ಬೆಂಗಳೂರಿನ ನಾರಾಯಣ ನೇತ್ರಾಲಯದ ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ಅವರು ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 69 ವರ್ಷ ವಯಸ್ಸಿನ ಡಾ.ಭುಜಂಗ ಶೆಟ್ಟಿಯವರು ನಾರಾಯಣ ನೇತ್ರಾಲಯ ಮುಖ್ಯಸ್ಥರಾಗಿದ್ದುಕೊಂಡು ಡಾ.ರಾಜ್ಕುಮಾರ್ ನೇತ್ರದಾನ ಸಂಸ್ಥೆ ಸ್ಥಾಪಿಸಿದ್ದರು.
ರಾಜಾಜಿನಗರದ ನಾರಾಯಣ ನೇತ್ರಾಲಯದ ಬಳಿ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ2 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಾ.ಭುಜಂಗ ಶೆಟ್ಟಿಯವರು ಎಂದಿನಂತೆ ಬೆಳಿಗ್ಗೆ ಆಸ್ಪತ್ರೆಗೆ ಬಂದು ನಂತರ ಜಿಮ್ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದು, ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
’ಲಕ್ಷಗಟ್ಟಲೆ ಜನರಿಗೆ ದೃಷ್ಟಿ ಬರುವಂತೆ ಮಾಡಿ ಅವರ ಕುಟುಂಬಕ್ಕೆ ಬೆಳಕಾಗಿರುವ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ’ ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು. ಅವರ ನಿಧನ ವಾರ್ತೆ ಮನಸ್ಸಿಗೆ ಬೇಸರ ತಂದಿದೆ’. ಎಂದು ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
‘ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ ಶೆಟ್ಟಿ ಅವರ ನಿಧನದಿಂದ ರಾಜ್ಯ ಒಬ್ಬ ನೇತ್ರ ತಜ್ಞರನ್ನು ಕಳೆದುಕೊಂಡಂತಾಗಿದೆ’ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಭುಜಂಗ ಶೆಟ್ಟಿಯವರ ನೇತ್ರದಾನ:
ಸಹಸ್ರಾರು ಜನರಿಗೆ ನೇತ್ರದಾನದ ಅರಿವನ್ನುಮೂಡಿಸಿದ್ದ ಭುಜಂಗ ಶೆಟ್ಟಿಯವರು ಸ್ವತಃ ನೇತ್ರದಾನವನ್ನು ಮಾಡಿ ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ. ಭುಜಂಗ ಶೆಟ್ಟಿಯವರು ಕಣ್ಣುಗಳನ್ನು ಡಾ.ರಾಜ್ಕುಮಾರ್ ಕಣ್ಣಿನ ಬ್ಯಾಂಕ್ಗೆ ದಾನ ಮಾಡಲಾಗಿದೆ.
ರಿವರ್ಸ್ ಡಯಾಬಿಟಿಸ್ ಕಂಡುಹಿಡಿದವರು:
ಭುಜಂಗ ಶೆಟ್ಟಿಯವರಿಗೆ ಡಯಾಬಿಟಿಸ್ ಕಾಡಿದ್ದು, ಇದಕ್ಕಾಗಿ ರಿವರ್ಸ್ ಡಯಾಬಿಟಿಸ್ ಎನ್ನುವ ಪದ್ದತಿಯನ್ನು ಅವಿಷ್ಕಾರ ಮಾಡಿ ತಮ್ಮದೇ ಆದ ವಿನೂತನ ಪ್ರಯೋಗದ ಮೂಲಕ ಡಯಾಬಿಟಿಸನ್ನು ಹೊಡೆದೋಡಿಸಿದ್ದರು. ಈ ಆಹಾರ ಪದ್ದತಿಯನ್ನು ಇತರರಿಗೂ ತಿಳಿಸಿದ್ದರು.
ಮಧುಮೇಹಿಗಳಿಗೆ ವೈದ್ಯಕೀಯ ಚಿಕಿತ್ಸೆ ವೆಚ್ಚ ಹೆಚ್ಚು, ಮಾತ್ರೆಗಳು ಔಷಧಕ್ಕೆ ಹಣ ವ್ಯಯಿಸುವ ಬದಲು ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಡಯಾಬಿಟಿಸ್ನಿಂದ ಮುಕ್ತಿ ಪಡೆಯಬಹುದು ಎಂಬುದು ಭುಜಂಗ ಶೆಟ್ಟಿಯ ನಿಲುವಾಗಿತ್ತು.