ಪ್ರೀತಿಯ ಪುಟ್ಟಕ್ಕ…
ನಾವು ಅಂದರೆ ನಿನ್ನ ಅಜ್ಜ ಸುಧಾಕರ ಮತ್ತು ಅನಮಾ ವೀಣಾ…ಇಬ್ಬರೂ ಮಧ್ಯಾಹ್ನ ಗಂಟೆ 11-30ಕ್ಕೆ ಮನೆಯಲ್ಲಿ ಊಟ ಮುಗಿಸಿ ನಿನ್ನ ಅಮ್ಮ,ಅಪ್ಪ,ತಮ್ಮ ಇವರಿಗೆ ವಿದಾಯ ಹೇಳಿ,ನೀನು ಶಾಲೆಗೆ ಹೋದ ಕಾರಣ ಅಳು ಗಲಾಟೆಗಳಿಂದ ಕೂಡಿದ ವಿದಾಯ ವಿಲ್ಲದೆ ಆಟೋದಲ್ಲಿ ಕಾರ್ಕಳ ವೆಂಕಟರಮಣ ದೇವಸ್ಥಾನಕ್ಕೆ ಹೊರಟೆವು. ಯಾತ್ರೆಗೆ ಹೋಗುವವರೆಲ್ಲಾ ಅಲ್ಲಿಯೇ ಸೇರಬೇಕೆಂಬ ಸೂಚನೆ ಕೊಟ್ಟಿದ್ದರು.
ಎಲ್ಲರ ಬ್ಯಾಗ್, ಸೂಟಕೇಸ್ ಲಗ್ಗೇಜಗಳಿಗೆಲ್ಲಾ ಟ್ಯಾಗ್ ಗಳನ್ನು ಹಚ್ಚಲಾಯಿತು (ಕಟ್ಟಲಾಯಿತು). ಅವುಗಳನ್ನೆಲ್ಲಾ ದೇವಸ್ಥಾನದ ಹೊರಗೆ ಇಟ್ಟು ಒಳಗೆ ಹೋಗಿ “ಯಾವುದೇ ಸಮಸ್ಯೆಗಳಿಲ್ಲದೆಯೇ ,ಅಡಚಣೆಗಳಾಗದೇ ಯಾತ್ರೆಯು ಸುಗಮವಾಗುವಂತೆ ಮಾಡಪ್ಪಾ …ಚಪ್ಪರ ಶ್ರೀನಿವಾಸಾ…ವೆಂಕಟರಮಣ..” ಎಂದು ಪ್ರಾರ್ಥನೆ ಮಾಡಿ,ನಮಸ್ಕಾರ ಹಾಕಿ ಹೊರಟೆವು. ಸಮಯಕ್ಕೆ ಸರಿಯಾಗಿ ಅಂದರೆ 12-40ಕ್ಕೆ ನಮ್ಮನ್ನು ಉಡುಪಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲು ಬಸ್ಸು ಬಂತು. ಬಸ್ಸಲ್ಲಿ ಯಾತ್ರೆಗೆ ಹೊರಟ ಎಲ್ಲಾ ಯಾತ್ರಿಕರ ಪರಿಚಯವನ್ನು ಅವರವರೇ ಪರಿಚಯ ಮಾಡಿಕೊಂಡರೂ..ಅದು ಮನಸ್ಸಿಗೆ ಹೊಕ್ಕಿರಲಿಲ್ಲ. ಏನೋ ಒಂಥರಾ ಭಯ,ಮನಸ್ಸಿನಲ್ಲಿ ಪ್ರಾರಂಭದ ಆಂದೋಲನ..’ಜೊತೆಗಾರರು ಹೇಗಿರುತ್ತಾರೋ’ ಎನ್ನುವ ಟೆನ್ಷನ್..
1-30ಕ್ಕೆ ಉಡುಪಿ ತಲುಪಿದೆವು. ಎಲ್ಲರಿಗೂ ಸೀಟ್ ನಂಬರ್,ಬೋಗಿ ಸಂಖ್ಯೆಗಳನ್ನು ಹೇಳಿ…ಯಾತ್ರೆಯ ಮುಖ್ಯ ಸಂಘಟಕರು ಮಾರ್ಗದರ್ಶಿ ಹಾಗೂ ಸಹಾಯಕರನ್ನು ಪರಿಚಯಿಸಿ ನಮ್ಮ ಜೊತೆ ಬಿಟ್ಟು ಶುಭಾಶಯಗಳನ್ನು ಹೇಳಿ ಬೀಳ್ಕೊಟ್ಟರು. 2-30 ಕ್ಕೆ ಮುಂಬೈಗೆ ಹೋಗುವ ಮತ್ಸ್ಯ ಗಂಧ ಎಕ್ಸ್ಪ್ರೆಸ್ ಮಂಗಳೂರಿನಿAದ ಬಂತು. ನಮ್ಮ ಸೀಟ್ ನಂ.27 ಮತ್ತು29..ನನ್ನ ಸೀಟು ಕಿಟಕಿಯ ಬದಿಯಿತ್ತಾದರೂ ಯಾರೋ ನನ್ನಂಥಹ ಕಿಟಕಿ ಪ್ರಿಯರು ಆಕ್ರಮಿಸಿದ್ದರು. ನೋಡಿದರೆ ನಮ್ಮ ಗುಂಪಿನವರೇ..ನನಗೆ ಯಾತ್ರೆಯ ಪ್ರಾರಂಭದಲ್ಲಿಯೇ ಮೂಡ್ ಹೋದಂತಾಯಿತು. ಬೇರೆಯವರಾದರೇ ಎಬ್ಬಿಸಬಹುದಿತ್ತು…ನಮ್ಮದೇ ಗುಂಪಿನವರಾದುದರಿAದ ನನಗೆ ಬಿಸಿತುಪ್ಪದಂತೆ ನುಂಗಲೂ ಅಲ್ಲ…ಉಗುಳಲೂ ಆಗದಂತಾಯಿತು. ನಮ್ಮನೆಯವರಂತೂ ನನ್ನ ಕಿಟಕಿ ಹುಚ್ಚಿನಿಂದ ಅವರಿಗೇನಾದರೂ ಹೇಳಿದರೆ ಅಂತ ಟೆನ್ಷನ್ನಿಂದ ನಾನು ಏನಾದರೂ ಹೇಳುವ ಮೊದಲೇ “ಮತ್ತೆ ನೋಡುವಾ …ಈಗ ಸುಮ್ಮನಿರು” ಎಂದು ಹೇಳಿಯೂ ಆಯಿತು. ಸುಮ್ಮನಿದ್ದರೆ ಮುಂಬೈ ವರೆಗೂ ನಾನು ಕಿಟಿಕಿ ಇಲ್ಲದೆ ಹೊರ ಪ್ರಪಂಚವನ್ನು ನೋಡದೆ, ಒಳಗೆ ಇದ್ದವರ ಮುಖಗಳನ್ನು ನೋಡುತ್ತಾ ಕೂರುವುದಾ..? ಅದೆಂದಿಗೂ ಸಾಧ್ಯವಿಲ್ಲದ ಮಾತು. ಒಂದರೆ ಕ್ಷಣ ನಿನ್ನ ಅಜ್ಜನನ್ನು ಹುಬ್ಬುಗಂಟಿಕ್ಕಿ ನೋಡಿದೆ..ನಾನು ನನ್ನ ಊಟ ತಿಂಡಿಯನ್ನಾದರೂ ಯಾರಿಗಾದರೂ ಕೊಡು, ಎಂದರೆ ಕೊಟ್ಟು ಉಪವಾಸ ಕೂತೇನು..ಕಿಟಕಿ ಬದಿಯ ಸೀಟನ್ನು ಎಷ್ಟು ಮಾತ್ರಕ್ಕೂ ಬಿಟ್ಟುಕೊಡುವವಳಲ್ಲ. ಸಿಕ್ಕದಿದ್ದರೇ ಯಾರಿಗಾದರೂ ಮಸ್ಕಾ ಹೊಡೆದು,ಲಂಚ ಕೊಟ್ಟು,ಒಲಿಸಿ ಗಿಟ್ಟಿಸಿಕೊಳ್ಳುವ ನಾನು ನನ್ನ ಹಕ್ಕಿನ ಸೀಟನ್ನು ಬಿಟ್ಟು ಕೊಡುತ್ತೇನೆಯೇ…?
ಹೇಗೋ ನಯವಾಗಿ ನನ್ನ ಸೀಟನ್ನು ಪಡೆದುಕೊಂಡು ಕೂತೆ.. (ಇಂಥಹ ಘಟನೆಗಳ ಅಂತ್ಯ ಹೀಗೇ ಎಂದು ನಿನಗೂ ಗೊತ್ತುಂಟಲ್ಲಾ..ಹ್ಹಾ…ಹ್ಹಾ..ಹ್ಹಾ…ಯಾಕೆ0ದರೆ ನೀನಿದ್ದರೆ ಕಿಟಿಕಿ ಬದಿ ನನ್ನ ಬದಲು ನೀನಿರುತ್ತಿ..??) ಪರಿಣಾಮ ಅವರ ಗಂಡ ಕುಳಿತ್ತಿದ್ದ ಕಿಟಕಿ ಬದಿಯ ಸೀಟು ಹೆಂಡತಿಯ ಪಾಲಿಗೆ ಹೋಯಿತು.. ಪಾಪ ಇಂತಹ ಸಮಯ ಹೆಚ್ಚು ಕಡಿಮೆ “ಎಲ್ಲಾ ಹೆಂಡತಿಯರು ನನ್ನಂತೆಯೇ ಮತ್ತು ಗಂಡAದಿರು ನಿನ್ನ ಅಜ್ಜನಂತೆಯೇ ಸುಧಾರಿಸಿಕೊಂಡು ಹೋಗುತ್ತಾರೆ “ಎನ್ನುವುದು ಮತ್ತೊಂದು ಬಾರಿ ಮನವರಿಕೆ ಆಯಿತು…..