್ರಾಯಶ ನನ್ನ ತಂದೆಯ ಮುಖಾಂತರ ರಕ್ತಗತವಾಗಿ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಭಾಗವತಿಕೆ ಮಾಡುವುದು ಕಡಿಮೆ, ನಿಮಗೆ ಇದರ ಅನುಭವ ಹೇಗಿದೆ?
ಹೌದು, ಈಗಲೂ ಆ ಅನುಭವ ರೋಮಾಂಚನವಾಗಿದೆ. ಜನವರಿಯ ತಿಂಗಳಿನಲ್ಲಿ ಗಾನವೈಭವ ಮಾಡಿಸುವ ವಿಚಾರವಾಗಿ ನನ್ನ ಗುರುಗಳಾದ ದಯಾನಂದ ಕೋಡಿಕಲ್ ಅವರಿಗೆ ಬಂದ ಕರೆಗೆ ಅನುಗುಣವಾಗಿ, ನನ್ನ ಮೊದಲ ಗಾನವೈಭವ ಕಾರ್ಯಕ್ರಮ ನನ್ನ ಬೆವರಿಳಿಸಿದ್ದು ಸುಳ್ಳಲ್ಲ.
ನಂತರ ಕದಂಬ ಕೌಶಿಕೆ ಪ್ರಸಂಗ ಕೂಡ ಹಾಗೆ ಆಯಿತು. ನಾದಬ್ರಹ್ಮ ಕಲಾವೃಂದದ ಮೂಲಕ ಮೂಡಿಬಂದ ನನ್ನ ಪ್ರಥಮ ಯಕ್ಷಗಾನ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ಕೂಡಾ ಹಲವಾರು ಸರಿ ತಪ್ಪುಗಳನ್ನು ಹೊತ್ತು ಮಾಡಿದ ಕಾರ್ಯಕ್ರಮಗಳು.
ನೀವೇ ರಾಗ ಹಾಕಿ ಪದ್ಯ ಹಾಡಿದ ಪ್ರಸಂಗಗಳು ಇವೆಯಾ?
ಆ ಕ್ಷಣದಲ್ಲಿ ಸ್ವಯಂ ರಚನೆ ಮಾಡಿ ಹಾಡಿದ್ದಿಲ್ಲ. ಪದ್ಯ ಹಾಡುವಾಗ ಇದೇ ರೀತಿ ತಾಳ, ರಾಗ ಇರಬೇಕೆಂಬ ನಿಯಮ ಇದೆ. ಜನಸಮೂಹವನ್ನು ನೋಡಿ ರಾಗ ಮರೆತುಹೋಗಿ, ನನ್ನದೇ ರಾಗ ಹಾಕಿದ ಅನುಭವವಿದೆ.
ಯಕ್ಷಗಾನ ಭಾಗವತಿಕೆ ಜೊತೆಗೆ ಇತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೀರಿ, ನಿಮ್ಮ ವೃತ್ತಿ ಮತ್ತು ಪ್ರವೃತ್ತಿ ಹೇಗೆ ನಿಭಾಯಿಸುತ್ತೀರಿ?
ನಮ್ಮ ಮನೆಯಲ್ಲಿ ಕಲೆಯ ವಾತಾವರಣ ಇದ್ದಿದ್ದರಿಂದ ನಿರೂಪಣೆ, ಭಜನೆ, ನೃತ್ಯ ಕಲಿಸುವುದು, ಭಕ್ತಿಗೀತೆ/ಹಿನ್ನೆಲೆ ಗಾಯನ ಇವೆಲ್ಲ ಬಿಡುವಿನ ಸಂದರ್ಭದಲ್ಲಿ ಮುಂದುವರೆಸಿಕೊಂಡ ಕಾರ್ಯಕ್ರಮಗಳು. ಬೆಳೆಗ್ಗೆ ಕೆಲಸಕ್ಕೆ ಹೊರಡುವ ಮೊದಲು, ರಾತ್ರಿ ಸ್ವಲ್ಪ ಹೊತ್ತು ಭಾಗವತಿಕೆ ಅಭ್ಯಾಸ ಮಾಡುತ್ತಾ ಇದ್ದೇನೆ.
ನಿಮ್ಮ ಕನಸಿನ ಕೂಸು ಯಕ್ಷತರಂಗಿಣಿ ಬಗ್ಗೆ ಹೇಳಿ
ನಾನು, ಶ್ರೀ ಸಂಜೀವ ಕಜೆಪದವು, ಸುಶಾಂತ್ ಕೈಕಂಬ ಸೇರಿಕೊಂಡು ಕಟ್ಟಿದ ತಂಡ ಯಕ್ಷ ತರಂಗಿಣಿ. ನಾವು ಹೀಗೆಯೇ ಯಕ್ಷಗಾನ ವೈಭವ, ತಾಳ ಮದ್ದಳೆ ಮಾಡುತ್ತಿರುವಾಗ ಮೇಳಗಳನ್ನು ನೋಡಿ, ನಾವು ಯಾಕೆ ತಂಡವನ್ನು ಕಟ್ಟಬಾರದು ಎಂಬ ಯೋಚನೆ ಬಂದಾಗ ಹುಟ್ಟಿಕೊಂಡದ್ದು ಯಕ್ಷಗಾನ ತರಂಗಿಣಿ.
ಇಲ್ಲಿ ಯಕ್ಷಗಾನ ಕಲಾವಿದರಿಲ್ಲ. ಅತಿಥಿ ಯಕ್ಷಗಾನ ಕಲಾವಿದರು ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ. ಈ ತಂಡದ ಮೂಲಕ ಅನೇಕ ಸಮಾಜಮುಖಿ ಕೆಲಸ ಮಾಡುವ ಆಶಯವೂ ಇದೆ.
ನಿಮ್ಮ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ ಹಾಡುಗಳಲ್ಲಿ ನಿಮ್ಮ ಇಷ್ಟದ ಹಾಡು ಯಾವುದು?
ಉಲ್ಲಂಜದ ಅಧಿಪತಿ, ಉಲ್ಲಂಜದ ಮಾಯೆ ಎಂಬ ಎರಡು ಆಲ್ಬಮ್ ಹಾಡಿನಲ್ಲಿ ಉಲ್ಲಂಜದ ಮಾಯೆ ನನಗೆ ತುಂಬಾ ಇಷ್ಟ. ಒಂದು ನನ್ನ ಆರಾಧ್ಯ ದೈವ ಮಂತ್ರ ದೇವತೆ, ಇನ್ನೊಂದು ಕೊರಗಜ್ಜನ ಹಾಡು. ಎಲ್ಲರ ವಾಟ್ಸಪ್ಪ್ ಸ್ಟೇಟಸ್ ನಲ್ಲಿ ನೋಡುವಾಗ ಖುಷಿ ಆಗುತ್ತದೆ.
ನಿಮ್ಮ ಯಕ್ಷಗಾನದ ಗುರುಗಳು ಯಾರು?
ನನ್ನ ಎಲ್ಲಾ ಗುರುಗಳಲ್ಲಿ ದಯಾನಂದ ಕೋಡಿಕಲ್ ನನಗೆ ತುಂಬಾ ಪ್ರೋತ್ಸಾಹ ನೀಡಿದ ಗುರುಗಳು. ನನ್ನ ಪ್ರತಿ ತಪ್ಪನ್ನು ತುಂಬಾ ತಾಳ್ಮೆಯಿಂದ ತಿದ್ದಿ, ನನ್ನನು ಸರಿ ದಾರಿಗೆ ತಂದಿದ್ದಾರೆ. ನನ್ನಂತ ಕಿರಿಯ ಕಲಾವಿದೆಗೆ ಹಲವಾರು ಅವಕಾಶಗಳನ್ನು ನೀಡಿ, ತಪ್ಪುನ್ನು ತಿದ್ದಿ, ಮುಂದೆ ನಡೆಯುವಂತೆ ಆತ್ಮ ವಿಶ್ವಾಸ ನೀಡಿದ್ದಾರೆ.
ನನ್ನ ಗಾನ ವೈಭವ ಕಾರ್ಯಕ್ರಮದಲ್ಲಿ ಪ್ರತಿಭೆಯನ್ನು ಗುರುತಿಸಿ ಮಹಿಳಾ ಭಾಗವತೆಯಾಗಿ ಪರಿಚಯಿಸಿ ಕೊಟ್ಟ ಇನ್ನೊಬ್ಬ ಗುರುಗಳು ಶ್ರೀ ಸಂಜೀವ ಕಜೆಪದವು. ನಾನು ಕೊಡುವ ಪ್ರತಿ ಕಾರ್ಯಕ್ರಮದಲ್ಲಿ ಹಾಜರಿದ್ದು, ನನ್ನ ಸಣ್ಣ ತಪ್ಪುಗಳನ್ನು ಕಂಡು ಹಿಡಿದು ನೀನು ಹೀಗೆ ಮಾಡಬಾರದಿತ್ತು ಎನ್ನುವ ಬದಲು, ಹೀಗೆ ಹಾಡಿದರೆ ಒಳ್ಳೆಯದಿತ್ತು ಎಂದು ನನ್ನನ್ನು ಈಗಲೂ ಹುರಿದುಂಬಿಸುತ್ತಿದ್ದಾರೆ.
ಸ್ವರ ಮಾಧುರಿ ಸಂಧ್ಯಾ ಬಗ್ಗೆ ಹೇಳಿ
ಸ್ವರ ಮಾಧುರಿ ಬಿರುದು ಎಂಬುದು ನನ್ನ ಪಾಲಿಗೆ ಹೆಸರು. ಈ ಬಗ್ಗೆ ಜಂಭ ಇಲ್ಲ. ಅದನ್ನು ಕೊಟ್ಟಂತ ತುಳಸಿ ಕ್ರಿಯೇಷನ್ ನಾರಾವಿ ತಂಡದ ಶ್ರೀ ಸುಜಿತ್ ನಾರಾವಿ ನನ್ನಂತಹ ಸಣ್ಣ ಪ್ರತಿಭೆಯನ್ನು ಗುರುತಿಸಿ ಈ ಬಿರುದು ಕೊಟ್ಟಿದ್ದಾರೆ.
ನಿಮ್ಮ ಮನೆಯ ಸದಸ್ಯರ ಸಹಕಾರ ಹೇಗಿದೆ?
ಈ ಎಲ್ಲಾ ಸಾಧನೆಗೆ ನನ್ನನ್ನು ಹುರಿದುಂಬಿಸುತ್ತಿರುವುದು ನನ್ನ ಅಣ್ಣ, ಅವರು ಕೂಡಾ ಭಜನೆ ತಂಡ ಕಟ್ಟಿ, ಮಕ್ಕಳಿಗೆ ಭಜನೆ ಹೇಳಿಕೊಡುವುದು, ಅವರು ಹಾರ್ಮೋನಿಯಂ ವಾದಕರು ಹೌದು. ಹಾಗೆಯೇ ಅವರ ಎಷ್ಟೇ ಕಾರ್ಯಕ್ರಮಗಳಿದ್ದರೂ ನನ್ನ ಜೊತೆ ಇದ್ದು ನನಗೆ ಬೆನ್ನೆಲುಬಾಗಿ ಇದ್ದಾರೆ.
ನಿಮ್ಮ ಕನಸುಗಳೇನು?
ನನ್ನ ಜೀವನದ ಒಂದೇ ಕನಸು ನನ್ನ ತಂದೆಯ ಹೆಸರು ಉಳಿಸುವುದು. ನನ್ನ ತಂದೆ ಭಾಗವತರಾಗಿದ್ದು, ಭಾಗವತರ ಮಗಳು ನಾನು ಎಂದು ಗುರುತಿಸಿಕೊಳ್ಳುವುದು ತುಂಬಾ ಹೆಮ್ಮೆ ಅನಿಸುತ್ತದೆ.
ಈಗಿನ ಮಕ್ಕಳಿಗೆ ಯಕ್ಷಗಾನ ಯಾಕೆ ಬೇಕು?
ಈಗಿನ ಮಕ್ಕಳು ದಾರಿತಪ್ಪಲು, ಅವರ ಗಮನ ಸೆಳೆಯಲು ಅನೇಕ ದುಶ್ಚಟಗಳಿವೆ. ಅದಕೋಸ್ಕರ ಈಗ ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಇವೆ. ಯಕ್ಷಗಾನದಲ್ಲಿ ಹಲವಾರು ಪುರಾಣ ಪ್ರಸಂಗ ಇರುವುದರಿಂದ, ಇದು ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಅರಿವು ಕೊಡುತ್ತದೆ. ಹಾಗೆಯೇ ಯಕ್ಷಗಾನದ ವೇಷ ಭೂಷಣ, ವಿವಿಧ ರಸಗಳು ಅವರ ಒಲವು ಋಣಾತ್ಮಕ ಚಿಂತನೆಯತ್ತ ಕಡಿಮೆ ಮಾಡಿ, ಪಾಸಿಟಿವ್ ವೈಬ್ ಕೊಡುತ್ತದೆ.
ಕೊನೆಯದಾಗಿ ನಿಮ್ಮ ಪ್ರಕಾರ ಸಾಧನೆ ಎಂದರೆ ಏನು?
ನನ್ನ ಪ್ರಕಾರ ಸಾಧನೆ ಅಂದರೆ ಅಪ್ಪ ಅಮ್ಮನ ಹೆಸರು ಉಳಿಸಿ, ಬೆಳೆಸಿಕೊಂಡು ಹೋಗುವಂತಹದ್ದು.